ಕರ್ನಾಟಕ

karnataka

ಲೋಕಸಭೆ ಚುನಾವಣೆಗೆ ಕಾಂಗ್ರೆಸ್​ ತಾಲೀಮು: 500 ಕ್ಷೇತ್ರಗಳ ಸಮೀಕ್ಷೆಗೆ ಪ್ಲಾನ್​

By ETV Bharat Karnataka Team

Published : Jan 6, 2024, 7:40 PM IST

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಗರಿಷ್ಠ ಸ್ಥಾನಗಳನ್ನು ಗೆಲ್ಲುವ ಸಂಕಲ್ಪ ಮಾಡಿರುವ ಕಾಂಗ್ರೆಸ್ ಪಕ್ಷ, 'ಇಂಡಿಯಾ' ಮೈತ್ರಿಕೂಟದ ಪಕ್ಷಗಳೊಂದಿಗೆ ಸೀಟು ಹಂಚಿಕೆ ಮಾತುಕತೆ ಆರಂಭಿಸುವ ಮುನ್ನ 500 ಕ್ಷೇತ್ರಗಳ ಸಮೀಕ್ಷೆ ಮುಂದಾಗಿದೆ.

congress-to-survey-500-ls-seats-before-india-alliance-seat-sharing-talks
ಲೋಕಸಭೆ ಚುನಾವಣೆಗೆ ಕಾಂಗ್ರೆಸ್​ ತಾಲೀಮು: 500 ಕ್ಷೇತ್ರಗಳ ಸಮೀಕ್ಷೆಗೆ ಪ್ಲಾನ್​

ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಗೆ ಕಾಂಗ್ರೆಸ್​ ಭರದ ಸಿದ್ಧತೆ ಆರಂಭಿಸಿದೆ. 'ಇಂಡಿಯಾ' ಮೈತ್ರಿಕೂಟದ ಪಾಲುದಾರ ಪಕ್ಷಗಳೊಂದಿಗೆ ಸೀಟು ಹಂಚಿಕೆ ಮಾತುಕತೆ ಆರಂಭಿಸುವ ಮುನ್ನ ದೇಶಾದ್ಯಂತ 543 ಸಂಸದೀಯ ಕ್ಷೇತ್ರಗಳ ಪೈಕಿ 500 ಕ್ಷೇತ್ರಗಳ ಸಮೀಕ್ಷೆಗೆ ಎಐಸಿಸಿ ವೀಕ್ಷಕರನ್ನು ರವಾನಿಸಲು ಕಾಂಗ್ರೆಸ್ ಪ್ಲಾನ್​ ಮಾಡಿದೆ.

ಈ ಸಮೀಕ್ಷೆಯು ಕಾಂಗ್ರೆಸ್‌ಗೆ ಹೆಚ್ಚಿನ ಸ್ಥಾನಗಳಿಗೆ ತಯಾರಿ ಮಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ. ಸೀಟು ಹಂಚಿಕೆಯ ಭಾಗವಾಗಿ ತನ್ನ ಗೆಲುವಿಗೆ ನೆರವಾಗುವ ಯಾವುದೇ ಕ್ಷೇತ್ರವನ್ನು ಪಡೆಯಲು ಸಹಕಾರಿಯಾಗಲಿದೆ. ಪಕ್ಷದ ಒಳಗಿನವರ ಪ್ರಕಾರ, ಎಲ್ಲ ವೀಕ್ಷಕರು 500 ಸ್ಥಾನಗಳಲ್ಲಿ ನೆಲಮಟ್ಟದ ಸ್ಥಿತಿಯನ್ನು ಸಮೀಕ್ಷೆ ಮಾಡಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ವರದಿಯನ್ನು ಸಲ್ಲಿಸಲಿದ್ದಾರೆ.

''ದೇಶದಾದ್ಯಂತ ಹೆಚ್ಚಿನ ಸ್ಥಾನಗಳ ಕ್ರಿಯಾಶೀಲತೆಯನ್ನು ನಾವು ತಿಳಿದಿರಬೇಕು. ಮಾತುಕತೆಯ ಸಮಯದಲ್ಲಿ ನಾವು ಸ್ಪರ್ಧಿಸದ ಸ್ಥಾನವನ್ನು ನಾವು ಪಡೆಯಬಹುದು. ಅಗತ್ಯವಿದ್ದರೆ ನಮ್ಮ ಮಿತ್ರದ ಅಭ್ಯರ್ಥಿಗೆ ಸಹಾಯ ಮಾಡುವ ಸ್ಥಿತಿಯಲ್ಲೂ ನಾವು ಇರಬೇಕಾಗುತ್ತದೆ'' ಎಂದು ಸಿಡಬ್ಲ್ಯೂಸಿ ಸದಸ್ಯರೊಬ್ಬರು ಹೇಳಿದರು. ಅಲ್ಲದೇ, 'ಕ್ಲಸ್ಟರ್ ಉಸ್ತುವಾರಿ ನೇಮಕದ ನಂತರ ವೀಕ್ಷಕರ ನೇಮಕದ ಕ್ರಮವು ಸಂಭಾವ್ಯ ಅಭ್ಯರ್ಥಿಗಳ ಆಯ್ಕೆಯಲ್ಲಿ ಪಾತ್ರ ವಹಿಸುತ್ತದೆ. ಸಂಭಾವ್ಯ ಅಭ್ಯರ್ಥಿಗಳ ಗುರುತಿಸುವಿಕೆ ಮತ್ತು ಸ್ಥಳೀಯ ಸಮಸ್ಯೆಗಳಲ್ಲಿ ಕ್ಲಸ್ಟರ್ ಮುಖ್ಯಸ್ಥರಿಗೆ ಸಹಾಯ ಮಾಡಲು ವೀಕ್ಷಕರಿಗೆ ಸೂಚಿಸಲು ನೆರವಾಗುತ್ತದೆ'' ಎನ್ನುತ್ತಾರೆ ಪಕ್ಷದ ಒಳಗಿನವರು.

ಐದು ಸದಸ್ಯರ ಕಾಂಗ್ರೆಸ್ ಮೈತ್ರಿ ಸಮಿತಿಯು ರಾಷ್ಟ್ರೀಯ ಮಟ್ಟದ ಸೀಟು ಹಂಚಿಕೆಯ ನೀಲನಕ್ಷೆಯನ್ನು ತಯಾರಿಸಲು ರಾಜ್ಯವಾರು 'ಇಂಡಿಯಾ' ಮೈತ್ರಿ ಪಕ್ಷಗಳೊಂದಿಗೆ ಮಾತುಕತೆ ಆರಂಭಿಸಲಿದೆ. ಇದಕ್ಕೆ ಕೆಲ ದಿನಗಳ ಮೊದಲೇ ಕಾಂಗ್ರೆಸ್​ ಸಮೀಕ್ಷೆಯ ಯೋಜನೆ ರೂಪಿಸಿದೆ. ಈ ಕುರಿತು ಎಐಸಿಸಿ ಮಹಾರಾಷ್ಟ್ರ ಉಸ್ತುವಾರಿ ಕಾರ್ಯದರ್ಶಿ ಆಶಿಶ್ ದುವಾ 'ಈಟಿವಿ ಭಾರತ್‌'ಗೆ ಪ್ರತಿಕ್ರಿಯಿಸಿ, ''ಆರಂಭಿಕವಾಗಿ ಕೆಲವು ತೊಡಕುಗಳು ಇದ್ದಿರಬಹುದು. ಆದರೆ, ಇಂಡಿಯಾ ಮೈತ್ರಿಕೂಟದ ಸೀಟು ಹಂಚಿಕೆಯ ಮಾತುಕತೆಗಳು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿವೆ. ಈ ತಿಂಗಳೊಳಗೆ ಸೀಟು ಹಂಚಿಕೆಯ ಕಸರತ್ತು ಆರಂಭಿಸಿ ಪೂರ್ಣಗೊಳಿಸಲಾಗುವುದು'' ಎಂದು ತಿಳಿಸಿದರು.

ದುವಾ ಪ್ರಕಾರ, ಆಡಳಿತ ಪಕ್ಷವು ಸೃಷ್ಟಿಸುತ್ತಿರುವ ಗ್ರಹಿಕೆಗಿಂತ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಬಿಜೆಪಿಯನ್ನು ಎದುರಿಸಲು ಪ್ರತಿಪಕ್ಷಗಳ ಮೈತ್ರಿಕೂಟ ಉತ್ತಮವಾಗಿದೆ. ''2019ರ ಲೋಕಸಭೆ ಚುನಾವಣೆಯಲ್ಲಿ ರಾಜಸ್ಥಾನ, ಮಧ್ಯಪ್ರದೇಶ, ಹರಿಯಾಣ, ದೆಹಲಿ, ಗುಜರಾತ್, ಕರ್ನಾಟಕ, ಬಿಹಾರ ಮತ್ತು ಛತ್ತೀಸ್‌ಗಢದಂತಹ ರಾಜ್ಯಗಳಲ್ಲಿ ಬಿಜೆಪಿಯ ಮತ ಹಂಚಿಕೆ ಶೇ.37ರಷ್ಟಾಗಿತ್ತು. ಈ ಬಾರಿ ಪ್ರಮುಖ ಮಿತ್ರಪಕ್ಷಗಳಾದ ಜೆಡಿಯು ಮತ್ತು ಶಿವಸೇನೆ ಹೊರಬಿದ್ದಿವೆ. ಅಲ್ಲದೇ, ಆಗ ಪ್ರತಿಪಕ್ಷಗಳ ಮತಗಳ ಪಾಲು ಶೇ.63ರಷ್ಟಿತ್ತು. ಆದರೆ, ಅವು ಒಗ್ಗಟ್ಟಾಗಿರಲಿಲ್ಲ. ಬಿಜೆಪಿಯು ರಾಜ್ಯಗಳಲ್ಲಿ ಉನ್ನತಕ್ಕೇರುವುದಿಲ್ಲ. ಪ್ರತಿಪಕ್ಷಗಳ ಮತಗಳು ಒಗ್ಗೂಡಿದರೆ, 2024ರ ಚುನಾವಣೆಯ ಫಲಿತಾಂಶದ ಮೇಲೆ ಗಮನಾರ್ಹ ಪರಿಣಾಮ ಬೀರಬಹುದು'' ಎಂದು ದುವಾ ಅಭಿಪ್ರಾಯಪಟ್ಟರು.

ಮಹಾರಾಷ್ಟ್ರದಲ್ಲಿ 48 ಕ್ಷೇತ್ರಗಳ ಪೈಕಿ 23 ಕ್ಷೇತ್ರ ಪಡೆಯಲು ಎಂದು ಕಾಂಗ್ರೆಸ್ ಈಗಾಗಲೇ ಮಿತ್ರಪಕ್ಷಗಳಾದ ಶಿವಸೇನೆ (ಯುಬಿಟಿ) ಮತ್ತು ಎನ್‌ಸಿಪಿಗೆ ಅನೌಪಚಾರಿಕವಾಗಿ ಚರ್ಚಿಸಿದೆ. ಪಶ್ಚಿಮ ಬಂಗಾಳದಲ್ಲಿ 42 ಕ್ಷೇತ್ರಗಳ ಪೈಕಿ 12 ಮತ್ತು ಬಿಹಾರದಲ್ಲಿ 40 ಕ್ಷೇತ್ರಗಳ ಪೈಕಿ 12 ಕ್ಷೇತ್ರಗಳನ್ನು ಕಾಂಗ್ರೆಸ್​ ಗುರುತಿಸಿದ್ದು, ಇಲ್ಲಿ ಪಕ್ಷವು ಗೆಲ್ಲುವ ಅವಕಾಶವನ್ನು ಹೊಂದಿದೆ ಎಂದು ಭಾವಿಸುತ್ತದೆ. ಅದೇ ರೀತಿ ಉತ್ತರ ಪ್ರದೇಶದಲ್ಲಿ 80 ಕ್ಷೇತ್ರಗಳ ಪೈಕಿ 15 ಕ್ಷೇತ್ರ ಪಡೆದುಕೊಳ್ಳುವ ಸಾಧ್ಯತೆ ಇದೆ ಎಂದು ಪಕ್ಷದ ಒಳಗಿನವರು ಹೇಳಿದ್ದಾರೆ.

2019ರ ಚುನಾವಣೆಯಲ್ಲಿ ಕಾಂಗ್ರೆಸ್ ಸುಮಾರು 421 ಸ್ಥಾನಗಳಲ್ಲಿ ಸ್ಪರ್ಧಿಸಿತ್ತು. ಆದರೆ, ಕೇವಲ 52 ಸ್ಥಾನಗಳನ್ನು ಗೆದ್ದಿತ್ತು. ಬಿಹಾರದಲ್ಲಿ ಆರ್‌ಜೆಡಿ, ಜಾರ್ಖಂಡ್‌ನಲ್ಲಿ ಜೆಎಂಎಂ, ತಮಿಳುನಾಡಿನಲ್ಲಿ ಡಿಎಂಕೆ, ಕರ್ನಾಟಕದಲ್ಲಿ ಜೆಡಿಎಸ್ ಮತ್ತು ಮಹಾರಾಷ್ಟ್ರದಲ್ಲಿ ಎನ್‌ಸಿಪಿ ಜೊತೆ ಮೈತ್ರಿ ಮಾಡಿಕೊಂಡಿತ್ತು. ಆದರೆ, ಈ ಬಾರಿ ಕಾಂಗ್ರೆಸ್ 28 ಪಕ್ಷಗಳ ಇಂಡಿಯಾ ಮೈತ್ರಿಕೂಟವನ್ನು ರಚಿಸಿಕೊಂಡಿದೆ.

ಇದನ್ನೂ ಓದಿ:ಬಿಜೆಪಿ 10 ವರ್ಷಗಳ ಆಡಳಿತ ವೈಫಲ್ಯ ಮರೆಮಾಚಲು ಭಾವನಾತ್ಮಕ ವಿಷಯ ಎತ್ತುತ್ತಿದೆ: ಕಾಂಗ್ರೆಸ್ ಅಧ್ಯಕ್ಷ ಖರ್ಗೆ

ABOUT THE AUTHOR

...view details