ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ದಕ್ಷಿಣ ವಲಯ ವ್ಯಾಪ್ತಿಯಲ್ಲಿ ಭಾನುವಾರ ಘನತ್ಯಾಜ್ಯ ನಿರ್ವಹಣೆ ಕುರಿತಂತೆ ಸಾರ್ವಜನಿಕ ಸ್ಥಳಗಳಲ್ಲಿ ಜಾಗೃತಿ ಮೂಡಿಸಲಾಯಿತು.
ಘನತ್ಯಾಜ್ಯ ನಿರ್ವಹಣೆ ಕುರಿತಂತೆ ದಕ್ಷಿಣ ವಲಯದ ವಿವಿಧ ಸ್ಥಳಗಳಲ್ಲಿ ತ್ಯಾಜ್ಯ ವಿಂಗಡಣೆ, ಪರಿಸರ ಸ್ವಚ್ಛತೆ ಹಾಗೂ ಏಕ ಬಳಕೆ ಪ್ಲಾಸ್ಟಿಕ್ ನಿಷೇಧದ ಕುರಿತಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಂಬಂಧ ದಕ್ಷಿಣ ವಲಯ ಆಯುಕ್ತೆ ವಿನೋತ್ ಪ್ರಿಯಾ, ಜಂಟಿ ಆಯುಕ್ತ ಶಿವಕುಮಾರ್ ಹಾಗೂ ಮುಖ್ಯ ಅಭಿಯಂತರ ಎಸ್ ವಿ ರಾಜೇಶ್ ನೇತೃತ್ವದಲ್ಲಿ ಸ್ಥಳೀಯ ಮಟ್ಟದಲ್ಲಿ ಜಾಗೃತಿ ಕಾರ್ಯಕ್ರಮ ನಡೆಯಿತು.
ದಕ್ಷಿಣ ವಲಯದಲ್ಲಿ ಘನತ್ಯಾಜ್ಯ ವಿಲೇವಾರಿ, ಹಸಿ ಕಸ, ಒಣ ಕಸ ಹಾಗೂ ಸ್ಯಾನಿಟರಿ ಕಸ ವಿಂಗಡಣೆ, ಆರಂಭದಲ್ಲಿ ತ್ಯಾಜ್ಯವನ್ನು ಸಂಸ್ಕರಿಸುವ, ಏಕ ಬಳಕೆ ಪ್ಲಾಸ್ಟಿಕ್ ಬಳಕೆ ನಿಷೇಧ, ರಸ್ತೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಬಿಸಾಡದಿರುವುದು. ಖಾಲಿ ನಿವೇಶನಗಳಲ್ಲಿ ಕಸ ಹಾಕದಿರುವುದು ಸೇರಿದಂತೆ ಇನ್ನಿತರ ವಿಷಯಗಳ ಕುರಿತು ನಾಗರಿಕರಲ್ಲಿ ಜಾಗೃತಿ ಮೂಡಿಸಲಾಯಿತು.
ಪ್ರತಿನಿತ್ಯ ಆಟೋ ಟಿಪ್ಪರ್ಗಳ ಮೂಲಕ ಮನೆ ಮನೆಗೆ ತೆರಳಿ ಹಸಿ ಕಸ ಸಂಗ್ರಹಿಸಲಾಗುತ್ತದೆ. ಇನ್ನು ವಾರಕ್ಕೆ ಎರಡು ದಿನಗಳ ಕಾಲ ಒಣ ಕಸವನ್ನು ಸಂಗ್ರಹಿಸಲಾಗುತ್ತದೆ. ಎಲ್ಲಾ ನಾಗರಿಕರು ರಸ್ತೆ, ಬೀದಿ ಬದಿ ಹಾಗೂ ಖಾಲಿ ನಿವೇಶನಗಳಲ್ಲಿ ಕಸವನ್ನು ಬಿಸಾಡದೆ ಆಟೋ ಟಿಪ್ಪರ್ ಗಳಿಗೆ ಕಸವನ್ನು ನೀಡಿ ನಗರವನ್ನು ಸ್ವಚ್ಛ ಸುಂದರ ನಗರವನ್ನಾಗಿಸುವ ಪಣ ತೊಡಬೇಕು ಎಂದು ಅರಿವು ಮೂಡಿಸಲಾಯಿತು.
ಘನತ್ಯಾಜ್ಯ ಸಮರ್ಪಕ ನಿರ್ವಹಣೆ ಕುರಿತು ಭಿತ್ತಿ ಪತ್ರ ಹಂಚಲಾಯಿತು. ರಸ್ತೆಯುದ್ದಕ್ಕೂ ಜಾಗೃತಿ ಘೋಷಣೆಗಳನ್ನು ಕೂಗುತ್ತ ನಾಗರಿಕರಲ್ಲಿ ಅರಿವು ಮೂಡಿಸಲಾಯಿತು.
ಬೀದಿ ನಾಟಕ ಆಯೋಜನೆ : ಘನತ್ಯಾಜ್ಯ ನಿರ್ವಹಣೆ ಕುರಿತಂತೆ ವಿವಿಧ ಸ್ಥಳಗಳಲ್ಲಿ ಬೀದಿ ನಾಟಕಗಳನ್ನು ಆಯೋಜಿಸಿ ನಾಟಕದ ಮೂಲಕ ಕಸ ವಿಂಗಡಣೆ, ಪ್ಲಾಸ್ಟಿಕ್ ನಿಷೇಧ ಸೇರಿದಂತೆ ಇನ್ನಿತರ ವಿಚಾರಗಳ ಕುರಿತು ನಾಗರಿಕರಲ್ಲಿ ಅರಿವು ಮೂಡಿಸಲಾಯಿತು.
ಬಟ್ಟೆ ಬ್ಯಾಗ್ ವಿತರಿಸಿ ಜಾಗೃತಿ: ನಗರದ ಮಡಿವಾಳ ಹಾಗೂ ಸಾರಕ್ಕಿ ಮಾರುಕಟ್ಟೆಗೆ ಬಂದಂತಹ ನಾಗರಿಕರಿಗೆ, ಒಮ್ಮೆ ಬಳಸುವ ಪ್ಲಾಸ್ಟಿಕ್ ಅನ್ನು ಸಂಪೂರ್ಣ ನಿಷೇಧಿಸಲಾಗಿದೆ. ಪ್ಲಾಸ್ಟಿಕ್ ಬಳಕೆ ಪರಿಸರಕ್ಕೆ ಮಾರಕವಾಗಿದ್ದು, ಮುಂದಿನ ದಿನಗಳಲ್ಲಿ ಹೆಚ್ಚು ದುಷ್ಪರಿಣಾಮ ಬೀರಲಿದೆ.
ಆದ್ದರಿಂದ ಬಟ್ಟೆಯಿಂದ, ನಾರಿನಿಂದ ಹಾಗೂ ಪೇಪರ್ನಿಂದ ತಯಾರಿಸಿದ ಬ್ಯಾಗ್ಗಳನ್ನು ಮಾತ್ರ ಬಳಸಲು ಅರಿವು ಮೂಡಿಸಲಾಯಿತು. ಜೊತೆಗೆ ಪಾಲಿಕೆಯಿಂದಲೇ ಬಟ್ಟೆಯಿಂದ ತಯಾರಿಸಿರುವ ಬ್ಯಾಗ್ಗಳನ್ನು ನಾಗರಿಕರಿಗೆ ವಿತರಿಸಿ ಇನ್ನು ಮುಂದೆ ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್ ಕೈಚೀಲಗಳನ್ನು ಬಳಸದಂತೆ ಅರಿವು ಮೂಡಿಸಲಾಯಿತು.
ಜಾಗೃತಿ ಕಾರ್ಯದಲ್ಲಿ ಘನತ್ಯಾಜ್ಯ ವಿಭಾಗದ ಅಧಿಕಾರಿಗಳು, ಕಿರಿಯ ಆರೋಗ್ಯ ಪರಿವೀಕ್ಷಕರು, ಲಿಂಕ್ ವರ್ಕರ್ಸ್, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಪ್ರತಿನಿಧಿಗಳು, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಮಾರ್ಷಲ್ ಗಳು, ವಿದ್ಯಾರ್ಥಿಗಳು ಸೇರಿದಂತೆ ಇನ್ನಿತರರು ಹಾಜರಿದ್ದರು.
ಇದನ್ನೂ ಓದಿ:ಲೋಕಸಭಾ ಚುನಾವಣೆ - 2024: ಪೊಲೀಸರು, ಸಿಐಎಸ್ಎಫ್ ಪಡೆಗಳಿಂದ ಪಥಸಂಚಲನ