ETV Bharat / state

ದೂರು ನೀಡಲು ಬಂದ ಮಹಿಳೆಗೆ ಅಸಭ್ಯ ಸಂದೇಶ ಕಳುಹಿಸಿ ಕಿರುಕುಳ: ಹೆಡ್ ಕಾನ್​ಸ್ಟೆಬಲ್ ಸಸ್ಪೆಂಡ್

author img

By ETV Bharat Karnataka Team

Published : Feb 9, 2024, 4:04 PM IST

ಮಹಿಳೆಗೆ ಅಸಭ್ಯ ಸಂದೇಶ ಕಳುಹಿಸಿ ಕಿರುಕುಳ ನೀಡಿದ ಆರೋಪದಡಿ ಹೆಡ್ ಕಾನ್​ಸ್ಟೆಬಲ್ ಅಮಾನತಾಗಿದ್ದಾರೆ.

head-constable-suspended-for-harassment-to-woman-complainant
ದೂರು ನೀಡಲು ಬಂದ ಮಹಿಳೆಗೆ ಅಸಭ್ಯ ಸಂದೇಶ ಕಳುಹಿಸಿ ಕಿರುಕುಳ: ಹೆಡ್ ಕಾನ್‌ಸ್ಟೇಬಲ್ ಸಸ್ಪೆಂಡ್

ಮಂಗಳೂರು: ದೂರು ನೀಡಲು ಬಂದ ಮಹಿಳೆಯ ಮೊಬೈಲ್​​ ಫೋನ್​​ಗೆ ಅಸಭ್ಯ ಸಂದೇಶ ಕಳುಹಿಸಿ ಕಿರುಕುಳ ನೀಡಿದ ಆರೋಪದ ಮೇಲೆ ಕಾವೂರು ಪೊಲೀಸ್ ಠಾಣೆಯ ಹೆಡ್ ಕಾನ್​ಸ್ಟೆಬಲ್ ಸಂತೋಷ್ ಸಿ.ಜೆ. ಎಂಬವರನ್ನು ಮಂಗಳೂರು ಪೊಲೀಸ್ ಕಮಿಷನರ್ ಅಮಾನತುಗೊಳಿಸಿದ್ದಾರೆ.

ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮಹಿಳೆ ಕಾವೂರು ಠಾಣೆಗೆ ದೂರು ನೀಡಲು ಬಂದಿದ್ದಾಗ ಹೆಡ್ ಕಾನ್​ಸ್ಟೆಬಲ್ ಸಂತೋಷ್‌ ಆಕೆಯ ಮೊಬೈಲ್ ನಂಬ‌ರ್ ಪಡೆದುಕೊಂಡಿದ್ದ. ಆ ಬಳಿಕದಿಂದ ಆಕೆಗೆ ಅಸಭ್ಯವಾದ ಸಂದೇಶ ಕಳುಹಿಸಿ ಮಾನಸಿಕ ಕಿರುಕುಳ ನೀಡುತ್ತಿದ್ದ. ಈ ಬಗ್ಗೆ ಯಾರಲ್ಲಾದರೂ ಹೇಳಿದರೆ ಜೀವನ ಪರ್ಯಂತ ಕೊರಗುವಂತೆ ಮಾಡುತ್ತೇನೆ. ನಿನ್ನ ಇಡೀ ಕುಟುಂಬವನ್ನೇ ಮುಗಿಸುತ್ತೇನೆ ಎಂದು ಬೆದರಿಕೆ ಹಾಕಿದ್ದ ಎಂದು ಮಹಿಳೆ ದೂರಿದ್ದರು.

ಸಂತೋಷ್ ಬೆದರಿಕೆ, ಕಿರುಕುಳದಿಂದ ಬೇಸತ್ತ ಮಹಿಳೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಅವರನ್ನು ಭೇಟಿಯಾಗಿ ದೂರು ನೀಡಿದ್ದರು. ಆತ ಬೆದರಿಕೆ ಒಡ್ಡಿರುವ ಆಡಿಯೋ ಸಂದೇಶವನ್ನು ಕಮಿಷನರ್ ಅವರಿಗೆ ನೀಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಕಮಿಷನ‌ರ್, ಹೆಡ್ ಕಾನ್​ಸ್ಟೆಬಲ್ ಸಂತೋಷ್‌ ಅಮಾನತುಗೊಳಿಸಿ ಆದೇಶಿಸಿದ್ದಾರೆ. ಅಲ್ಲದೆ ತನಿಖೆ ನಡೆಸಿ ವರದಿ ನೀಡುವಂತೆ ಮಂಗಳೂರು ಉತ್ತರ ವಿಭಾಗದ ಎಸಿಪಿಗೆ ಸೂಚಿಸಿದ್ದಾರೆ.

ಇದನ್ನೂ ಓದಿ: ಅಕ್ರಮ ಮರಳುಗಾರಿಕೆಗೆ ಬೆಂಬಲ ಆರೋಪ: ಕಂಕನಾಡಿ ನಗರ ಠಾಣಾ ಇನ್‌ಸ್ಪೆಕ್ಟರ್ ಅಮಾನತು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.