ETV Bharat / state

ಬಿರು ಬೇಸಿಗೆಯಲ್ಲೂ ಗೋಕಾಕ್ ಫಾಲ್ಸ್‌ನಲ್ಲಿ ಜೀವಕಳೆ - Gokak Water Falls

author img

By ETV Bharat Karnataka Team

Published : May 15, 2024, 9:31 AM IST

Updated : May 15, 2024, 9:58 AM IST

ಬೆಳಗಾವಿಯ ಘಟಪ್ರಭಾ ಜಲಾಶಯದಿಂದ ನೀರು ಬಿಡುಗಡೆ ಮಾಡಿದ್ದು ಗೋಕಾಕ್ ಫಾಲ್ಸ್‌ ಧುಮ್ಮಿಕ್ಕುತ್ತಿದೆ.

ಗೋಕಾಕ್ ಫಾಲ್ಸ್‌
ಗೋಕಾಕ್ ಫಾಲ್ಸ್‌ (ETV Bharat)

ಮೈದುಂಬಿ ಹರಿಯುತ್ತಿರುವ ಗೋಕಾಕ್ ಫಾಲ್ಸ್‌ (ETV Bharat)

ಬೆಳಗಾವಿ: ಬಿರು ಬೇಸಿಗೆಯಲ್ಲೂ ಪ್ರಸಿದ್ಧ ಗೋಕಾಕ್ ಫಾಲ್ಸ್‌ನಲ್ಲಿ ಜಲವೈಭವ ಸೃಷ್ಟಿಯಾಗಿದೆ. ಮಳೆಗಾಲದಲ್ಲಿ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುವ ಫಾಲ್ಸ್ ಇದೀಗ ಬೇಸಿಗೆಯಲ್ಲೂ ಧುಮ್ಮಿಕ್ಕುತ್ತಿರುವುದು ವಿಶೇಷವಾಗಿದೆ.

ಘಟಪ್ರಭಾ ಜಲಾಶಯದಿಂದ ನೀರು ಬಿಡುಗಡೆ ಮಾಡಿದ ಪರಿಣಾಮ ‌ಜಲವೈಭವ ನಿರ್ಮಾಣವಾಗಿದೆ. 180 ಅಡಿ ನೀರು ಧುಮ್ಮುಕ್ಕುವ ಈ ಜಲಪಾತ ನೋಡುವುದು ಪ್ರವಾಸಿಗರಿಗೆ ಹಬ್ಬ. 'ಭಾರತದ ನಯಾಗರ ಜಲಪಾತ' ಎಂದೇ ಗೋಕಾಕ ಜಲಪಾತ ಜನಪ್ರಿಯ.

ಒಂದೆಡೆ ಬೆಳಗಾವಿ ಜಿಲ್ಲೆಯ ಬಹುತೇಕ ನದಿ, ಕೆರೆಗಳ ಒಡಲು ನೀರಿಲ್ಲದೆ ಖಾಲಿಯಾಗಿವೆ. ಮತ್ತೊಂದೆಡೆ ಗೋಕಾಕ್ ಫಾಲ್ಸ್‌ ಧುಮ್ಮಿಕ್ಕಿ ಹರಿಯುತ್ತಿದೆ. ಘಟಪ್ರಭಾ ನದಿಪಾತ್ರದ ಜನರಿಗೆ ಕುಡಿಯುವ ನೀರಿಗೆ ಅನುಕೂಲ ಕಲ್ಪಿಸಲು ಜಲಾಶಯದಿಂದ ನೀರು ಬಿಡುಗಡೆ ಮಾಡಲಾಗಿದೆ. ಕಳೆದ ಮೂರು ದಿನಗಳಿಂದ ಹಂತ ಹಂತವಾಗಿ ಒಂದೂವರೆ ಟಿಎಂಸಿ ನೀರು ಬಿಡುಗಡೆಯಾಗಿದೆ. ದೊಡ್ಡ ಪ್ರಮಾಣದಲ್ಲಿ ನಿತ್ಯ ನೀರು ಬಿಡುಗಡೆ ಆಗುತ್ತಿರುವ ಕಾರಣಕ್ಕೆ ಗೋಕಾಕ್ ಫಾಲ್ಸ್‌ನಲ್ಲಿ ಹಾಲ್ನೊರೆಯಂತೆ ನೀರು ಚಿಮ್ಮುತ್ತಿದೆ.

ಜಿಲ್ಲೆಯ ವಿವಿಧೆಡೆ ಉತ್ತಮ ಮಳೆ: ಬೆಳಗಾವಿ ನಗರ ಸೇರಿ ಜಿಲ್ಲೆಯ ವಿವಿಧೆಡೆ ಮಂಗಳವಾರ ಸಾಯಂಕಾಲ ಬಿರುಗಾಳಿ ಸಹಿತ ಉತ್ತಮ ಮಳೆಯಾಗಿದ್ದು, ರೈತರ ಮೊಗದಲ್ಲಿ ಸಂತಸ ತಂದಿದೆ. ಕಳೆದ ವರ್ಷ ಕಂಡು ಕೇಳರಿಯದ ಭೀಕರ ಬರಗಾಲದಿಂದ ತತ್ತರಿಸಿದ್ದ ಜಿಲ್ಲೆಯ ಜನರಿಗೆ, ಈ ಬಾರಿ ಮಳೆಗಾಲದ ಮೊದಲೇ ವರುಣರಾಯ ಕೃಪೆ ತೋರಿದ್ದಾನೆ. ಈ ವಾರದಲ್ಲಿ ಇದು ಮೂರನೇ ಮಳೆ. ಉತ್ತಮ ಮಳೆ ಆಗುತ್ತಿರುವುದು ರೈತರಿಗೆ ಒಳ್ಳೆಯ ಮುನ್ಸೂಚನೆ ಸಿಕ್ಕಂತಾಗಿದೆ.

ಮಂಗಳವಾರ ರಸ್ತೆ, ಚರಂಡಿ ಮೇಲೆ ಮಳೆ ನೀರು ಹರಿದಿದ್ದು, ಒಂದು ಗಂಟೆಗೂ ಅಧಿಕ ಕಾಲ ಮಳೆ ಸುರಿಯಿತು. ನಗರಕ್ಕೆ ಕೆಲಸಕ್ಕೆ ಬರುವ ಜನರು ಮನೆಗೆ ಮರಳಲು ಕೆಲಕಾಲ ಪರದಾಡಿದರು. ಈಗಾಗಲೇ ಮಳೆರಾಯನ ಮೇಲೆ ನಂಬಿಕೆ ಇಟ್ಟುಕೊಂಡು ಜಿಲ್ಲೆಯ ರೈತರು ಹೊಲಗಳನ್ನು ಹದ ಮಾಡಿ, ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಇದೇ ರೀತಿ ಉತ್ತಮ ಮಳೆ ಮುಂದುವರಿದರೆ, ಈ ಬಾರಿ ಮುಂಗಾರು ಒಳ್ಳೆಯ ಬೆಳೆಯ ನಿರೀಕ್ಷೆಯಲ್ಲಿ ಅನ್ನದಾತರಿದ್ದಾರೆ.

ಶಿವಮೊಗ್ಗ ಮಳೆ ವರದಿ: ಜಿಲ್ಲೆಯ ಸೊರಬ ತಾಲೂಕಿನಲ್ಲಿ ಬಿರುಸಿನ ಗಾಳಿ ಸಮೇತ ಸುರಿದ ಮಳೆಗೆ ವಿದ್ಯುತ್ ಕಂಬಗಳು ಹಾಗೂ ಮರ ಧರೆಗುರುಳಿವೆ. ಮಂಗಳವಾರ ಮಧ್ಯಾಹ್ನದವರೆಗೆ ಬಿರು ಬಿಸಿಲಿನಿಂದ ಕೂಡಿದ ವಾತಾವರಣ ನಂತರ ಮೋಡ ಕವಿದು ಬಿರುಸಿನ ಗಾಳಿ ಸಮೇತ ಮಳೆ ಸುರಿಯಿತು. ಗಾಳಿ ಮಳೆಗೆ ಜೋಳದ ಗುಡ್ಡೆ ಗ್ರಾಮದಲ್ಲಿ ಬೃಹತ್ ಮರವೊಂದು ವಿದ್ಯುತ್ ತಂತಿ ಮೇಲೆ ಬಿದ್ದು ರಸ್ತೆಗೆ ಅಡ್ಡಲಾಗಿ ಉರುಳಿತು. ಮೂರು ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಸ್ಥಳಕ್ಕೆ ಮೆಸ್ಕಾಂ ಸಿಬ್ಬಂದಿ ಆಗಮಿಸಿ ವಿದ್ಯುತ್​​ ಸಂಪರ್ಕ ಸರಿಪಡಿಸಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು, ಸ್ಥಳೀಯರ ನೆರವಿನೊಂದಿಗೆ ಮರ ತೆರವುಗೊಳಿಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಇದನ್ನೂ ಓದಿ: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ: ರಾಜ್ಯದಲ್ಲಿ 5 ದಿನ ಮಳೆ ಮುನ್ಸೂಚನೆ - Karnataka Rain Forecast

Last Updated :May 15, 2024, 9:58 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.