ದಾವಣಗೆರೆ: ಒಂದೆಡೆ ನೀರಿಗಾಗಿ ಹಾಹಾಕಾರ, ಇನ್ನೊಂದೆಡೆ ಪೈಪ್ ಒಡೆದು ರಸ್ತೆಗಳು ಜಲಾವೃತ - WATER WASTAGE
![ETV Bharat Karnataka Team](https://etvbharatimages.akamaized.net/etvbharat/prod-images/authors/karnataka-1716535795.jpeg?imwidth=128)
Published : Apr 13, 2024, 7:29 PM IST
![ETV Thumbnail thumbnail](https://etvbharatimages.akamaized.net/etvbharat/prod-images/13-04-2024/640-480-21216492-thumbnail-16x9-news.jpg)
ದಾವಣಗೆರೆ: ಸದ್ಯ ದಾವಣಗೆರೆ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ನೀರಿನ ಹಾಹಾಕಾರ ಎದುರಾಗಿದೆ. ಕುಡಿಯುವ ನೀರಿಗಾಗಿ ಜನ ಟ್ಯಾಂಕರ್ ಮೊರೆ ಹೋಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕುಡಿಯುವ ನೀರಿನ ಪೈಪ್ ಒಡೆದು ಅಪಾರ ಪ್ರಮಾಣದ ನೀರು ಪೋಲಾಗಿರುವ ವಿಡಿಯೋ ವೈರಲ್ ಆಗಿದೆ. ದಾವಣಗೆರೆ ನಗರದ ದೇವರಾಜ್ ಅರಸ್ ಬಡಾವಣೆಯ ಎಸ್ಪಿ ಕಚೇರಿ ಮಾರ್ಗದಲ್ಲಿ ಈ ಘಟನೆ ನಡೆದಿದೆ.
ನೀರಿನ ಪೈಪ್ ಒಡೆದ ಪರಿಣಾಮ ಎಸ್ಪಿ ಮತ್ತು ಆರ್ಟಿಓ ಕಚೇರಿಗಳ ರಸ್ತೆಗಳು ನೀರಿನಿಂದ ಸಂಪೂರ್ಣವಾಗಿ ಜಲಾವೃತವಾಗಿದ್ದವು. ಈಜುಕೊಳದಂತಾಗಿದ್ದ ರಸ್ತೆಯಲ್ಲೇ ವಾಹನ ಸವಾರರು ಸಂಚರಿಸಲು ಪರದಾಡಿದರು. ಇನ್ನು ನೀರು ಪೋಲಾಗುತ್ತಿರುವುದನ್ನು ಗಮನಿಸಿದ ಸ್ಥಳೀಯರು ತಮ್ಮ ಮೊಬೈಲ್ನಲ್ಲಿ ವಿಡಿಯೋ ಸೆರೆ ಹಿಡಿದರು. ನೀರು ಪೋಲಾಗುತ್ತಿರುವ ಬಗ್ಗೆ ಮಹಾನಗರ ಪಾಲಿಕೆಯ ಅಧಿಕಾರಿಗಳ ಗಮನಕ್ಕೆ ತಂದರೂ ತಕ್ಷಣವೇ ಯಾವುದೇ ಪ್ರಯೋಜನ ಆಗಿಲ್ಲ ಎಂದು ಸ್ಥಳೀಯರು ಆರೋಪಿಸಿದರು. ಕೂಡಲೇ ನೀರನ್ನು ಬಂದ್ ಮಾಡುವ ಮೂಲಕ ಒಡೆದಿರುವ ಪೈಪ್ಅನ್ನು ಸರಿಪಡಿಸಿ ಪೋಲಾಗುತ್ತಿರುವ ನೀರನ್ನು ಉಳಿಸಬೇಕೆಂದು ಒತ್ತಾಯಿಸಿದರು. ಬೇಸಿಗೆ ಹಿನ್ನೆಲೆಯಲ್ಲಿ ರಾಜ್ಯದ ಹಲವೆಡೆ ನೀರಿನ ಅಭಾವ ಉಂಟಾಗಿದ್ದು, ಜನರು ಪರಿತಪಿಸುವಂತಾಗಿದೆ. ನೀರು ಸಂರಕ್ಷಣೆ ಎಲ್ಲರ ಆದ್ಯ ಕರ್ತವ್ಯವಾಗಿದೆ.
ಇದನ್ನೂ ಓದಿ: ಜಾತ್ರೆಗೆ ಬಂದ ಸಾವಿರಾರು ಗೋವುಗಳ ದಾಹ ತೀರಿಸಿದ ನಿರ್ಮಾಪಕ ಮಹೇಂದ್ರ ಮುನ್ನೋತ್ - Water supply to cows
ಇದನ್ನೂ ಓದಿ: ಬತ್ತಿದ ವರದಾ ನದಿಗೆ ಕೊಳವೆಬಾವಿಯಿಂದ ನೀರು ಹರಿಸುತ್ತಿರುವ ರೈತ - Borewell Water To River