ಕರ್ನಾಟಕ

karnataka

ಹಲವು ಧರ್ಮಗಳು, ಭಾಷೆಗಳು ನಮ್ಮನ್ನು ವಿಭಜಿಸಲಿಲ್ಲ, ಅವು ನಮ್ಮನ್ನು ಒಗ್ಗೂಡಿಸಿವೆ: ರಾಷ್ಟ್ರಪತಿ ಮುರ್ಮು

By

Published : Jan 25, 2023, 9:39 PM IST

Etv Bharat

74ನೇ ಗಣರಾಜ್ಯೋತ್ಸವದ ಅಂಗವಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ದೇಶವನ್ನುದ್ದೇಶಿಸಿ ಮಾತನಾಡಿದರು. ಹಲವಾರು ಧರ್ಮಗಳು ಮತ್ತು ಭಾಷೆಗಳು ನಮ್ಮನ್ನು ವಿಭಜಿಸಲಿಲ್ಲ, ಅವು ನಮ್ಮನ್ನು ಒಗ್ಗೂಡಿಸಿವೆ ಎಂದು ಅವರು ತಿಳಿಸಿದ್ದಾರೆ.

ನವದೆಹಲಿ:ಸಂವಿಧಾನದ ರಚನಾಕಾರರು ನಮಗೆ ಮಾರ್ಗ ಮತ್ತು ನೈತಿಕ ಚೌಕಟ್ಟನ್ನು ನೀಡಿದ್ದು, ಈ ಹಾದಿಯಲ್ಲಿ ನಡೆಯುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದರು. 74ನೇ ಗಣರಾಜ್ಯೋತ್ಸವದ ಮುನ್ನಾ ದಿನವಾದ ಬುಧವಾರ ರಾಷ್ಟ್ರವನ್ನುದ್ದೇಶಿಸಿ ರಾಷ್ಟ್ರಪತಿಗಳು ಭಾಷಣ ಮಾತನಾಡಿದರು.

ಸಂವಿಧಾನವು ವಿಶ್ವದ ಅತ್ಯಂತ ಹಳೆಯ ಜೀವಂತ ನಾಗರಿಕತೆಯ ಮಾನವತಾವಾದಿ ತತ್ವಶಾಸ್ತ್ರ ಮತ್ತು ಇತ್ತೀಚಿನ ಇತಿಹಾಸದಿಂದ ಹೊಮ್ಮಿದ ಹೊಸ ಆಲೋಚನೆಗಳ ಸ್ಫೂರ್ತಿಯಿಂದ ರಚನೆಗೊಂಡಿದೆ. ಸಂವಿಧಾನದ ಕರಡು ಸಮಿತಿಯ ನೇತೃತ್ವ ವಹಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ರಾಷ್ಟ್ರವು ಸದಾ ಕೃತಜ್ಞತೆ ಸಲ್ಲಿಸುತ್ತದೆ. ನಮ್ಮ ಸಂವಿಧಾನಕ್ಕೆ ಅಂತಿಮ ರೂಪ ನೀಡುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಸ್ಮರಿಸಿದರು.

ಅಲ್ಲದೇ, ಇಂದು ನಾವು ಸಂವಿಧಾನದ ಆರಂಭಿಕ ಕರಡನ್ನು ಸಿದ್ಧಪಡಿಸಿದ್ದ ನ್ಯಾಯಶಾಸ್ತ್ರಜ್ಞ ಬಿಎನ್ ರಾವ್ ಮತ್ತು ಸಂವಿಧಾನವನ್ನು ರಚಿಸಲು ಸಹಾಯ ಮಾಡಿದ ಇತರ ತಜ್ಞರ ಪಾತ್ರವನ್ನು ಸ್ಮರಿಸಬೇಕು. ಸಂವಿಧಾನ ರಚನಾ ಸಭೆಯಲ್ಲಿ ಪಾಲ್ಗೊಂಡಿದ್ದ ಸದಸ್ಯರು ದೇಶದ ಎಲ್ಲ ಪ್ರದೇಶಗಳು ಮತ್ತು ಸಮುದಾಯಗಳನ್ನು ಪ್ರತಿನಿಧಿಸಿದ್ದಾರೆ. ಇವರಲ್ಲಿ 15 ಮಹಿಳೆಯರೂ ಇದ್ದರು ಎಂಬ ಅಂಶದ ಬಗ್ಗೆ ದೇಶವೇ ಹೆಮ್ಮೆ ಪಡುವಂತದ್ದು ಎಂದು ರಾಷ್ಟ್ರಪತಿ ತಿಳಿಸಿದರು.

ಇದನ್ನೂ ಓದಿ:ಗಣರಾಜ್ಯೋತ್ಸವ ಪರೇಡ್​ನಲ್ಲಿ ಕೇವಲ ಮೇಡ್ ಇನ್ ಇಂಡಿಯಾ ಶಸ್ತ್ರಾಸ್ತ್ರಗಳ ಮೂಲಕ ಸೇನಾ ಶಕ್ತಿ ಪ್ರದರ್ಶನ

ಆತ್ಮವಿಶ್ವಾಸದ ರಾಷ್ಟ್ರ:ಸಂವಿಧಾನದಲ್ಲಿ ಪ್ರತಿಪಾದಿಸಿರುವ ಅವರ ದೃಷ್ಟಿಕೋನವು ನಮ್ಮ ಗಣರಾಜ್ಯಕ್ಕೆ ನಿರಂತರವಾಗಿ ಮಾರ್ಗದರ್ಶನ ನೀಡುತ್ತಿದೆ. ಅಂದು ವಿಶ್ವದಲ್ಲಿ ಬಹುಮಟ್ಟಿಗೆ ಬಡ ಮತ್ತು ಅನಕ್ಷರಸ್ಥ ರಾಷ್ಟ್ರವಾಗಿದ್ದ ಭಾರತವು ಈಗ ಆತ್ಮವಿಶ್ವಾಸದ ರಾಷ್ಟ್ರವಾಗಿ ರೂಪಾಂತರಗೊಂಡಿದೆ. ಈ ನಮಗೆ ಮಾರ್ಗವನ್ನು ತೋರುತ್ತಿರುವ ಸಂವಿಧಾನ ರಚನಾಕಾರರ ಸಾಮೂಹಿಕ ಲೋಕ ಜ್ಞಾನದ ಹೊರತಾಗಿ ಈ ಪರಿವರ್ತನೆ ಸಾಧ್ಯವಾಗುತ್ತಿರಲಿಲ್ಲ ಎಂದು ಪ್ರತಿಪಾದಿಸಿದರು.

ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಇತರರು ನಮಗೆ ಮಾರ್ಗ ಮತ್ತು ನೈತಿಕ ಚೌಕಟ್ಟನ್ನು ನೀಡಿದ್ದರೆ, ಆ ಮಾರ್ಗದಲ್ಲಿ ನಡೆಯುವ ಕಾರ್ಯವು ನಮ್ಮ ಜವಾಬ್ದಾರಿಯಾಗಿದೆ. ನಾವು ಅವರ ನಿರೀಕ್ಷೆಗಳನ್ನು ಬಹುಮಟ್ಟಿಗೆ ನಿಜವಾಗಿಸಿದ್ದೇವೆ. ಆದರೆ, ಗಾಂಧೀಜಿಯವರ ಸರ್ವೋದಯ ಆದರ್ಶವನ್ನು ಸಾಕಾರಗೊಳಿಸಲು ಇನ್ನೂ ಹೆಚ್ಚಿನದನ್ನು ನಾವು ಮಾಡಬೇಕಾಗಿದೆ ಎಂಬುವುದನ್ನೂ ನಾವು ಅರಿತುಕೊಂಡಿದ್ದೇವೆ ಎಂದು ದ್ರೌಪದಿ ಮುರ್ಮು ಹೇಳಿದರು.

ನಾವು ಎಲ್ಲ ರಂಗಗಳಲ್ಲಿ ಸಾಧಿಸಿರುವ ಪ್ರಗತಿಯು ಉತ್ತೇಜನಕಾರಿಯಾಗಿದೆ. ಒಂದು ರಾಷ್ಟ್ರವಾಗಿ ಒಟ್ಟುಗೂಡುವ ಇಂತಹ ವಿಶಾಲ ಮತ್ತು ವೈವಿಧ್ಯಮಯ ಬಹುಸಂಖ್ಯೆಯ ಜನರು ಅಭೂತಪೂರ್ವವಾಗಿ ಒಂದಾಗಿ ಉಳಿದಿದ್ದಾರೆ. ನಾವೆಲ್ಲರೂ ಭಾರತೀಯರು ಎಂಬ ನಂಬಿಕೆಯಿಂದ ಇದನ್ನು ಸಾಧಿಸಲು ಸಾಧ್ಯವಾಗಿದೆ. ನಾವು ಪ್ರಜಾಪ್ರಭುತ್ವ ಗಣರಾಜ್ಯವಾಗಿ ಯಶಸ್ವಿಯಾಗಿದ್ದೇವೆ. ಏಕೆಂದರೆ ಹಲವಾರು ಧರ್ಮಗಳು ಮತ್ತು ಭಾಷೆಗಳು ನಮ್ಮನ್ನು ವಿಭಜಿಸಲಿಲ್ಲ, ಅವು ನಮ್ಮನ್ನು ಒಗ್ಗೂಡಿಸಿವೆ. ಇದೇ ಭಾರತದ ಸಾರ ಎಂದು ರಾಷ್ಟ್ರಪತಿಗಳು ಬಣ್ಣಿಸಿದರು.

ಇದನ್ನೂ ಓದಿ:ದೆಹಲಿಯ ಗಣರಾಜ್ಯೋತ್ಸವ ಪರೇಡ್​: ನಾರಿಶಕ್ತಿ ಟ್ಯಾಬ್ಲೋಗೆ ಸಾಥ್​ ನೀಡಲಿರುವ ಉತ್ತರ ಕನ್ನಡದ ಸುಗ್ಗಿ ತಂಡ

ABOUT THE AUTHOR

...view details