ETV Bharat / state

ಸುಖಾಂತ್ಯ ಕಂಡ ಶಿರಸಿಯ ಒಂದು ಬಾವಿಯ ಕಥೆ; ಬಾವಿ ತೋಡಲು ಆರಂಭಿಸಿದ ಗೌರಿ ನಾಯ್ಕ

author img

By ETV Bharat Karnataka Team

Published : Feb 21, 2024, 5:15 PM IST

Updated : Feb 21, 2024, 8:34 PM IST

ಅಂಗನವಾಡಿ ಮಕ್ಕಳಿಗೆ ಕುಡಿಯುವ ನೀರಿಗಾಗಿ ಬಾವಿ ತೋಡಲು ಉಂಟಾದ ಗೊಂದಲಕ್ಕೆ ತೆರೆ ಬಿದ್ದಿದೆ.

ಮಕ್ಕಳ ದಾಹ ತೀರಿಸಲು ಬಾವಿ ಕೊರೆಯಲು ಮುಂದಾದ ಗೌರಿ ನಾಯ್ಕಗೆ ಸಮಸ್ಯೆ: ಸಂಸದರ ಮಧ್ಯ ಪ್ರವೇಶದಿಂದ ಗೊಂದಲ ಸುಖಾಂತ್ಯ
ಮಕ್ಕಳ ದಾಹ ತೀರಿಸಲು ಬಾವಿ ಕೊರೆಯಲು ಮುಂದಾದ ಗೌರಿ ನಾಯ್ಕಗೆ ಸಮಸ್ಯೆ: ಸಂಸದರ ಮಧ್ಯ ಪ್ರವೇಶದಿಂದ ಗೊಂದಲ ಸುಖಾಂತ್ಯ

ಬಾವಿ ತೋಡಲು ಉಂಟಾದ ಗೊಂದಲಕ್ಕೆ ತೆರೆ

ಶಿರಸಿ: ಕಳೆದ 15-20 ದಿನಗಳಿಂದ ಶಿರಸಿಯಲ್ಲಿ ಮಕ್ಕಳಿಗೆ ಕುಡಿಯುವ ನೀರಿಗಾಗಿ ಬಾವಿ ತೋಡಲು ಸೃಷ್ಟಿಯಾಗಿದ್ದ ಗೊಂದಲಕ್ಕೆ ತೆರೆ ಬಿದ್ದಿದೆ. ನೀರು ಬರುವವರೆಗೆ ಬಾವಿ ತೋಡಲು ಅವಕಾಶ ನೀಡಿದ್ದು, ಪ್ರಕರಣ ಸುಖಾಂತ್ಯ ಕಂಡಿದೆ. ಸ್ಥಳಕ್ಕೆ ಭೇಟಿ ನೀಡಿದ ಸಂಸದ ಅನಂತಕುಮಾರ ಹೆಗಡೆ, ಜಿಲ್ಲಾಧಿಕಾರಿಗಳು ಬಾವಿ ತೋಡಲು ಸೂಚಿಸಿರುವುದಾಗಿ ತಿಳಿಸಿದರು.

ಶಿರಸಿಯ ಗಣೇಶ ನಗರದ ಅಂಗನವಾಡಿ ಕೇಂದ್ರ 6ರಲ್ಲಿ ಗೌರಿ ನಾಯ್ಕ ಎಂಬ ಮಹಿಳೆ ಅಂಗನವಾಡಿ ಮಕ್ಕಳಿಗಾಗಿ ಕುಡಿಯುವ ನೀರು ನೀಡಲು ಬಾವಿ ತೋಡಲು ಮುಂದಾಗಿದ್ದರು. 30 ಅಡಿ ಆಳದ ಬಾವಿಯನ್ನು ಒಬ್ಬರೇ ತೆಗೆದಿದ್ದಾರೆ. ಬಳಿಕ ಇದಕ್ಕೆ ಸರ್ಕಾರದ ಅನುಮತಿ ಇಲ್ಲ ಎಂದು ಕೆಲಸ ನಿಲ್ಲಿಸಲಾಗಿತ್ತು. ನೀವು ಬಾವಿ ತೋಡುವುದು ಬೇಡ, ಸರ್ಕಾರದಿಂದಲೇ ಈ ಕೆಲಸವನ್ನು ಮಾಡಿಸುತ್ತೇವೆ ಎಂದು ಸಚಿವ ಮಂಕಾಳು ವೈದ್ಯ ಹೇಳಿದ್ದರು. ಬಳಿಕ ಗೌರಿ ನಾಯ್ಕ ಅವರಿಗೆ ಸನ್ಮಾನ ಕೂಡ ಮಾಡಿದ್ದರು. ಈ ವೇಳೆ ಅಧಿಕಾರಿಗಳು ಸಹ ಹಾಜರಿದ್ದರು. ಇದರ ಬೆನ್ನಲ್ಲೇ ಕಂದಾಯ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಬಾವಿಯನ್ನು ಬಂದ್ ಮಾಡಲಾಗಿತ್ತು.

ಇದರಿಂದ ಬುಧವಾರ ಗಣೇಶ ನಗರ ಭಾಗದ ಜನರಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ತಹಶೀಲ್ದಾರ ಕಚೇರಿಗೆ ತೆರಳಿ ಬಾವಿ ತೆಗೆಯಲು ಅನುಮತಿ ನೀಡುವಂತೆ ಪಟ್ಟು ಹಿಡಿದಿದ್ದರು. ಸುದ್ದಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಸಂಸದ ಅನಂತಕುಮಾರ ಹೆಗಡೆ, ಈ ಬಗ್ಗೆ ಮಾಹಿತಿ ಪಡೆದರು. ಅಲ್ಲದೇ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಅವರೊಂದಿಗೆ ದೂರವಾಣಿ ಮುಖಾಂತರ ಮಾತನಾಡಿ ಬಾವಿ ತೋಡಲು ಅನುಮತಿ ನೀಡುವಂತೆ ಕೇಳಿದರು. ಅನುಮತಿ ಸಿಗುತ್ತಿದ್ದಂತೆ ಮುಚ್ಚಿದ್ದ ಬಾವಿ ತೆರೆದು, ಗೌರಿ ನಾಯ್ಕ ಅವರು ಬಾವಿಗಿಳಿದು ಸಂತಸಪಟ್ಟರು.

ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಸಂಸದ‌ ಅನಂತಕುಮಾರ್​ ಹೆಗಡೆ, ಗೌರಿ ನಾಯ್ಕ ಜತೆ ನಾವೆಲ್ಲರೂ ನಿಲ್ಲುತ್ತೇವೆ. ಅವರ ಕೈನಿಂದಲೇ ಬಾವಿ ಪೂರ್ಣಗೊಳಿಸುತ್ತೇವೆ. ಯಾರು ಅಡ್ಡಿ ಪಡಿಸುತ್ತಾರೋ ಅವರು ನನ್ನ ಎದುರಿಗೆ ಬರಲಿ. ಬಾವಿ ಅವರಿಂದ ಪೂರ್ಣಗೊಳಿಸಿ ಬಾವಿಗೆ ಅವರ ಹೆಸರು ಇಡುತ್ತೇವೆ. ಇದೊಂದು ಭಾವನಾತ್ಮಕ ಸಂಗತಿಯಾಗಿದೆ. ಹಿಂದೆ ಆಗಿರುವ ಬಗ್ಗೆ ಮಾತನಾಡುವುದು ಬೇಡ. ಈಗ ಕೆಲಸ ಆಗಲಿದೆ ಎಂದರು.

ಗೌರಿ ನಾಯ್ಕ ಪ್ರತಿಕ್ರಿಯಿಸಿ, ಬಾವಿ ಬಂದ್ ಮಾಡಿದ್ದ ಸಂದರ್ಭದಲ್ಲಿ ಊಟ ತಿಂಡಿ ಮಾಡಿರಲಿಲ್ಲ. ಈಗ ಸಂಸದರು ಬಂದು ಮುಚ್ಚಿದ್ದ ಬಾವಿಯನ್ನು ತೋಡಲು ಅನುಮತಿ ಕೊಡಿಸಿದ್ದಾರೆ. ಇನ್ನು ಸಮಾಧಾನದಿಂದ ಕೆಲಸ ಮಾಡಲು ಅವಕಾಶ ದೊರಕಿದೆ. ಮುಂದಿನ 5-6 ದಿನಗಳಲ್ಲಿ ಬಾವಿಯಲ್ಲಿ ನೀರು ಬರುವಂತೆ ಮಾಡುತ್ತೇನೆ ಎಂದು ಖುಷಿ ವ್ಯಕ್ತಪಡಿಸಿದರು.‌

ಮಾನವೀಯ ನೆಲೆಗಟ್ಟಿನಲ್ಲಿ ಬಾವಿ ತೋಡಲು ಅನುಮತಿ ನೀಡಲಾಗಿದೆ. ಒಳ್ಳೆಯ ಕೆಲಸ ಮಾಡುತ್ತಿದ್ದಾರೆ, ಮಾಡಲಿ. ಯಾರು ತೊಂದರೆ ನೀಡದಂತೆ ಮಹಿಳಾ ಅಭಿವೃದ್ಧಿ ಇಲಾಖೆಗೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಅವರ ಆಪ್ತ ಸಹಾಯಕರು ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.

ಶಿರಸಿ: ಸಚಿವ ಮಂಕಾಳು ವೈದ್ಯ ಭೇಟಿ ಬೆನ್ನಲ್ಲೇ 'ಭಗೀರಥ ಗೌರಿ' ತೋಡುತ್ತಿದ್ದ ಅಂಗನವಾಡಿ ಬಾವಿ ಬಂದ್

ಅಂಗನವಾಡಿ ಮಕ್ಕಳಿಗಾಗಿ ಬಾವಿ ತೋಡುತ್ತಿರುವ ಸ್ಥಳಕ್ಕೆ ಸಚಿವ ಮಂಕಾಳ ವೈದ್ಯ ಭೇಟಿ; ಭಗೀರಥ ಮಹಿಳೆಗೆ ಸನ್ಮಾನ

'ಭಗೀರಥ ಮಹಿಳೆ' ಗೌರಿಗೆ ಬಾವಿ ತೋಡಲು ಎದುರಾದ ಅಡೆತಡೆ ನಿವಾರಣೆ; ಅಂಗನವಾಡಿ ಮಕ್ಕಳಿಗೆ ಸಿಗಲಿದೆ ಜೀವಜಲ

Last Updated : Feb 21, 2024, 8:34 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.