ಬೆಂಗಳೂರು: ಅಪ್ರಾಪ್ತೆ ಮೇಲಿನ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿ ತುಮಕೂರು ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿರುವ ಕುಣಿಗಲ್ ತಾಲೂಕಿನ ಹುಲಿಯೂರುದುರ್ಗ ಹೋಬಳಿಯ ಹಂಗರಹಳ್ಳಿ ಗ್ರಾಮದ ಶ್ರೀವಿದ್ಯಾ ಚೌಡೇಶ್ವರಿ ದೇವಸ್ಥಾನದ (ಶ್ರೀಮಠದ) ಪೀಠಾಧಿಪತಿ ಬಾಲ ಮಂಜುನಾಥ ಅವರಿಗೆ ಮಠದಿಂದ ಖಾಸಗಿ/ಮನೆ ಊಟ ಹಾಗೂ ಹಾಸಿಗೆ ಪೂರೈಕೆಗೆ ಹೈಕೋರ್ಟ್ ಅನುಮತಿಸಿದೆ.
ತಮಗೆ ಮಠದಿಂದ ಖಾಸಗಿ/ಮನೆ ಊಟ ಹಾಗೂ ಹಾಸಿಗೆ ಪೂರೈಕೆಗೆ ಅನುಮತಿ ನೀಡುವಂತೆ ತುಮಕೂರು ಜೈಲು ಅಧೀಕ್ಷಕರಿಗೆ ನಿರ್ದೇಶಿಸಬೇಕು ಎಂದು ಕೋರಿ ಬಾಲ ಮಂಜುನಾಥ ಸ್ವಾಮೀಜಿ ತಕರಾರು ಅರ್ಜಿ ಸಲ್ಲಿಸಿದ್ದರು. ಅದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರ ಪೀಠ, ಈ ನಿರ್ದೇಶನ ನೀಡಿದೆ.
ಅರ್ಜಿದಾರರು ತಮ್ಮ ರಿಸ್ಕ್ನಲ್ಲಿ ಮಠದಿಂದ ಖಾಸಗಿ/ಮನೆ ಊಟವನ್ನು ತರಿಸಿಕೊಳ್ಳಬಹುದು. ಅದನ್ನು ಜೈಲು ಅಧಿಕಾರಿಗಳು ಪರೀಕ್ಷೆ ಮಾಡಬೇಕು. ನಂತರವೇ ಅರ್ಜಿದಾರರು ಸೇವನೆಗೆ ಅವಕಾಶ ಕಲ್ಪಿಸಬೇಕು. ಇನ್ನು ಅರ್ಜಿದಾರರು ತಮ್ಮದೇ ಆದ ಹಾಸಿಗೆ ವ್ಯವಸ್ಥೆ ಮಾಡಿಕೊಳ್ಳಲು ಅನುಮತಿ ನೀಡಬೇಕು ಎಂದು ತುಮಕೂರು ಕಾರಾಗೃಹ ಅಧೀಕ್ಷಕರಿಗೆ ನ್ಯಾಯಪೀಠ ಸೂಚಿಸಿದೆ. ಜೊತೆಗೆ, ಅಗತ್ಯವಿದ್ದರೆ ಈ ಆದೇಶ ಮಾರ್ಪಾಡಿಗೆ ಜೈಲು ಅಧಿಕಾರಿಗಳು ನ್ಯಾಯಾಲಯವನ್ನು ಕೋರಬಹುದು ಎಂದು ಪೀಠ ಇದೇ ವೇಳೆ ಸ್ಪಷ್ಟಪಡಿಸಿದೆ.
ಪ್ರಕರಣದ ಹಿನ್ನೆಲೆ: ಬಾಲ ಮಂಜುನಾಥ ಸ್ವಾಮೀಜಿ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಅಪ್ರಾಪ್ತೆಯೊಬ್ಬರು 2024 ರ ಮಾರ್ಚ್ 7 ರಂದು ಹುಲಿಯೂರುದುರ್ಗ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ಅದರ ಆಧಾರದ ಮೇಲೆ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದ ಪೊಲೀಸರು ಸ್ವಾಮೀಜಿ ಅವರನ್ನು ಬಂಧಿಸಿದ್ದರು. ವಿಚಾರಣಾ ನ್ಯಾಯಾಲಯವು ಸ್ವಾಮೀಜಿಯನ್ನು ಮಾರ್ಚ್ 14 ರಂದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು.
ಸದ್ಯ ತುಮಕೂರು ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿರುವ ಸ್ವಾಮೀಜಿ, ಜೈಲಿನಲ್ಲಿ ಪೂರೈಸಿರುವ ಊಟ ತಮಗೆ ಸರಿ ಹೊಂದುತ್ತಿಲ್ಲ. ಇದರಿಂದ ಮಠದಿಂದ ಖಾಸಗಿ/ಮನೆ ಊಟ, ಹಾಸಿಗೆ ತರಿಸಿಕೊಳ್ಳಲು ತಮಗೆ ಅನುಮತಿ ನೀಡುವಂತೆ ಜೈಲಾಧಿಕಾರಿಗಳಿಗೆ ಕೋರಿದ್ದರು. ಅದಕ್ಕೆ ಜೈಲಾಧಿಕಾರಿಗಳು ಸಮ್ಮಿತಿಸದ್ದರಿಂದ ಸ್ವಾಮೀಜಿ ಹೈಕೋರ್ಟ್ ಮೆಟ್ಟಿಲೇರಿದ್ದರು.