ಕರ್ನಾಟಕ ಬಜೆಟ್ ಅಧಿವೇಶನ: ವಿಧಾನಸಭೆ ಕಲಾಪದ ನೇರ ಪ್ರಸಾರ
![ETV Bharat Karnataka Team](https://etvbharatimages.akamaized.net/etvbharat/prod-images/authors/karnataka-1716535795.jpeg?imwidth=128)
Published : Feb 15, 2024, 10:42 AM IST
|Updated : Feb 15, 2024, 6:11 PM IST
![ETV Thumbnail thumbnail](https://etvbharatimages.akamaized.net/etvbharat/prod-images/15-02-2024/640-480-20754961-thumbnail-16x9-news.jpg)
ಬೆಂಗಳೂರು: ರಾಜ್ಯ ವಿಧಾನಮಂಡಲದ ಅಧಿವೇಶನವು ಫೆಬ್ರವರಿ 12 ರಿಂದ ಆರಂಭವಾಗಿದೆ. ಇಂದು ನಾಲ್ಕನೇ ದಿನದ ಕಲಾಪ ನಡೆಯುತ್ತಿದೆ. ನಾಳೆ ಫೆಬ್ರವರಿ 16 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2024-25ನೇ ಸಾಲಿನ ಆಯವ್ಯಯ ಮಂಡನೆ ಮಾಡಲಿದ್ದಾರೆ. ಆ ನಂತರ ಫೆ. 23ರ ತನಕ ಸದನದಲ್ಲಿ ಚರ್ಚೆ ಮುಂದುವರಿಯಲಿದೆ.
ಅಧಿವೇಶನದ ಎರಡನೇ ದಿನವಾದ ಮಂಗಳವಾರ ವಿಧಾನಸಭೆಯಲ್ಲಿ ರಾಜ್ಯದ ಎಲ್ಲ ನಾಮಫಲಕಗಳಲ್ಲಿ ಶೇಕಡಾ 60ರಷ್ಟು ಕನ್ನಡ ಭಾಷಾ ಬಳಕೆಯನ್ನು ಕಡ್ಡಾಯಗೊಳಿಸುವ ಮಹತ್ವದ 'ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ (ತಿದ್ದುಪಡಿ) ವಿಧೇಯಕ' ಮಂಡಿಸಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಶಿವರಾಜ ತಂಗಡಗಿ ಅವರ ಪರವಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ವಿಧೇಯಕ ಮಂಡನೆ ಮಾಡಿದ್ದಾರೆ.
ಇನ್ನು ಬುಧವಾರ ರಾಮಮಂದಿರ ವಿಚಾರ ವಿಧಾನಸಭೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ಮಧ್ಯೆ ವಾಕ್ಸಮರಕ್ಕೆ ಕಾರಣವಾಯಿತು. ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಕುರಿತು ಮಾತನಾಡುತ್ತಾ, ರಾಮಮಂದಿರ ವಿಚಾರ ಪ್ರಸ್ತಾಪಿಸಿದ ಶಾಸಕ ಶಿವಲಿಂಗೇಗೌಡ, ನಾವೂ ಶ್ರೀರಾಮನ ದೇವಸ್ಥಾನ ಕಟ್ಟಿಸಿದ್ದೇವೆ, ನೀವೂ ಕಟ್ಟಿದ್ದೀರಿ. ಪ್ರಧಾನಿಯವರು ರಾಮಮಂದಿರ ಕಟ್ಟಿಸಿದ್ದಕ್ಕೆ ಅಭಿನಂದನೆಗಳು, ನಮ್ಮ ತಕರಾರಿಲ್ಲ ಎಂದರು.
ಈ ವೇಳೆ ಬಿಜೆಪಿ ಸದಸ್ಯರು ಜೈ ಶ್ರೀರಾಂ ಹೇಳುವಂತೆ ಶಿವಲಿಂಗೇಗೌಡರಿಗೆ ಒತ್ತಾಯಿಸಿದರು. ಆಗ ನಾನೂ ಜೈಶ್ರೀರಾಂ ಅಂತೀನಿ, ಬಿಜೆಪಿಯವ್ರಿಗೆ ಏನು ರಾಮನನ್ನು ಗುತ್ತಿಗೆ ಕೊಟ್ಟಿಲ್ಲ. ರಾಮಮಂದಿರ ಕಟ್ಟಲು ಜಾಗ ಕೊಟ್ಟಿದ್ದು ಪಿ.ವಿ.ನರಸಿಂಹರಾವ್. ನಾವೂ ಶ್ರೀರಾಮನ ಭಕ್ತರು, ನೀವಷ್ಟೇ ಅಲ್ಲ, ನಾವೂ ಪೂಜಿಸುತ್ತೇವೆ ಎಂದು ಹೇಳಿದರು. ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರ ಮಧ್ಯೆ ಜಟಾಪಟಿ ನಡೆಯಿತು.