ETV Bharat / state

ಬೆಂಬಲಿಗರ ಜೊತೆ ಇಂದು ಮಹತ್ವದ ಸಭೆ, ಮಂಡ್ಯದಲ್ಲೇ ಅಂತಿಮ ನಿರ್ಧಾರ ಪ್ರಕಟಿಸುತ್ತೇನೆ: ಸುಮಲತಾ - MANDYA LOK SABHA CONSTITUENCY

author img

By ETV Bharat Karnataka Team

Published : Mar 30, 2024, 7:15 AM IST

ಇಂದಿನ ಬೆಂಬಲಿಗರ ಸಭೆ ಬಳಿಕ ಅಂತಿಮ ನಿರ್ಧಾರ ಪ್ರಕಟಿಸುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಭೇಟಿ ನಂತರ ಸಂಸದೆ ಸುಮಲತಾ ಅಂಬರೀಶ್ ತಿಳಿಸಿದರು.

Vijayendra meets sumalatha
ಸುಮಲತಾ ಅಂಬರೀಶ್ ಭೇಟಿಯಾದ ವಿಜಯೇಂದ್ರ

ಬೆಂಗಳೂರು: ವಿಜಯೇಂದ್ರ ಭೇಟಿಯಾಗಿ ಒಂದು ಗಂಟೆಗಳ ಚರ್ಚೆ ನಡೆಸಿ, ಪಕ್ಷಕ್ಕೆ ಸಹಕಾರ ನೀಡುವಂತೆ ಕೇಳಿದ್ದಾರೆ. ಶನಿವಾರ ಬೆಂಬಲಿಗರ ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳುತ್ತೇನೆ. ಬಿಜೆಪಿಗೆ ಬೆಂಬಲಿಸುವುದು ಒಂದು ಕಡೆ ಆದರೆ ನನ್ನ ಬೆಂಬಲಿಗರ ನಿಲುವು ನನ್ನ ಆದ್ಯತೆ. ಕೆಲ ದಿನಗಳಲ್ಲಿ ಮಂಡ್ಯದಲ್ಲೇ ನನ್ನ ಅಂತಿಮ ನಿರ್ಧಾರ ಪ್ರಕಟಿಸುತ್ತೇನೆ ಎಂದು ಸಂಸದೆ ಸುಮಲತಾ ಅಂಬರೀಶ್ ತಿಳಿಸಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಭೇಟಿ ಬಳಿಕ ಮಾತನಾಡಿದ ಸುಮಲತಾ, ಮಂಡ್ಯದಲ್ಲಿ ಬಿಜೆಪಿ ಸೀಟ್ ಉಳಿಸಿಕೊಂಡಿದ್ರೆ ಒಳ್ಳೆಯ ಫೈಟ್ ನೀಡಬಹುದಿತ್ತು. ಆಗಿ ಹೋಗಿರೋದನ್ನು ಮಾತನಾಡಿ ಈಗ ಪ್ರಯೋಜನವಿಲ್ಲ. ನನಗೆ ಬೇರೆ ಪಕ್ಷಗಳಿಂದ ಹಲವು ಆಫರ್ ಇದ್ದವು. ಮಂಡ್ಯ ಬಿಟ್ಟು ಎಲ್ಲೂ ನಿಲ್ಲಲ್ಲ ಅಂತಾ ಹೇಳಿದೆ. ನನ್ನ ಗುರುತು, ನನ್ನ ಅಸ್ತಿತ್ವ ಮಂಡ್ಯ. ನನಗೆ ಯಾರು ಹತ್ತಿರವೂ ಕೇಳೋ ಅಭ್ಯಾಸ ಇಲ್ಲ. ಶನಿವಾರ 2.30 ಕ್ಕೆ ಬೆಂಬಲಿಗರ ಸಭೆಯಲ್ಲಿ ಬೆಂಬಲಿಗರ ನಿರ್ಧಾರದಂತೆ ನಡೆಯುತ್ತೇನೆ. ಕುಮಾರಸ್ವಾಮಿ ಅವರ ಭೇಟಿಗೆ ಸ್ವಾಗತವಿದೆ ಎಂದರು.

ಸುಮಲತಾ ಭೇಟಿ ಬಳಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು. ಸುಮಲತಾ ಅವರನ್ನು ಮನವೊಲಿಸುವಂತದ್ದಲ್ಲ. ಮಂಡ್ಯ ಸಂಸದರನ್ನು ಭೇಟಿಯಾಗಿ ಮಾತಾಡ್ಬೇಕಾಗಿದ್ದು ರಾಜ್ಯಾಧ್ಯಕ್ಷನಾಗಿ ನನ್ನ ಕರ್ತವ್ಯ. ರಾಜಕೀಯ ಸ್ಥಿತಿಯಲ್ಲಿ ಇವತ್ತು ಸಾಕಷ್ಟು ಬದಲಾವಣೆಗಳು ಆಗಿವೆ. ಸುಮಲತಾ ಅವರ ಜೊತೆ ಸಾಕಷ್ಟು ವಿಚಾರ ಚರ್ಚೆ ಮಾಡಿದ್ದು, ಅವರು ಕೂಡ ಸ್ಪಂದಿಸಿದ್ದಾರೆ. ಅವರು ನಮ್ಮ ಜೊತೆ ಇರ್ತಾರೆ, ಕೆಲಸ ಮಾಡ್ತಾರೆ. ಅವರಿಗೆ ತಾತ್ಕಾಲಿಕವಾಗಿ ಹಿನ್ನಡೆ ಆಗಿರಬಹುದು. ಆದರೆ ಭವಿಷ್ಯದಲ್ಲಿ ಅವರಿಗೆ ಪ್ಲಸ್ ಆಗುತ್ತೆ. ಅವರು ಒಳ್ಳೆ ತೀರ್ಮಾನ ಮಾಡ್ತಾರೆ ಅನ್ನುವ ವಿಶ್ವಾಸ ಇದೆ. ರಾಷ್ಟ್ರ ಮಟ್ಟದಲ್ಲಿ ಚರ್ಚೆ ಆಗಿರುವ ವಿಷಯಗಳ ಬಗ್ಗೆ ಸುಮಲತಾ ಅವರಿಗೂ ಸಾಕಷ್ಟು ಮಾಹಿತಿ ಇದೆ. ಮೋದಿಯವರಿಗೆ ಶಕ್ತಿ ತುಂಬುವ ಕೆಲಸವನ್ನು ಅವರು ಖಂಡಿತಾ ಮಾಡ್ತಾರೆ ಎಂದು ತಿಳಿಸಿದರು.

'ಸುಮಲತಾ ಅಂಬರೀಶ್ ಅವರನ್ನು ಭೇಟಿಯಾಗಿ ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸುವುದು ನಮ್ಮೆಲ್ಲರ ಗುರಿಯಾಗಿದ್ದು, ಈ ನಿಟ್ಟಿನಲ್ಲಿ ತಮ್ಮ ಸ್ವಾಭಿಮಾನದ ಬೆಂಬಲವನ್ನು ಮೋದಿ ಅವರಿಗಾಗಿ ಸಮರ್ಪಿಸಬೇಕೆಂದು ವಿನಂತಿಸಲಾಯಿತು. ಅತ್ಯಂತ ಪೂರಕವಾಗಿ ಸ್ಪಂದಿಸಿರುವ ಸುಮಲತಾ ಅವರು ತಮ್ಮ ಬೆಂಬಲಿಗರು ಹಾಗೂ ಅಭಿಮಾನಿಗಳೊಂದಿಗೆ ಚರ್ಚಿಸಿ ಸಕಾರಾತ್ಮಕ ನಿರ್ಧಾರವನ್ನು ಪ್ರಕಟಿಸುವುದಾಗಿ ಭರವಸೆ ನೀಡಿದರು. ದೇಶದ ಸುರಕ್ಷತೆಯ ದೃಷ್ಟಿಯಿಂದ ಈವರೆಗೂ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರವನ್ನು ಬೆಂಬಲಿಸುತ್ತಾ ಬಂದಿರುವ ಸುಮಲತಾ ಅವರು ಮುಂದೆಯೂ ಅದೇ ಹಾದಿಯಲ್ಲಿ ನಮ್ಮೊಂದಿಗೆ ನಿಲ್ಲುತ್ತಾರೆಂಬ ಅಚಲ ವಿಶ್ವಾಸ ನಮ್ಮದು' ಎಂದು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ವಿಜಯೇಂದ್ರ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: ಬಿಜೆಪಿ ತಾರಾ ಪ್ರಚಾರಕರ ಪಟ್ಟಿ ಬಿಡುಗಡೆ : ಬಿ ಎಲ್ ಸಂತೋಷ್​ಗಿಲ್ಲ ಅವಕಾಶ, ಬಿಎಸ್​​​ವೈ ಮೇಲುಗೈ - BJP star campaigner list

ETV Bharat Logo

Copyright © 2024 Ushodaya Enterprises Pvt. Ltd., All Rights Reserved.