ETV Bharat / state

ವೇಣೂರು ಬಾಹುಬಲಿ ಮಹಾಮಸ್ತಕಾಭಿಷೇಕ: ಇಂದಿನಿಂದ ಶತಮಾನದ ಮೂರನೇ ಮಹಾಮಜ್ಜನ

author img

By ETV Bharat Karnataka Team

Published : Feb 22, 2024, 8:33 AM IST

ಇಂದಿನಿಂದ ಮಾರ್ಚ್​ 1ರವರೆಗೆ ವೇಣೂರು ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕ ಆರಂಭವಾಗಲಿದೆ. ಪ್ರತಿದಿನ ಸಂಜೆ ಮಹಾಮಸ್ತಕಾಭಿಷೇಕ ನೆರವೇರಲಿದೆ.

Etv Bharat
Etv Bharat

ಬೆಳ್ತಂಗಡಿ: 'ಅಹಿಂಸೆಯಿಂದ ಸುಖ ತ್ಯಾಗದಿಂದ ಶಾಂತಿ' ಎಂಬ ಸಂದೇಶದೊಂದಿಗೆ ವೇಣೂರು ಬಾಹುಬಲಿಯ ಮಹಾಮಸ್ತಕಾಭಿಷೇಕದ ಧಾರ್ಮಿಕ ಕಾರ್ಯಕ್ರಮಗಳು ಇಂದಿನಿಂದ ಆರಂಭವಾಗಲಿವೆ. ಇಂದಿನಿಂದ ಮಾ.1ರ ತನಕ ಪ್ರತಿದಿನ ಸಂಜೆ ಗಂಟೆ 6:45 ರಿಂದ ಬಾಹುಬಲಿ ಸ್ವಾಮಿಗೆ ಮಹಾಮಸ್ತಕಾಭಿಷೇಕ ನೆರವೇರಲಿದೆ. ಜಲ, ಸೀಯಾಳ, ಹಾಲು, ಇಕ್ಷುರಸ, ಕಲ್ಕರಸ, ಅರಿಶಿಣ ಹುಡಿ, ಕಷಾಯ, ಗಂಧ, ಕೇಸರಿ, ಚಂದನ, ಅಷ್ಟಗಂಧ ಮೊದಲಾದ ದ್ರವ್ಯಗಳ ಅಭಿಷೇಕದ ಬಳಿಕ ಪುಷ್ಪವೃಷ್ಠಿ ನಡೆಯಲಿದೆ.

ಮೊದಲ ನಾಲ್ಕು ದಿನ 108 ಕಲಶ, ಬಳಿಕ ಮೂರು ದಿನ 216 ಕಲಶ, ಎಂಟನೇ ದಿನ 504 ಕಲಶಗಳಿಂದ ಮಹಾಮಸ್ತಕಾಭಿಷೇಕ ಸೇವಾ ಕರ್ತೃಗಳಿಂದ ನಡೆಯಲಿದ್ದು, 9ನೇ ದಿನ 1008 ಕಲಶಗಳೊಂದಿಗೆ ಸಮಿತಿ ವತಿಯಿಂದ ಮಹಾಮಸ್ತಕಾಭಿಷೇಕ ನೆರವೇರಲಿದೆ.

ಪೂರ್ವಭಾವಿ ತಯಾರಿ: ಮಹಾಮಸ್ತಕಾಭಿಷೇಕ ಹಿನ್ನೆಲೆಯಲ್ಲಿ ರಸ್ತೆ ದುರಸ್ತಿ, ದೀಪಾಲಂಕಾರ, ಅಭಿವೃದ್ಧಿ ಕಾಮಗಾರಿ, ನವೀಕರಣ ಇತ್ಯಾದಿ ಬಹುತೇಕ ಪೂರ್ಣಗೊಂಡಿವೆ. ಸಮಿತಿ ವತಿಯಿಂದ ಧಾರ್ಮಿಕ ವಿಧಿ ವಿಧಾನಗಳಿಗೆಬೇಕಾದ ಅಗತ್ಯ ತಯಾರಿಗಳನ್ನು ಮಾಡಿಕೊಳ್ಳಲಾಗಿದೆ. ಈ ಶತಮಾನದ ಮೂರನೇ ಮಹಾಮಸ್ತಕಾಭಿಷೇಕಕ್ಕೆ ವೇಣೂರು ಸಂಪೂರ್ಣ ಸಿದ್ಧಗೊಂಡಿದೆ.

ನಿತ್ಯ ಸುಮಾರು 20 ಸಾವಿರ ಭಕ್ತರ ಊಟೋಪಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಹೊರ ಭಾಗಗಳಿಂದ ಆಗಮಿಸುವ ಜನರಿಗೆ ವಸತಿ ವ್ಯವಸ್ಥೆ ಮಾಡಲಾಗಿದೆ. ಅಟ್ಟಳಿಗೆ ಕಾಮಗಾರಿ ಪೂರ್ಣಗೊಂಡಿದ್ದು, ಈಗಾಗಲೇ ಸಾವಿರಾರು ಮಂದಿ ವೀಕ್ಷಿಸಿದ್ದಾರೆ.

ಯುಗಳಮುನಿಗಳಾದ 108 ಅಮೋಘ ಕೀರ್ತಿ ಮಹಾರಾಜರು ಹಾಗೂ 108 ಅಮರ ಕೀರ್ತಿ ಮಹಾರಾಜ ಅವರ ಸಾನ್ನಿಧ್ಯದಲ್ಲಿ, ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ಆರಂಭಗೊಳ್ಳುವ ಕಾರ್ಯಕ್ರಮದಲ್ಲಿ, ಮೂಡಬಿದಿರೆ, ಶ್ರವಣಬೆಳಗೊಳ, ನರಸಿಂಹರಾಜಪುರ, ಲಕ್ಕವಳ್ಳಿ, ಹೊಂಬುಜ ಆರತೀಪುರ, ಸೋಂದ, ಅರಹಂತಗಿರಿ, ಕನಕಗಿರಿ ಕಂಬದಹಳ್ಳಿ, ಕಾರ್ಕಳ, ಕ್ಷೇತ್ರ ಗಾಂದಣಿ, ವರೂರು, ಕೊಲ್ಲಾಪುರ, ಜಿನಕಂಚಿ ಮೊದಲಾದ ಜೈನ ಮಠಗಳ ಮಹಾಸ್ವಾಮಿಗಳು ಭಾಗವಹಿಸಲಿದ್ದಾರೆ.

ಧಾರ್ಮಿಕ ಸಭೆ ಕಾರ್ಯಕ್ರಮವನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಮಧ್ಯಾಹ್ನ 3 ಗಂಟೆಗೆ ಉದ್ಘಾಟಿಸಲಿದ್ದಾರೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸಲಿದ್ದಾರೆ. ಸಚಿವ ದಿನೇಶ್ ಗುಂಡೂರಾವ್ ಸ್ಮರಣ ಸಂಚಿಕೆ ಬಿಡುಗಡೆ, ಸಂಸದ ನಳಿನ್ ಕುಮಾರ್ ಕಟೀಲ್ ವಸ್ತು ಪ್ರದರ್ಶನ ಉದ್ಘಾಟನೆ ನೆರವೇರಿಸಲಿದ್ದಾರೆ. ಮಾಜಿ ಸಚಿವ ಅಭಯ ಚಂದ್ರ ಜೈನ್, ಧರ್ಮಸ್ಥಳದ ಡಿ.ಸುರೇಂದ್ರ ಕುಮಾರ್, ಶಾಸಕ ಹರೀಶ್ ಪೂಂಜ, ಎಂಎಲ್​​ಸಿ ಹರೀಶ್ ಕುಮಾರ್, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ವೇಣೂರು ಗ್ರಾಪಂ ಅಧ್ಯಕ್ಷ ನೇಮಯ್ಯ ಕುಲಾಲ್ ಮತ್ತಿತರರು ಭಾಗವಹಿಸಲಿದ್ದಾರೆ. ಸಂಜೆ 7:30 ರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಭರತನಾಟ್ಯ, ಯಕ್ಷಗಾನ ಜರಗಲಿದೆ.

ಇದನ್ನೂ ಓದಿ: ನೂರಾರು ವರ್ಷದ ಸಂಪ್ರದಾಯ: ಒಂದಲ್ಲಾ ಎರಡಲ್ಲ, ಈ ಊರಲ್ಲಿ 75 ದಿನ ಹಬ್ಬ ಆಚರಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.