ETV Bharat / state

ಇಸ್ರೇಲ್‌-ಇರಾನ್‌ ಸಂಘರ್ಷದಿಂದ ತೈಲ ಕೊರತೆ ಭೀತಿ: ಜೈಶಂಕರ್‌ - Dr S Jaishankar

author img

By ETV Bharat Karnataka Team

Published : Apr 16, 2024, 8:09 PM IST

ವಿಶ್ವದ ಯಾವುದೇ ಸಂಘರ್ಷ, ಬಿಕ್ಕಟ್ಟು ಜಾಗತಿಕವಾಗಿ ಪರಿಣಾಮ ಬೀರುತ್ತದೆ. ಇಸ್ರೇಲ್‌-ಇರಾನ್‌ ಸಂಘರ್ಷದಿಂದಾಗಿ ತೈಲ ಕೊರತೆ ಸೇರಿದಂತೆ ಹಲವು ರೀತಿಯ ಬಿಕ್ಕಟ್ಟು ಸೃಷ್ಟಿಯಾಗುವ ಸಾಧ್ಯತೆ ಇದೆ ಎಂದು ವಿದೇಶಾಂಗ ಸಚಿವ ಡಾ.ಎಸ್.‌ಜೈಶಂಕರ್‌ ಹೇಳಿದ್ದಾರೆ.

oil shortage fear  due to Israel-Iran conflict says Foreign Minister Dr. S Jaishankar
ಇಸ್ರೇಲ್‌-ಇರಾನ್‌ ಸಂಘರ್ಷದಿಂದ ಜಾಗತಿಕ ಕಳವಳ ಸೃಷ್ಟಿ, ತೈಲ ಕೊರತೆ ಭೀತಿ: ವಿದೇಶಾಂಗ ಸಚಿವ ಜೈಶಂಕರ್‌

ಬೆಂಗಳೂರು: ಇಸ್ರೇಲ್‌-ಇರಾನ್‌ ಸಂಘರ್ಷ ಜಾಗತಿಕವಾಗಿ ತೀವ್ರ ಕಳವಳಕ್ಕೆ ಕಾರಣವಾಗಿದೆ. ಪೆಟ್ರೋಲಿಯಂ ತೈಲ ಕೊರತೆ ಸೇರಿದಂತೆ ಹಲವು ಬಿಕ್ಕಟ್ಟು ಸೃಷ್ಟಿಯಾಗುವ ಸಾಧ್ಯತೆಯೂ ಇದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಡಾ.ಎಸ್.‌ಜೈಶಂಕರ್‌ ತಿಳಿಸಿದರು.

ರಾಜಾಜಿನಗರದ 'ದಿ ಇನ್ಟ್ಯಿಟ್ಯೂಟ್ ಆಫ್ ಕಂಪೆನಿ ಸೆಕ್ರೆಟರೀಸ್ ಆಫ್‌ ಇಂಡಿಯಾ -ಐಸಿಎಸ್ಐ ಬೆಂಗಳೂರು ಚಾಪ್ಟರ್​'ನಲ್ಲಿ ಆಯೋಜಿಸಿದ್ದ 'ವಿಶ್ವಬಂಧು ಭಾರತ್' ಕುರಿತ ಸಂವಾದದಲ್ಲಿ ಮಾತನಾಡಿದ ಅವರು, ''ವಿಶ್ವದ ಯಾವುದೇ ಸಂಘರ್ಷ, ಬಿಕ್ಕಟ್ಟು ಜಾಗತಿಕವಾಗಿ ಪರಿಣಾಮ ಬೀರುತ್ತದೆ. ಜಾಗತಿಕವಾಗಿ ತೈಲ ಬೆಲೆ, ಆಹಾರದರಗಳ ಏರಿಕೆ, ಹಣದುಬ್ಬರ ಹೆಚ್ಚಳ ಒಳಗೊಂಡಂತೆ ಹಲವಾರು ಸಮಸ್ಯೆಗಳಿಗೆ ಕಾರಣವಾಗುತ್ತದೆ. ಜಗತ್ತಿನ ಎಲ್ಲ ಸಂಘರ್ಷ, ಸಮಸ್ಯೆಗಳಿಗೆ 'ವಿಶ್ವಬಂಧು' ಪರಿಕಲ್ಪನೆಯೇ ಪರಿಹಾರ'' ಎಂದು ಅವರು ಪ್ರತಿಪಾದಿಸಿದರು.

''ಇಸ್ರೇಲ್‌ ಮತ್ತು ಇರಾನ್‌ ನಡುವಿನ ಸಂಘರ್ಷ ತಡೆಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಪ್ರಧಾನಿ ಮೋದಿ ಸೂಚಿಸಿದ್ದಾರೆ. ಇರಾನ್​ನಲ್ಲಿ ಭಾರತದ ಹಡಗು ಸಿಲುಕಿಕೊಂಡಿದೆ. ಇದರಲ್ಲಿ 17 ಭಾರತೀಯ ನಾಗರಿಕರು ಸಹ ಇದ್ದು, ಸುರಕ್ಷಿತವಾಗಿ ಕರೆ ತರಲು ಪ್ರಯತ್ನಗಳನ್ನು ಕೈಗೊಳ್ಳಲಾಗಿದೆ. ಈ ಭಾಗದಲ್ಲಿ ಸುಮಾರು 18 ದಶಲಕ್ಷ ಭಾರತೀಯರು ನೆಲೆಸಿದ್ದು, ಇವರ ಸುರಕ್ಷತೆಯೂ ಸಹ ನಮ್ಮ ಜವಾಬ್ದಾರಿ'' ಎಂದರು.

''ರಷ್ಯಾ-ಉಕ್ರೇನ್‌ ಭಾಗದಲ್ಲಿ ಯುದ್ಧದ ಗಂಭೀರತೆ ಇದ್ದು, ಗಾಜಾದಲ್ಲಿ ಸಂಘರ್ಷ ಮುಂದುವರೆದಿದೆ. ಭಾರತ-ಫೆಸಿಫಿಕ್ ವಲಯದಲ್ಲಿ ಪರಿಸ್ಥಿತಿ ತ್ರಾಸದಾಯವಾಗಿದೆ. ಜಗತ್ತಿನ ಸುಮಾರು 20 ದೇಶಗಳು ಪರಸ್ಪರ ಮಾತುಕತೆ ನಡೆಸದ ಸ್ಥಿತಿಯಲ್ಲಿವೆ. ಇಂತಹ ಸವಾಲುಗಳನ್ನು ಎದುರಿಸಲು ಪ್ರಬುದ್ಧ ನಾಯಕತ್ವದ ಅಗತ್ಯವಿದ್ದು, ಪರಸ್ಪರ ಅರ್ಥಮಾಡಿಕೊಳ್ಳುವ, ಮಾತುಕತೆ ನಡೆಸುವ ಮಾರ್ಗಗಳನ್ನು ಅನುಸರಿಸಬೇಕಾಗಿದೆ. ಏಕಮುಖವಾದ ಇತ್ಯರ್ಥದಿಂದ ಸಮಗ್ರ ಪರಿಹಾರ ದೊರೆಯುವುದಿಲ್ಲ. ವಿಶ್ವಸಂಸ್ಥೆಯೂ ಸಹ ಇಂತಹ ವಿಷಯಗಳಲ್ಲಿ ಹೆಚ್ಚಿನ ಕ್ರಮಗಳನ್ನು ಕೈಗೊಳ್ಳುವುದಿಲ್ಲ. ಆದರೆ, ಭಾರತ ಅಭಿವೃದ್ಧಿಶೀಲ ದೇಶಗಳಿಗೆ ಗ್ಲೋಬಲ್‌ ಸೌತ್‌ ಪರಿಕಲ್ಪನೆಗೆ ಒತ್ತು ನೀಡಿದ್ದು, ನಾವು ಈ ರಾಷ್ಟ್ರಗಳಿಗೆ ‍ಧ್ವನಿಯಾಗಿದ್ದೇವೆ. ಜಿ-20 ಅಧ್ಯಕ್ಷತೆಯ ಮೂಲಕ ಜಗತ್ತಿನ ಗಮನ ಸೆಳೆದಿದ್ದೇವೆ'' ಎಂದು ಜೈಶಂಕರ್‌ ವಿವರಿಸಿದರು.

''ವಿಕಸಿತ ಭಾರತ ನಮ್ಮ ಗುರಿ. ಕೆಲವೇ ವರ್ಷಗಳಲ್ಲಿ ಭಾರತ ಐದು ಟ್ರಿಲಿಯನ್‌ ಆರ್ಥಿಕತೆ ದೇಶವಾಗಲಿದೆ. 2030ರ ವೇಳೆಗೆ 10 ಟ್ರಿಲಿಯನ್​ಗೆ ತನ್ನ ಸಾಮರ್ಥ್ಯ ವೃದ್ಧಿಸಿಕೊಳ್ಳಲಿದೆ. 2047ರ ವೇಳೆಗೆ ವಿಕಸಿತ ಭಾರತ ನಮ್ಮ ಗುರಿ. ಈ ವೇಳೆಗೆ ಎಲ್ಲಾ ವಲಯದ ವೃತ್ತಿಪರರಿಗೆ ಬೇಡಿಕೆ ಹೆಚ್ಚಾಗಲಿದ್ದು, ಇದೇ ರೀತಿ ಕಂಪನಿ ಸೆಕ್ರೆಟರೀಸ್​ಗಳಿಗೂ ವಿಪುಲ ಅವಕಾಶಗಳು ದೊರೆಯಲಿದ್ದು, ದೇಶದ ಅಭಿವೃದ್ಧಿಯಲ್ಲಿ ಕಂಪೆನಿ ಸೆಕ್ರೆಟರಿಗಳ ಪಾತ್ರ ಅನನ್ಯ'' ಎಂದು ಹೇಳಿದರು.

''ವಿಶ್ವಬಂಧು ಪರಿಕಲ್ಪನೆಯಡಿ ನಾವು ಭಾರತದ ಬ್ರ್ಯಾಂಡ್​ಗೆ ಆದ್ಯತೆ ನೀಡಬೇಕಾಗಿದೆ. ಸಬ್‌ ಕಾ ಸಾತ್‌ - ಸಬ್‌ ಕಾ ವಿಕಾಸ್‌ ಜಾಗತಿಕವಾಗಿ ನಾವು ಅನುಷ್ಠಾನಗೊಳಿಸುತ್ತಿದ್ದೇವೆ. ಈ ಎಲ್ಲ ಪರಿಸ್ಥಿತಿಗಳ ನಡುವೆ ಮುಂದಿನ ಬಾರಿಯೂ ಮೋದಿ ಅವರು ಮತ್ತೆ ಪ್ರಧಾನಿಯಾಗುವುದು ಕೂಡ ನಮ್ಮ ಮುಂದಿರುವ ಸವಾಲುಗಳಲ್ಲಿ ಒಂದಾಗಿದೆ. ಮೇಕ್‌ ಇನ್‌ ಇಂಡಿಯಾ ದೇಶದ ಮಹತ್ವಾಕಾಂಕ್ಷೆ ಯೋಜನೆಯಾಗಿದ್ದು, ನಾವು ವಿಶ್ವಬಂಧು ಪರಿಕಲ್ಪನೆಯಡಿ ಜಗತ್ತಿಗಾಗಿ ಉತ್ಪಾದಿಸುತ್ತಿದ್ದೇವೆ. ಯಾವುದೇ ಜಗತ್ತಿನ ನೈಸರ್ಗಿಕ ವಿಪತ್ತುಗಳು, ಸಮಸ್ಯೆಗಳಿಗೆ ಭಾರತ ತಕ್ಷಣವೇ ಸನ್ನದ್ಧವಾಗುತ್ತಿದ್ದು, ಸೂಕ್ತ ರೀತಿಯಲ್ಲಿ ತ್ವರಿತವಾಗಿ ಸ್ಪಂದಿಸುತ್ತಿದೆ'' ಎಂದು ತಿಳಿಸಿದರು.

ಕಳೆದ ಹತ್ತು ವರ್ಷಗಳ ಹಿಂದೆ ಆರ್ಥಿಕವಾಗಿ ಭಾರತ ಜಗತ್ತಿನಲ್ಲಿ 11ನೇ ಸ್ಥಾನದಲ್ಲಿದ್ದು, ಇದೀಗ 5ನೇ ಸ್ಥಾನಕ್ಕೆ ಬಡ್ತಿ ಪಡೆದಿದೆ. ಮುಂದಿನ ಹತ್ತು ವರ್ಷಗಳಲ್ಲಿ ಜಾಗತಿಕ ಹಣಕಾಸು ಪರಿಸ್ಥಿತಿಯ ಚಿತ್ರಣವೇ ಬದಲಾಗಲಿದೆ. ಎಲೆಕ್ಟ್ರಿಕ್‌ ವಾಹನಗಳು, ಚಿಪ್​ಗಳ ಉತ್ಪಾದನೆ ಸೇರಿದಂತೆ ಎಲ್ಲ ವಲಯಗಳಲ್ಲಿ ಭಾರತ ಮುಂಚೂಣಿಯಲ್ಲಿದೆ. ಇದು ಕೃತಕ ಬುದ್ದಿಮತ್ತೆಯುಗವಾಗಿದ್ದು, ಇದನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ನೈಸರ್ಗಿಕ ಬುದ್ದಿಮತ್ತೆ ಅಗತ್ಯವಾಗಿದೆ. ಅಂತಹ ಸಾಮರ್ಥ್ಯ ಕೂಡ ನಮ್ಮಲ್ಲಿದೆ'' ಎಂದು ಹೇಳಿದರು.

ಐಸಿಎಸ್ಐನ ಬೆಂಗಳೂರು ಚಾಪ್ಟರ್ ಅಧ್ಯಕ್ಷ ವೆಂಕಟ ಸುಬ್ಬಾರಾವ್ ಕಲ್ವಾ, ಕಾರ್ಯದರ್ಶಿ ವಿಶ್ವಾಸ್ ಹೆಗಡೆ, ಎಸ್ಐಆರ್​ಸಿ ಅಧ್ಯಕ್ಷ ಪ್ರದೀಪ್ ಬಿ.ಕುಲಕರ್ಣಿ, ಕೇಂದ್ರೀಯ ಮಂಡಳಿ ಸದಸ್ಯ ಸಿ.ದ್ವಾರಕಾನಾಥ್, ಬೆಂಗಳೂರು ಚಾಪ್ಟರ್​ನ ಉಪಾಧ್ಯಕ್ಷೆ ದೇವಿಕಾ ಸತ್ಯನಾರಾಯಣ, ಕೇಂದ್ರೀಯ ಮಂಡಳಿ ಮಾಜಿ ಸದಸ್ಯ ಗೋಪಾಲಕೃಷ್ಣ ಹೆಗಡೆ ಉಪಸ್ಥಿತರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.