ಕಾಡಿನಿಂದ ಕೆಫೆಯ ಆವರಣಕ್ಕೆ ನುಗ್ಗಿದ ಕಾಡಾನೆ: ಜೀವ ಉಳಿಸಿಕೊಳ್ಳಲು ದಿಕ್ಕಾಪಾಲಾಗಿ ಓಡಿದ ಜನರು
Published : Mar 8, 2024, 6:45 PM IST
ಬೇಲೂರು (ಹಾಸನ) : ಕಾಫಿ ತೋಟದಿಂದ ಕೆಫೆಯ ಆವರಣಕ್ಕೆ ನುಗ್ಗಿ ಬಂದ ಕಾಡಾನೆಯೊಂದು, ಸಿಕ್ಕ - ಸಿಕ್ಕವರನ್ನೆಲ್ಲಾ ಅಟ್ಟಾಡಿಸಿದ ಘಟನೆ ಬೇಲೂರು ತಾಲ್ಲೂಕಿನ ಚೀಕನಹಳ್ಳಿ- ಕೈಮರ ರಸ್ತೆಯಲ್ಲಿ ನಡೆದಿದೆ.
ಕಾಡಿನಲ್ಲಿದ್ದ ಒಂಟಿ ಸಲಗವೊಂದು ರಸ್ತೆ ದಾಟಲು ಮುಂದಾಗಿದೆ. ಕೆಲವು ಯುವಕರು ಆನೆಯ ಫೋಟೋ ತೆಗೆಯಲು ಮುಂದಾಗಿದ್ದಾರೆ. ಯುವಕರನ್ನು ನೋಡಿದ ಕಾಡಾನೆ ಅವರನ್ನು ಹಿಮೆಟ್ಟಿದೆ. ಈ ವೇಳೆ, ರಸ್ತೆಯ ಸಮೀಪವಿರುವ ಕೆಫೆಯ ಆವರಣಕ್ಕೆ ಏಕಾ ಏಕಿ ಕಾಡಾನೆ ನುಗ್ಗಿದ್ದರಿಂದ ಅಲ್ಲಿದ್ದವರು ಸಹ ಗಾಬಿರಿಯಿಂದ ಎದ್ದನೋ ಬಿದ್ದನೋ ಎಂಬಂತೆ ಪ್ರಾಣ ಉಳಿಸಿಕೊಳ್ಳಲು ಓಡಿದ್ದಾರೆ.
ಕಾಡಾನೆ ಕಂಡು ಕೆಫೆಯಲ್ಲಿದ್ದ ಜನರು ದಿಕ್ಕಾಪಾಲಾಗಿ ಓಡಿದ್ದಾರೆ. ಅಲ್ಲದೇ ಕೆಲವು ಯುವಕರುಗಳು ಮತ್ತೆ ಕಾಡಾನೆ ಕಂಡು ಕಿರುಚಾಟ - ಅರುಚಾಟ ಮಾಡಿಕೊಂಡು, ಮೊಬೈಲ್ ನಲ್ಲಿ ಸೆರೆಯಿಡಿಯಲು ಮುಂದಾಗಿದ್ದಾರೆ. ಇದರಿಂದ ಮತ್ತಷ್ಟು ರೊಚ್ಚಿಗೆದ್ದ ಕಾಡಾನೆ ಯುವಕರನ್ನು ಮತ್ತೆ ಅಟ್ಟಾಡಿಸಿದೆ. ಕೆಲವು ಹಿರಿಯರು ಯುವಕರ ವರ್ತನೆಗೆ ಬೇಸರ ವ್ಯಕ್ತಪಡಿಸಿ, ನಿಮ್ಮ ಹುಡುಗಾಟದಿಂದ ಇಷ್ಟೆಲ್ಲ ಆಗುವುದಕ್ಕೆ ಕಾರಣ ಎಂದು ಆರೋಪಿಸಿದರು.
ಒಟ್ಟಿನಲ್ಲಿ ಕಾಡಾನೆ ದಾಳಿಯಿಂದ ಜೀವ ಉಳಿಸಿಕೊಳ್ಳಲು ಕೆಲವರು ಕೆಫೆ ಒಳಗೆ ಓಡಿದ್ದಾರೆ. ಕೆಲವರು ಕಾರಿನೊಳಗೆ ಕುಳಿತು ಜೀವ ಉಳಿಸಿಕೊಂಡಿದ್ದಾರೆ. ಮೊನ್ನೆ ತಾನೆ ಸಕಲೇಶಪುರದಲ್ಲಿಎಸ್ಟೇಟ್ವೊಂದಕ್ಕೆ ನುಗ್ಗಿದ ಕಾಡಾನೆ ಇಬ್ಬರು ಕೂಲಿ ಕಾರ್ಮಿಕರ ಮೇಲೆ ದಾಳಿ ನಡೆಸಲು ಮುಂದಾಗಿತ್ತು. ನಂತರ ಅವರು ಕೂಡಾ ಕಾರಿನ ಕೆಳಗೆ ಮಲಗಿ ಜೀವ ಉಳಿಸಿಕೊಂಡಿದ್ದರು. ದಿನದಿಂದ ದಿನಕ್ಕೆ ಕಾಡಾನೆಗಳ ಹಾವಳಿ ಹೆಚ್ಚಾಗತೊಡಗಿದ್ದು, ಕಾಡಾನೆಯನ್ನು ಸ್ಥಳಾಂತರಿಸಬೇಕೆಂಬ ಆಗ್ರಹ ಮತ್ತೆ ಕೇಳಿ ಬರುತ್ತಿದೆ.
ಓದಿ: ಕುಕ್ಕೆ ಸುಬ್ರಹ್ಮಣ್ಯ: ಶಾಲಾ ಪ್ರದೇಶದ ಸಮೀಪ ರಸ್ತೆ ದಾಟಿದ ಆನೆ- ವಿಡಿಯೋ