ETV Bharat / state

ರಾಮೇಶ್ವರಂ ಕೆಫೆ ಬ್ಲಾಸ್ಟ್ ಕೇಸ್ ಎನ್ಐಎಗೆ ವಹಿಸಿ: ಸರ್ಕಾರಕ್ಕೆ ಆರ್ ಅಶೋಕ್ ಆಗ್ರಹ

author img

By ETV Bharat Karnataka Team

Published : Mar 4, 2024, 3:37 PM IST

ರಾಮೇಶ್ವರಂ ಕೆಫೆ ಸ್ಫೋಟ ಮತ್ತು ಪಾಕ್ ಜಿಂದಾಬಾದ್ ಪ್ರಕರಣಗಳನ್ನು ಸರ್ಕಾರ ಮುಚ್ಚಿ ಹಾಕುವ ಪ್ರಯತ್ನ ಮಾಡುತ್ತಿದೆ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ್ ದೂರಿದರು.

Etv Bharat
Etv Bharat

ಬೆಂಗಳೂರು: ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ ಆರೋಪ ಪ್ರಕರಣದ ಎಫ್ಎಸ್ಎಲ್ ವರದಿ ವಿಳಂಬ ಮಾಡುತ್ತಾ ಯಾರನ್ನೋ ರಕ್ಷಣೆ ಮಾಡಲಾಗುತ್ತಿದೆ. ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣದಲ್ಲಿಯೂ ಇವರು ಇಂತಹದ್ದೇ ಧೋರಣೆ ತಳೆಯುವುದರಲ್ಲಿ ಅನುಮಾನವೇ ಇಲ್ಲ. ಹಾಗಾಗಿ ಈ ಪ್ರಕರಣವನ್ನು ಎನ್ಐಎ ತನಿಖೆಗೆ ಕೊಡಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಆಗ್ರಹಿಸಿದ್ದಾರೆ.

ಜಾಲಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸರ್ಕಾರ ಏನನ್ನೋ ಮುಚ್ಚಿಡುವ ಪ್ರಯತ್ನ ಮಾಡುತ್ತಿದೆ. ಭಯೋತ್ಪಾದಕರು ಮಾಡಿದ್ದಾರೆ ಅಂತಾ ಗೊತ್ತಾದರೆ ಹಿನ್ನೆಡೆ ಆಗುತ್ತದೆ ಎಂಬ ಭಯ ಇದೆ. ಎಷ್ಟು ದಿನ ಆಗುತ್ತದೋ ಅಷ್ಟು ದಿನ ಮುಚ್ಚಿ ಹಾಕುವ ಪ್ರಯತ್ನ ಮಾಡುತ್ತಿದ್ದಾರೆ. ಖಾಸಗಿ ರಿಪೋರ್ಟ್​​ನಲ್ಲಿ ಇದು ದೃಢವಾಗಿದೆ. ಈಗಾಗಲೇ ಸರ್ಕಾರಕ್ಕೆ ವರದಿ ಬಂದಿದೆ. ಯಾರನ್ನೋ ಕಾಪಾಡಲು ಸರ್ಕಾರ ಈ ಕೆಲಸ ಮಾಡುತ್ತಿದೆ. ಡಿಸಿಎಂ ಡಿಕೆ ಶಿವಕುಮಾರ್ ಅವರು ಆ ಘಟನೆ ನಡೆದೇ ಇಲ್ಲ, ರಾಮೇಶ್ವರ ಬಾಂಬ್ ಬ್ಲಾಸ್ಟ್ ಪ್ರಕರಣ ವ್ಯವಹಾರಿಕ ಸಂಘರ್ಷ ಅಂದರು. ಮಂಗಳೂರು ಬಾಂಬ್ ಬ್ಲಾಸ್ಟ್​ ಮಾಡಿದವರನ್ನು ಬ್ರದರ್ಸ್ ಅಂದರು. ಅತಿಯಾದ ಓಲೈಕೆ ಮೂಲಕ ಬಹುಸಂಖ್ಯಾತರ ವಿರೋಧ ಕಟ್ಟಿಕೊಳ್ಳುತ್ತಿದೆ. ಕಾಂಗ್ರೆಸ್ ನೀತಿ ಸರಿಯಲ್ಲ ಎಂದು ಕಿಡಿಕಾರಿದರು.

ಪಾಕಿಸ್ತಾನ ಜಿಂದಾಬಾದ್ ಘೋಷಣೆ ವರದಿಯನ್ನೇ ತಿರುಚಿದವರು, ಬಾಂಬ್ ಬ್ಲಾಸ್ಟ್ ಕೇಸ್​ನ ವರದಿ ತಿರುಚಲ್ವಾ? ಬಾಂಬ್ ಇಟ್ಟವರು ಆಧುನಿಕ ತಂತ್ರಜ್ಞಾನ ಬಳಸಿ ಬ್ಲಾಸ್ಟ್ ಮಾಡಿದ್ದಾರೆ. ಸಾಮ್ಯತೆ ಒಂದೇ ರೀತಿ ಇದೆ, ಎನ್ಐಎ ರಾಷ್ಟ್ರೀಯ ಮಟ್ಟದಲ್ಲಿ ತನಿಖೆ ಮಾಡ್ತಾರೆ. ಕರ್ನಾಟಕದ ಜನತೆ ನೆಮ್ಮದಿಯಿಂದ ಜೀವಿಸುವಂತೆ ಆಗಬೇಕು. ಬೆಂಗಳೂರನ್ನು ಬಾಂಬ್ ಬೆಂಗಳೂರು ಮಾಡಬಾರದು. ಪ್ರಕರಣ ಮುಚ್ಚಿ ಹಾಕುವ ಸಂಬಂಧ ಪೊಲೀಸ್ ಇಲಾಖೆಗೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ. ರಾಜ್ಯದ ಪ್ರಜೆಯಾಗಿ ಇದೆಲ್ಲಾ ನಮ್ಮ ಮನಸ್ಸಿಗೆ ಬೇಸರ ತರಿಸಿದೆ. ಎರಡೂ ಪ್ರಕರಣಗಳೂ ನಿಜವಾದರೆ, ಸರ್ಕಾರ ವಿಸರ್ಜಿಸುತ್ತಾರಾ? ಎರಡೂ ಕಡೆ ನಡೆದಿರೋದು ಭಯೋತ್ಪಾದನಾ ಘಟನೆ. ಆದರೆ, ಸರ್ಕಾರದ ಎಲ್ಲರೂ ರಾಜೀನಾಮೆ ಕೊಡ್ತಾರಾ ಎಂದು ಪ್ರಶ್ನಿಸಿದರು.

ಕಲಬುರಗಿ ಪ್ರವಾಸ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಅಶೋಕ್, ಕಲಬುರಗಿಯಲ್ಲಿ ನಮ್ಮ ಇಬ್ಬರು ಕಾರ್ಯಕರ್ತರ ಹತ್ಯೆಯಾಗಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಹತ್ಯೆ ಹೆಚ್ಚಾಗಿದೆ. ಸಿದ್ದರಾಮಯ್ಯ ಸರ್ಕಾರ ಬಂದ ಮೇಲೆ 22ಕ್ಕೂ ಹೆಚ್ಚು ಹತ್ಯೆಯಾಗಿದೆ. ಶಿವಾಜಿನಗರದಲ್ಲಿ ರುದ್ರೇಶ್ ಹತ್ಯೆ ಮಾಡಿದವರನ್ನ ಮೊನ್ನೆ ಹಿಡಿದಿದ್ದಾರೆ. ಕಲಬುರಗಿಗೆ ತೆರಳಿ ಅವರ ಜೊತೆ ನಾವಿದ್ದೇವೆ ಅಂತ ತಿಳಿಸುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ: 9 ನಿಮಿಷದೊಳಗೆ ರಾಮೇಶ್ವರಂ ಕೆಫೆ ಪ್ರವೇಶಿಸಿ ನಿರ್ಗಮಿಸಿದ್ದ ಶಂಕಿತ ವ್ಯಕ್ತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.