ETV Bharat / state

ಕಾವೇರಿಗಾಗಿ ರಾಜ್ಯದ ಪರ ವಾದಿಸಿದ್ದ ನಾರಿಮನ್ ನಿಧನ: ಸಚಿವ ಎಂ.ಬಿ.ಪಾಟೀಲ್ ಸಂತಾಪ

author img

By ETV Bharat Karnataka Team

Published : Feb 21, 2024, 11:28 AM IST

ಖ್ಯಾತ ನ್ಯಾಯವಾದಿ ಫಾಲಿ ಎಸ್ ನಾರಿಮನ್​ ನಿಧನಕ್ಕೆ ಸಚಿವ ಎಂ.ಬಿ.ಪಾಟೀಲ್ ಸಂತಾಪ ವ್ಯಕ್ತಪಡಿಸಿದ್ದಾರೆ.

minister-mb-patil-condoles-for-passes-away-of-senior-advocate-nariman
ಕಾವೇರಿಗಾಗಿ ರಾಜ್ಯದ ಪರ ವಾದಿಸಿದ್ದ ನಾರಿಮನ್ ನಿಧನ: ಸಚಿವ ಎಂ.ಬಿ.ಪಾಟೀಲ್ ಸಂತಾಪ

ಬೆಂಗಳೂರು: ಕಾವೇರಿ ಜಲ ವಿವಾದದಲ್ಲಿ ರಾಜ್ಯದ ಪರ ವಾದಿಸಿ, ನ್ಯಾಯ ಒದಗಿಸಿದ ಖ್ಯಾತ ನ್ಯಾಯವಾದಿ ಫಾಲಿ ಎಸ್ ನಾರಿಮನ್ ಅವರು ಇಂದು ದೆಹಲಿಯಲ್ಲಿ ನಿಧನರಾಗಿದ್ದಾರೆ. ನಾರಿಮನ್ ನಿಧನಕ್ಕೆ ಬೃಹತ್​ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ‌.ಬಿ.ಪಾಟೀಲ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

'ನಾರಿಮನ್ ಅವರು ಈ ದೇಶ ಕಂಡ ಅಪ್ರತಿಮ ನ್ಯಾಯವಾದಿಗಳಲ್ಲಿ ಒಬ್ಬರು. ವೃತ್ತಿಯಲ್ಲಿ ಮೌಲ್ಯಗಳನ್ನು ಪ್ರತಿನಿಧಿಸುತ್ತಿದ್ದ ಅವರು, ಉದಾರ ಮಾನವತಾವಾದಿ ಆಗಿದ್ದರು. ನಾನು ಜಲ ಸಂಪನ್ಮೂಲ ಸಚಿವನಾಗಿದ್ದಾಗ ಕಾವೇರಿ ನೀರಿನ ಹಕ್ಕಿನ ವಿಚಾರವಾಗಿ ಮಾತನಾಡುವಾಗ ಇದು ಅನುಭವಕ್ಕೆ ಬಂದಿತ್ತು' ಎಂದು ಅವರು ತಮ್ಮ ಶೋಕ ಸಂದೇಶದಲ್ಲಿ ಹೇಳಿದ್ದಾರೆ.

ಕಾವೇರಿ ಜಲ ವಿವಾದ ಭುಗಿಲೆದ್ದಾಗ ನಾರಿಮನ್ ಅವರು ಕರ್ನಾಟಕದ ಹಕ್ಕನ್ನು ಸಮರ್ಥವಾಗಿ ಮಂಡಿಸಿದ್ದರು. ಅವರ ವಾದದಿಂದಾಗಿ ರಾಜ್ಯಕ್ಕೆ ಹೆಚ್ಚು ನೀರು ಸಿಕ್ಕಿತು. ನಮ್ಮ ಅಹವಾಲುಗಳನ್ನು ನಾರಿಮನ್ ಅವರು ಸದಾ ಸಹಾನುಭೂತಿಯಿಂದ ಆಲಿಸುತ್ತಿದ್ದರು ಎಂದು ಅವರು ಸ್ಮರಿಸಿದ್ದಾರೆ.

ನಾರಿಮನ್ ಅವರೊಂದಿಗೆ ನನಗೆ ವೈಯಕ್ತಿಕವಾಗಿ ಗಾಢ ಸಂಬಂಧವಿತ್ತು. ಕಾವೇರಿ ನದಿಯ ವಿಚಾರದಲ್ಲಿ ಪ್ರತಿಯೊಂದು ವಿವರ ಮತ್ತು ಅಂಕಿ - ಅಂಶಗಳನ್ನೆಲ್ಲ ಅವರು ಕರತಲಾಮಲಕ ಮಾಡಿಕೊಂಡಿದ್ದರು. ಎಷ್ಟೋ ಸಂದರ್ಭಗಳಲ್ಲಿ ಅವರು ನಮ್ಮನ್ನೆಲ್ಲ ಉದ್ದೇಶಿಸಿ, ಸಚಿವರಾದವರು ಯಾವುದೇ ವಿಚಾರದ ಬಗ್ಗೆ ಸೂಕ್ತ ತಿಳಿವಳಿಕೆ ಹೊಂದಿರಬೇಕು ಎಂದು ಹೇಳುತ್ತಿದ್ದರು. ಅವರ ಇಂತಹ ಮಾತುಗಳು ನಮ್ಮ ಆತ್ಮಸಾಕ್ಷಿಯನ್ನು ಜಾಗೃತಗೊಳಿಸುತ್ತಿದ್ದವು ಎಂದು ಅವರು ನೆನಪಿಸಿಕೊಂಡಿದ್ದಾರೆ.

ಒಂದು ಹಂತದಲ್ಲಿ ನಾರಿಮನ್ ಅವರಿಗೆ ಅನಗತ್ಯವಾಗಿ ಅತ್ಯಧಿಕ ಶುಲ್ಕ ಪಾವತಿ ಮಾಡಲಾಗುತ್ತಿದೆ ಎನ್ನುವ ಅನಪೇಕ್ಷಿತ ಮಾತುಗಳು ಕೇಳಿಬಂದವು. ಆಗ ನೊಂದುಕೊಂಡ ನಾರಿಮನ್ ಅವರು ತಾವು ಹಿಂದೆ ಸರಿಯುವುದಾಗಿ ಹೇಳಿದರು. ಆ ಸಂದರ್ಭದಲ್ಲಿ ನಾನು ಅವರನ್ನು ಮನವೊಲಿಸಿ, ಪುನಃ ರಾಜ್ಯದ ಪರವಾಗಿ ವಾದಿಸುವಂತೆ ಮಾಡಿದೆ. ಅಂತಿಮವಾಗಿ ಅವರು ತಾವು ಕೊಟ್ಟ ಮಾತಿನಂತೆ ಕರ್ನಾಟಕಕ್ಕೆ ನ್ಯಾಯ ಒದಗಿಸಿ ಕೊಟ್ಟರು ಎಂದು ಅವರು ವಿವರಿಸಿದ್ದಾರೆ.

ಕಾವೇರಿ ನದಿ ನೀರಿನ ವಿಚಾರದಲ್ಲಿ ತಮಿಳುನಾಡು ಅವಾಸ್ತವಿಕವಾಗಿ ಮಾತನಾಡುತ್ತಿತ್ತು. ಆಗ ನಾರಿಮನ್ ಅವರು ಚೆನ್ನೈ ನಗರದ ಕುಡಿಯುವ ನೀರಿನ ಅಗತ್ಯಕ್ಕೆ ಕರ್ನಾಟಕ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರ ತಮ್ಮ ಪಾಲಿನ ತಲಾ 5 ಟಿಎಂಸಿ ಅಡಿ ನೀರನ್ನು ಉದಾರವಾಗಿ ಬಿಟ್ಟು ಕೊಟ್ಟಿರುವುದನ್ನು ನ್ಯಾಯ ಮಂಡಲಿಯ ಗಮನಕ್ಕೆ ತಂದರು. ಈ ಮೂಲಕ ಬೆಂಗಳೂರು ನಗರಕ್ಕೆ ಹೆಚ್ಚುವರಿಯಾಗಿ 4.75 ಟಿಎಂಸಿ ಅಡಿ ನೀರು ಸಿಗುವಂತೆ ನೋಡಿಕೊಂಡರು. ಇದಕ್ಕಾಗಿ ಬೆಂಗಳೂರು ನಗರದ ಜನ ನಾರಿಮನ್ ಅವರಿಗೆ ಸದಾ ಕೃತಜ್ಞರಾಗಿರುತ್ತಾರೆ ಎಂದು ಅವರು ಹೇಳಿದ್ದಾರೆ.

ಭಗವಂತನು ನಾರಿಮನ್ ಅವರ ಆತ್ಮಕ್ಕೆ ಶಾಂತಿ ನೀಡಲಿ ಮತ್ತು ಅವರ ಕುಟುಂಬದ ಸದಸ್ಯರಿಗೆ ಈ ನೋವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಕರುಣಿಸಲಿ ಎಂದು ಸಚಿವರು ಪ್ರಾರ್ಥಿಸಿದ್ದಾರೆ.

ಇದನ್ನೂ ಓದಿ: ಕರ್ನಾಟಕದ ಪರ ಕಾವೇದಿ ನದಿ ನೀರಿಗಾಗಿ ಹೋರಾಡಿದ್ದ ಹಿರಿಯ ವಕೀಲ ಪಾಲಿ ನಾರಿಮನ್ ನಿಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.