ETV Bharat / state

ಮೈಸೂರು: ಸೇವಾ ನ್ಯೂನತೆ - ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾಗೆ ₹ 1 ಲಕ್ಷ ದಂಡ‌

author img

By ETV Bharat Karnataka Team

Published : Jan 25, 2024, 9:52 PM IST

ಮನೆ ಮೇಲೆ ಪಡೆದ ಸಾಲದ ಮೊತ್ತವನ್ನು ಪೂರ್ತಿ ಮರುಪಾವತಿ ಮಾಡಿದರೂ, ದಾಖಲೆ ಪತ್ರಗಳನ್ನು ಹಿಂದಿರುಗಿಸದ ಆರೋಪ ಪ್ರಕರಣದಲ್ಲಿ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾಗೆ ಮೈಸೂರು ಜಿಲ್ಲಾ ಗ್ರಾಹಕರ ಆಯೋಗವು ದಂಡ ವಿಧಿಸಿದೆ.

mysuru-district-consumer-commission-fined-rs-1-lakh-to-central-bank-of-india
ಮೈಸೂರು: ಸೇವಾ ನ್ಯೂನತೆ - ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾಗೆ ₹ 1 ಲಕ್ಷ ದಂಡ‌

ಮೈಸೂರು: ಸಾಲ ತೀರಿಸಿದ ನಂತರವೂ ಸ್ವತ್ತಿನ ದಾಖಲೆಗಳನ್ನು ಹಿಂದಿರುಗಿಸದೇ ಸೇವಾ ನ್ಯೂನತೆ ಎಸಗಿದ‌ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾಗೆ ಮೈಸೂರು ಜಿಲ್ಲಾ ಗ್ರಾಹಕರ ಆಯೋಗವು ಒಂದು ಲಕ್ಷ ರೂಪಾಯಿ ದಂಡ ವಿಧಿಸಿ ಆದೇಶಿಸಿದೆ. ಒಂದು ತಿಂಗಳೊಳಗೆ ಈ ಹಣ ನೀಡಬೇಕು ಎಂದು ಸೂಚಿಸಿರುವ ಆಯೋಗವು ತಪ್ಪಿದಲ್ಲಿ ಸದರಿ ಮೊತ್ತಕ್ಕೆ ವಾರ್ಷಿಕ 9ರಷ್ಟು ಬಡ್ಡಿ ಭರಿಸಬೇಕೆಂದೂ ತಿಳಿಸಿದೆ.

ಮೈಸೂರಿನ ರಾಮಕೃಷ್ಣ ನಗರದ ನಿವಾಸಿ ಎಸ್.ರಾಜೇಶ್ವರಿ ತಮ್ಮ ಮನೆಯ ದಾಖಲೆಗಳನ್ನು ಆಧಾರವಾಗಿ ನೀಡಿ ಇಲ್ಲಿನ ರಮಾವಿಲಾಸ ರಸ್ತೆಯಲ್ಲಿರುವ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಿಂದ ಸಾಲವನ್ನು ಪಡೆದಿದ್ದರು. ರಾಜೇಶ್ವರಿ 2020ರ ಸೆಪ್ಟೆಂಬರ್​ 9ರಂದು ಮೃತಪಟ್ಟರು. ಇದಕ್ಕೂ ಮೊದಲು ಪತಿ ನಾರಾಯಣ ಸ್ವಾಮಿ ಸಾವನ್ನಪ್ಪಿದ್ದರು. ಆದರೆ, ಈ ದಂಪತಿಗೆ ಮಕ್ಕಳಿರಲಿಲ್ಲ.

ರಾಜೇಶ್ವರಿ ತಮ್ಮ ಕಾಲಾನಂತರ ದಟ್ಟಗಳ್ಳಿಯಲ್ಲಿರುವ ಮನೆಯು ಸಂಬಂಧಿಕರಾದ ಬಿ.ಆರ್.ವೆಂಕಟೇಶ್ ಪ್ರಸಾದ್ ಹಾಗೂ ಆರ್.ಅಶ್ವಿನಿ ಅವರಿಗೆ ಸೇರತಕ್ಕದ್ದು ಎಂದು ಉಯಿಲು​ ರಚಿಸಿ ನೋಂದಾಯಿಸಿದ್ದರು. ಈ ಸ್ವತ್ತಿನ ಖಾತೆಯು ವೆಂಕಟೇಶ್ ಪ್ರಸಾದ್ ಹಾಗೂ ಅಶ್ವಿನಿ ಅವರ ಹೆಸರಿಗೆ ಬದಲಾಗಿ ಇವರಿಬ್ಬರ ಸ್ವತ್ತಿನ ಬಾಬ್ತು ತೆರಿಗೆಯನ್ನೂ ಪಾವತಿಸುತ್ತಿದ್ದರು. ರಾಜೇಶ್ವರಿ ಬ್ಯಾಂಕಿನಿಂದ ಸಾಲ ಪಡೆದ ವಿಚಾರ ತಿಳಿದು ಬ್ಯಾಂಕ್​ಗೆ ತೆರಳಿ ಉಯಿಲು ಹಾಗೂ ಖಾತೆ ಬದಲಾವಣೆ ಆದ ಬಗ್ಗೆ ಮಾಹಿತಿ ನೀಡಿದ್ದರು.

ಇದಕ್ಕೆ ರಾಜೇಶ್ವರಿ ಮಾಡಿದ್ದ ಸಾಲದ ಮೊತ್ತವನ್ನು ಪೂರ್ತಿ ಮರುಪಾವತಿ ಮಾಡಿದರೆ, ಸ್ವತ್ತಿಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಹಿಂದಿರುಗಿಸುವುದಾಗಿ ಬ್ಯಾಂಕ್​ನ ಅಧಿಕಾರಿಗಳು ಒಪ್ಪಿಕೊಂಡಿದ್ದರು. ಈ ಮೇರೆಗೆ ವೆಂಕಟೇಶ್ ಪ್ರಸಾದ್ ಹಾಗೂ ಅಶ್ವಿನಿ ಸಾಲದ ಪೂರ್ತಿ ಮೊತ್ತ ಮರುಪಾವತಿ ಮಾಡಿದ್ದರು. ಅಂತೆಯೇ, ಬ್ಯಾಂಕ್​ನವರು ಸಾಲ ಚುಕ್ತಾ ಆಗಿದೆಯೆಂದು 2020ರ ಅಕ್ಟೋಬರ್​ 29ರಂದು ಪತ್ರ ನೀಡಿದ್ದರು. ಪೂರ್ತಿ ಸಾಲ ತೀರಿಸಿರುವುದರಿಂದ ಮನೆಯ ದಾಖಲೆ ಪತ್ರಗಳನ್ನು ಹಿಂದಿರುಗಿಸುವಂತೆ ಕೋರಿಕೊಂಡಾಗ ಬ್ಯಾಂಕ್​ ಕಾನೂನು ಸಲಹೆಗಾರರ ಸಲಹೆ ಪಡೆದು ದಾಖಲೆಗಳನ್ನು ಹಿಂದಿರುಗಿಸುವುದಾಗಿ ಅಧಿಕಾರಿಗಳು ಭರವಸೆ ಕೊಟ್ಟಿದ್ದರು.

ಆದರೆ, ಇದಾದ ನಂತರ ರಾಜೇಶ್ವರಿ ಅವರ ಪತಿಯ ತಾಯಿ ಹಾಗೂ ಅವರ ವಾರಸುದಾರರೆಲ್ಲರೂ ಕೂಡಿ ಬ್ಯಾಂಕ್​ಗೆ ಮುಚ್ಚಳಿಕೆ ಪತ್ರ ಬರೆದುಕೊಟ್ಟರೆ ಮನೆಯ ದಾಖಲೆಗಳನ್ನು ಹಿಂದಿರುಗಿಸುತ್ತೇವೆ ಎಂದು ಅಧಿಕಾರಿಗಳು ಸತಾಯಿಸತೊಡಗಿದ್ದರು. ಈ ವಿಚಾರವಾಗಿ ಮನೆಯ ದಾಖಲೆಗಳನ್ನು ಹಿಂದಿರುಗಿಸುವುದರ ಜೊತೆಗೆ ಸಾಲ ತೀರುವಳಿ ಪತ್ರ ಬರೆದುಕೊಡುವಂತೆ ವೆಂಕಟೇಶ್, ಅಶ್ವಿನಿ 2023ರ ಏಪ್ರಿಲ್​ 15ರಂದು ಬ್ಯಾಂಕ್​ಗೆ ನೋಟಿಸ್​ ಕಳುಹಿಸಿದ್ದರು.

ಇದಕ್ಕೆ ಬ್ಯಾಂಕ್​ನವರು ಪ್ರತಿಕ್ರಿಯೆ ನೀಡಿರಲಿಲ್ಲ. ಇದರಿಂದ ಬೇಸತ್ತ ವೆಂಕಟೇಶ್ ಹಾಗೂ ಅಶ್ವಿನಿ ಮೈಸೂರಿನ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ನೀಡಿದ್ದರು. ತಮ್ಮ ಸ್ವತ್ತಿನ ದಾಖಲೆ ಪತ್ರಗಳನ್ನು ಹಿಂದಿರುಗಿಸುವಂತೆ ಬ್ಯಾಂಕ್​ಗೆ ನಿರ್ದೇಶನ ನೀಡುವುದರ ಜೊತೆಗೆ ಸಾಲ ತೀರುವಳಿ ಪತ್ರ ರಚಿಸಿ ಬ್ಯಾಂಕಿನವರು ನೋಂದಾಯಿಸಿ ಕೊಡಬೇಕು. ಅಲ್ಲದೇ, ಎರಡು ಲಕ್ಷ ರೂಪಾಯಿ ಪರಿಹಾರ ದೊರಕಿಸಿಕೊಡಬೇಕೆಂದು ಕೋರಿಕೊಂಡಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಗ್ರಾಹಕರ ಆಯೋಗವು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾವು ಸೇವಾ ನ್ಯೂನತೆ ಎಸಗಿದೆ ಎಂದು ತೀರ್ಪು ನೀಡಿದೆ. ರಾಜೇಶ್ವರಿ ಆಧಾರವಾಗಿಟ್ಟ ಸ್ವತ್ತಿನ ದಾಖಲೆ ಪತ್ರಗಳನ್ನು ದೂರುದಾರರಿಗೆ ಹಿಂದಿರುಗಿಸುವುದರ ಜೊತೆಗೆ ಒಂದು ತಿಂಗಳೊಳಗಾಗಿ ತೀರುವಳಿ ಪತ್ರ ರಚಿಸಿ ನೋದಾಯಿಸಿಕೊಡಬೇಕೆಂದು ಬ್ಯಾಂಕ್​​ಗೆ ಆದೇಶಿಸಿದೆ. ಇದಕ್ಕೆ ತಪ್ಪಿದಲ್ಲಿ ದಾಖಲೆ ಪತ್ರ ಹಿಂದಿರುಗಿಸುವವರೆಗೆ ಪ್ರತಿ ದಿನಕ್ಕೆ ನೂರು ರೂಪಾಯಿಯಂತೆ ವೆಚ್ಚ ಭರಿಸುವಂತೆ ಸೂಚಿಸಿದೆ.

ಇದರೊಂದಿಗೆ ಸೇವಾನ್ಯೂನತೆ ಎಸಗಿ ದೂರುದಾರರಿಗೆ ಮಾನಸಿಕ ಹಿಂಸೆ ನೀಡಿರುವುದಕ್ಕಾಗಿ ಒಂದು ಲಕ್ಷ ರೂಪಾಯಿ ಪರಿಹಾರ, ಪ್ರಕರಣದ ಖರ್ಚು ಐದು ಸಾವಿರ ರೂಪಾಯಿಯನ್ನೂ ಒಂದು ತಿಂಗಳೊಳಗೆ ನೀಡಬೇಕೆಂದು ಆಯೋಗ ಆದೇಶಿಸಿದೆ. ತಪ್ಪಿದಲ್ಲಿ ಸದರಿ ಮೊತ್ತಕ್ಕೆ ವಾರ್ಷಿಕ ಶೇ.9ರಷ್ಟು ಬಡ್ಡಿಯನ್ನು ಭರಿಸಬೇಕೆಂದೂ ಆಯೋಗ ಆದೇಶಿಸಿದೆ. ದೂರುದಾರರ ಪರವಾಗಿ ವಕೀಲ ಕೆ.ಸಿ.ರವೀಂದ್ರ ಹಾಗೂ ಎಸ್.ರವಿ ವಾದಿಸಿದ್ದರು.

ಇದನ್ನೂ ಓದಿ: ವ್ಹೀಲಿಂಗ್ ಮಾಡಿ ಸಿಕ್ಕಿಬಿದ್ದ ಅಪ್ರಾಪ್ತ; ವಾಹನ ಕೊಟ್ಟ ಮಾಲೀಕ ದೋಷಿ, ₹25 ಸಾವಿರ ದಂಡ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.