ಹೈದರಾಬಾದ್: ಕಳೆದ ವರ್ಷ ಅಮೆರಿಕದ ಹೌಸ್ಟನ್ನಲ್ಲಿ ನಡೆದ ಹೌಡಿ ಮೋದಿ ರ್ಯಾಲಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಆಹ್ವಾನಿಸುವ ಪ್ರಧಾನಿ ನರೇಂದ್ರ ಮೋದಿ ಅವರ ನಿರ್ಧಾರ, ಅಲ್ಲಿ ಅವರು ಬಳಸಿದ್ದ ʼಅಬ್ ಕಿ ಬಾರ್ ಟ್ರಂಪ್ ಸರ್ಕಾರ್ (ಅಧ್ಯಕ್ಷ ಟ್ರಂಪ್ಗೆ ಮತ್ತೊಂದು ಪದ!) ಎಂಬ ಘೋಷಣೆಯು, ಟ್ರಂಪ್ ಅವರ ಡೆಮಾಕ್ರಟಿಕ್ ಪ್ರತಿಸ್ಪರ್ಧಿ ಜೊ ಬೈಡನ್ ಮುಂದಿನ ವರ್ಷ ಶ್ವೇತಭವನ ಪ್ರವೇಶಿಸಿದಾಗ ದ್ವಿಪಕ್ಷೀಯ ಸಂಬಂಧಗಳ ಮೇಲೆ ಪ್ರಭಾವ ಬೀರುವುದಿಲ್ಲ ಎಂದು ಮೂವರು ಉನ್ನತ ರಾಜತಾಂತ್ರಿಕರು ಈಟಿವಿ ಭಾರತ್ಗೆ ತಿಳಿಸಿದ್ದಾರೆ.
ಚುನಾವಣಾ ಫಲಿತಾಂಶವು ಜೊ ಬೈಡನ್ ಅವರ ಪರವಾಗಿದೆ ಎಂದು ಅಮೆರಿಕದ ಹಲವಾರು ಪ್ರಮುಖ ಸುದ್ದಿ ಸಂಸ್ಥೆಗಳು ಶನಿವಾರ ಹೇಳಿದ ನಂತರ, ದೇಶದ ಪ್ರಮುಖ ವಿರೋಧ ಪಕ್ಷವಾದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಕೆಲವು ನಾಯಕರು, ಕಳೆದ ವರ್ಷ ಹೌಡಿ ಮೋದಿ ರ್ಯಾಲಿಯಲ್ಲಿ ʼಅಪ್ ಕಿ ಬಾರ್ ಟ್ರಂಪ್ ಸರ್ಕಾರ್ʼ ಘೋಷಣೆ ಬಳಸಿದ್ದಕ್ಕಾಗಿ ಪ್ರಧಾನಿ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸಿದರು.
ಜೊ ಬೈಡನ್ ಅವರ ಗೆಲುವಿನ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿಯ ಹಿರಿಯ ನಾಯಕ ರಾಮ್ ಮಾಧವ್ ಅವರು, ಉಭಯ ನಾಯಕರಾದ ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಟ್ರಂಪ್ ನಡುವಿನ ನಿಕಟ ಸಂಬಂಧವು ಜೊ ಬೈಡನ್ ಅವರ ಅಧಿಕಾರದ ಅಡಿ ಮೈತ್ರಿಯ ಮೇಲೆ ಪರಿಣಾಮ ಬೀರುತ್ತದೆ ಎಂಬ ಆತಂಕವನ್ನು ತಳ್ಳಿಹಾಕಿದ್ದಾರೆ.
ಶ್ವೇತಭವನದಲ್ಲಿ ನಡೆದ ಬದಲಾವಣೆಯನ್ನು ನಿಭಾಯಿಸಬೇಕಾದ ಅನಿವಾರ್ಯತೆಗೆ ಸಿಲುಕಿರುವ ವಿಶ್ವ ನಾಯಕರ ಪೈಕಿ ಪ್ರಧಾನಿ ನರೇಂದ್ರ ಮೋದಿ ಒಬ್ಬರೇ ಇಲ್ಲ. ಇಸ್ರೇಲ್ನ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು, ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸೊನಾರೊ ಮತ್ತು ಯುರೋಪ್ನ ಕೆಲವು ನಾಯಕರು ಕೂಡಾ ತಮ್ಮ ವಿದೇಶಿ ನೀತಿಗಳನ್ನು ಅಮೆರಿಕದ ಹೊಸ ಆಡಳಿತದೊಂದಿಗೆ ಮರು ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ.
ಅದಾಗ್ಯೂ, ಹಲವಾರು ಉನ್ನತ ರಾಜತಾಂತ್ರಿಕರು ಮತ್ತು ವಿದೇಶಾಂಗ ನೀತಿ ತಜ್ಞರು, ಬೈಡನ್ ಆಡಳಿತದ ಅಡಿಯಲ್ಲಿ ಭಾರತ-ಅಮೆರಿಕ ಸಂಬಂಧಗಳು ವಿಶಮಿಸಬಹುದು ಎಂಬ ಆತಂಕವನ್ನು ತಿರಸ್ಕರಿಸುತ್ತಾರೆ. ಅಮೆರಿಕ ಮತ್ತು ಭಾರತಗಳೆರಡಕ್ಕೂ ಪರಸ್ಪರರ ಅವಶ್ಯಕತೆ ಇದೆ ಎಂಬುದು ಅವರ ಪ್ರತಿಪಾದನೆ.
"ಈ ವಿಷಯಕ್ಕೆ ಸಂಬಂಧಿಸಿದಂತೆ ಉಭಯ ಪಕ್ಷಗಳ ನಡುವೆ ಒಮ್ಮತವಿದೆ ಎಂದು ನಾನು ಭಾವಿಸುತ್ತೇನೆ. ರಿಪಬ್ಲಿಕನ್ನರು ಹಾಗೂ ಮತ್ತು ಡೆಮೊಕ್ರಾಟರಿಬ್ಬರೂ ಭಾರತದೊಂದಿಗೆ ಸಂಬಂಧವನ್ನು ಬೆಳೆಸಲು ಬಯಸುತ್ತಾರೆ. ಹೀಗಾಗಿ, ಭಾರತದಲ್ಲಿ ಯಾವುದೇ ಸರ್ಕಾರ ಇದ್ದರೂ ಅವರು ಜೊತೆಯಾಗಿ ಕೆಲಸ ಮಾಡುತ್ತಾರೆ" ಎನ್ನುತ್ತಾರೆ ಅಧ್ಯಕ್ಷ ಒಬಾಮಾ ಅವರ ಅಧಿಕಾರಾವಧಿಯಲ್ಲಿ ಅಮೆರಿಕದಲ್ಲಿ ಭಾರತದ ರಾಯಭಾರಿಯಾಗಿದ್ದ ಮೀರಾ ಶಂಕರ್.
ದಕ್ಷಿಣ ಆಫ್ರಿಕಾ, ಮೆಕ್ಸಿಕೊ, ಮ್ಯಾನ್ಮಾರ್ ಮತ್ತು ಕೀನ್ಯಾದಲ್ಲಿ ಭಾರತದ ಉನ್ನತ ರಾಜತಾಂತ್ರಿಕರಾಗಿದ್ದ ರಾಯಭಾರಿ ರಾಜೀವ್ ಭಾಟಿಯಾ ಪ್ರಕಾರ, ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಟ್ರಂಪ್ ನಡುವಿನ ವೈಯಕ್ತಿಕ ಸಮಾನಾಸಕ್ತಿಯು ಹೊಸ ಆಡಳಿತದ ಅಡಿಯಲ್ಲಿ ದ್ವಿಪಕ್ಷೀಯ ಸಂಬಂಧಗಳ ಮೇಲೆ ಪರಿಣಾಮ ಬೀರುವುದಿಲ್ಲ. ಏಕೆಂದರೆ ಆಸಕ್ತಿಯ ಏಕೀಕರಣವು ಭವಿಷ್ಯದ ಸಂಬಂಧಗಳಿಗೆ ಚಾಲನೆ ನೀಡುತ್ತದೆ ಎನ್ನುತ್ತಾರೆ ಅವರು.
ಉಭಯ ದೇಶಗಳು ತಮ್ಮ ಸಂಬಂಧಗಳಲ್ಲಿ ಕೆಲವು ಸಮಸ್ಯೆಗಳನ್ನು ಹೊಂದಿದ್ದರಿಂದ ಅಮೆರಿಕದ ಅಧ್ಯಕ್ಷ ಟ್ರಂಪ್ ಅವರೊಂದಿಗೆ ಉತ್ತಮ ಬಾಂಧವ್ಯವನ್ನು ಬೆಳೆಸಿಕೊಳ್ಳುವುದು ಪ್ರಧಾನಿ ಮೋದಿಯವರಿಗೆ ಬಹಳ ಮುಖ್ಯವಾಗಿತ್ತು ಎನ್ನುವ ಭಾಟಿಯಾ, ಎರಡೂ ದೇಶಗಳ ನಡುವಿನ ಸಂಬಂಧದಲ್ಲಿ ಕೆಲವು ತೊಡಕುಗಳಿದ್ದವು. ಅಧ್ಯಕ್ಷ ಟ್ರಂಪ್ ಅವರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದುವಲ್ಲಿ ಪ್ರಧಾನಿ ಮೋದಿಯವರ ಪ್ರಯತ್ನಗಳು ಫಲ ನೀಡಿದವು. ಅದರಲ್ಲಿಯೂ ಚೀನಾದೊಂದಿಗೆ ನಡೆದ ಗಡಿ ಸಂಘರ್ಷದ ಸಂದರ್ಭದಲ್ಲಿ ಅಮೆರಿಕವು ಭಾರತದ ಪರ ಗಟ್ಟಿಯಾಗಿ ನಿಂತಿತು ಎಂದು ವಿಶ್ಲೇಷಿಸುತ್ತಾರೆ.
ವೃತ್ತಿಯಿಂದ ರಾಜತಾಂತ್ರಿಕ ಮತ್ತು ವಿದೇಶಾಂಗ ವ್ಯವಹಾರಗಳ ಪ್ರಮುಖ ಧ್ವನಿ ಎನಿಸಿರುವ ರಾಯಭಾರಿ ವಿಷ್ಣು ಪ್ರಕಾಶ್ ಅವರು, ಸಂಬಂಧಗಳನ್ನು ರೂಪಿಸುವುದು, ನಿರ್ವಹಿಸುವುದು ಮತ್ತು ವರ್ಧಿಸುವುದು, ಅದರಲ್ಲಿಯೂ ಪ್ರಮುಖವಾಗಿ ಆಕ್ರಮಣಕಾರಿ ಚೀನಾ ಒಡ್ಡಿರುವ ಬೆದರಿಕೆಯನ್ನು ಭಾರತ ಮತ್ತು ಅಮೆರಿಕಗಳೆರಡೂ ಸಮಾನವಾಗಿ ಎದುರಿಸಬೇಕಿದೆ. ಇದರಲ್ಲಿ ಉಭಯತ್ರರ ಹಿತಾಸಕ್ತಿ ಅಡಗಿರುವುದರಿಂದ ಈ ವಿಷಯ ಕುರಿತು ನಾವು ಯಾವುದೇ ತಪ್ಪು ಭಾವನೆ ತೋರಿಸಬೇಕಿಲ್ಲ ಎನ್ನುತ್ತಾರೆ.
ಕಷ್ಟಕರವಾಗಿತ್ತು ಅಧ್ಯಕ್ಷ ಟ್ರಂಪ್ ಅವರ ವಿಶ್ವಾಸ ಗಳಿಕೆ:
ತಮ್ಮ ಹಿಂದಿನ ಅಧ್ಯಕ್ಷ ಬರಾಕ್ ಒಬಾಮಾಗೆ ಪ್ರಧಾನಿ ಮೋದಿಯವರು ಬಹಳ ಆಪ್ತರಾಗಿದ್ದಾರೆಂದು ತಿಳಿದುಬಂದಿದ್ದರಿಂದ, 2016 ರ ಜನವರಿಯಲ್ಲಿ ಶ್ವೇತಭವನದಲ್ಲಿ ಟ್ರಂಪ್ ಅವರು ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ಅವರ ವಿಶ್ವಾಸವನ್ನು ಗೆಲ್ಲುವಲ್ಲಿ ಮೋದಿ ಸರ್ಕಾರ ಆರಂಭದಲ್ಲಿ ಕಷ್ಟ ಎದುರಿಸಬೇಕಾಯಿತು ಎನ್ನುತ್ತಾರೆ ರಾಯಭಾರಿ ಮೀರಾ ಶಂಕರ್.
ಪ್ರಧಾನಿ ಮೋದಿಯವರ ಆಹ್ವಾನದ ಮೇರೆಗೆ, ಅಮೆರಿಕದ ಆಗಿನ ಅಧ್ಯಕ್ಷ ಬರಾಕ್ ಒಬಾಮ ಅವರು 2015 ರ ಜನವರಿಯಲ್ಲಿ ನಡೆದ ಗಣರಾಜ್ಯೋತ್ಸವ ಆಚರಣೆಯಲ್ಲಿ ಪಾಲ್ಗೊಂಡಿದ್ದರು. ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಅಮೆರಿಕದ ಮೊದಲ ಅಧ್ಯಕ್ಷರಾಗಿದ್ದರು ಅವರು.
“ನೀವು ಅಧ್ಯಕ್ಷ ಟ್ರಂಪ್ ಅವರ ಆರಂಭಿಕ ದಿನಗಳನ್ನು ಅವಲೋಕಿಸಿದರೆ, ಅವರನ್ನು ಸಂಪರ್ಕಿಸಲು ಅಥವಾ ಸಭೆಗೆ ಸಮಯವನ್ನು ಪಡೆಯಲು ಅಥವಾ ಭೇಟಿಗೆ ಆಹ್ವಾನವನ್ನು ಪಡೆಯಲು ನಾವು ಸಾಕಷ್ಟು ಕಷ್ಟಪಡಬೇಕಾಯಿತು. ಏಕೆಂದರೆ ಪ್ರಧಾನಿ ಮೋದಿ ಅವರು ಅಧ್ಯಕ್ಷ ಒಬಾಮಾಗೆ ತುಂಬಾ ಹತ್ತಿರವಾಗಿದ್ದಾರೆ ಎಂದು ಟ್ರಂಪ್ ಭಾವಿಸಿದ್ದರು,” ಎಂದು ಈಟಿವಿ ಭಾರತ್ಗೆ ಮೀರಾ ಶಂಕರ್ ಹೇಳಿದ್ದಾರೆ.
ದಕ್ಷಿಣ ಕೊರಿಯಾದ ಭಾರತದ ರಾಯಭಾರಿ ಹಾಗೂ ಕೆನಡಾದ ಹೈಕಮಿಷನರ್ ಆಗಿದ್ದ ವಿಷ್ಣು ಪ್ರಕಾಶ್ ಪ್ರಕಾರ, ಟ್ರಂಪ್ ಆಡಳಿತದೊಂದಿಗೆ ಸಂಬಂಧಗಳನ್ನು ಬೆಳೆಸಲು ಮೋದಿ ಸರ್ಕಾರ ಅದೆಷ್ಟು ಶ್ರಮ ಹಾಕಿತ್ತೋ, ಅದೇ ರೀತಿ ನೂತನ ಅಧ್ಯಕ್ಷ ಬೈಡನ್ ಅವರೊಂದಿಗೆ ಸಂಬಂಧವನ್ನು ಬೆಳೆಸಲೂ ಭಾರತೀಯ ರಾಜತಾಂತ್ರಿಕರು ಹೆಚ್ಚು ಶಕ್ತಿ ಮತ್ತು ಶ್ರಮವನ್ನು ಹೂಡಲಿದ್ದಾರೆ. "ಸರಳ ವಿಷಯವೇನೆಂದರೆ ಯಾರೇ ಅಧಿಕಾರದಲ್ಲಿದ್ದರೂ, ನೀವು ಅವರೊಂದಿಗೆ ವ್ಯವಹರಿಸಲೇಬೇಕು” ಎಂದು ವಿಷ್ಣು ಪ್ರಕಾಶ್ ಅವರು ಇಟಿವಿ ಭಾರತ್ಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಡೆಮಾಕ್ರಟ್ರೊಂದಿಗೆ ಕಷ್ಟಕರ ಸಂಬಂಧಗಳು
ಮೋದಿ ಸರ್ಕಾರ ಹಾಗೂ ಡೆಮಾಕ್ರಟರ ನಡುವಿನ ಸಮಸ್ಯೆಗಳ ಪೈಕಿ ಪ್ರಧಾನಿ ನರೇಂದ್ರ ಮೋದಿಯವರ ಹೂಸ್ಟನ್ ರ್ಯಾಲಿಯೊಂದೇ ಇಲ್ಲ. ಈಗ ಉಪಾಧ್ಯಕ್ಷರಾಗಿ ಚುನಾಯಿತರಾಗಿರುವ ಕಮಲಾ ಹ್ಯಾರಿಸ್, ಭಾರತೀಯ ಮೂಲದ ಡೆಮಾಕ್ರಟ್ ಕಾಂಗ್ರೆಸ್ನ ಪ್ರಮೀಳಾ ಜಯಪಾಲ್ ಸಹಿತ ಡೆಮಾಕ್ರಟಿಕ್ ಪಕ್ಷದ ಹಲವಾರು ಹಿರಿಯ ನಾಯಕರು, ಭಾರತೀಯ ಸಂವಿಧಾನದ ಅಡಿ ಜಮ್ಮು ಮತ್ತು ಕಾಶ್ಮೀರ ರಾಜ್ಯ ಹೊಂದಿದ್ದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ ನಂತರ ಅಲ್ಲಿಯ ಮಾನವ ಹಕ್ಕುಗಳ ಸಮಸ್ಯೆಗಳು ಮತ್ತು ನಿರ್ಬಂಧಗಳ ವಿಷಯಗಳ ಕುರಿತು ಮೋದಿ ಸರ್ಕಾರವನ್ನು ಟೀಕಿಸುತ್ತಲೇ ಬಂದಿದ್ದಾರೆ.
ಕಳೆದ ವರ್ಷ, ಭಾರತ-ಅಮೆರಿಕದ ನಡುವಿನ ಎರಡನೇ 2+2 ಮಾತುಕತೆಗೆ ಹಾಜರಾಗಲು ಅಮೆರಿಕದಲ್ಲಿದ್ದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಆ ದೇಶದ ಗೃಹ ವಿದೇಶಾಂಗ ವ್ಯವಹಾರಗಳ ಸಮಿತಿಯ ಸದಸ್ಯರೊಂದಿಗಿನ ಸಭೆಯಲ್ಲಿ ಭಾಗವಹಿಸಲು ನಿರಾಕರಿಸಿದ್ದರು. ಸದರಿ ಸಮಿತಿಯು ಪ್ರಮಿಲಾ ಜಯಪಾಲ್ ಅವರನ್ನು ಸಭೆಯಿಂದ ಕೈಬಿಡಲು ಒಪ್ಪಲಿಲ್ಲ ಎಂಬುದೇ ಅದಕ್ಕೆ ಕಾರಣ ಎಂದು ಹೇಳಲಾಗಿತ್ತು. ಚೆನ್ನೈ ಮೂಲದ ಪ್ರಮೀಳಾ ಜಯಪಾಲ್ ಅವರು ಅಮೆರಿಕದ ಜನಪ್ರತಿನಿಧಿಗಳ ಸಭೆಗೆ ಆಯ್ಕೆಯಾದ ಮೊದಲ ಭಾರತೀಯ-ಅಮೆರಿಕ ಮಹಿಳೆಯಾಗಿದ್ದಾರೆ.