ETV Bharat / state

ಮೈಸೂರಿನಲ್ಲೊಂದು ಮಂತ್ರ ಮಾಂಗಲ್ಯ: 14 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ - Mantra Mangalya

author img

By ETV Bharat Karnataka Team

Published : May 11, 2024, 8:13 AM IST

14 ವರ್ಷಗಳಿಂದ ಪ್ರೀತಿಸುತ್ತಿದ್ದ ಅತಿಥಿ ಉಪನ್ಯಾಸಕರಾಗಿರುವ ಡಾ. ಬಿ. ರಮ್ಯಾ‌ ಹಾಗೂ ಆರ್. ರಘು ಅವರು ಮಂತ್ರ ಮಾಂಗಲ್ಯದ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

14 years love  Mysuru University  married life  Mysuru
ಮಂತ್ರ ಮಾಂಗಲ್ಯ: ರಮ್ಯಾ, ರಘು ನಡುವಿನ 14 ವರ್ಷಗಳ ಪ್ರೀತಿಗೆ ಮದುವೆ ಭಾಗ್ಯ (ETV Bharat)

ಮೈಸೂರು: 14 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಶುಕ್ರವಾರ ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಮೈಸೂರು ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ವಿಭಾಗದಲ್ಲಿ ಅತಿಥಿ ಉಪನ್ಯಾಸಕರಾಗಿರುವ ಡಾ. ಬಿ. ರಮ್ಯಾ‌ ಹಾಗೂ ಆರ್. ರಘು ಅವರು ಮಾನವ ಮಂಟಪದ ಆಶ್ರಯದಲ್ಲಿ ನಗರದ ಗೋಕುಲಂನ ಶ್ಯಾಗಲೆ ಹೌಸ್​ನಲ್ಲಿ ಮಂತ್ರ ಮಾಂಗಲ್ಯದ ಮೂಲಕ ಮದುವೆಯಾದರು.

ಚಿತ್ರದುರ್ಗದ, ಭೋವಿ ಜನಾಂಗದ ರಮ್ಯಾ ಹಾಗೂ ಮೈಸೂರು ತಾಲ್ಲೂಕಿನ ನಾಗನಹಳ್ಳಿ ಗ್ರಾಮದ, ದಲಿತರಾದ ರಘು ಅವರು ಎಂ.ಎ ಓದುವಾಗಿನಿಂದ ಪ್ರೀತಿಸಿದವರು. ಬಸವ ಜಯಂತಿಯಂದು ಮದುವೆಯಾದ ಅವರಿಗೆ ವಿವಾಹ ಸಂಹಿತೆಯನ್ನು ಉಗ್ರನರಸಿಂಹೇಗೌಡ ಬೋಧಿಸಿದರು. ಬಳಿಕ ಮಾತನಾಡಿದ ಅವರು, ''ಸಾಲ ಮಾಡಿ ಮದುವೆ ಮಾಡಿದವರು ಕೆಟ್ಟು ಹೋಗುತ್ತಾರೆ. ಯಾರಿಗೋ ತೋರಿಸಲು ದೊಡ್ಡ ಚೌಟ್ರಿಯಲ್ಲಿ ಮದುವೆ ಮಾಡಿ ಮೈಸುಟ್ಟುಕೊಳ್ಳುತ್ತಾರೆ. ಆರೋಗ್ಯಕರ ಸಮಾಜಕ್ಕೆ ಪ್ರೇಮ ವಿವಾಹಗಳು, ಅಂತರ್ಜಾತಿ ವಿವಾಹಗಳು ಹೆಚ್ಚಬೇಕು'' ಎಂದರು.

ಕುವೆಂಪು ಅವರ ಮಂತ್ರ ಮಾಂಗಲ್ಯ ಮದುವೆಯ ಪ್ರಮಾಣ ವಚನವನ್ನು ಬೋಧಿಸಿದ ಮಾನವ ಮಂಟಪದ ಸಂಚಾಲಕ ಡಾ. ಕಾಳಚನ್ನೇಗೌಡ ಮಾತನಾಡಿ, ''ಅಂತರ್ಜಾತಿ ಮದುವೆಗಳನ್ನು ಜನರು ಒಪ್ಪಿಕೊಳ್ಳುತ್ತಿದ್ದಾರೆ. ಮೊದಲಿನಷ್ಟು ವಿರೋಧವಿಲ್ಲ. ಸುತ್ತೂರು, ಧರ್ಮಸ್ಥಳ, ಚುಂಚನಗಿರಿಯಲ್ಲಿ ಸರಳವಾಗಿ ಮದುವೆಗಳಾಗುತ್ತಿವೆ. ಸರಳವಾಗಿ ಮದುವೆಯಾದರೆ ಜನರು ಹಿಯಾಳಿಸುತ್ತಾರೆ ಎಂಬ ಯೋಚನೆ ಬಿಡಿ'' ಎಂದು ಸಲಹೆ ನೀಡಿದರು.

ಲೇಖಕ ಡಾ. ಮುಜಾಫರ್ ಅಸಾದಿ ಮಾತನಾಡಿ, ''ಇವರಿಬ್ಬರೂ ನನ್ನ ಶಿಷ್ಯರು. ನನ್ನ ಮಾರ್ಗದರ್ಶನದಲ್ಲಿ ರಮ್ಯಾ ಪಿಎಚ್.ಡಿ ಮಾಡಿದ್ದಾರೆ. ಕನ್ನಂಬಾಡಿ ಅಣೆಕಟ್ಟೆಯಂತೆ ಗಟ್ಟಿ ಜೀವನ ನಡೆಸಿ, ಸಮೃದ್ಧಿವಾಗಿ ಬಾಳಿ'' ಎಂದು ಹಾರೈಸಿದರು.

ಕವಯಿತ್ರಿ ಡಾ.ಲತಾ ಮೈಸೂರು ಮಾತನಾಡಿ, ''ಮದುವೆಯಾಗುವುದರಿಂದ ದೇಹ, ಮನಸು, ಆತ್ಮ ಒಂದಾಗುತ್ತವೆ. ಇರುವೆಯಿಂದ ಹಿಡಿದು ಎಲ್ಲಾ ಪ್ರಾಣಿಗಳು ತಮಗೆ ಇಷ್ಟವಾದ ಸಂಗಾತಿಗಳೊಂದಿಗೆ ಸೇರಿ ಸಂತಾನೋತ್ಪತ್ತಿ ಮಾಡುತ್ತವೆ. ಆದರೆ, ಪ್ರೀತಿಸಿ ಮದುವೆಯಾಗುವವರ ನಡುವೆ ಜಾತಿ ಗೋಡೆ ಏಕೆ'' ಎಂದು ಪ್ರಶ್ನಿಸಿದರು.

''ಕುವೆಂಪು ಅವರ ಪುತ್ರ ಪೂರ್ಣಚಂದ್ರ ತೇಜಸ್ವಿ ಅವರು, ರಾಜೇಶ್ವರಿ ಅವರನ್ನು ಪ್ರೀತಿಸಿದರು. ಅವರ ಮದುವೆಯನ್ನು ಕುವೆಂಪು ಅವರೇ ಮಂತ್ರಮಾಂಗಲ್ಯ ಮೂಲಕ ನೆರವೇರಿಸಿದರು. ಕುವೆಂಪು ಅವರ ಇನ್ನೊಬ್ಬ ಪುತ್ರ ಚೈತ್ರ ಅವರು ಕ್ರಿಶ್ಚಿಯನ್ ಹುಡುಗಿಯನ್ನು ಮದುವೆಯಾದರು. ಆದ್ರೂ ಅಂತರಮತೀಯ ವಿವಾಹಕ್ಕೆ ಕುವೆಂಪು ಹಾಗೂ ಅವರ ಪತ್ನಿ ಹೇಮಾವತಿ ಅಡ್ಡಿಬರಲಿಲ್ಲ'' ಎಂದು ಡಾ. ಲತಾ ಹೇಳಿದರು.

ಹಿರಿಯ ಲೇಖಕ ಹೊರೆಯಾಲ ದೊರೆಸ್ವಾಮಿ ಮಾತನಾಡಿ, ''ಸಾಲ ಮಾಡಿ ಓಲೆ ಖರೀದಿಸಿದ ನಂತರ ಓಲೆ ಒತ್ತೆಯಿಟ್ಟು ಬಡ್ಡಿಗೆ ದುಡ್ಡು ಕೊಡುವಂತಾಗಬಾರದು. ಸಾಲ ಮಾಡಿ ಮದುವೆ ಮಾಡುವ ಅಗತ್ಯವಿಲ್ಲ'' ಎಂದರು.

ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಡಾ. ಭೂಮಿಗೌಡ ಮಾತನಾಡಿ, ''36 ವರ್ಷಗಳ ಹಿಂದೆ ಸಬಿಹಾ ಅವರನ್ನು ಮದುವೆಯಾಗುವಾಗ ನಮ್ಮ ಊರವರೇ ನೆರವೇರಿಸಿದರು'' ಎಂದರು.

''ಅಸಮಾನತೆಯ ಸಮಾಜದಲ್ಲಿ ಸಮಾನತೆ ಸೃಷ್ಟಿಸಲು ಮೀಸಲಾತಿ ಇದೆ. ಅಂತರ್ಜಾತಿ ಮದುವೆಯಾದವರು ತಮ್ಮ ಮಕ್ಕಳ ಮೀಸಲಾತಿಯನ್ನು ತಾವೇ ನಿರ್ಧರಿಸಬಹುದು. ಇಲ್ಲವೆ 18 ವರ್ಷವಾದ ನಂತರ ಮಕ್ಕಳ ನಿರ್ಧಾರಕ್ಕೆ ಬಿಡಬಹುದು'' ಎಂದು ಧನಂಜಯ ಎಲಿಯೂರು ಹೇಳಿದರು.

ಮದುವೆಯಾದ ಡಾ.ರಮ್ಯಾ ಅವರ ತಾಯಿ ಶಾಂತಕುಮಾರಿ, ತಂದೆ ಭುವನೇಶ್ ಹಾಗೂ ರಘು ತಾಯಿ ಭಾಗ್ಯ ಇದ್ದರು.

ಇದನ್ನೂ ಓದಿ: ಅಕ್ಷಯ ತೃತೀಯದಂದು ಚಿನ್ನದ ಖರೀದಿ ಭರಾಟೆ: ಶುಭ ದಿನದಂದೇ ಬರೋಬ್ಬರಿ 950 ರೂ. ಹೆಚ್ಚಳ; ಬೆಂಗಳೂರಲ್ಲಿ ಬೆಲೆ ಎಷ್ಟು ಗೊತ್ತಾ? - Gold Silver Prices

ETV Bharat Logo

Copyright © 2024 Ushodaya Enterprises Pvt. Ltd., All Rights Reserved.