ಕರ್ನಾಟಕ

karnataka

Ludhiana Robbery: 8.5 ಕೋಟಿ ರೂಪಾಯಿ ಕ್ಯಾಶ್‌ ವ್ಯಾನ್‌ ದರೋಡೆ ಪ್ರಕರಣದ ಮಾಸ್ಟರ್‌ಮೈಂಡ್ ದಂಪತಿ ಕೊನೆಗೂ ಸೆರೆ​: ಇವರ ಬಂಧನವೇ ರೋಚಕ!

By

Published : Jun 19, 2023, 5:50 PM IST

ಲೂಧಿಯಾನ ಜಿಲ್ಲೆಯನ್ನು ಬೆಚ್ಚಿಬೀಳಿಸಿದ್ದ ಕ್ಯಾಶ್ ವ್ಯಾನ್ ದರೋಡೆ ಪ್ರಕರಣದ ರೂವಾರಿಗಳಾದ ಮಂದೀಪ್ ಕೌರ್ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕ್ಯಾಶ್ ವ್ಯಾನ್ ಪ್ರಕರಣದ ಮಾಸ್ಟರ್ ಮೈಂಡ್ ದಂಪತಿಯ ಬಂಧನ
ಕ್ಯಾಶ್ ವ್ಯಾನ್ ಪ್ರಕರಣದ ಮಾಸ್ಟರ್ ಮೈಂಡ್ ದಂಪತಿಯ ಬಂಧನ

ಚಂಡೀಗಢ (ಪಂಜಾಬ್):ಸುಮಾರು 8.5 ಕೋಟಿ ರೂಪಾಯಿ ದರೋಡೆ ಮಾಡಿ ಪರಾರಿಯಾಗಿದ್ದ ಪಂಜಾಬ್ ಮೂಲದ ದಂಪತಿಯನ್ನು ಪೊಲೀಸರು ಹಲವು ನಾಟಕೀಯ ಬೆಳವಣಿಗೆಗಳ ಬಳಿಕ ಬಂಧಿಸಿದ್ದಾರೆ. ಮನ್‌ದೀಪ್‌ಕೌರ್‌ ಹಾಗೂ ಜಸ್ವಿಂದರ್‌ ಸಿಂಗ್‌ ಬಂಧಿತರು. ಈ ಆರೋಪಿಗಳು ಲೂಧಿಯಾನ ಜಿಲ್ಲೆಯನ್ನು ಬೆಚ್ಚಿಬೀಳಿಸಿದ್ದ ಕ್ಯಾಶ್ ವ್ಯಾನ್ ಪ್ರಕರಣದ ಮಾಸ್ಟರ್ ಮೈಂಡ್ ಆಗಿದ್ದರು. ಹಣ ದರೋಡೆ ಬಳಿಕ ಇವರು ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುವ ಮೂಲಕ ತಮ್ಮ ಜಾಗವನ್ನು ಪ್ರತಿದಿನ ಬದಲಾಯಿಸುತ್ತಿದ್ದರು. ಸಮಯೋಚಿತ ಮತ್ತು ಉಪಾಯದಿಂದ ಪೊಲೀಸರು ದಂಪತಿಯನ್ನು ಪುಣ್ಯ ಕ್ಷೇತ್ರ ಹೇಮಕುಂಡದಲ್ಲಿ ಕೊನೆಗೂ ಅರೆಸ್ಟ್ ಮಾಡಿದ್ದಾರೆ.

ಲೂಧಿಯಾನದ ನ್ಯೂ ರಾಜಗುರು ನಗರದ ಅಮನ್ ಪಾರ್ಕ್‌ನಲ್ಲಿರುವ ಸಿಎಂಎಸ್ - ಕನೆಕ್ಟಿಂಗ್ ಕಾಮರ್ಸ್ ಎಂಬ ನಗದು ನಿರ್ವಹಣಾ ಸೇವಾ ಕಂಪೆನಿಯಲ್ಲಿ ಜೂನ್ 10ರಂದು ಶಸ್ತ್ರಸಜ್ಜಿತ ದರೋಡೆ ನಡೆದಿತ್ತು. ಮಂದೀಪ್ ಕೌರ್ ಅಲಿಯಾಸ್ 'ಡಾಕು ಹಸಿ' ಎಂಬಾಕೆ 8.49 ಕೋಟಿ ರೂಪಾಯಿ ಹಣ ಲೂಟಿಗೈದು ಪರಾರಿಯಾಗಿದ್ದಳು. ದರೋಡೆ ಬಳಿಕ ಲೂದಿಯಾನ ಪೊಲೀಸರು ಹಲವರನ್ನು ಬಂಧಿಸಿದ್ದರು. ಆದರೆ, ಪ್ರಕರಣ ರೂವಾರಿಗಳಾದ ದಂಪತಿ ಮಾತ್ರ ಸಿಕ್ಕಿರಲಿಲ್ಲ.

ದೇವರ ದರ್ಶನದಲ್ಲಿದ್ದ ದಂಪತಿ: ದರೋಡೆಯ ನಂತರ ಪೊಲೀಸರು ತಮ್ಮ ಬೆನ್ನಹಿಂದೆ ಬಿದ್ದಿರುವ ವಿಚಾರ ದಂಪತಿಗೆ ಗೊತ್ತಿತ್ತು. ಹಾಗಾಗಿ ಪ್ರತಿದಿನ ಒಂದೊಂದು ಧಾರ್ಮಿಕ ಸ್ಥಳಕ್ಕೆ ಭೇಟಿ ನೀಡುತ್ತಿದ್ದರು. ತಮ್ಮ ಆಸೆ ಈಡೇರಿದ್ದರಿಂದ ಕೇದಾರನಾಥ, ಹರಿದ್ವಾರದಲ್ಲೂ ಪೂಜೆ ಸಲ್ಲಿಸಿದ್ದ ಜೋಡಿ ನೇಪಾಳಕ್ಕೆ ತೆರಳುವ ಆಲೋಚನೆಯಲ್ಲಿದ್ದರು. ಬಂಧಿತ ವ್ಯಕ್ತಿ ಮಂದೀಪ್ ಸ್ನೇಹಿತ ಗೌರವ್ ಎಂಬಾತ ನೀಡಿದ ಮಾಹಿತಿಯಿಂದ ಪೊಲೀಸರು ಅವರ ಜಾಡು ಹಿಡಿದಿದ್ದರು. ಇಬ್ಬರ ಚಲನವಲನ ಗಮನಿಸುತ್ತಿದ್ದರೂ ಪೊಲೀಸರಿಗೆ ಅವರ ಬಂಧನ ಸವಾಲೇ ಆಗಿತ್ತು.

ಮನ್‌ದೀಪ್‌ - ಜಸ್ವಿಂದರ್ ದಂಪತಿ ನೇಪಾಳಕ್ಕೆ ತೆರಳುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿದ್ದೇ ತಡ ಪೊಲೀಸರು ಮತ್ತಷ್ಟು ಅಲರ್ಟ್‌ ಆಗಿದ್ದರು. ಹರಿದ್ವಾರ, ಕೇದಾರನಾಥ ಮತ್ತು ಹೇಮಕುಂಡ್​ ಧಾರ್ಮಿಕ ಸ್ಥಳ ಆಗಿದ್ದರಿಂದ ದಂಪತಿಯ ಬಂಧನ ಪೊಲೀಸರಿಗೆ ಸವಾಲಾಗಿತ್ತು. ಗುರುತಿಸುವುದು ತುಂಬಾ ಕಷ್ಟವೆಂದು ಅರಿತ ಪೊಲೀಸರು, ಹೇಮಕುಂಡದಲ್ಲಿದ್ದ ಯಾತ್ರಾರ್ಥಿಗಳಿಗೆ ಉಚಿತ ತಂಪು ಪಾನೀಯ ವಿತರಿಸುವ ಉಪಾಯ ಹಾಕಿಕೊಂಡಿದ್ದರು. ಪೊಲೀಸರ ನಿರೀಕ್ಷೆಯಂತೆ ಮಂದೀಪ್ ದಂಪತಿ ಉಚಿತ ಪಾನೀಯ ಪಡೆಯಲು ಸ್ಟಾಲ್‌ಗೆ ತೆರಳಿದ್ದರು. ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬಂದಿದ್ದರಿಂದ ಅನುಮಾನ ವ್ಯಕ್ತವಾಗಿದೆ. ಆದರೆ, ಬಟ್ಟೆ ತೆಗೆದು ತಂಪು ಪಾನೀಯ ಸೇವಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ. ತಮ್ಮನ್ನು ಹುಡುಕುತ್ತಿರುವ ಪೊಲೀಸರೆಂದು ಗೊತ್ತಾದ ತಕ್ಷಣ ಓಡಲು ಆರಂಭಿಸಿದ್ದಾರೆ. ಆದರೆ, ಪೊಲೀಸರು ಬೆನ್ನಟ್ಟಿ ಕೈಕೋಳ ತೊಡಿಸಿದ್ದಾರೆ.

ಕ್ಯಾಶ್ ವ್ಯಾನ್ ಪ್ರಕರಣದ ರೋಪಿ ದಂಪತಿ ಸೇರಿದಂತೆ ಪ್ರಕರಣದಲ್ಲಿ ಭಾಗಿಯಾದ 12 ಜನರಲ್ಲಿ 9 ಆರೋಪಿಗಳನ್ನು ಇದೀಗ ಬಂಧಿಸಲಾಗಿದೆ. ಬಂಧಿತರಿಂದ ಬೈಕ್ ಸೇರಿದಂತೆ 21 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಲೂಧಿಯಾನ ಪೊಲೀಸರು ತಿಳಿಸಿದ್ದಾರೆ. ಕ್ಯಾಶ್ ವ್ಯಾನ್ ಸೂತ್ರಧಾರನನ್ನು ಹಿಡಿಯಲಾಗಿದೆ ಎಂದು ಡಿಜಿಪಿ ಗೌರವ್ ಯಾದವ್ ಟ್ವೀಟ್ ಮಾಡುವ ಮೂಲಕ ಈ ಮಾಹಿತಿ ನೀಡಿದ್ದಾರೆ. ಬಂಧನ ಕಾರ್ಯಾಚರಣೆಗೆ ಒಂದು ಕೋಟಿ ರೂಪಾಯಿ ವೆಚ್ಚವಾಗಿದೆ ಎಂದು ಲೂಧಿಯಾನ ಪೊಲೀಸ್ ಆಯುಕ್ತ ಮಂದೀಪ್ ಸಿಧು ಹೇಳಿದ್ದಾರೆ.

ಶ್ರೀಮಂತರಾಗಲು ದರೋಡೆ: ಈ ಹಿಂದೆ ವಿಮಾ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದ ಮನ್‌ದೀಪ್‌ಕೌರ್‌ ಸಾಲ ಮಾಡಿದ್ದಳು. ಫೆಬ್ರವರಿಯಲ್ಲಿ ಈಕೆ ಜಸ್ವಿಂದರ್ ಎಂಬಾತನನ್ನು ಮದುವೆಯಾಗಿದ್ದಳು. ದಿಢೀರ್​ ಶ್ರೀಮಂತ ಮಹಿಳೆಯಾಗುವ ಉದ್ದೇಶದಿಂದ ಇಂಥದ್ದೊಂದು ದರೋಡೆಗೆ ಇಳಿದಿರುವುದಾಗಿ ಆಕೆ ಬಾಯ್ಬಿಟ್ಟಿರುವ ವಿಚಾರವನ್ನು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:ಲೂದಿಯಾನ ಹಣ ದರೋಡೆ ಪ್ರಕರಣ: ಐವರನ್ನು ಬಂಧಿಸಿದ ಪಂಜಾಬ್​ ಪೊಲೀಸರು

ABOUT THE AUTHOR

...view details