ETV Bharat / state

ಲೋಕಸಭೆ ಚುನಾವಣೆಯಲ್ಲಿ ಹಿಂದುತ್ವದ ಅಭ್ಯರ್ಥಿಗಳಿಗೆ ಮತ ಚಲಾಯಿಸಿ: ವಿಹೆಚ್​ಪಿ ಮನವಿ - Vishwa Hindu Parishad

author img

By ETV Bharat Karnataka Team

Published : Apr 1, 2024, 4:09 PM IST

ಏಪ್ರಿಲ್​ 19 ರಿಂದ ಆರಂಭವಾಗುವ ಲೋಕಸಭೆ ಚುನಾವಣೆಯಲ್ಲಿ ಹಿಂದುತ್ವದ ಅಭ್ಯರ್ಥಿಗಳಿಗೆ ತಮ್ಮ ಮತವನ್ನು ಚಲಾಯಿಸುವ ಮೂಲಕ ಹಿಂದುತ್ವದ ಉಳಿವಿಗಾಗಿ ಆದ್ಯತೆ ನೀಡಬೇಕು ಎಂದು ವಿಹೆಚ್​ಪಿ ಸಂಯುಕ್ತ ಮಹಾಮಂತ್ರಿ ಸ್ತಾನು ಮಾಲಯನ್ ಮನವಿ ಮಾಡಿದ್ದಾರೆ.

ವಿಹೆಚ್​ಪಿ ಸಂಯುಕ್ತ ಮಹಾಮಂತ್ರಿ ಸ್ತಾನು ಮಾಲಯನ್
ವಿಹೆಚ್​ಪಿ ಸಂಯುಕ್ತ ಮಹಾಮಂತ್ರಿ ಸ್ತಾನು ಮಾಲಯನ್

ಹುಬ್ಬಳ್ಳಿ : ಲೋಕಸಭೆ ಚುನಾವಣೆಯಲ್ಲಿ ಹಿಂದುತ್ವದ ಅಭ್ಯರ್ಥಿಗಳಿಗೆ ಮತ ಚಲಾಯಿಸುವಂತೆ ವಿಶ್ವ ಹಿಂದೂ ಪರಿಷತ್ತಿನ ಸಂಯುಕ್ತ ಮಹಾಮಂತ್ರಿ ಸ್ತಾನು ಮಾಲಯನ್ ಕರೆ ನೀಡಿದರು. ಮತದಾನದ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ಮೂಲಕ ಹಿಂದುತ್ವವನ್ನು ಮತ್ತಷ್ಟು ಬಲಪಡಿಸಲು ವಿಶ್ವ ಹಿಂದೂ ಪರಿಷತ್ ಮುಂದಾಗಿದೆ.

ನಗರದಲ್ಲಿಂದು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ನಾವು ಯಾವುದೇ ರಾಜಕೀಯ ಪಕ್ಷದ ಪರವಾಗಿ ಅಭಿಯಾನ ಮಾಡುವುದಿಲ್ಲ. ನಮ್ಮ ಗುರಿ ಹಿಂದುತ್ವವನ್ನು ಮತ್ತಷ್ಟು ಭದ್ರಪಡಿಸುವ ಕಾರ್ಯವಾಗಿದೆ. ಈ ನಿಟ್ಟಿನಲ್ಲಿ ನಾವು ಹಿಂದುತ್ವದ ಅಭ್ಯರ್ಥಿಗಳಿಗೆ ಮತದಾನ ಮಾಡುವಂತೆ ಜನರಲ್ಲಿ ಜಾಗೃತಿ ಮೂಡಿಸುತ್ತೇವೆ. ಹೀಗಾಗಿ ಜನರು ಹಿಂದುತ್ವದ ಅಭ್ಯರ್ಥಿಗಳಿಗೆ ತಮ್ಮ ಮತವನ್ನು ಚಲಾಯಿಸುವ ಮೂಲಕ ಹಿಂದುತ್ವದ ಉಳಿವಿಗಾಗಿ ಆದ್ಯತೆ ನೀಡಬೇಕು ಎಂದರು.

ಮಹಾಭಾರತದಲ್ಲಿ ಕೃಷ್ಣ ಅರ್ಜನನಿಗೆ ಭಗವದ್ಗೀತೆಯನ್ನು ಬೋಧನೆ ಮಾಡಿ ಎಲ್ಲವನ್ನೂ ಹೇಳಿದ್ದಾನೆ. ಆದರೆ ನಿರ್ಧಾರ ಮಾತ್ರ ಅರ್ಜುನನಿಗೆ ಬಿಟ್ಟಿದ್ದಾನೆ. ಈ ನಿಟ್ಟಿನಲ್ಲಿ ನಾವು ಕೂಡ ಜನರಿಗೆ ಹಿಂದುತ್ವದ ಜಾಗೃತಿಗಾಗಿ ಜನರಲ್ಲಿ ಮನವಿ ಮಾಡುತ್ತೇವೆ. ಆನಂತರ ಎಲ್ಲವನ್ನೂ ಜನರ ನಿರ್ಧಾರಕ್ಕೆ ಬಿಡುತ್ತೇವೆ ಎಂದು ಮಾಲಯಾನ್​ ಹೇಳಿದರು.

ದೇಶದಲ್ಲಿ ರಾಮ ಮಂದಿರದಿಂದ ರಾಮ ರಾಜ್ಯದವರೆಗೆ ಹಿಂದೂ ಧರ್ಮದ ಆಧಾರದ ಮೇಲೆ ಸುರಕ್ಷೆ, ಆರ್ಥಿಕ ವ್ಯವಸ್ಥೆ ಇನ್ನೂ ಅನೇಕ ಕ್ಷೇತ್ರಗಳಲ್ಲಿ ಭಾರತ ಜಗತ್ತಿನಲ್ಲಿ ತಲೆ ಎತ್ತಿ ನಿಂತು ವಿಶ್ವ ಗುರು ಆಗಬೇಕು. ಮಹಾ ಚುನಾವಣೆಯ ಸಂದರ್ಭದಲ್ಲಿ ನೂರು ಪ್ರತಿಶತ ಮತದಾನಕ್ಕೆ ಹೆಚ್ಚಿನ ಒತ್ತು ನೀಡಬೇಕು. ನಮ್ಮ ಮತದಾನವನ್ನು ದೇಶದ ಹಿತಕ್ಕಾಗಿ ಮಾಡಬೇಕು. ಹಿಂದೂ ಪರ ಸರಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬರಬೇಕು. ಇದೆಲ್ಲದರ ನಡುವೆ ದೇಶನ ಸುರಕ್ಷತೆಯ ದೃಷ್ಟಿಯಿಂದ ಜನರಲ್ಲಿ ಅರಿವನ್ನು ಮೂಡಿಸುವ ಕಾರ್ಯ ವಿಶ್ವ ಹಿಂದು ಪರಿಷತ್ ಮಾಡುತ್ತದೆ. ಇತ್ತೀಚೆಗೆ ಕೇಂದ್ರ ಸರ್ಕಾರ ಜಾರಿಗೆ ತಂದು ಸಿಎಎ ಕಾನೂನು ಅನ್ನು ವಿಶ್ವ ಹಿಂದು ಪರಿಷತ್ ಸ್ವಾಗತಿಸುತ್ತದೆ ಎಂದು ಸ್ತಾನು ಮಾಲಯಾನ್ ತಿಳಿಸಿದರು.

ನಮ್ಮ ಕಾರ್ಯ ಯಾವುದೇ ಪಕ್ಷಕ್ಕಾಗಿ ಅಲ್ಲ. ನಮ್ಮ ಕಾರ್ಯ ಯಾವುದೇ ವ್ಯಕ್ತಿಗಾಗಿ ಅಲ್ಲ. ದೇಶದಲ್ಲಿ ಪರಿವರ್ತನೆಗಾಗಿ, ದೇಶದ ಸುರಕ್ಷತೆಗೆ ನಮ್ಮ ದೇಶವನ್ನು ಜಗತ್ತಿನಲ್ಲಿ ಶಕ್ತಿಶಾಲಿಯನ್ನಾಗಿ ಮಾಡಲು ಮನೆ ಮನೆಗೂ ಸಂಪರ್ಕ ಮಾಡಿ ಜಾಗೃತಿ ಮೂಡಿಸುತ್ತಿದ್ದೇವೆ‌ ಎಂದು ಸ್ತಾನು ಮಾಲಯಾನ್ ಸ್ಪಷ್ಟಪಡಿಸಿದರು.

ಇದನ್ನೂ ಓದಿ : ಧಾರವಾಡ ಲೋಕ‌ಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ: ಮಂಜುನಾಥ ಕುನ್ನೂರು - Manjunath Kunnur Reaction

ETV Bharat Logo

Copyright © 2024 Ushodaya Enterprises Pvt. Ltd., All Rights Reserved.