ETV Bharat / state

ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ತೇಜಸ್ವಿ ಸೂರ್ಯ ನಾಮಪತ್ರ ಸಲ್ಲಿಕೆ - Tejasvi Surya

author img

By ETV Bharat Karnataka Team

Published : Apr 4, 2024, 6:37 PM IST

ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ತೇಜಸ್ವಿ ಸೂರ್ಯ ನಾಮಪತ್ರ ಸಲ್ಲಿಸಿದ್ದಾರೆ.

tejashwi-surya
ತೇಜಸ್ವಿ ಸೂರ್ಯ ನಾಮಪತ್ರ ಸಲ್ಲಿಕೆ

ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ

ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಅಭ್ಯರ್ಥಿ ತೇಜಸ್ವಿ ಸೂರ್ಯ ಇಂದು ನಾಮಪತ್ರ ಸಲ್ಲಿಸಿದರು. ಇದಕ್ಕೂ ಮೊದಲು ಜಯನಗರ 4ನೇ ಬ್ಲಾಕ್​ನ ಮಯ್ಯಾಸ್ ಹೋಟೆಲ್‍ನಿಂದ ರೋಡ್ ಶೋ ಮೂಲಕ ಹೊರಟು, ಬಿಬಿಎಂಪಿ ಜಂಟಿ ಆಯುಕ್ತರ ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು

ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಚಿವ ಅನುರಾಗ್ ಸಿಂಗ್ ಠಾಕೂರ್, "ಇಡೀ ದೇಶವೇ ತಿರಸ್ಕರಿಸಿದ ನಾಯಕ ರಾಹುಲ್ ಗಾಂಧಿಯನ್ನು ಪದೇ ಪದೇ ನಾಯಕನನ್ನಾಗಿ ಬಿಂಬಿಸಲು ಪ್ರಯತ್ನಿಸುತ್ತಿರುವ ಕಾಂಗ್ರೆಸ್​ಗೆ ಸದಾ ಪರಿವಾರದ್ದೇ ಚಿಂತೆ. ಹೊಸ ನಾಯಕತ್ವ, ದೇಶದ ಅಭಿವೃದ್ಧಿ ಬಗ್ಗೆ ಕಿಂಚಿತ್ ಕಾಳಜಿ, ಯೋಚನೆಯಿಲ್ಲ. ಆ ಪಕ್ಷ ಈಗ ಕೇವಲ ಗಾಂಧಿ ಕುಟುಂಬದ ಪಕ್ಷವಾಗಿ ಮಾತ್ರ ಉಳಿದಿದೆ" ಎಂದು ವಾಗ್ದಾಳಿ ನಡೆಸಿದರು.

"ಬಿಜೆಪಿ ಬೆಂಗಳೂರು ದಕ್ಷಿಣ ಅಭ್ಯರ್ಥಿ ತೇಜಸ್ವಿ ಸೂರ್ಯ ಪರವಾಗಿ ಬಂದಿದ್ದೇನೆ. ಕಳೆದ ಬಾರಿ ತೇಜಸ್ವಿ ಸೂರ್ಯ ಅವರನ್ನು ಎಂಪಿ ಮಾಡಿ ಕಳಿಸಿದ್ದೀರಿ. ಪ್ರಧಾನಿ ಮೋದಿ ಅವರನ್ನು ದೇಶದ ಯುವ ಮೋರ್ಚಾ ಅಧ್ಯಕ್ಷ ಮಾಡಿದರು. ರಾಜಕಾರಣದಲ್ಲಿ ಯುವ ನೇತಾರನಾಗಿ ಬೆಳೆಯುವ ಅವಕಾಶ ಅವರಿಗೆ ಸಿಕ್ಕಿದೆ" ಎಂದು ಹೇಳಿದರು.

ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಮಾತನಾಡಿ, "ಕಳೆದ ಬಾರಿ ಬೆಂಗಳೂರು ದಕ್ಷಿಣದ ನಿಮ್ಮೆಲ್ಲರ ಸೇವೆ ಮಾಡುವ ಅವಕಾಶ ಸಿಕ್ಕಿತ್ತು. ಸಾರ್ವಜನಿಕ ಸೇವೆಗೆ ಅವಕಾಶ ನೀಡಿದ ಸಾಕಷ್ಟು ನಾಯಕರು ಬಂದಿದ್ದಾರೆ. ನಾನು ಯುವಮೋರ್ಚಾ ಕೆಲಸ ಮಾಡುವಾಗ, ರಾಷ್ಟ್ರೀಯ ಅಧ್ಯಕ್ಷ ಆಗಿದ್ದು ಅನುರಾಗ್ ಠಾಕೂರ್. ನೀವು ಸಂಸತ್‌ಗೆ ಆರಿಸಿ ಕಳಿಸಿದ್ದೀರಿ. ನಾನು ರಾಷ್ಟ್ರೀಯ ಯುವಮೋರ್ಚಾ ಅಧ್ಯಕ್ಷ ಆಗ್ತೀನಿ ಅಂತ ಕನಸು ಮನಸ್ಸಿನಲ್ಲೂ ನೆನಸಿರಲಿಲ್ಲ. ನಮ್ಮ ಎಲ್ಲಾ ನಾಯಕರು, ಶಾಸಕರಿದ್ದಾರೆ. ಅವರು ಪ್ರತೀ ವಿಧಾನಸಭಾ ಕ್ಷೇತ್ರಕ್ಕೆ ಕರೆದುಕೊಂಡು ಹೋಗಿ ಜನರನ್ನು ಪರಿಚಿತರಾಗಿಸಿದ್ದಾರೆ. ನಾನು ಯುವಮೋರ್ಚಾ ಕೆಲಸ ಮಾಡುವಾಗ, ಅಧ್ಯಕ್ಷರಾಗಿದ್ದ ಪ್ರತಾಪ್ ಸಿಂಹ ಬಂದಿದ್ದಾರೆ. ನಾವೆಲ್ಲರೂ ಒಂದು ಕಿ.ಮೀ ಪಾದಯಾತ್ರೆ ಮಾಡೋಣ. ನಮ್ಮ ಪಾದಯಾತ್ರೆ ನೋಡಿ, ಬೆಂಗಳೂರು ದಕ್ಷಿಣದಲ್ಲಿ ಐದು ಲಕ್ಷ ಮತಗಳಿಂದ ಗೆಲ್ತಿದ್ದಾರೆ ಅಂತ ಕಾಂಗ್ರೆಸ್‌ಗೆ ಗೊತ್ತಾಗಿದೆ" ಎಂದರು.

ಸಂಸದ ಪ್ರತಾಪ್ ಸಿಂಹ ಮಾತನಾಡಿ, "ಯುಎಸ್ ಕಾನ್ಸುಲೇಟ್ ಇಲ್ಲ ಅಂತ ನೋವಾಗಿತ್ತಲ್ವಾ? ಹೈದರಾಬಾದ್​ಗೆ ಹೋದಾಗ ಬೆಂಗಳೂರಿನಲ್ಲಿಲ್ಲ ಅಂತ ಬೇಸರ ಇದೆ ಅಲ್ವಾ? ಅದನ್ನ ತರಿಸುವ ಶಕ್ತಿ ಇರೋದು ತೇಜಸ್ವಿ ಸೂರ್ಯಗೆ ಮಾತ್ರ. ಕರ್ನಾಟಕಕ್ಕೆ ನಾಯಕತ್ವದ ಕೊರತೆ ನೀಗಿಸೋ ಶಕ್ತಿ ಇರೋದು ತೇಜಸ್ವಿ ಸೂರ್ಯಗೆ ಮಾತ್ರ. ತೇಜಸ್ವಿ ಸೂರ್ಯ ಗೆಲ್ಲಿಸಿ" ಅಂತ ಮನವಿ ಮಾಡಿದರು.

ಸಮಾವೇಶಕ್ಕೆ ಮೊದಲು ಗಿರಿನಗರ ವಿನಾಯಕ ದೇವಸ್ಥಾನದಲ್ಲಿ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಪೂಜೆ ಸಲ್ಲಿಸಿ, ತೇಜಸ್ವಿ ಸೂರ್ಯ ಅವರ ಮೆರವಣಿಗೆಗೆ ಚಾಲನೆ ನೀಡಿದರು. ಶಾಸಕರು, ಬಿಜೆಪಿ, ಜೆಡಿಎಸ್ ನಾಯಕರು, ಕಾರ್ಯಕರ್ತರು ಭಾಗವಹಿಸಿದ್ದರು. ಬಹಿರಂಗ ಸಮಾವೇಶದ ಬಳಿಕ ಒಂದು ಕಿ. ಮೀ ಉದ್ದದ ಬೃಹತ್ ಪಾದಯಾತ್ರೆ ನಡೆಯಿತು. ಜಯನಗರ ಎರಡನೇ ಹಂತದಲ್ಲಿರುವ ಚುನಾವಣಾಧಿಕಾರಿ ಕಚೇರಿಯಲ್ಲಿ ತೇಜಸ್ವಿ ಸೂರ್ಯ ನಾಮಪತ್ರ ಸಲ್ಲಿಸಿದರು.

ಇದನ್ನೂ ಓದಿ: ಸಿದ್ದರಾಮಯ್ಯಗೆ ಸಿಎಂ ಸ್ಥಾನ ಕಳೆದುಕೊಳ್ಳುವ ಭಯ ಕಾಡ್ತಿದೆ: ಜಗದೀಶ್​ ಶೆಟ್ಟರ್ - BELAGAVI LOK SABHA CONSTITUENCY

ETV Bharat Logo

Copyright © 2024 Ushodaya Enterprises Pvt. Ltd., All Rights Reserved.