ETV Bharat / state

ಮುಂದಿನ ಬಾರಿ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದ ಸಿಎಂ; ರಾಜಕೀಯ ನಿವೃತ್ತಿ ಬಗ್ಗೆ ಸಿದ್ದರಾಮಯ್ಯ ಸುಳಿವು - CM Siddaramaiah

author img

By ETV Bharat Karnataka Team

Published : Apr 2, 2024, 1:41 PM IST

Updated : Apr 2, 2024, 4:38 PM IST

ಸಿಎಂ ಸಿದ್ದರಾಮಯ್ಯ ಅವರು ರಾಜಕೀಯ ನಿವೃತ್ತಿ ಬಗ್ಗೆ ಮಾತನಾಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದಿದ್ದಾರೆ.

CM Siddaramaiah
ಮುಖ್ಯಮಂತ್ರಿ ಸಿದ್ದರಾಮಯ್ಯ

ರಾಜಕೀಯ ನಿವೃತ್ತಿ ಬಗ್ಗೆ ಸಿದ್ದರಾಮಯ್ಯ ಸುಳಿವು

ಮೈಸೂರು: "ನನಗೆ ಆತಂಕ ಇದ್ದರೆ ತಾನೇ ಟೆನ್ಷನ್. ನನಗೆ ಯಾವ ಆತಂಕವೂ ಇಲ್ಲ. ಹೀಗಾಗಿ ನಾನು ಕೂಲ್ ಆಗಿ ಇದ್ದೇನೆ. ಅದು ಕೂಡ ನನ್ನ ಆರೋಗ್ಯದ ಗುಟ್ಟು. ಮುಂದಿನ ಚುನಾವಣೆಗೆ ನಾನು ಸ್ಪರ್ಧೆ ಮಾಡುವುದಿಲ್ಲ ಎಂದು ತೀರ್ಮಾನಿಸಿದ್ದೇನೆ'' ಎಂದು ಸಿಎಂ ಸಿದ್ದರಾಮಯ್ಯ

ಇಂದು ಮೈಸೂರಿನ ತಮ್ಮ ಟಿ.ಕೆ. ಲೇಔಟ್ ಮನೆಯ ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಜನರು ಪ್ರೀತಿಯಿಂದ ಮತ್ತೆ ಮತ್ತೆ ಸ್ಪರ್ಧೆ ಮಾಡಿ ಎಂದು ಕೇಳಿದರು. ಆದರೆ ನಾನು ನಿವೃತ್ತಿಗೆ ತೀರ್ಮಾನ ಮಾಡಿದ್ದೇನೆ. ಮುಂದಿನ ನಾಲ್ಕು ವರ್ಷಕ್ಕೆ ನನಗೆ 83 ವಯಸ್ಸು ಆಗಿ ಬಿಡುತ್ತದೆ. 83 ವಯಸ್ಸು ಆದ ಮೇಲೆ ಇಷ್ಟೊಂದು ಉತ್ಸಾಹದಲ್ಲಿ ಕೆಲಸ ಮಾಡಲು ಆಗುವುದಿಲ್ಲ ಎಂಬುದು ಗೊತ್ತಿದೆ. ನನ್ನ ದೇಹದ ಸ್ಥಿತಿ ನನಗೆ ಮಾತ್ರ ಗೊತ್ತಿರುತ್ತದೆ. ಹಾಗಾಗಿ ಚುನಾವಣಾ ರಾಜಕಾರಣ ಸಾಕು ಎಂದುಕೊಂಡಿದ್ದೇನೆ ಎಂದು ಹೇಳಿದರು.

ಇದೇ ವೇಳೆ "ನನ್ನ ಮಗ ಡಾ. ಯತೀಂದ್ರನಿಗೆ ಚುನಾವಣಾ ಆಯೋಗದಿಂದ ನೋಟಿಸ್​ ಬಂದಿದೆ. ಅದಕ್ಕೆ ಉತ್ತರವನ್ನೂ ಕೊಟ್ಟಿದ್ದೇವೆ. ನೋಟಿಸ್​ನಲ್ಲಿ ಏನಿದೆ ಎನ್ನುವುದು ನನ್ನ ಮಗನಿಗೆ ಗೊತ್ತು. ನಾನು ಆ ಬಗ್ಗೆ ಮತ್ತೇನು ಪ್ರತಿಕ್ರಿಯೆ ನೀಡುವುದಿಲ್ಲ'' ಎಂದರು. ಯತೀಂದ್ರ ಸಿದ್ದರಾಮಯ್ಯ ಅವರು ಹನೂರು ಕಾರ್ಯಕರ್ತರ ಸಭೆಯಲ್ಲಿ ಅಮಿತ್ ಶಾ ಗೂಂಡಾ, ರೌಡಿ ಎಂದು ಹೇಳಿಕೆ ನೀಡಿದ ಸಂಬಂಧ ಚಾಮರಾಜನಗರ ಜಿಲ್ಲಾ ಚುನಾವಣಾಧಿಕಾರಿಯಾದ ಜಿಲ್ಲಾಧಿಕಾರಿ ಸಿ.ಟಿ. ಶಿಲ್ಪಾನಾಗ್ ನೋಟಿಸ್ ಜಾರಿ ಮಾಡಿರುವ ಕುರಿತ ಪ್ರಶ್ನೆಗೆ ಸಿಎಂ ಉತ್ತರಿಸಿದರು.

ಅಮಿತ್​ ಶಾ ಅವರು ರಾಜ್ಯಕ್ಕೆ ಭೇಟಿ ನೀಡುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ, "ನಮಗೆ ಬರಗಾಲದ ಪರಿಹಾರವಾಗಿ ಐದು ಪೈಸೆಯೂ ಬಂದಿಲ್ಲ. ಹೀಗಿರುವಾಗ ಅಮಿತ್​ ಶಾ ಅವರಿಗೆ ಕನ್ನಡಿಗರ ಮತ ಕೇಳಲು ಯಾವ ನೈತಿಕತೆ ಇದೆ? ಪರಿಹಾರ ಕೊಡೆ ಹೇಗೆ ಬಂದು ಇಲ್ಲಿ ಮತ ಕೇಳುತ್ತಾರೆ? ಅಮಿತ್​ ಶಾ ಅವರು ತಮ್ಮ ಮನೆಯಿಂದ ಬರ ಪರಿಹಾರದ ಹಣ ಕೊಡುತ್ತಾರಾ? ಇಲ್ಲ ತಾನೆ? ಅದೇನು ನಮಗೆ ಭಿಕ್ಷೆನಾ? ಹೆಚ್​.ಡಿ ಕುಮಾರಸ್ವಾಮಿ ಅವರು ರಾಜ್ಯಕ್ಕೆ ಪರಿಹಾರ ಕೊಡಿಸಿ, ನಂತರ ಕರೆದುಕೊಂಡು ಬರಬೇಕಿತ್ತು. ಕನ್ನಡಿಗರು ಈ ಚುನಾವಣೆಯಲ್ಲಿ ಅವರಿಗೆ ಸರಿಯಾದ ಪಾಠ ಕಲಿಸುತ್ತಾರೆ. ಕುಮಾರಸ್ವಾಮಿ ಅವರು ಬಿಜೆಪಿಯ ದೊಡ್ಡ ವಕ್ತಾರ ಆಗಿದ್ದಾರೆ. ಅವರಿಗೆ ಇದನ್ನೆಲ್ಲಾ ಕೇಳಬೇಕು. ಕೇಂದ್ರದಿಂದ ಬರಪರಿಹಾರ ಕೊಡದೇ ಇರುವುದನ್ನು ಕುಮಾರಸ್ವಾಮಿ ಸಮರ್ಥಿಸಿಕೊಳ್ಳುತ್ತಿದ್ದಾರೆ" ಎಂದು ಕುಮಾರಸ್ವಾಮಿ ವಿರುದ್ಧ ಸಿಎಂ ವಾಗ್ದಾಳಿ ನಡೆಸಿದರು.

"ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಇಲ್ಲ. ಸುಮ್ಮನೆ ಕೆಲವೊಮ್ಮೆ ಊಹಾಪೋಹದ ವರದಿ ಬರೆಯುತ್ತಾರೆ. ಒಂದೆರಡು ಕಡೆ ನೀರಿನ ಸಮಸ್ಯೆ ಇದ್ದರೂ, ಅವುಗಳನ್ನು ಬಗೆಹರಿಸುವಂತೆ ಹೇಳಿದ್ದೇನೆ. ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಯಾವುದೇ ಹಣದ ಸಮಸ್ಯೆ ಇಲ್ಲ. ಚುನಾವಣೆ ಇರುವುದರಿಂದ‌ ಸಭೆ ನಡೆಸಲು ಆಗುತ್ತಿಲ್ಲ ಅಷ್ಟೇ. ಯಾವುದೇ ಸಮಸ್ಯೆಗಳು ಆಗದಂತೆ ಅಧಿಕಾರಿಗಳು ನೋಡಿಕೊಳ್ಳುತ್ತಿದ್ದಾರೆ" ಎಂದರು.

ವರುಣದಲ್ಲಿ ಸಿಎಂ ಭಾವನಾತ್ಮಕವಾಗಿ ಮತ ಕೇಳಿದ ಕುರಿತು ಪ್ರತಿಕ್ರಿಯಿಸಿ, "ಅದೇನು ಭಾವನಾತ್ಮಕ ಅಲ್ಲ. ಹೆಚ್ಚು ಲೀಡ್​ ಬೇಕು ಎಂದು ಸ್ವಕ್ಷೇತ್ರದವರನ್ನು ಕೇಳಿದ್ದೇನೆ ಅಷ್ಟೇ. ಕಳೆದ ಚುನಾವಣೆಯಲ್ಲಿ ನಮಗೆ ಬರೀ 48 ಸಾವಿರ ಲೀಡ್​ ಬಂದಿತ್ತು. ಈ ಬಾರಿ ಅದನ್ನು 60 ಸಾವಿರಕ್ಕೆ ಮುಟ್ಟಿಸಿ ಎಂದು ಹೇಳಿದ್ದೇನೆ. ಅದಕ್ಕೆ ಬೇರೆ ರೀತಿಯ ವಿಶ್ಲೇಷಣೆ ಬೇಡ. ಅದು ನನ್ನ ಸಹಜವಾದ ಮಾತುಗಳು ಅಷ್ಟೇ. ಮೈಸೂರು ಹಾಗೂ ಚಾಮರಾಜನಗರ ಕ್ಷೇತ್ರಗಳು ಮಾತ್ರವಲ್ಲ. 28 ಲೋಕಸಭಾ ಕ್ಷೇತ್ರಗಳ ವಿಚಾರದಲ್ಲೂ ನಾನು ಗಂಭೀರವಾಗಿದ್ದೇನೆ. ಮತ್ತೊಂದು ಬಾರಿ ಈ ಭಾಗಕ್ಕೆ ಪ್ರವಾಸ ಬರುತ್ತೇನೆ. ಬಿಜೆಪಿವರು ಬಂದರೆ ಬಡವರ ಕಾರ್ಯಕ್ರಮಗಳು ನಿಂತು ಹೋಗುತ್ತವೆ‌. ಹೀಗಾಗಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಹೆಚ್ಚು ಲೀಡ್ ಕೊಡಿ ಎಂದು ಕೇಳಿಕೊಂಡಿದ್ದೇನೆ" ಎಂದರು.

ಸಚಿವ ನಾಗೇಂದ್ರ ಹಾಗೂ ಸಂತೋಷ್ ಲಾಡ್ ವಿರುದ್ಧ ಜನಾರ್ದನ್ ರೆಡ್ಡಿ ಆರೋಪ: "ಜನಾರ್ದನ ರೆಡ್ಡಿ ಬೇಕಾದರೆ ಕೋರ್ಟ್​ಗೆ ಹೋಗಲಿ. ಸಂತೋಷ್ ಹೆಗ್ಡೆ ವರದಿ ಆಧಾರದ ಮೇಲೆ ಹೋರಾಟ ಮಾಡಿದ್ದು. ಸಂತೋಷ್ ಹೆಗ್ಡೆ ವರದಿಯಲ್ಲಿ ಇವರ ಹೆಸರು ಇತ್ತಾ? ಅವರ ಹೆಸರು ಇಲ್ಲದ ಮೇಲೆ ಸುಮ್ಮನೆ ಯಾಕೆ ಆರೋಪ‌. ಈಗ ಯಾಕೆ ಆ ಕುರಿತು ಪ್ರಸ್ತಾಪ ಮಾಡ್ತಾರೆ.
ನಾನು ಬೆಂಗಳೂರಿನಿಂದ ಬಳ್ಳಾರಿಗೆ ಪಾದಯಾತ್ರೆ ಮಾಡಿದ್ದೆ. ಆವಾಗ ಮಾತನಾಡದವರು ಈಗ ಏಕೆ ಮಾತನಾಡುತ್ತಿದ್ದಾರೆ. ರಿಪಬ್ಲಿಕ್ ಆಫ್ ಬಳ್ಳಾರಿ ಮಾಡಲು ಹೋಗಿದ್ರು ಅಂತ ಸಂತೋಷ್ ಹೆಗ್ಢೆ ವರದಿ ಕೊಟ್ಟಿದ್ದರು. ಈಗ ಅವರು ಬೇಕಾದರೆ ಕೋರ್ಟ್​ಗೆ ಹೋಗಲಿ" ಎಂದರು.

ಮಂಡ್ಯದ ಸ್ಪರ್ಧೆ ದೇವರ ಇಚ್ಛೆ ಎಂದ ಎಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ ಸಿಎಂ, "ಮಗನನ್ನು ಚುನಾವಣೆಗೆ ನಿಲ್ಲಿಸುವಾಗ ಯಾರ ಇಚ್ಛೆ ಇತ್ತು. ಈಗ ದೇವರು ಎಂದರೆ, ಆಗ ಯಾರಿದ್ದರು. ಸಿಎಂ ಆಗಿದ್ದಾಗಲೇ ಅವರ ಮಗ ಅಲ್ಲಿ ಸೋತ್ತಿದ್ದನು. ಈ ಬಾರಿ ಜೆಡಿಎಸ್​ನವರು ಮೂರಕ್ಕೆ ಮೂರು ಕ್ಷೇತ್ರಗಳಲ್ಲೂ ಸೋಲುತ್ತಾರೆ. ಕಳೆದ ಬಾರಿ ಮೈಸೂರಿನಲ್ಲಿ ಜೆಡಿಎಸ್​ನವರು ಕಾಂಗ್ರೆಸ್​ಗೆ ಹಾಕಿದ್ದು ಯಾವ ಚೂರಿ? ಮೈತ್ರಿ ಧರ್ಮ ಎಂದರೆ ಎಲ್ಲಾ ಕ್ಷೇತ್ರಕ್ಕೂ ಒಂದೇ. ಮೈಸೂರಿನಲ್ಲಿ ಚೂರಿ ಹಾಕಿ, ಈಗ ಮಂಡ್ಯದಲ್ಲಿ ನಮಗೆ ಚೂರಿ ಹಾಕಿದ್ದಾರೆ ಎಂದರೆ ಅದರಲ್ಲಿ ಯಾವ ನ್ಯಾಯ ಇದೆ ಹೇಳಿ. ಕಳೆದ ಬಾರಿ ನಾನು ಹೋಗಿದ್ದಕ್ಕೆ ಹಾಸನದಲ್ಲಿ ಪ್ರಜ್ವಲ್ ಗೆದ್ದಿದ್ದು. ಈ ಬಾರಿಯೂ ಹಾಸನಕ್ಕೆ ಹೋಗುತ್ತೇನೆ. ಪ್ರಜ್ವಲ್​ನನ್ನು ಸೋಲಿಸುತ್ತೇನೆ. ಪ್ರಜ್ವಲ್​ನನ್ನು ಸೋಲಿಸಲೇಬೇಕೆಂದು ನಮ್ಮವರು ಪಣ ತೊಟ್ಟಿದ್ದಾರೆ. ಪ್ರಜ್ವಲ್ ಸೋಲುತ್ತಾನೆ" ಎಂದರು.

Chief Minister Siddaramaiah visited to Sankara Mutt
ಶಂಕರ ಮಠಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿನ ಶಂಕರ ಮಠಕ್ಕೆ ಭೇಟಿ ನೀಡಿ ಅಲ್ಲಿ ಜಗದ್ಗುರು ಶಂಕರಾಚಾರ್ಯ ಶ್ರೀ ವಿಧುಶೇಖರ ಭಾರತಿ ಸ್ವಾಮೀಜಿಯ ಆಶೀರ್ವಾದ ಪಡೆದರು.

ಇದನ್ನೂ ಓದಿ: ಅಮಿತ್ ಶಾ ವಿರುದ್ಧ ಗೂಂಡಾ, ರೌಡಿ ಹೇಳಿಕೆ: ಯತೀಂದ್ರಗೆ ನೋಟಿಸ್ ಜಾರಿ - Notice to Yatindra

Last Updated :Apr 2, 2024, 4:38 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.