ETV Bharat / state

'ಟಿಕೆಟ್ ಹಂಚಿಕೆಯಲ್ಲಿ ರಾಜ್ಯ ನಾಯಕರ ಪಾತ್ರವಿಲ್ಲ, ಹೈಕಮಾಂಡ್ ನಿರ್ಧಾರ': ಆರ್.ಅಶೋಕ್ - R Ashok

author img

By ETV Bharat Karnataka Team

Published : May 12, 2024, 1:15 PM IST

ವಿಧಾನ ಪರಿಷತ್​ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ, ಟಿಕೆಟ್ ಹಂಚಿಕೆ ವಿಚಾರದ ಕುರಿತು ಆರ್​.ಅಶೋಕ್​ ಪ್ರತಿಕ್ರಿಯಿಸಿದ್ದಾರೆ.

R Ashok
ಪ್ರತಿಪಕ್ಷ ನಾಯಕ ಆರ್. ಅಶೋಕ್ (ETV Bharat)

ಪ್ರತಿಪಕ್ಷ ನಾಯಕ ಆರ್. ಅಶೋಕ್ (ETV Bharat)

ಬೆಂಗಳೂರು: ಜೂನ್ 3ರಂದು ನಡೆಯಲಿರುವ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳ ವಿಧಾನ ಪರಿಷತ್​ ಚುನಾವಣೆಗೆ ಬಿಜೆಪಿಯಿಂದ ಬಿಡುಗಡೆಯಾಗಿರುವ ಅಭ್ಯರ್ಥಿಗಳ ಪಟ್ಟಿಯಲ್ಲಿ, ಟಿಕೆಟ್ ಕೈತಪ್ಪಿದ ಕೆಲವು ಆಕಾಂಕ್ಷಿಗಳಿಗೆ ಅಸಮಾಧಾನ ಇರುವುದು ಸಹಜ. ಆದರೆ ಟಿಕೆಟ್ ಹಂಚಿಕೆ ವಿಚಾರದಲ್ಲಿ ರಾಜ್ಯ ನಾಯಕರ ಪಾತ್ರವಿಲ್ಲ. ಎಲ್ಲವನ್ನೂ ಹೈಕಮಾಂಡ್ ನಾಯಕರೇ ನಿರ್ಧರಿಸಿ ಹೆಸರು ಪ್ರಕಟಿಸಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ತಿಳಿಸಿದರು.

ಆರ್.ಟಿ.ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಿಷತ್ ಚುನಾವಣೆಗೆ ಅಭ್ಯರ್ಥಿಗಳ ಹೆಸರು ಪ್ರಕಟ ವಿಚಾರದಲ್ಲಿ ಸಾಕಷ್ಟು ಚರ್ಚೆ ನಡೆದಿದೆ. ಒಂದು ತಿಂಗಳ ಹಿಂದೆಯೇ ಹೈಕಮಾಂಡ್ ನಾಯಕರು ರಾಜ್ಯ ಘಟಕದಿಂದ ಹೆಸರು ತರಿಸಿಕೊಂಡಿದ್ದರು. ಜೆಡಿಎಸ್ ಜತೆ ಮೈತ್ರಿ ನಿರ್ಧಾರ ಆಗಿತ್ತು. ಅದರಂತೆ ನಮ್ಮ ಪಾಲಿನ ಐದು ಕ್ಷೇತ್ರಗಳಿಗೆ ಪ್ರತೀ ಕ್ಷೇತ್ರದಿಂದ ಮೂರು ಮೂರು ಹೆಸರು ಕಳಿಸಲು ಹೈಕಮಾಂಡ್ ತಿಳಿಸಿತ್ತು. ಅದರಂತೆ ಹೆಸರು ಕಳಿಸಲಾಗಿತ್ತು ಎಂದರು.

ಕೆಲವು ಆಕಾಂಕ್ಷಿಗಳಿಗೆ ಟಿಕೆಟ್ ಕೈತಪ್ಪಿದೆ. ಟಿಕೆಟ್ ಕೊಡುವ ನಿರ್ಧಾರ ಆಗಿದ್ದೆಲ್ಲವೂ ಹೈಕಮಾಂಡ್ ಮಟ್ಟದಲ್ಲೇ. ಟಿಕೆಟ್ ಘೋಷಣೆ ವಿಚಾರದಲ್ಲಿ ರಾಜ್ಯ ನಾಯಕರ ಪಾತ್ರ ಇಲ್ಲ. ಎಲ್ಲವೂ ಹೈಕಮಾಂಡ್ ನಿರ್ಧಾರ ಮಾಡಿ ಘೋಷಣೆ ಮಾಡಿದ್ದಾರೆ ಎಂದು ಸ್ಪಷ್ಟನೆ ನೀಡಿದರು.

ಸದ್ಯ ಮಿತ್ರ ಪಕ್ಷ ಜೆಡಿಎಸ್ ಸಂಕಷ್ಟಕ್ಕೆ ಸಿಲುಕಿದೆ. ಜೆಡಿಎಸ್ ಹೋರಾಟಕ್ಕೆ ನಮ್ಮ ಬೆಂಬಲ ಇದೆ. ಪೆನ್​​ ಡ್ರೈವ್ ಪ್ರಕರಣದಲ್ಲಿ ಸಿಬಿಐ ತನಿಖೆ ಆಗಬೇಕು. ಈ ಪ್ರಕರಣದಲ್ಲಿ ಕೆಲವರನ್ನು ಅನಾವಶ್ಯಕವಾಗಿ ಸಿಕ್ಕಿಸಲಾಗುತ್ತಿದೆ ಎಂದು ಇದೇ ವೇಳೆ ಅಸಮಾಧಾನ ಹೊರಹಾಕಿದರು.

ಅಮಿತ್ ಶಾ ಪ್ರಧಾನಿ ಆಗ್ತಾರೆ ಎಂಬ ಅರವಿಂದ್ ಕೇಜ್ರಿವಾಲ್ ಹೇಳಿಕೆಗೆ, ಬಿಜೆಪಿಯಲ್ಲಿ 75 ವರ್ಷಕ್ಕೆ ನಿವೃತ್ತಿ ಎನ್ನುವ ನಿಯಮವಿಲ್ಲ. ಬಿಜೆಪಿಯ ಕಾರ್ಯಕಾರಿ ಮಂಡಳಿ ಅಂತಹ ಯಾವುದೇ ನಿರ್ಧಾರ ಮಾಡಿಲ್ಲ. ಅರವಿಂದ್ ಕೇಜ್ರಿವಾಲ್ ಈಗಷ್ಟೇ ಜೈಲಿನಿಂದ ಹೊಸ ಬಂದಿದ್ದಾರೆ. ಅವರು ರೆಸ್ಟ್ ತೆಗೆದುಕೊಳ್ಳಲಿ, ಮತ್ತೆ ಜೈಲಿಗೆ ಹೋಗಬೇಕು. ಅವರು ಹೊರಗೆ ಬಂದ ಕೂಡಲೇ ಸುಳ್ಳು ಹೇಳಲು ಶುರುಮಾಡಿದ್ದಾರೆ. ಕೇಜ್ರಿವಾಲ್ ಜೈಲಿನಲ್ಲಿ ಕೈದಿಗಳ ಜತೆ ಇದ್ದು ಮಾನಸಿಕ ಸ್ಥಿಮಿತತೆ ಕಳೆದುಕೊಂಡಿದ್ದಾರೆ. ಪ್ರಧಾನಿಯಾಗಿ ಮೋದಿಯವರು ಮುಂದುವರೆಯುತ್ತಾರೆ. ಮುಂದಿನ ಐದು ವರ್ಷ‌ ಪೂರ್ಣಾವಧಿಗೆ ಮೋದಿ ಅವರೇ ಪ್ರಧಾನಿ ಆಗಿರುತ್ತಾರೆ. ಇದರಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಪರಿಷತ್ ಚುನಾವಣೆಗೆ ಬಿಜೆಪಿಯ 5 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: ಒಂದು ಸ್ಥಾನ ಜೆಡಿಎಸ್​​ಗೆ - BJP List for Council Election

ಈಶಾನ್ಯ ಪದವೀಧರ ಕ್ಷೇತ್ರದಿಂದ ಮಾಜಿ ವಿಧಾನಪರಿಷತ್‌ ಸದಸ್ಯ ಅಮರನಾಥ ಪಾಟೀಲ್‌, ಆಗ್ನೇಯ ಪದವೀಧರ ಕ್ಷೇತ್ರದಿಂದ ಹಾಲಿ ಸದಸ್ಯ ವೈ.ಎ.ನಾರಾಯಣಸ್ವಾಮಿ, ನೈರುತ್ಯ ಪದವೀಧರ ಕ್ಷೇತ್ರದಿಂದ ಶಿವಮೊಗ್ಗದ ಖ್ಯಾತ ವೈದ್ಯ ಡಾ.ಧನಂಜಯ ಸರ್ಜಿ, ಬೆಂಗಳೂರು ಪದವೀಧರ ಕ್ಷೇತ್ರದಿಂದ ಹಾಲಿ ಅಭ್ಯರ್ಥಿ ಎ.ದೇವೇಗೌಡ, ದಕ್ಷಿಣ ಶಿಕ್ಷಕರ ಕ್ಷೇತ್ರದಿ‌ಂದ ಇ.ಸಿ.ನಿಂಗರಾಜು ಅವರನ್ನು ಪರಿಷತ್​​ ಚುನಾವಣೆಗೆ ಕಣಕ್ಕಿಳಿಸಲಾಗಿದೆ.

ಇದನ್ನೂ ಓದಿ: ವಿಧಾನ ಪರಿಷತ್ ಚುನಾವಣೆ: ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಡಾ.ಧನಂಜಯ್ ಸರ್ಜಿ ಆಯ್ಕೆ - Legislative Council Election

ETV Bharat Logo

Copyright © 2024 Ushodaya Enterprises Pvt. Ltd., All Rights Reserved.