ETV Bharat / state

ಪುತ್ತೂರು: ಉದ್ಯೋಗ ನೀಡುವುದಾಗಿ ನಂಬಿಸಿ ಹಣ ಪಡೆದು ವಂಚನೆ, ಮೂವರು ಸೆರೆ

author img

By ETV Bharat Karnataka Team

Published : Feb 9, 2024, 5:21 PM IST

ಉದ್ಯೋಗ ಕೊಡಿಸುವುದಾಗಿ ನಂಬಿಸಿ ವಂಚಿಸಿದ್ದ ಮೂವರು ಆರೋಪಿಗಳನ್ನು ಪುತ್ತೂರು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಉದ್ಯೋಗ ನೀಡುವುದಾಗಿ ಹಣ ವಂಚಿಸಿದ ಆರೊಪಿಗಳು
ಉದ್ಯೋಗ ನೀಡುವುದಾಗಿ ಹಣ ವಂಚಿಸಿದ ಆರೊಪಿಗಳು

ಪುತ್ತೂರು: ಉದ್ಯೋಗ ಕೊಡಿಸುವುದಾಗಿ ಹೇಳಿ ಹಣ ವಂಚಿಸಿರುವ ಪ್ರಕರಣ ಭೇದಿಸಿರುವ ಪುತ್ತೂರು ಗ್ರಾಮಾಂತರ ಪೊಲೀಸರು ಮೂವರನ್ನು ಸೆರೆಹಿಡಿದಿದ್ದಾರೆ. ತುಮಕೂರಿನ ಚಿಕ್ಕನಾಯಕನಹಳ್ಳಿಯ ಸುಮಿತ್ರ ಬಾಯಿ ಸಿ.ಆರ್.(23), ಹಾಸನದ ಹಳಸಿನಹಳ್ಳಿಯ ಸೌಂದರ್ಯ ಎಂ.ಎಸ್.(21), ತುಮಕೂರಿನ ಚಿಕ್ಕನಾಯಕನಹಳ್ಳಿಯ ರಾಹುಲ್‌ ಕುಮಾರ್ ನಾಯ್ಕ(19) ಬಂಧಿತ ಆರೋಪಿಗಳು. ಇವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಪ್ರಕಪಣದ ಸಂಪೂರ್ಣ ವಿವರ: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಕಚೇರಿ ಕೆಲಸಗಳು ಖಾಲಿ ಇವೆ. ನಿರುದ್ಯೋಗಿಗಳಿಗೆ ಬಂದ ದಿನವೇ ಕೆಲಸ ಸಿಗುತ್ತದೆ ಎಂಬುದಾಗಿ ಆರೋಪಿಗಳು ವಿವಿಧ ಪತ್ರಿಕೆಗಳಲ್ಲಿ ಜಾಹೀರಾತು ನೀಡಿದ್ದರು. ಇದನ್ನು ನೋಡಿದ ಕೆಲವರು ಜಾಹೀರಾತಿನಲ್ಲಿ ನಮೂದಿಸಿದ ಫೋನ್ ನಂಬ‌ರ್​ಗೆ ಕರೆ ಮಾಡಿ ವಿಚಾರಿಸಿದ್ದಾರೆ. ಕರೆ ಸ್ವೀಕರಿಸಿದ್ದ ಆರೋಪಿಗಳು ನೀವು ಕೆಲಸಕ್ಕೆ ಸೇರ ಬಯಸಿದರೆ ಫೀಸ್ ಕೊಡಬೇಕು ಎಂದು ತಿಳಿಸಿದ್ದರು. ಅಂತೆಯೇ, ಕಳೆದ ಸುಮಾರು 7 ತಿಂಗಳಿನಿಂದ ಪದೇ ಪದೇ ಆನ್​ಲೈನ್ ಮುಖಾಂತರ ಹಣ ಪಾವತಿ ಮಾಡುವಂತೆ ತಿಳಿಸಿದ್ದರು. ಗೂಗಲ್ ಪೇ ಮುಖಾಂತರ ಇದುವರೆಗೆ ಸುಮಾರು ಒಟ್ಟು 2,25,001 ರೂ. ಹಣವನ್ನು ಆರೋಪಿಗಳು ತಮ್ಮ ಖಾತೆಗೆ ಪಾವತಿ ಮಾಡಿಸಿದ್ದರು. ಇದಾದ ಬಳಿಕವೂ ಪದೇ ಪದೇ ಕರೆ ಮಾಡಿ ಇನ್ನೂ ಹಣ ನೀಡಬೇಕು ಎಂದು ಹೇಳಿ ಯಾವುದೇ ಉದ್ಯೋಗ ನೀಡದೇ ವಂಚಿಸಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಲಾಗಿತ್ತು.

ದ.ಕ.ಜಿಲ್ಲಾ ಪೊಲೀಸ್ ಅಧೀಕ್ಷಕ ಸಿ.ಬಿ.ರಿಷ್ಯಂತ್, ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಧರ್ಮಪ್ಪ ಎಂ.ಎನ್. ಮತ್ತು ರಾಜೇಂದ್ರ ಡಿ.ಎನ್. ನಿರ್ದೇಶನದಲ್ಲಿ ಪುತ್ತೂರು ಪೊಲೀಸ್ ಉಪಾಧೀಕ್ಷಕ ಡಾ.ಅರುಣ್ ನಾಗೇಗೌಡ ಮಾರ್ಗದರ್ಶನದಲ್ಲಿ ಪುತ್ತೂರು ಗ್ರಾಮಾಂತರ ಠಾಣಾ ಪ್ರಭಾರ ಪೊಲೀಸ್‌ ನಿರೀಕ್ಷಕ ರವಿ ಬಿ.ಎಸ್. ಆದೇಶದಂತೆ ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸ್‌ ಉಪನಿರೀಕ್ಷಕ ಜಂಬುರಾಜ್ ಬಿ.ಮಹಾಜನ್ ನೇತೃತ್ವದಲ್ಲಿ ಎಎಸ್‌ಐ ಶ್ರೀಧರ್ ರೈ, ಸಿಬ್ಬಂದಿ ಮಧು ಕೆ.ಎನ್.ಸತೀಶ್ ಎನ್‌.ಗಿರೀಶ ಕೆ.ಶಿವಪುತ್ರಮ್ಮ, ಹೆಚ್.ಜಿ.ಹಕೀಂ, ಗಣಕ ಯಂತ್ರ ವಿಭಾಗದ ದಿವಾಕರ್, ಸಂಪತ್ ಕಾರ್ಯಾಚರಣೆ ನಡೆಸಿದ್ದರು.

ಚಿನ್ನಾಭರಣ ದೋಚಿದ ಪ್ರಕರಣ: ನಿಮ್ಮ ಮನೆಗೆ ಮಾಟಮಂತ್ರ ಮಾಡಿಸಿದ್ದಾರೆ. ಮುಂದಿನ ದಿನಗಳಲ್ಲಿ ದೊಡ್ಡ ಅನಾಹುತ ಸಂಭವಿಸಲಿದೆ. ಅದನ್ನು ತೆಗೆಯುತ್ತೇವೆ ಎಂದು ಮಹಿಳೆಯೊಬ್ಬರನ್ನು ನಂಬಿಸಿ 1.65 ಲಕ್ಷ ಮೌಲ್ಯದ ಚಿನ್ನಾಭರಣ ಎಗರಿಸಿದ ಫಕೀರನೊಬ್ಬನನ್ನು ಸ್ಥಳೀಯರು‌ ಹಿಡಿದು ತರಾಟೆಗೆ ತೆಗೆದುಕೊಂಡ ಘಟನೆ ಹುಬ್ಬಳ್ಳಿ ಧಾರವಾಡ ವ್ಯಾಪ್ತಿಯ ಬೆಂಡಿಗೇರಿ ಪೊಲೀಸ್ ಠಾಣೆಯ ಮಿಲ್ಲತ್ ನಗರದಲ್ಲಿ ನಡೆದಿದೆ.

ಚಿನ್ನಾಭರಣ ದೋಚಿದ ಫಕೀರ ವೇಷಧಾರಿಯ ಹಿಡಿದು ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು

ಮಿಲ್ಲತ್ ನಗರದ ಕಸ್ತೂರಬಾ ನಗರದ ಜಯತನುಬಿ ಮನೆಗೆ ಬಂದ ಅಪರಿಚಿತರು‌ ಮಾಟಮಂತ್ರ ತೆಗೆಯುತ್ತೇವೆ. ನಿಮ್ಮ ಚಿನ್ನಾಭರಣಗಳನ್ನು, ಮಾಟಮಂತ್ರವನ್ನು ಮನೆಯಲ್ಲಿನ ಮಡಿಕೆಯಲ್ಲಿ ಹಾಕಿಕೊಡಿ ಎಂದು ಹೇಳಿ, ಅವರು ತಂದಿದ್ದ ಮಡಿಕೆಯನ್ನು ಮಹಿಳೆಗೆ ಕೊಟ್ಟಿದ್ದಾರೆ. ಅದರಂತೆಯೇ ಮಹಿಳೆ ಚಿನ್ನಾಭರಣ ಹಾಕಿಕೊಟ್ಟ ಮಡಿಕೆಯನ್ನು ಮಂತ್ರಿಸುವ ನೆಪದಲ್ಲಿ ಅವರ ಗಮನ ಬೇರೆಡೆಗೆ ಸೆಳೆದು ಖಾಲಿ ಮಡಿಕೆಯನ್ನು ಮಹಿಳೆಗೆ ಕೊಟ್ಟು, ಚಿನ್ನಾಭರಣಗಳಿದ್ದ ಮಡಿಕೆಯನ್ನು ತೆಗೆದುಕೊಂಡು ಪರಾರಿಯಾಗಿದ್ದಾನೆ.

ಬಳಿಕ ಮಹಿಳೆಗೆ ತಪ್ಪಿನ ಅರಿವಾಗಿ ಸ್ಥಳೀಯರಿಗೆ ತಿಳಿಸಿದ್ದಾಳೆ. ಆಗ ಎಲ್ಲಾ ಕಡೆ ಹುಡುಕಿದಾಗ ಸ್ಥಳೀಯರ ಕೈಗೆ ಸಿಲುಕಿಕೊಂಡಿದ್ದು, ಸ್ಥಳೀಯರು ಫಕೀರನ ವೇಷಧಾರಿಯನ್ನು ತರಾಟೆಗೆ ತೆಗೆದುಕೊಂಡು ಬೆಂಡಿಗೇರಿ ಪೊಲೀಸರ ಕೈಗೆ ಒಪ್ಪಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: 10 ಲಕ್ಷ ಲೋನ್​ಗೆ 5 ಲಕ್ಷ ರೂ ಸಬ್ಸಿಡಿ ಕೊಡುತ್ತೇವೆಂದು ಕೋಟ್ಯಾಂತರ ರೂ ವಂಚನೆ ಆರೋಪ: ಸಂತ್ರಸ್ತ ಮಹಿಳೆಯರಿಂದ ದೂರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.