ಕರ್ನಾಟಕ

karnataka

'ಜಾತಿ ಗಣತಿ ಎಕ್ಸ್​ರೇ ಇದ್ದಂತೆ, ಸಮೀಕ್ಷೆಯಿಂದ ಸಮುದಾಯಗಳ ಬಗ್ಗೆ ತಿಳಿಯಲು ಸಾಧ್ಯ': ರಾಹುಲ್​ ಗಾಂಧಿ

By ETV Bharat Karnataka Team

Published : Oct 10, 2023, 8:20 PM IST

ಕೇಂದ್ರದಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ, ದೇಶಾದ್ಯಂತ ಜಾತಿಗಣತಿ ನಡೆಸಲಾಗುವುದು ಎಂದು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಮಧ್ಯಪ್ರದೇಶದ ಚುನಾವಣಾ ರ್ಯಾಲಿಯಲ್ಲಿ ಹೇಳಿದ್ದಾರೆ.

ರಾಹುಲ್​ ಗಾಂಧಿ
ರಾಹುಲ್​ ಗಾಂಧಿ

ಭೋಪಾಲ್ (ಮಧ್ಯಪ್ರದೇಶ) :ದೇಶದಲ್ಲಿ ಜಾತಿ ಗಣತಿ ನಡೆಸಬೇಕು ಎಂದು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಪುನರುಚ್ಚರಿಸಿದ್ದಾರೆ. ಸಮೀಕ್ಷೆ ಎಕ್ಸ್​ರೇ ಇದ್ದ ಹಾಗೆ. ಸಮಾಜದಲ್ಲಿ ಯಾವ್ಯಾವ ಸಮುದಾಯ, ಎಷ್ಟೆಷ್ಟಿದೆ ಎಂಬುದನ್ನು ತಿಳಿದುಕೊಳ್ಳಲು ಈ ಎಕ್ಸ್​ರೇ ಮಾಡಬೇಕಿದೆ ಎಂದು ಅವರು ಹೇಳಿದರು.

ಮಧ್ಯಪ್ರದೇಶದಲ್ಲಿಂದು ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್, ಏನೇ ಆದರೂ, ದೇಶದಲ್ಲಿ ಜಾತಿ ಗಣತಿ ನಡೆಸುವಂತೆ ಕೇಂದ್ರವನ್ನು ಕಾಂಗ್ರೆಸ್​ ಒತ್ತಾಯಿಸುತ್ತದೆ. ನೀವು ಗಾಯಗೊಂಡಾಗ ಮೊದಲು ಮಾಡುವ ಕೆಲಸವೆಂದರೆ ಅದು ಎಕ್ಸ್ ರೇ. ಎಕ್ಸ್ ರೇ ಮೂಲಕ ಮೂಳೆ ಮುರಿದಿದೆಯೇ ಅಥವಾ ಇಲ್ಲವೇ, ಎಲ್ಲಿ ಮತ್ತು ಹೇಗೆ ಮುರಿದಿದೆ ಎಂದು ನಾವು ಅದರಿಂದ ಖಚಿತಪಡಿಸಿಕೊಳ್ಳುತ್ತೇವೆ. ಅದೇ ರೀತಿ ಜಾತಿ ಗಣತಿಯು ಎಕ್ಸ್​ರೇ ರೀತಿ. ಸಮೀಕ್ಷೆ ಎಕ್ಸ್​ ಆಗಿದ್ದರೆ, ರೇ ಎಂಬುದು ಎಷ್ಟು ಜನರಿದ್ದಾರೆ ಎಂದು ಸೂಚಿಸುತ್ತದೆ. ಯಾವ ಸಮುದಾಯ, ಎಷ್ಟು ಪ್ರಮಾಣದಲ್ಲಿದೆ . ಅಧಿಕಾರ ರಚನೆಯಲ್ಲಿ ಅವರ ಪಾತ್ರವೇನು ಎಂದು ನಮಗೆ ಅದು ವಿವರಿಸುತ್ತದೆ ಎಂದರು.

ಸಿಡಬ್ಲ್ಯೂಸಿಯಲ್ಲಿ ಅಂಗೀಕಾರ:ಒಬಿಸಿ, ದಲಿತರು ಮತ್ತು ಬುಡಕಟ್ಟು ಜನಾಂಗದವರ ಜೀವನ ಮಟ್ಟಗಳ ಬಗ್ಗೆ ಸತ್ಯ ತಿಳಿಯಲು ಜಾತಿ ಗಣತಿಯೆಂಬ ಎಕ್ಸ್ ರೇ ಮಾಡಬೇಕಿದೆ. ರಾಷ್ಟ್ರವ್ಯಾಪಿ ಜಾತಿ ಗಣತಿ ನಡೆಸಲು ಸೋಮವಾರ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ಸಭೆಯಲ್ಲಿ ಅಂಗೀಕಾರ ಪಡೆಯಲಾಗಿದೆ ಎಂದು ರಾಹುಲ್​ ತಿಳಿಸಿದರು.

ಜಾತಿ ಗಣತಿಗೆ ತಾವು ಶೇಕಡಾ 100 ರಷ್ಟು ಬೆಂಬಲ ನೀಡುತ್ತೇವೆ ಎಂದು ಪ್ರತಿಪಾದಿಸಿದ ರಾಹುಲ್ ಗಾಂಧಿ, ದಲಿತರು, ಬುಡಕಟ್ಟು ಜನಾಂಗದವರು, ಒಬಿಸಿಗಳು ಮತ್ತು ಮೇಲ್ಜಾತಿಗಳು ಎಷ್ಟು ಮಂದಿ ಇದ್ದಾರೆ ಎಂಬ ಸ್ಪಷ್ಟ ಚಿತ್ರಣವನ್ನು ಸಮೀಕ್ಷೆ ನೀಡುತ್ತದೆ. ಇದರ ಆಧಾರದ ಮೇಲೆ ಮುಂದಿನ ಕ್ರಮವನ್ನು ನಿರ್ಧರಿಸಲು ಸಾಧ್ಯವಾಗುತ್ತದೆ ಎಂದರು.

ವಾಸ್ತವವಾಗಿ ಕೆಳಜಾತಿಯ ಸಮುದಾಯಗಳು, ಒಬಿಸಿಗಳು, ದಲಿತರು ಮತ್ತು ಬುಡಕಟ್ಟು ಸಮುದಾಯಗಳು ಅಧಿಕಾರದ ಭಾಗವಾಗಿಲ್ಲ. ಸರ್ಕಾರದ ಆಡಳಿತದಲ್ಲಿ ಒಬಿಸಿಗಳು ಎಷ್ಟು ಮಂದಿ ಇದ್ದಾರೆ ಎಂಬುದು ಯಾರಿಗೂ ತಿಳಿದಿಲ್ಲ. ಹೀಗಾಗಿ ಇದೆಲ್ಲವನ್ನೂ ಅರಿಯಲು ದೇಶಾದ್ಯಂತ ಸಮೀಕ್ಷೆ ನಡೆಸಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಅಧಿಕಾರಕ್ಕೆ ಬಂದ್ರೆ ಜಾತಿಗಣತಿ:ಕಾಂಗ್ರೆಸ್ ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, ಪಕ್ಷದ ನೇತೃತ್ವದ ಸರ್ಕಾರವು ಅಧಿಕಾರಕ್ಕೆ ಬಂದಲ್ಲಿ ರಾಷ್ಟ್ರವ್ಯಾಪಿ ಜಾತಿ ಗಣತಿ, ಮಹಿಳೆಯರಿಗೆ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಶೇಕಡಾ 33 ರಷ್ಟು ಮೀಸಲಾತಿ ನೀಡುವ ಮಸೂದೆ ಜಾರಿ, ಒಬಿಸಿ ಸಮುದಾಯಕ್ಕೆ ಒಳ ಮೀಸಲಾತಿ ನೀಡಲಾವುದು ಎಂದು ಹೇಳಿದೆ. ಸೋಮವಾರ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಎಲ್ಲಾ ಅಂಶಗಳಿಗೆ ಸದಸ್ಯರು ಅನುಮೋದನೆ ನೀಡಿದ್ದಾರೆ.

ಇದನ್ನೂ ಓದಿ:'ಅಮರ್ತ್ಯ ಸೇನ್​ ನಿಧನ ಸುದ್ದಿ ಸುಳ್ಳು, ಅವರ ಆರೋಗ್ಯ ಉತ್ತಮವಾಗಿದೆ': ಈಟಿವಿ ಭಾರತ್‌ಗೆ ಪುತ್ರಿ ನಂದನಾ ಸ್ಪಷ್ಟನೆ

ABOUT THE AUTHOR

...view details