ETV Bharat / state

ಬೆಂಗಳೂರು: ಪರಿಚಯಸ್ಥನಿಂದ ಆ್ಯಸಿಡ್ ದಾಳಿ ಬೆದರಿಕೆ, ಪೊಲೀಸರಿಗೆ ವಿವಾಹಿತ ಮಹಿಳೆ ದೂರು

author img

By ETV Bharat Karnataka Team

Published : Feb 23, 2024, 1:43 PM IST

married woman complaint to police for acid attack threat by a person
ಬೆಂಗಳೂರು: ಪರಿಚಯಸ್ಥನಿಂದ ಆ್ಯಸಿಡ್ ದಾಳಿ ಬೆದರಿಕೆ, ಪೊಲೀಸರಿಗೆ ವಿವಾಹಿತ ಮಹಿಳೆ ದೂರು

ಪರಿಚಯಸ್ಥ ವ್ಯಕ್ತಿಯೊಬ್ಬ ಆ್ಯಸಿಡ್ ದಾಳಿ ನಡೆಸುವ ಜೀವ ಬೆದರಿಕೆ ಹಾಕಿರುವುದಾಗಿ ವಿವಾಹಿತ ಮಹಿಳೆಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ.

ಬೆಂಗಳೂರು : ಸಂಸಾರದ ಮಧ್ಯೆ ಕಿರುಕುಳ ನೀಡಿದ ಹೆಂಡತಿಯ ಪರಿಚಯಸ್ಥನ ಮೇಲೆ ಹಲ್ಲೆ ಮಾಡಿದ ಗಂಡ ಜೈಲುಪಾಲಾದರೆ, ಇತ್ತ ಅದೇ ಪರಿಚಯಸ್ಥ ವ್ಯಕ್ತಿಯಿಂದ ಜೀವ ಬೆದರಿಕೆ ಇದೆ ಎಂದು ಮಹಿಳೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

22 ವರ್ಷದ ಮಹಿಳೆ ನೀಡಿರುವ ದೂರಿನ ಅನ್ವಯ ಕುಮಾರಸ್ವಾಮಿ‌ ಎಂಬಾತನ ವಿರುದ್ಧ ಚಂದ್ರಾಲೇಔಟ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಇಂಟರೆಸ್ಟಿಂಗ್ ವಿಚಾರವೇನೆಂದರೆ, ಕುಮಾರಸ್ವಾಮಿಯ ಮೇಲೆ ಹಲ್ಲೆ ಮಾಡಿರುವ ಆರೋಪದಡಿ ದೂರುದಾರಳ ಗಂಡ ಸುಮಂತ್ ಎಂಬಾತನನ್ನು ಕಳೆದ ಜನವರಿ ತಿಂಗಳಲ್ಲಿ ಗಿರಿನಗರ ಠಾಣೆ ಪೊಲೀಸರು ಬಂಧಿಸಿದ್ದರು.

ಮಹಿಳೆಯ ಆರೋಪ ಹೀಗಿದೆ: ''ತನಗೆ ಪರಿಚಯವಿದ್ದ ಕುಮಾರಸ್ವಾಮಿ ತನ್ನನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದ. ಆದರೆ, ಸುಮಂತನನ್ನು ತಾನು 2-3 ವರ್ಷ ಪ್ರೀತಿಸಿ ಮದುವೆಯಾಗಿದ್ದೆ. ಆದರೂ ಸಹ ನಾನು ಕೆಲಸಕ್ಕೆ ಹೋಗುವಾಗ ಕುಮಾರಸ್ವಾಮಿ ಬಂದು ಅಡ್ಡಗಟ್ಟಿ ತನ್ನನ್ನು ಪ್ರೀತಿಸುವಂತೆ ಒತ್ತಾಯಿಸುತ್ತಿದ್ದ. ಇಲ್ಲದಿದ್ದರೆ, ಆ್ಯಸಿಡ್ ದಾಳಿ ಮಾಡುವುದಾಗಿ ಬೆದರಿಸುತ್ತಿದ್ದ. ಫೆಬ್ರವರಿ 3ರಂದು ಚಂದ್ರಾಲೇಔಟ್​​ನಲ್ಲಿರುವ ತನ್ನ ಮನೆಗೆ ಬಂದಿದ್ದ ಆರೋಪಿ, 'ನೀನು ನನಗೆ ಬೇಕು, ಗಂಡನನ್ನ ಬಿಟ್ಟು ನನ್ನ ಜೊತೆ ಬಾ' ಎನ್ನುತ್ತ ಮೈ-ಕೈ ಮುಟ್ಟಿ ಎಳೆದಾಡಿದ್ದಾನೆ. ಆ ಸಂದರ್ಭದಲ್ಲಿ ತನ್ನ ತಾಯಿ ಇದ್ದಿದ್ದರಿಂದ 'ಇವತ್ತು ನೀನು ಮಿಸ್ ಆಗಿದ್ದೀಯಾ, ನಿನ್ನ ಮೇಲೆ ಆ್ಯಸಿಡ್ ದಾಳಿ ಮಾಡುತ್ತೇನೆ'' ಎಂದು ಆರೋಪಿ ಬೆದರಿಸಿದ್ದಾನೆ ಎಂದು ಮಹಿಳೆ ದೂರಿದ್ದಾರೆ.

ಇದನ್ನೂ ಓದಿ: ನಿರುದ್ಯೋಗಿಗಳಿಗೆ ಉದ್ಯೋಗದ ಭರವಸೆ ನೀಡಿ ವಂಚಿಸುತ್ತಿದ್ದ ದಂಪತಿ ಬಂಧನ

ಮಹಿಳೆ ಈ ಬಗ್ಗೆ ಚಂದ್ರಾಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇತ್ತ ದೂರು ದಾಖಲಾಗುತ್ತಿದ್ದಂತೆ ಆರೋಪಿ ಪರಾರಿಯಾಗಿದ್ದು, ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಪಡೆದಿದ್ದಾನೆ ಎನ್ನಲಾಗಿದೆ.

ಕುಮಾರಸ್ವಾಮಿ ಆರೋಪ ಹೀಗಿತ್ತು: ಟಾಟಾ ಏಸ್ ಓಡಿಸಿಕೊಂಡು ಜೀವನ ನಿರ್ವಹಿಸುತ್ತಿದ್ದ ಕುಮಾರಸ್ವಾಮಿ, ''2020 ರಲ್ಲಿ ದೂರುದಾರಳ ಪರಿಚಯವಾಗಿತ್ತು. ಹೊಸಕೆರೆಹಳ್ಳಿಯಲ್ಲಿನ ತನ್ನ ಅಕ್ಕನ ಮನೆಗೆ ಬರುತ್ತಿದ್ದವಳೊಂದಿಗಿನ ಪರಿಚಯ ಬಳಿಕ ಪ್ರೀತಿಗೆ ತಿರುಗಿತ್ತು. ಆದರೆ, ನಂತರದ ದಿನಗಳಲ್ಲಿ ಮನಸ್ತಾಪ ಉಂಟಾಗಿದ್ದರಿಂದ ತಾನು ಅಂತರ ಕಾಡಿಕೊಂಡಿದ್ದೆ. 2023 ರಲ್ಲಿ ಆಕೆಗೆ ಸುಮಂತ್ ಎಂಬಾತನ ಜೊತೆಗೆ ವಿವಾಹವಾಗಿತ್ತು. ಅದಾದ ಬಳಿಕ‌ ಗುಂಪು ಕಟ್ಟಿಕೊಂಡು ಬಂದ ಆಕೆಯ ಗಂಡ ಸುಮಂತ್, ತನ್ನ ಮೇಲೆ ಹಲ್ಲೆ ಮಾಡಿದ್ದ'' ಎಂದು ಗಿರಿನಗರ ಠಾಣೆಗೆ ದೂರು ನೀಡಿದ್ದ. ಅದರ ಅನ್ವಯ ಆರೋಪಿ ಸುಮಂತ್​ನನ್ನು ಕಳೆದ ಜನವರಿಯಲ್ಲಿ ಪೊಲೀಸರು ಬಂಧಿಸಿದ್ದರು.

ಇದನ್ನೂ ಓದಿ: ಹಣಕ್ಕೆ ಬೇಡಿಕೆ ಇಟ್ಟು ಖಾಸಗಿ ಶಾಲೆಯ ಮಾಲೀಕನಿಗೆ ಬೆದರಿಕೆ ಆರೋಪ: ಓರ್ವ ಅರೆಸ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.