ಕರ್ನಾಟಕ

karnataka

ಚಂಡೀಗಢದ ಮೇಲೆ ಹಕ್ಕು ಸಾಧಿಸುವ ಪಂಜಾಬ್​ ನಿರ್ಧಾರಕ್ಕೆ ವಿರೋಧ: ಹರಿಯಾಣ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರ

By

Published : Apr 5, 2022, 7:59 PM IST

ಪಂಜಾಬ್​ನ ಮರುಸಂಘಟನೆಯಿಂದ ಉಂಟಾದ ಎಲ್ಲ ಸಮಸ್ಯೆಗಳು ಇತ್ಯರ್ಥವಾಗುವವರೆಗೆ ಕೇಂದ್ರ ಸರ್ಕಾರವು ಎರಡು ರಾಜ್ಯಗಳ ನಡುವೆ ಸಮತೋಲನವನ್ನು ಹಾಳುಮಾಡುವ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಬಾರದು ಮತ್ತು ಸಾಮರಸ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಖಟ್ಟರ್ ಅವರ ನಿರ್ಣಯವು ಆಗ್ರಹಿಸಿದೆ.

Haryana Assembly unanimously passed resolution against Punjab's claim on Chandigarh
ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್

ಚಂಡೀಗಢ:ಚಂಡೀಗಢದ ಮೇಲೆ ಹಕ್ಕನ್ನು ಸಾಧಿಸುವ ನಿರ್ಣಯವನ್ನು ಕಳೆದ ವಾರ ಪಂಜಾಬ್ ವಿಧಾನಸಭೆಯಲ್ಲಿ ಮಂಡಿಸಲಾಗಿತ್ತು. ಇದನ್ನು ವಿರೋಧಿಸಿ ಹರಿಯಾಣದಲ್ಲಿ ನಡೆದ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ನಿರ್ಣಯವನ್ನು ಮಂಡಿಸಲಾಗಿತ್ತು. ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಮಂಡಿಸಿದ ನಿರ್ಣಯವನ್ನು, ಹರಿಯಾಣ ವಿಧಾನಸಭೆ ಮಂಗಳವಾರ ಸರ್ವಾನುಮತದಿಂದ ಅಂಗೀಕರಿಸಿತು.

ಖಟ್ಟರ್ ನಿರ್ಣಯುದ ಬೇಡಿಕೆ: ಪಂಜಾಬ್​ನ ಮರುಸಂಘಟನೆಯಿಂದ ಉಂಟಾದ ಎಲ್ಲ ಸಮಸ್ಯೆಗಳು ಇತ್ಯರ್ಥವಾಗುವವರೆಗೆ ಕೇಂದ್ರ ಸರ್ಕಾರವು ಎರಡು ರಾಜ್ಯಗಳ ನಡುವೆ ಸಮತೋಲನ ಹಾಳುಮಾಡುವ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಬಾರದು ಮತ್ತು ಸಾಮರಸ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಖಟ್ಟರ್ ಅವರ ನಿರ್ಣಯವು ಆಗ್ರಹಿಸಿದೆ.

1966 ರ ಪಂಜಾಬ್ ಮರುಸಂಘಟನೆ ಕಾಯಿದೆಯ ಸೆಕ್ಷನ್ 3 ರ ನಿಬಂಧನೆಗಳನ್ನು ಸಹ ಖಟ್ಟರ್ ಎತ್ತಿ ತೋರಿಸಿದರು. ಅದರ ಮೂಲಕ ಹರಿಯಾಣ ರಾಜ್ಯವು ಅಸ್ತಿತ್ವಕ್ಕೆ ಬಂದಿದೆ ಮತ್ತು ಇದರಿಂದಾಗಿ ಹಲವಾರು ಕ್ರಮಗಳು ಜಾರಿಗೆ ಬಂದಿವೆ. ಚಂಡೀಗಢದ ಕೇಂದ್ರಾಡಳಿತ ಪ್ರದೇಶವು ಪಂಜಾಬ್ ಮತ್ತು ಹರಿಯಾಣದ ಸಾಮಾನ್ಯ ರಾಜಧಾನಿಯಾಗಿದೆ. ಕಳೆದ ಶುಕ್ರವಾರ ಪಂಜಾಬ್ ಅಸೆಂಬ್ಲಿಯು ಚಂಡೀಗಢವನ್ನು ಪಂಜಾಬ್‌ಗೆ ವರ್ಗಾಯಿಸುವಂತೆ ಕೋರಿ ನಿರ್ಣಯವನ್ನು ಮಂಡಿಸಿದರು. ಮಾನ್ ಅವರು ಮಂಡಿಸಿದ ನಿರ್ಣಯವನ್ನು ಸದನವು ಧ್ವನಿ ಮತದ ಮೂಲಕ ಅಂಗೀಕರಿಸಿತು.

ಪಂಜಾಬ್ ನಿರ್ಣಯ ತಿರಸ್ಕರಿಸಿದ ಹರಿಯಾಣ: ಪಂಜಾಬ್ ನಿರ್ಣಯವನ್ನು ಹರಿಯಾಣ ರಾಜಕೀಯ ಪಕ್ಷಗಳು ತಿರಸ್ಕರಿಸಿವೆ. ವಿಧಾನಸಭೆ ಅಧಿವೇಶನದ ನಡುವೆ ಪ್ರತಿಪಕ್ಷದ ನಾಯಕ ಭೂಪಿಂದರ್ ಸಿಂಗ್ ಹೂಡಾ, ನಿರ್ಣಯವನ್ನು ಅಂಗೀಕರಿಸುವ ಎಎಪಿ ಉದ್ದೇಶವನ್ನು ಪ್ರಶ್ನಿಸಿದರು ಮತ್ತು ಇದು ಯಾವುದೇ ಅರ್ಥವಿಲ್ಲದ "ರಾಜಕೀಯ ಜುಮ್ಲಾ" ಎಂದು ಬಣ್ಣಿಸಿದರು.

ಇಂತಹ ಪ್ರಜಾಸತ್ತಾತ್ಮಕವಲ್ಲದ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಪಂಜಾಬ್ ಎರಡು ರಾಜ್ಯಗಳ ನಡುವಿನ ಕೋಮು ಸೌಹಾರ್ದತೆಗೆ ಭಂಗ ತರಬಾರದು ಎಂದು ಹೂಡಾ ಹೇಳಿದ್ದಾರೆ. ಚಂಡೀಗಢ ಹರಿಯಾಣಕ್ಕೂ ಸೇರಿದೆ. ಚಂಡೀಗಢ ಆಡಳಿತದಲ್ಲಿ ಪಂಜಾಬ್ ಮತ್ತು ಹರಿಯಾಣಕ್ಕೆ 60:40 ಪ್ರಾತಿನಿಧ್ಯವಿದೆ ಎಂದರು.

ಈ ವಿಷಯದಲ್ಲಿ ರಾಜ್ಯದ ಎಲ್ಲಾ ರಾಜಕೀಯ ಪಕ್ಷಗಳು ಒಗ್ಗಟ್ಟಿನಿಂದ ನೆರೆಯ ರಾಜ್ಯದ ವಿರುದ್ಧ ಹೋರಾಡಲಿವೆ ಎಂದು ಹೇಳಿದರು. ಪಂಜಾಬ್ ವಿರುದ್ಧದ ಈ ಹೋರಾಟದಲ್ಲಿ ಕಾಂಗ್ರೆಸ್‌ನ ಸಂಪೂರ್ಣ ಬೆಂಬಲವನ್ನು ಅವರು ಮುಖ್ಯಮಂತ್ರಿಗೆ ನೀಡಿದರು. ಚಂಡೀಗಢವು ಹರಿಯಾಣದ ರಾಜಧಾನಿಯಾಗಿದೆ. ರಾಜಧಾನಿಯಾಗಿಯೇ ಉಳಿಯುತ್ತದೆ. ನಾವು ಬೇರೆ ಯಾವುದೇ ರಾಜಧಾನಿಯನ್ನು ನಿರ್ಮಿಸುವ ಅಗತ್ಯವಿಲ್ಲ. ಆಮ್ ಆದ್ಮಿ ಪಕ್ಷದ ನಾಯಕರು ಸಾಮಾನ್ಯ ಜನರನ್ನು ಸಮಸ್ಯೆಗಳಿಂದ ಬೇರೆಡೆಗೆ ತಿರುಗಿಸಲು ಇಂತಹ ಪೊಳ್ಳು ವಿಷಯಗಳನ್ನು ಎತ್ತುತ್ತಿದ್ದಾರೆ ಎಂದು ವಿಧಾನಸಭೆಯಲ್ಲಿ ಬಾಲರಾಜ್ ಕುಂದು ಹೇಳಿದ್ದಾರೆ.

ಇದನ್ನೂ ಓದಿ:ದೆಹಲಿಗೆ ದ್ರಾವಿಡ ನಾಡಿನ ಸಿಎಂ : ಪ್ರತಿಪಕ್ಷಗಳ ಒಗ್ಗಟ್ಟಿನ ಆಧಾರದಲ್ಲಿ ಹೊರ ಹೊಮ್ಮುತ್ತಿದ್ದಾರೆಯೇ ಎಂಕೆ ಸ್ಟಾಲಿನ್!?

ರಾಜಕೀಯ ನಾಯಕರು ಹರಿಯಾಣ ಮತ್ತು ಪಂಜಾಬ್ ಜನರ ಭಾವನೆಗಳೊಂದಿಗೆ ಆಟವಾಡಬಾರದು. ಇದನ್ನು ನಾನು ಬಲವಾಗಿ ಖಂಡಿಸುತ್ತೇನೆ. ವಿಶೇಷ ಅಧಿವೇಶನವನ್ನು ಕರೆಯುವ ಮೂಲಕ ಪಂಜಾಬ್ ಸರ್ಕಾರ ಚಂಡೀಗಢಕ್ಕೆ ಸಂಬಂಧಿಸಿದಂತೆ ನಿರ್ಣಯವನ್ನು ಅಂಗೀಕರಿಸಿದ ರೀತಿಯನ್ನು ನಾನು ಖಂಡಿಸುತ್ತೇನೆ.

ಕೇಂದ್ರದಲ್ಲಿ ಬಿಜೆಪಿ ಸರಕಾರವಿದೆ. ಉಭಯ ರಾಜ್ಯಗಳ ಮುಖ್ಯಸ್ಥರನ್ನು ಕರೆದು ಚರ್ಚಿಸಿ, ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ಈ ವಿಚಾರದಲ್ಲಿ ಅರವಿಂದ್ ಕೇಜ್ರಿವಾಲ್ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ನಮಗೆ 2 ರಾಜಧಾನಿಗಳು ಅಗತ್ಯವಿಲ್ಲ, ನಾವು ಈ ಚಂಡೀಗಢವನ್ನು ಅಭಿವೃದ್ಧಿಪಡಿಸುತ್ತೇವೆ ಎಂದು ಬಾಲರಾಜ್ ಕುಂದು ಹೇಳಿದರು.

ಹರಿಯಾಣ ವಿಧಾನಸಭೆಯ ವಿಶೇಷ ಅಧಿವೇಶನದ ಕಲಾಪ ಆರಂಭವಾಗಿದೆ. ಸಂತಾಪ ಸೂಚಕ ನಿರ್ಣಯದೊಂದಿಗೆ ವಿಧಾನಸಭೆ ಕಲಾಪ ಆರಂಭವಾಯಿತು. ಮುಖ್ಯಮಂತ್ರಿ ಮನೋಹರ್ ಲಾಲ್ ಮತ್ತು ವಿರೋಧ ಪಕ್ಷದ ನಾಯಕ ಭೂಪೇಂದ್ರ ಸಿಂಗ್ ಹೂಡಾ ಅವರು ಸದನದಲ್ಲಿ ವೀರ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಜೊತೆಗೆ ಕಾಂಗ್ರೆಸ್ ಶಾಸಕ ರೇಣುಕಾ ಅವರ ತಂದೆ ಜ್ಯೋತಿರಾಮ್ ಅವರ ನಿಧನಕ್ಕೆ ಸಂತಾಪ ಸೂಚಿಸಿದರು.

ABOUT THE AUTHOR

...view details