ETV Bharat / state

ಒಪಿಎಸ್ ಮರುಜಾರಿ ಸೇರಿ ಹಲವು ಬೇಡಿಕೆ: ಸಿದ್ದರಾಮಯ್ಯ ಬಜೆಟ್​ನಲ್ಲಿ ಈಡೇರುತ್ತಾ ಸರ್ಕಾರಿ ನೌಕರರ ನಿರೀಕ್ಷೆ?

author img

By ETV Bharat Karnataka Team

Published : Feb 15, 2024, 7:48 PM IST

ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ಬಜೆಟ್ ಮಂಡಿಸಲಿದ್ದಾರೆ. ಈ ಬಾರಿ ರಾಜ್ಯ ಬಜೆಟ್ ನಲ್ಲಿ ಏಳನೇ ವೇತನ ಆಯೋಗ ಹಾಗೂ ಹಳೆ ಪಿಂಚಣಿ ವ್ಯವಸ್ಥೆ ಮರು ಜಾರಿ ಸೇರಿದಂತೆ ವಿವಿಧ ಬೇಡಿಕೆಗಳು ಈಡೇರಿಕೆ ಆಗಲಿವೆ ಎನ್ನುವ ನಿರೀಕ್ಷೆ ರಾಜ್ಯ ಸರ್ಕಾರಿ ನೌಕರರಲ್ಲಿ ಇದೆ.

Etv Bharat
Etv Bharat

ಬೆಂಗಳೂರು: ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ಬಜೆಟ್ ಮಂಡಿಸುತ್ತಿದ್ದು, ಹಳೆ ಪಿಂಚಣಿ ಯೋಜನೆ ಮರು ಜಾರಿ, ಏಳನೇ ವೇತನ ಆಯೋಗ ಜಾರಿ ಸೇರಿದಂತೆ ಹತ್ತು ಹಲವು ನಿರೀಕ್ಷೆಗಳನ್ನು ರಾಜ್ಯ ಸರ್ಕಾರಿ ನೌಕರರು ಇರಿಸಿಕೊಂಡಿದ್ದಾರೆ.‌ ಬೇಡಿಕೆ ಈಡೇರಿಕೆ ಸಂಬಂಧ ಈಗಾಗಲೇ ಸಿಎಂ ಜೊತೆ ಸರ್ಕಾರಿ ನೌಕರರ ಸಂಘ ಮಾತುಕತೆ ನಡೆಸಿದ್ದು, ಬಜೆಟ್ ನಲ್ಲಿ ಹೆಚ್ಚಿನ ನಿರೀಕ್ಷೆ ಇರಿಸಿಕೊಂಡಿದೆ.

ಈ ಬಾರಿಯ ರಾಜ್ಯ ಬಜೆಟ್ ನಲ್ಲಿ ಏಳನೇ ವೇತನ ಆಯೋಗ ಹಾಗೂ ಹಳೆ ಪಿಂಚಣಿ ವ್ಯವಸ್ಥೆ ಮರು ಜಾರಿ ಸೇರಿದಂತೆ ಹಲವು ಬೇಡಿಕೆಗಳು ಈಡೇರಿಕೆ ಆಗಲಿವೆ ಎನ್ನುವ ನಿರೀಕ್ಷೆ ರಾಜ್ಯ ಸರ್ಕಾರಿ ನೌಕರರಲ್ಲಿದೆ. ಬಡ್ತಿ ಶಿಕ್ಷಕರ ವೇತನ ತಾರತಮ್ಯ ಸರಿಪಡಿಸುವುದು ಸೇರಿ ಹಲವು ಬೇಡಿಕೆಗಳು ಬಜೆಟ್​​​ನಲ್ಲಿ ಇರಲಿವೆ ಎನ್ನುವ ನಿರೀಕ್ಷೆಯಲ್ಲಿದ್ದಾರೆ. ಈ ಕುರಿತು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿಎಸ್ ಷಡಕ್ಷರಿ ಮಾಹಿತಿ ನೀಡಿದ್ದು, ಬಜೆಟ್​​ನಲ್ಲಿ ಎನ್​ಪಿಎಸ್ ರದ್ದುಪಡಿಸಿ ಒಪಿಎಸ್ ಜಾರಿಗೊಳಿಸಬೇಕು. ಏಳನೇ ವೇತನ ಆಯೋಗದ ವರದಿ ಪಡೆದು ಜಾರಿಗೆ ಪೂರಕ ಅನುದಾನ ಮೀಸಲಿಡಬೇಕು ಎಂದು ಸಿಎಂ ಸಿದ್ದರಾಮಯ್ಯಗೆ ಮನವಿ ಮಾಡಿದ್ದಾರೆ.

ಸರ್ಕಾರಿ ನೌಕರರ ಬೇಡಿಕೆಗಳು: ರಾಷ್ಟ್ರೀಯ ಪಿಂಚಣಿ ಯೋಜನೆಯಡಿ ರಾಜ್ಯದ 2.45 ಲಕ್ಷ ಸರ್ಕಾರಿ ನೌಕರರನ್ನು ಎನ್‌ಪಿಎಸ್‌ನಿಂದ ಒಪಿಎಸ್‌ಗೆ ಒಳಪಡಿಸಲು ಸರ್ಕಾರ ಕ್ರಮಗಳನ್ನು ಕೈಗೊಳ್ಳಬೇಕು. ಪಿಎಫ್ಆರ್‌ಡಿಗೆ ಪಾವತಿಯಾಗಿರುವ ಎನ್‌ಪಿಎಸ್ ನೌಕರರ ಹಣ ವಾಪಸ್ ಪಡೆಯಲು ಅಗತ್ಯ ಕಾನೂನು ತಿದ್ದುಪಡಿ ಆರಂಭಿಸಬೇಕು. ಎನ್‌ಪಿಎಸ್ ಮತ್ತು ಒಪಿಎಸ್ ಸಾಧಕ-ಬಾಧಕಗಳ ಚರ್ಚೆಗೆ ಕಾಲಾವಕಾಶ ಪಡೆಯಲಿ. ಆದರೆ ಎನ್‌ಪಿಎಸ್ ನೌಕರರ ವಂತಿಕೆ ಕಡಿತಗೊಳ್ಳುತ್ತಿರುವುದನ್ನು ಕೂಡಲೇ ನಿಲ್ಲಿಸಬೇಕು. 7ನೇ ವೇತನ ಆಯೋಗದ ಶಿಫಾರಸು ಜಾರಿಗೊಳಿಸುವ ಕುರಿತು ಆದೇಶವನ್ನು ಹೊರಡಿಸಬೇಕು ಎಂಬ ಒತ್ತಾಯ ಮಾಡಿದ್ದಾರೆ.

ಹೊಸ ವೇತನ ಶ್ರೇಣಿಗಳ ರಚನೆಗೆ ಮಾನದಂಡ ರಚನೆ, ಸಮಾನ ಕೆಲಸಕ್ಕೆ ಸಮಾನ ವೇತನ, ವಿದ್ಯಾರ್ಹತೆ, ಜವಾಬ್ದಾರಿಯ ಗುಣಮಟ್ಟ, ಕಾರ್ಯಕ್ಷಮತೆ, ಕಾರ್ಯಕ್ಷೇತ್ರದ ವ್ಯಾಪ್ತಿ, ಜೊತೆಗೆ ನೆರೆ ರಾಜ್ಯ ಮತ್ತು ಕೇಂದ್ರ ವೇತನ ಮತ್ತು ಭತ್ಯೆಗಳ ಹೋಲಿಕೆ ಮಾಡಬೇಕು ಎನ್ನುವ ಬೇಡಿಕೆ ಇದೆ.

ಕಚೇರಿ ವೇಳೆಯನ್ನು ಹೆಚ್ಚಿಸಿ, ವಾರದ ಕರ್ತವ್ಯ ದಿನಗಳನ್ನು ಕಡಿಮೆ ಮಾಡಲು ಬೆಳಗ್ಗೆ 10.00ಕ್ಕೆ ಬದಲಾಗಿ ಬೆಳಗ್ಗೆ 9.30ರಿಂದ ಹಾಗೂ ಸಂಜೆ 5.30ಕ್ಕೆ ಬದಲಾಗಿ ಸಂಜೆ 6.00ರ ವರೆಗೆ ಬದಲಾಯಿಸಬೇಕು. ಕೇಂದ್ರ ಸರ್ಕಾರಿ ನೌಕರರಿಗಿರುವಂತೆ ತಿಂಗಳ ಮೊದಲ ಮತ್ತು ಮೂರನೇ ಶನಿವಾರ ಸಾರ್ವತ್ರಿಕ ರಜೆ ನೀಡಬೇಕು. ಎಟಿಐ ಮಾದರಿ ರಾಜ್ಯ ಸರ್ಕಾರಿ ನೌಕರರಿಗೆ ತರಬೇತಿ ನೀಡಬೇಕು ಎಂಬುದು ನೌಕರರ ಬೇಡಿಕೆಗಳಾಗಿವೆ.

6ನೇ ವೇತನ ಆಯೋಗದಲ್ಲಿ ಪ್ರಸ್ತುತ ಮೂಲ ವೇತನಕ್ಕೆ ಹಾಲಿ ಇರುವ ಶೇ.31ರಷ್ಟು ತುಟ್ಟಿಭತ್ಯೆಯನ್ನು ವಿಲೀನಗೊಳಿಸಿ ಶೇ. 40ರಷ್ಟು ಫಿಟ್‌ಮೆಂಟ್ ಸೌಲಭ್ಯವನ್ನು 01.07.2022ರಿಂದ ಜಾರಿಗೆ ತರಬೇಕು.

2026ರಲ್ಲಿ ಪರಿಷ್ಕರಣೆ ಆಗಲಿರುವ ಕೇಂದ್ರ ವೇತನ ಮತ್ತು ಭತ್ಯೆಗಳನ್ನು ರಾಜ್ಯ ಸರ್ಕಾರಿ ನೌಕರರಿಗೂ ಈಗಾಗಲೇ 26 ರಾಜ್ಯಗಳಲ್ಲಿರುವಂತೆ ಯಥಾವತ್ತಾಗಿ ಅನ್ವಯಗೊಳಿಸಬೇಕು. ಹೊಸ ವೇತನ ಶ್ರೇಣಿಗಳನ್ನು 2022ನೇ ಸಾಲಿನ ಬೆಲೆ ಸೂಚ್ಯಾಂಕದ 12 ತಿಂಗಳ ಸರಾಸರಿಯ ಆಧಾರದ ಮೇಲೆ ವೇತನ ಶ್ರೇಣಿಗಳ ದರಗಳನ್ನು ನಿಗದಿಪಡಿಸಬೇಕು.

ಕನಿಷ್ಠ 40% ಫಿಟ್‌ಮೆಂಟ್‌ನೊಂದಿಗೆ ಹಾಗೂ ಜೀವನ ನಿರ್ವಹಣೆಯನ್ನಾಧರಿಸಿ ಗ್ರೂಪ್ ‘ಡಿ’ ನೌಕರನ ಕನಿಷ್ಠ ಮೂಲ ವೇತನ ರೂ. 31,000ಕ್ಕೆ ನಿಗದಿಗೊಳಿಸುವುದು. ಪರಿಷ್ಕರಿಸಲಿರುವ ವೇತನ ಶ್ರೇಣಿಗಳಲ್ಲಿನ ಕನಿಷ್ಠ ಹಾಗೂ ಗರಿಷ್ಠ ವೇತನದ ನಡುವೆ ಈಗಿರುವ ಅನುಪಾತ 1:5,20 ಬದಲಾಗಿ 1:8.86 ಕ್ಕೆ ನಿಗದಿಪಡಿಸಿ ಶಿಫಾರಸು ಮಾಡಬೇಕು ಎನ್ನುವ ಬೇಡಿಕೆಯನ್ನು ಸರ್ಕಾರದ ಮುಂದೆ ಇಟ್ಟಿದೆ.

ಹಳೇ ಬೇಡಿಕೆಗಳು: ಮೈಸೂರು ಆಡಳಿತ ತರಬೇತಿ ಕೇಂದ್ರದ ಮಾದರಿಯಲ್ಲಿ ರಾಜ್ಯದ ವಿಭಾಗಗಳಲ್ಲಿ ವಸತಿ ಸಹಿತ ಸರ್ಕಾರಿ ನೌಕರರ ತರಬೇತಿ ಕೇಂದ್ರಗಳ ಸ್ಥಾಪನೆ ಮಾಡಬೇಕು, ಜಿಲ್ಲಾ ಕೇಂದ್ರಗಳಲ್ಲಿ ಸರ್ಕಾರಿ ವಸತಿ ಗೃಹ ನಿರ್ಮಾಣ/ನಿರ್ವಹಣೆಗೆ ಅನುದಾನ ಮಂಜೂರು ಮಾಡಬೇಕು, ಜಿಲ್ಲಾ, ತಾಲ್ಲೂಕು ಕೇಂದ್ರಗಳಲ್ಲಿ ಸರ್ಕಾರಿ ನೌಕರರ ಭವನ ನಿರ್ವಹಣೆಗೆ ಅನುದಾನ ಮಂಜೂರು ಮಾಡಬೇಕು, ರಾಜ್ಯ ಸರ್ಕಾರಿ ನೌಕರರ ಕ್ರೀಡಾ ಮತ್ತು ಸಾಂಸ್ಕೃತಿಕ ಹಾಗೂ ಇನ್ನಿತರ ಸಂಘದ ನಿರ್ವಹಣ ಉದ್ದೇಶಕ್ಕೆ ಅನುದಾನ ಮಂಜೂರು ಮಾಡಬೇಕು ಎನ್ನುವುದು ನೌಕರರ ಒತ್ತಾಯಗಳಾಗಿವೆ.

ರಾಜ್ಯದ ಸರ್ಕಾರಿ ನೌಕರರಿಗೆ-ಕುಟುಂಬದ ಸದಸ್ಯರಿಗೆ ನಗದು ರಹಿತ ಚಿಕಿತ್ಸಾ ಯೋಜನೆ ಸಮರ್ಪಕವಾಗಿ ಜಾರಿ ಮಾಡಬೇಕು,
ರಾಜ್ಯ ಸರ್ಕಾರಿ ನೌಕರರ ಎಲ್ಲಾ ಸೇವೆಗಳನ್ನು ಆನಲೈನ್ ಮೂಲಕ ಜಾರಿಗೊಳಿಸಬೇಕು. ಸರ್ಕಾರಿ ನೌಕರರಿಗೆ ಸುಗಮ ಸೇವೆಗಾಗಿ ಕೆಜಿಐಡಿ ಗಣಕೀಕರಣ ಮಾಡಬೇಕು, ಖಾಲಿಯಿರುವ ಸರ್ಕಾರಿ ಹುದ್ದೆಗಳ ಭರ್ತಿ ಮಾಡಬೇಕು, ರಾಜ್ಯದ ಶಿಕ್ಷಣ ಇಲಾಖೆಯಲ್ಲಿ ಹಲವಾರು ವೃಂದದ ನೌಕರರ ವೇತನ ತಾರತಮ್ಯವನ್ನು ಸರಿಪಡಿಸಬೇಕು, ನೂತನ ಪಿಂಚಣಿ ಯೋಜನೆಯನ್ನು ರದ್ದುಪಡಿಸಿ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಬೇಕು ಎನ್ನುವುದು ಸರ್ಕಾರಿ ನೌಕರರ ಬೇಡಿಕೆ ಆಗಿದೆ.

ಒಪಿಎಸ್ ಮರುಜಾರಿ ಸೇರಿ ಹಲವು ಬೇಡಿಕೆ
ಒಪಿಎಸ್ ಮರುಜಾರಿ ಸೇರಿ ಹಲವು ಬೇಡಿಕೆ

ನೌಕರರ ಬೇಡಿಕೆ ಮತ್ತು ನಿರೀಕ್ಷೆ ಕುರಿತು ಸ್ಪಷ್ಟೀಕರಣ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, 2022 ರಲ್ಲಿ ತ್ರಿ ಸದಸ್ಯರ ಏಳನೇ ವೇತನ ಆಯೋಗ ರಚನೆಯಾಗಿದ್ದು, 2023 ರ ಜೂನ್ ನಲ್ಲಿ ಆರು ತಿಂಗಳು ಮತ್ತು ನವೆಂಬರ್ ನಲ್ಲಿ 2024 ರ ಮಾರ್ಚ್ 15 ರ ವರೆಗೆ ವಿಸ್ತರಿಸಲಾಗಿದೆ. ರಾಜ್ಯ ಸರ್ಕಾರಿ ನೌಕರರ ವೇತನ ಮತ್ತು ಭತ್ಯೆಗಳ ಪರಿಷ್ಕರಣೆ ವಿಷಯವಾಗಿದೆ. ವೇತನ ಆಯೋಗವು ಸಲ್ಲಿಸುವ ಅಂತಿಮ ವರದಿಯನ್ನು ರಾಜ್ಯದ ಆರ್ಥಿಕ ಸ್ಥಿತಗತಿಗಳನ್ನು ಗಮನದಲ್ಲಿರಿಸಿಕೊಂಡು ಪರಿಶೀಲನೆ ಮಾಡಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ.

ರಾಜ್ಯದಲ್ಲಿ 5,09,384 ಸರ್ಕಾರಿ ನೌಕರರಿದ್ದಾರೆ, 2,41,260 ಹಳೆ ಪಿಂಚಣಿ, ರಾಷ್ಟ್ರೀಯ ಪಿಂಚಣಿ ಯೋಜನೆಗೆ ಒಳಪಟ್ಟಿರುವ 2,68,124 ನೌಕರರಿದ್ದಾರೆ. ರಾಜ್ಯದಲ್ಲಿ ಜಾರಿ ಇರುವ ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ರದ್ದುಪಡಿಸುವ ಸಂಬಂಧ ಈಗಾಗಲೇ ಹಳೆ ಪಿಂಚಣಿ ಯೋಜನೆಯನ್ನು ಮರುಜಾರಿ ಮಾಡಿರುವ ರಾಜ್ಯಗಳಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಿರುವ ಕುರಿತು ಕೈಗೊಂಡಿರುವ ಕ್ರಮಗಳ ಬಗ್ಗೆ ಅಧ್ಯಯನ ನಡೆಸಿ ವರದಿ ಸಲ್ಲಿಸಲು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಸಮಿತಿ‌ ರಚಿಸಲಾಗಿದೆ. ವರದಿ ನಂತರ ಕ್ರಮದ ಭರವಸೆ ನೀಡಿದ್ದಾರೆ.

ಹೊಸ ಪಿಂಚಣಿ ವ್ಯವಸ್ಥೆ ಬದಲಿಗೆ ಹಳೇ ಪಿಂಚಣಿ ವ್ಯವಸ್ಥೆ (ಒಪಿಎಸ್‌) ಮರು ಜಾರಿ ಮತ್ತು 7ನೇ ವೇತನ ಆಯೋಗದ ಲೆಕ್ಕದಲ್ಲಿ ವೇತನ ಹೆಚ್ಚಳದ ಬಗ್ಗೆ ನಿರೀಕ್ಷೆಯಿಟ್ಟುಕೊಂಡು ಬಜೆಟ್‌ ಮಂಡನೆಯನ್ನು ಎದುರು ನೋಡುತ್ತಿದ್ದ ರಾಜ್ಯ ಸರ್ಕಾರಿ ನೌಕರರಿಗೆ ಕಳೆದ ಬಾರಿ ನಿರಾಸೆ ಮೂಡಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಈ ಬಾರಿ ಬೇಡಿಕೆ ಈಡೇರಿಸುತ್ತಾರೆ ಎಂದು ಮತ್ತೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸರ್ಕಾರಿ ನೌಕರರಿಗೆ ಸಿದ್ದು ಜೋಳಿಗೆಯಲ್ಲಿ ಏನು ಸಿಗಲಿದೆ ಎನ್ನುವುದು ನಾಳೆ ಗೊತ್ತಾಗಲಿದೆ.

ಇದನ್ನೂಓದಿ:ಬಾಕಿ ಇರುವ 34 ಸಾವಿರ ಪೌರ ಕಾರ್ಮಿಕರನ್ನು ಖಾಯಂಗೊಳಿಸಿ: ಬಸವರಾಜ ಬೊಮ್ಮಾಯಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.