ಬೆಂಗಳೂರು/ನವದೆಹಲಿ: ಕರ್ನಾಟಕದ ಪಾಲಿನ ನ್ಯಾಯಯುತ ಅನುದಾನ ಬಿಡುಗಡೆಗೆ ಆಗ್ರಹಿಸಿ ರಾಜ್ಯದ ಕಾಂಗ್ರೆಸ್ ನಾಯಕರು ಫೆ.7ರಂದು ದೆಹಲಿಯ ಜಂತರ್ ಮಂಥರ್ನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಿದ್ದು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರತಿಭಟನೆ ನಡೆಯುವ ಸ್ಥಳಕ್ಕೆ ಸಂಸದ ಡಿ.ಕೆ.ಸುರೇಶ್ ಜೊತೆ ಸೋಮವಾರ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ''ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಕೇಂದ್ರದ ಗಮನ ಸೆಳೆಯಲು ಜಂತರ್ ಮಂಥರ್ನಲ್ಲಿ ಬುಧವಾರ ಪ್ರತಿಭಟನೆ ನಡೆಸುತ್ತೇವೆ. ಜನ ನಮಗೆ ಮತ ಹಾಕಿ ಅಧಿಕಾರಕ್ಕೆ ತಂದಿದ್ದಾರೆ. ನಾವು ಸಮಾಜದ ಋಣ ತೀರಿಸಬೇಕು ಇದು ರಾಜ್ಯ ಸರ್ಕಾರ ನಡೆಸುತ್ತಿರುವ ಹೋರಾಟ, ಕಾಂಗ್ರೆಸ್ ಪಕ್ಷದಲ್ಲ'' ಎಂದು ಸ್ಪಷ್ಟಪಡಿಸಿದರು.
''ಬಿಜೆಪಿ ಡಬಲ್ ಇಂಜಿನ್ ಸರ್ಕಾರ ನಮಗೆ ನ್ಯಾಯ ಒದಗಿಸಲಿದೆ ಎಂದು ಭಾವಿಸಿದ್ದೆವು. ಯಡಿಯೂರಪ್ಪ ಸಿಎಂ ಆಗಿದ್ದಾಗ ಒಮ್ಮೆ ತುಮಕೂರಿನ ಸಾರ್ವಜನಿಕ ಕಾರ್ಯಕ್ರಮದ ವೇದಿಕೆಯಲ್ಲಿ ಪ್ರಧಾನಮಂತ್ರಿಗಳ ಮುಂದೆ ಮನವಿ ಮಾಡಿದ್ದು ಬಿಟ್ಟರೆ ಒಂದು ದಿನವೂ ಕೇಂದ್ರದ ಜೊತೆ ರಾಜ್ಯದ ಹಿತದ ಬಗ್ಗೆ ಚರ್ಚೆ ಮಾಡಿಲ್ಲ'' ಎಂದರು.
![preparation-for-congress-protest-led-by-cm-siddaramaiah-in-delhi](https://etvbharatimages.akamaized.net/etvbharat/prod-images/05-02-2024/congprotestaganstmodigovt_05022024214434_0502f_1707149674_846.jpg)
''ನಮ್ಮ ಎಲ್ಲಾ ಶಾಸಕರು, ಪರಿಷತ್ ಸದಸ್ಯರು, ಲೋಕಸಭೆ ಹಾಗೂ ರಾಜ್ಯಸಭೆ ಸದಸ್ಯರು ಈ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ. ಮೂರ್ನಾಲ್ಕು ಜನ ಮಾತ್ರ ಆರೋಗ್ಯದ ಕಾರಣದಿಂದಾಗಿ ಮನವಿ ಮಾಡಿ ಗೈರಾಗಬಹುದು. ಉಳಿದಂತೆ ಸರ್ಕಾರದ ಜೊತೆಗೆ ಇರುವ ಪಕ್ಷೇತರ ಶಾಸಕರು ಸೇರಿದಂತೆ ಎಲ್ಲಾ ನಾಯಕರು ಪ್ರತಿಭಟನೆಯಲ್ಲಿ ಇರಲಿದ್ದಾರೆ'' ಎಂದು ಡಿಸಿಎಂ ವಿವರಿಸಿದರು.
ಬೊಮ್ಮಾಯಿಗೆ ಡಿಕೆಶಿ ತಿರುಗೇಟು: ಕಾಂಗ್ರೆಸ್ ಸರ್ಕಾರದ ಪ್ರತಿಭಟನೆ ರಾಜಕೀಯ ಸ್ಟಂಟ್ ಎಂಬ ಮಾಜಿ ಮುಖ್ಯಮಂತ್ರಿ ಬೊಮ್ಮಾಯಿ ನೀಡಿದ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಡಿಸಿಎಂ, ''ನಮ್ಮಲ್ಲಿ ಯಾರೂ ಸಿನಿಮಾ ನಿರ್ದೇಶಕರು ಹಾಗೂ ನಿರ್ಮಾಪಕರು ಇಲ್ಲ'' ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.
''ಬೊಮ್ಮಾಯಿ ಅವರಿಗೆ ಒಂದು ಸರಳ ಪ್ರಶ್ನೆ ಕೇಳುತ್ತೇನೆ. ಅವರ ಬಜೆಟ್ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ ಘೋಷಣೆ ಮಾಡಿದರು. ಅವರು ಯಾಕೆ ಈ ಘೋಷಣೆ ಮಾಡಿದರು? ಕೇಂದ್ರ ಬಜೆಟ್ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 5,300 ಕೋಟಿ ಘೋಷಣೆ ಮಾಡಿದ್ದಕ್ಕೆ ಇವರು ತಮ್ಮ ಬಜೆಟ್ನಲ್ಲಿ ಘೋಷಣೆ ಮಾಡಿದ್ದರು. ಅಂದಮೇಲೆ ಹಣ ಕೊಡಿಸುವುದು ಅವರ ಜವಾಬ್ದಾರಿ. ರಾಜ್ಯಕ್ಕೆ ಬರಬೇಕಾದ ಹಣ ಕೇಳುವುದು ರಾಜಕೀಯ ಸ್ಟಂಟ್ ಆಗುತ್ತದೆಯೇ? ರಾಜ್ಯದ ಪಾಲನ್ನು ಕೇಳಲು ನಿಮಗೆ ಬಾಯಿ ಇಲ್ಲವಾದರೆ ನಮಗೂ ಇರುವುದಿಲ್ಲವೇ?'' ಎಂದು ಡಿಕೆಶಿ ಪ್ರಶ್ನೆ ಮಾಡಿದರು.
''ಬರದ ವಿಚಾರವಾಗಿ ಕಂದಾಯ ಹಾಗೂ ಕೃಷಿ ಸಚಿವರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಲ್ಲವೇ? ಮುಖ್ಯಮಂತ್ರಿಗಳು ಪ್ರಧಾನಮಂತ್ರಿಗಳನ್ನು ಭೇಟಿ ಮಾಡಿ ಮನವಿ ಮಾಡಿಲ್ಲವೇ? ಸಭೆ ಮಾಡಿ ಪರಿಹಾರ ನೀಡುತ್ತೇವೆ ಎಂದರು. ಆದರೂ ನೀಡಲಿಲ್ಲ. ನಾವು ಅವರ ಪರಿಹಾರ ಮೊತ್ತ ಕಾಯದೆ 35 ಲಕ್ಷ ರೈತರಿಗೆ 2 ಸಾವಿರ ಪರಿಹಾರ ನೀಡಿದ್ದೇವೆ'' ಎಂದು ತಿರುಗೇಟು ನೀಡಿದರು.