ETV Bharat / state

ಈಶ್ವರಪ್ಪ ಆಟಕ್ಕುಂಟು ಲೆಕ್ಕಕ್ಕಿಲ್ಲ: ಸಚಿವ ಪ್ರಿಯಾಂಕ್ ಖರ್ಗೆ

author img

By ETV Bharat Karnataka Team

Published : Feb 10, 2024, 9:01 AM IST

ಸಚಿವ ಪ್ರಿಯಾಂಕ್ ಖರ್ಗೆ
ಸಚಿವ ಪ್ರಿಯಾಂಕ್ ಖರ್ಗೆ

ಬಿಜೆಪಿ ಮಾಜಿ ಸಚಿವ ಕೆ.ಎಸ್​ ಈಶ್ವರಪ್ಪ ವಿರುದ್ದ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

ಕೆ.ಎಸ್​ ಈಶ್ವರಪ್ಪ ಆಟಕ್ಕುಂಟು ಲೆಕ್ಕಕ್ಕಿಲ್ಲ

ಕಲಬುರಗಿ : ಸಂಸದ ಡಿ.ಕೆ ಸುರೇಶ್ ವಿರುದ್ದ ಗುಂಡಿಕ್ಕಿ ಕೊಲ್ಲೋ ಕಾನೂನು ತರಬೇಕು ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿಕೆ ನೀಡಿದ್ದಾರೆ. ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಸಚಿವ ಪ್ರಿಯಾಂಕ್ ಖರ್ಗೆ ಆ ಕಾನೂನು ತಂದರೆ ಬಿಜೆಪಿ ಅರ್ಧ ಖಾಲಿಯಾಗುತ್ತದೆ ಎಂದು ಕಿಡಿಕಾರಿದ್ದಾರೆ.

ಕಲಬುರಗಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಿಯಾಂಕ್ ಖರ್ಗೆ, ತಮ್ಮ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಈ ರೀತಿ ಹೇಳಿಕೆ ಕೊಡುತ್ತಿದ್ದಾರೆ. ಈಶ್ವರಪ್ಪ ಆಟಕ್ಕುಂಟು ಲೆಕ್ಕಕ್ಕಿಲ್ಲ, ಅವರ ಪಕ್ಷದಲ್ಲೇ ಅವರಿಗೆ ಕಿಮ್ಮತ್ತಿಲ್ಲ. ಅವರಿಗೆ ನಿವೃತ್ತಿ ಕೊಡಿಸಿ ಕೂರಿಸಿದ್ದಾರೆ. ಅವರ ಮಗನಿಗೂ ಟಿಕೆಟ್ ಕೊಡಿಸೋಕೆ ಅವರಿಂದ ಆಗಿಲ್ಲ. ಇವೆಲ್ಲ ಬಿಟ್ಟು ಬೆಳಗ್ಗೆ ರಾಮಾಯಣ, ಮಧ್ಯಾಹ್ನ ಕಿರ್ತನೆ, ಸಂಜೆ ಹನುಮಾನ ಚಾಲೀಸ್ ಓದಿಕೊಂಡು ಮನೆಯಲ್ಲಿ ಇರಬೇಕು ಎಂದು ಹೇಳಿದ್ದಾರೆ.

ಕಾಂಗ್ರೆಸ್​ನಲ್ಲಿಯೂ ಭ್ರಷ್ಟಾಚಾರ ನಡಿಯುತ್ತಿದೆ ಎಂಬ ಕೆಂಪಣ್ಣ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಈಗಾಗಲೇ ನಾವು ಆಯೋಗ ರಚನೆ ಮಾಡಿದ್ದೇವೆ. ಅಂತಹದು ಏನಾದರೂ ದಾಖಲೆಗಳು ಕೆಂಪಣ್ಣ ಅವರ ಹತ್ತಿರ ಇದ್ದರೆ ಆಯೋಗಕ್ಕೆ ನೀಡಲಿ. ನಾವು ಪಾರದರ್ಶಕ ಆಡಳಿತ ಮಾಡುತ್ತಿದ್ದೇವೆ. ಸಣ್ಣ ತಪ್ಪು ಆಗಿದ್ದರೂ ಜನ ಮತ್ತೊಮ್ಮೆ ವಿಧಾನಸೌಧಕ್ಕೆ ಬರುತ್ತಿದ್ದಾರೆ. ಬಿಜೆಪಿ ವ್ಯಾಪಾರ ಸೌಧ ಮಾಡಿತ್ತು. ನಾವು ಜನ ಸೌಧ ಮಾಡ್ತಿದ್ದೇವೆ ಎಂದರು.

ತೆರಿಗೆ ವಿಚಾರದಲ್ಲಿ ಬಿಜೆಪಿಯವರು ಕನ್ನಡಿಗರ ಪರ ಮಾತನಾಡುತ್ತಿಲ್ಲ. ಬದಲಾಗಿ ಪ್ರಧಾನಿ ನರೇಂದ್ರ ಮೋದಿ ಮೆಚ್ಚಿಸೋಕೆ ಹೋಗುತ್ತಿದ್ದಾರೆ. ಮೋದಿಯವರು, ಸಿಎಂ ಆಗಿದ್ದಾಗ ಏನೇನು ಮಾತನಾಡಿದ್ದರು ಅನ್ನೊದು ಬಿಜೆಪಿಯವರು ದಯವಿಟ್ಟು ತಿಳಿದುಕೊಳ್ಳಲಿ. ಆಗ ಮೋದಿಯವರು ನಮಗೂ ಟ್ಯಾಕ್ಸ್ ಕೇಳಬೇಡಿ, ನಿಮ್ಮನ್ನ ನಾವು ಕೇಳಲ್ಲ ಎಂದಿದ್ದರು. ಅದು ದೇಶ ವಿಭಜನೆ ಆಗೋಲ್ವಾ? ಎಂದು ಪ್ರಶ್ನೆ ಮಾಡಿದ ಪ್ರಿಯಾಂಕ್​ ಖರ್ಗೆ, ನಾವು ಗ್ಯಾರಂಟಿ ನೀಡಿದ್ದು ಜನರಿಗೆ ನೇರವಾಗಿ ಹೋಗುತ್ತಿದೆ‌‌. ಆರ್ಥಿಕ ದಿವಾಳಿ ಆಗಿದ್ದರೆ ಜನರಿಗೆ ಗ್ಯಾರಂಟಿ ಕೊಡೋಕೆ ಹೇಗೆ ಸಾಧ್ಯವಾಗ್ತಿತ್ತು‌...? ಎಂದು ತಿರುಗೇಟು ನೀಡಿದರು.

ಸಚಿವ ರಾಮಲಿಂಗಾ ರೆಡ್ಡಿ ಹೇಳಿಕೆ : ಕೈ ಸರ್ಕಾರದಲ್ಲಿ ಶೇ 40ರಷ್ಟು ಭ್ರಷ್ಟಾಚಾರ ಇದೆ ಎನ್ನೋ ಕೆಂಪಣ್ಣ ಹೇಳಿಕೆ ವಿಚಾರವಾಗಿ ಕಲಬುರಗಿಯಲ್ಲಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಪ್ರತಿಕ್ರಿಯೆ ನೀಡಿ, ಅವರು ಹೇಳೋ ರೀತಿ ನಮ್ಮಲ್ಲಿ ಯಾವುದೇ ಭ್ರಷ್ಟಾಚಾರವಿಲ್ಲ ಎಂದು ಸಮರ್ಥನೆ ಮಾಡಿಕೊಂಡರು.

ಇದೇ ವೇಳೆ, ಬಿಜೆಪಿ ವಿರುದ್ಧ ಹರಿಹಾಯ್ದ ರಾಮಲಿಂಗಾ ರೆಡ್ಡಿ, ಬಿಜೆಪಿಯವರಿಗೆ ನಮ್ಮ ಬಗ್ಗೆ ಮಾತಾಡೋ ನೈತಿಕತೆ ಇಲ್ಲ. ಬಸವರಾಜ ಬೊಮ್ಮಾಯಿ ಸರ್ಕಾರ ಅತಿ ಭ್ರಷ್ಟಾಚಾರ ಸರ್ಕಾರ. ನನ್ನ ರಾಜಕೀಯ ಜೀವನದಲ್ಲೆ ಇಂತಹ ಭ್ರಷ್ಟ ಸರ್ಕಾರವನ್ನು ನೋಡಿರಲಿಲ್ಲ. ಕೇವಲ ಮೂರು ವರ್ಷದಲ್ಲಿ ಬೊಮ್ಮಾಯಿ, ಬಿ.ಎಸ್ ಯಡಿಯೂರಪ್ಪ​ 3 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಈ ಮೂಲಕ ಜನರಿಗೆ ಬಿಜೆಪಿ ಅವರು ಸಾಲದ ಗ್ಯಾರಂಟಿ ಕೊಟ್ಟಿದ್ದಾರೆ ಎಂದು ತಿಳಿಸಿದರು.

ಮೋದಿ ಸರ್ಕಾರ ಕೂಡ ಹತ್ತು ವರ್ಷದಲ್ಲಿ 180 ಲಕ್ಷ ಕೋಟಿ ಸಾಲ ಮಾಡಿದೆ. 60 ವರ್ಷದಲ್ಲಿ ಕೇವಲ 54‌ ಲಕ್ಷ ಕೋಟಿ ಸಾಲ ಇತ್ತು. ಬಿಜೆಪಿಯವರಿಗೆ ದೇಶ, ಸಂವಿಧಾನದ ಕಲ್ಪನೆಯಿಲ್ಲ. ಆರ್​ಎಸ್​ಎಸ್ ಯಾವತ್ತೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿರಲಿಲ್ಲ, ಅದರ ಜಪದಲ್ಲಿ ಇರುತ್ತಾರೆ ಎಂದು ಹೇಳಿದರು. ಡಿ.ಕೆ ಸುರೇಶ ವಿರುದ್ದ ಗುಂಡಿಕ್ಕಿ ಕೊಲ್ಲೋ ಕಾನೂನು ತರಬೇಕು ಎನ್ನೋ ಈಶ್ವರಪ್ಪ ಹೇಳಿಕೆಗೆ ಕಾಂಟ್ರಾಕ್ಟರ್ ಸಾವಿಗೆ ಕಾರಣರಾದವರಿಗೆ ಏನು ಮಾಡಬೇಕು ? ಎಂದು ತಿರುಗೇಟು ನೀಡಿದರು.

ಇದನ್ನೂ ಓದಿ : ಗುಂಡಿಕ್ಕಿ ಕೊಲ್ಲಬೇಕು ಹೇಳಿಕೆ: ಕೆಎಸ್ ಈಶ್ವರಪ್ಪ ವಿರುದ್ಧ FIR ದಾಖಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.