ETV Bharat / state

ರಷ್ಯಾ ಸೇನೆಯಲ್ಲಿ ಸಿಲುಕಿದ ಭಾರತೀಯರನ್ನು ಕರೆತರುವ ಪ್ರಯತ್ನ ನಡೆಯುತ್ತಿದೆ: ಚಿಕ್ಕೋಡಿಯಲ್ಲಿ ಎಸ್.ಜೈಶಂಕರ್

author img

By ETV Bharat Karnataka Team

Published : Feb 28, 2024, 3:39 PM IST

Updated : Feb 28, 2024, 7:23 PM IST

ಕೇಂದ್ರ ವಿದೇಶಾಂಗ ಸಚಿವ ಎಸ್​.ಜೈಶಂಕರ್​ ಚಿಕ್ಕೋಡಿಗೆ ಆಗಮಿಸಿದ್ದು, ಈ ಸಂದರ್ಭದಲ್ಲಿ ರಷ್ಯಾ ಸೇನೆಯಲ್ಲಿ ಸಿಲುಕಿರುವ ಭಾರತೀಯರನ್ನು ಸ್ವದೇಶಕ್ಕೆ ಕರೆತರುವ ವಿಚಾರವಾಗಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.

ಎಸ್​ ಜೈಶಂಕರ್
s jaishankar

ಕೇಂದ್ರ ಸಚಿವ ಎಸ್.ಜೈಶಂಕರ್ ಹೇಳಿಕೆ

ಚಿಕ್ಕೋಡಿ: ರಷ್ಯಾ ಸೇನೆಯಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರುವ ಪ್ರಯತ್ನ ನಡೆಯುತ್ತಿದೆ ಎಂದು ಕೇಂದ್ರ ವಿದೇಶಾಂಗ ಸಚಿವ ಎಸ್​.ಜೈಶಂಕರ್ ತಿಳಿಸಿದ್ದಾರೆ. ಚಿಕ್ಕೋಡಿ ಪಟ್ಟಣದಲ್ಲಿ ಇಂದು ಕೆ.ಎಲ್.ಇ ಸಂಸ್ಥೆಯ ಸಿ.ಬಿ.ಎಸ್.ಇ ಶಾಲೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಮಾಧ್ಯಮಗಳ ಜೊತೆ ಅವರು ಮಾತನಾಡಿದರು.

"ಈ ವಿಚಾರವಾಗಿ ವಿವಿಧ ರಾಜ್ಯಗಳ ಸಂಸದರೂ ಸಹ ನನಗೆ ಪತ್ರ ಬರೆದಿದ್ದಾರೆ. ದೇಶದ ಬೇರೆ ಬೇರೆ ರಾಜ್ಯಗಳಿಂದ ಯುವಕರಿಗೆ ತಪ್ಪು ಮಾಹಿತಿ ನೀಡಿ ರಷ್ಯಾ ದೇಶಕ್ಕೆ ಕರೆಸಿಕೊಂಡಿದ್ದಾರೆ. ಸುಳ್ಳು ಹೇಳಿ ಅಲ್ಲಿನ ಸೇನೆಗೆ ಸೇರಿಸಿಕೊಂಡಿದ್ದಾರೆ. ಈಗಾಗಲೇ ರಷ್ಯಾ ಸರ್ಕಾರದೊಂದಿಗೆ ಗಂಭೀರವಾಗಿ ಮಾತುಕತೆ ಮಾಡಲಾಗಿದೆ. ರಷ್ಯಾ ರಾಯಭಾರಿಯನ್ನು ಕರೆಸಿ ಮಾತುಕತೆಯಾಗಿದೆ. ಅಲ್ಲಿನ ವಿದೇಶಾಂಗ ಸಚಿವರೊಂದಿಗೂ ಮಾತುಕತೆ ನಡೆಸಿದ್ದೇವೆ" ಎಂದು ಹೇಳಿದರು.

"ಭಾರತೀಯ ನಾಗರಿಕರು ಬೇರೆಯವರ ಸೇನೆಯಲ್ಲಿ ಹೋರಾಡುವುದಿಲ್ಲ. ಇಂತಹ ಘಟನೆ ನಡೆದಿರುವುದು ತಪ್ಪು. ಈ ಬಗ್ಗೆ ನಿಗಾ ಇಡಲಾಗಿದೆ. ಕೆಲವರು ಈಗಾಗಲೇ ವಾಪಸ್ ಆಗಿದ್ದಾರೆ. ಇನ್ನು ಕೆಲವರು ಬರುವ ನಿರೀಕ್ಷೆಯಿದೆ. ಎಲ್ಲರನ್ನೂ ವಾಪಸ್ ಕರೆಸಿಕೊಳ್ಳುತ್ತೇವೆ. 6 ರಾಜ್ಯದ ಜನ ರಷ್ಯಾದಲ್ಲಿದ್ದಾರೆ" ಎಂದು ಮಾಹಿತಿ ನೀಡಿದರು.

ಹಳೆ ನೆನಪುಗಳ ಮೆಲುಕು: ಚಿಕ್ಕೋಡಿ ಪಟ್ಟಣದ ಹಳೆ ಉಪವಿಭಾಗ ಕಚೇರಿಗೆ ಜೈಶಂಕರ್ ಭೇಟಿ ನೀಡಿದ್ದು, ತಮ್ಮ ಹಳೆಯ ಕಚೇರಿಯಲ್ಲಿ ಕಳೆದ ದಿನಗಳನ್ನು ಮೆಲುಕು ಹಾಕಿದರು. 1977-78ರಲ್ಲಿ ಚಿಕ್ಕೋಡಿಯಲ್ಲಿ ಪ್ರೊಬೇಷನರಿ ಎಸಿಯಾಗಿದ್ದ ಅವರು ಹಳೆ ಕಚೇರಿಯ ಕುರ್ಚಿಯಲ್ಲಿ ಕುಳಿತು ಆ ದಿನಗಳನ್ನು ನೆನೆದರು. "ಕೆಲವು ಸಿಬ್ಬಂದಿ ನನಗೆ ಕನ್ನಡ ಕಲಿಸುತ್ತಿದ್ದರು. ಇದೇ ಕೊಠಡಿಯಲ್ಲಿ ನಾನು ಅಧಿಕಾರಿಯಾಗಿ ಕುಳಿತಿದ್ದೆ. ಇದಕ್ಕೆ ಕೆಲವು ತಿಂಗಳುಗಳ ಹಿಂದಷ್ಟೇ ನನಗೆ ಮದುವೆ ಆಗಿತ್ತು. ಪತ್ನಿ ಕೂಡ ಜೊತೆಗೆ ಬಂದಿದ್ದರು" ಎಂದು ಹೇಳಿದರು.

ಇದೇ ವೇಳೆ ಪುರಸಭೆ ಪೌರಕಾರ್ಮಿಕರೊಂದಿಗೆ ಜೈಶಂಕರ್ ಮಾತುಕತೆ ನಡೆಸಿದ ಅವರು, "ನಾನು 7 ತಿಂಗಳುಗಳ ಕಾಲ ಇಲ್ಲಿಯೇ ಕೆಲಸ ಮಾಡಿದ್ದೆ. ಚಿಕ್ಕೋಡಿ ಸಾಕಷ್ಟು ಬದಲಾವಣೆ ಕಂಡಿದೆ. ಇಲ್ಲಿದ್ದಾಗ ನನಗೆ 23 ವರ್ಷ. ಇದೀಗ 45 ವರ್ಷಗಳ ಬಳಿಕ ಮತ್ತೆ ಬಂದಿದ್ದೇನೆ. ಮೋದಿಯವರ ಆಡಳಿತದಲ್ಲಿ ದೇಶದಲ್ಲಿ ಸಾಕಷ್ಟು ಪ್ರಗತಿಯಾಗಿದ್ದು, ಚಿಕ್ಕೋಡಿಯಲ್ಲೂ ಅದು ಕಾಣಿಸುತ್ತಿದೆ" ಎಂದರು.

ಇದನ್ನೂ ಓದಿ: ಅನಾರೋಗ್ಯದ ಕಾರಣದಿಂದ ರಾಜ್ಯಸಭೆ ಮತದಾನದಲ್ಲಿ ಭಾಗವಹಿಸಿಲ್ಲ: ಶಾಸಕ ಹೆಬ್ಬಾರ್

Last Updated : Feb 28, 2024, 7:23 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.