ETV Bharat / state

ಮಂಗಳೂರು: ಜೆರೋಸಾ ಶಾಲೆಯ ವಿವಾದದ ಬೆನ್ನಲ್ಲೇ ಡಿಡಿಪಿಐ ವರ್ಗಾವಣೆ

author img

By ETV Bharat Karnataka Team

Published : Feb 14, 2024, 9:49 PM IST

ಮಂಗಳೂರಿನ ಜೆರೋಸಾ ಶಾಲೆಯ ವಿವಾದದ ಬಳಿಕ ದಕ್ಷಿಣ ಕನ್ನಡ ಜಿಲ್ಲಾ ಡಿಡಿಪಿಐ ಅವರನ್ನು ವರ್ಗಾಯಿಸಿ ರಾಜ್ಯ ಸರ್ಕಾರ ಆದೇಶಿಸಿದೆ.

ಮಂಗಳೂರು
ಮಂಗಳೂರು

ಕಾಂಗ್ರೆಸ್ ಮುಖಂಡ ಐವನ್ ಡಿಸೋಜ ಪ್ರತಿಕ್ರಿಯೆ

ಮಂಗಳೂರು: ನಗರದ ಜೆರೋಸಾ ಶಾಲೆಯ ಶಿಕ್ಷಕಿಯೊಬ್ಬರು ಧಾರ್ಮಿಕ ನಿಂದನೆ ಮಾಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಉಂಟಾದ ಗೊಂದಲಗಳ ಮಧ್ಯೆ ದಕ್ಷಿಣ ಕನ್ನಡ ಜಿಲ್ಲಾ ಡಿಡಿಪಿಐ ಅವರನ್ನು ವರ್ಗಾಯಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ದ.ಕ ಜಿಲ್ಲಾ ವಿದ್ಯಾಂಗ ಉಪನಿರ್ದೇಶಕರಾದ ದಯಾನಂದ ನಾಯ್ಕರನ್ನು ದಿಢೀರ್ ವರ್ಗಾವಣೆ ಮಾಡಲಾಗಿದೆ. ನೂತನ ಡಿಡಿಪಿಐ ಆಗಿ ವೆಂಕಟೇಶ ಸುಬ್ರಾಯ ಪಟಗಾರ ಅವರನ್ನು ನಿಯುಕ್ತಿಗೊಳಿಸಲಾಗಿದೆ.

ಶಾಲೆಯ ವಿವಾದದ ನಿರ್ವಹಣೆಯಲ್ಲಿ ವಿಫಲರಾಗಿರುವ ಕುರಿತು ಹಾಗೂ ಡಿಡಿಪಿಐ ವರ್ತನೆ ಬಗ್ಗೆ ಕಾಂಗ್ರೆಸ್ ನಾಯಕರು ತೀವ್ರ ಅಸಮಾಧಾನ ಹೊರಹಾಕಿದ್ದರು. ಮಂಗಳವಾರ ಶಾಲೆಗೆ ಭೇಟಿ ನೀಡಿದ್ದ ಮಾಜಿ ಸಚಿವರಾದ ರಮಾನಾಥ ರೈ, ವಿನಯಕುಮಾರ್ ಸೊರಕೆ ಅವರು ಸಮಸ್ಯೆ ಉದ್ಭವ ಆದಾಗಲೇ ಶಿಕ್ಷಣ ಇಲಾಖೆ ಅಧಿಕಾರಿಗಳು ಸರಿಪಡಿಸಬೇಕಿತ್ತು. ಆದರೆ ಅಧಿಕಾರಿಗಳು ಕರ್ತವ್ಯ ನಿರ್ವಹಣೆಯಲ್ಲಿ ಹಿಂದುಳಿದಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು. ಮಾಜಿ ಶಾಸಕರಾದ ಐವನ್ ಡಿಸೋಜ, ಜೆ.ಆರ್.ಲೋಬೊ ಕೂಡ ಅಧಿಕಾರಿಗಳ ವರ್ತನೆಯನ್ನು ಖಂಡಿಸಿದ್ದರು.

ಇದರ ಬೆನ್ನಲ್ಲೇ ಡಿಡಿಪಿಐ ದಯಾನಂದ ನಾಯ್ಕ ಅವರನ್ನು ಬೆಳಗಾವಿ ಸರ್ಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯಕ್ಕೆ ಪ್ರವಾಚಕರನ್ನಾಗಿ ನೇಮಿಸಿ ವರ್ಗಾವಣೆ ಮಾಡಲಾಗಿದೆ. ಕಲಬುರಗಿಯ ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತರ ಕಚೇರಿಯಲ್ಲಿ ಉಪನಿರ್ದೇಶಕರಾಗಿದ್ದ (ಯೋಜನೆ) ವೆಂಕಟೇಶ ಸುಬ್ರಾಯ ಪಟಗಾರ ಅವರನ್ನು ದಕ್ಷಿಣ ಕನ್ನಡ ಡಿಡಿಪಿಐ ಆಗಿ ನಿಯುಕ್ತಿಗೊಳಿಸಲಾಗಿದೆ.

ಸಿಎಂಗೆ ದೂರು-ಐವನ್ ಡಿಸೋಜ: ಶಾಲಾ ಶಿಕ್ಷಕಿಯಿಂದ ಧಾರ್ಮಿಕ ನಿಂದನೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲಾ ಗೇಟ್ ಮುಂದೆ ಪ್ರತಿಭಟನೆ ನಡೆಸಿದ ಶಾಸಕ ವೇದವ್ಯಾಸ ಕಾಮತ್ ಮಕ್ಕಳನ್ನು ಪ್ರಚೋದಿಸಿದ್ದು, ಇವರ ವಿರುದ್ದ ಹಕ್ಕು ಬಾಧ್ಯತಾ ಸಮಿತಿಯಿಂದ ತನಿಖೆ ಮಾಡಿಸಲು ಸ್ಪೀಕರ್ ಹಾಗೂ ಸಿಎಂಗೆ ದೂರು ಸಲ್ಲಿಸುತ್ತೇವೆ ಎಂದು ಕಾಂಗ್ರೆಸ್ ಮುಖಂಡ ಐವನ್ ಡಿಸೋಜ ಹೇಳಿದರು.

ಜೆರೋಸಾ ಶಾಲೆಯ ಶಿಕ್ಷಕಿಯಿಂದ ಹಿಂದೂಧರ್ಮದ ಅವಹೇಳನ ಆರೋಪದ ವಿಚಾರದಲ್ಲಿ ಶಾಸಕ ವೇದವ್ಯಾಸ ಕಾಮತ್ ಶಾಲೆಯ ಬಗ್ಗೆ, ಕ್ರೈಸ್ತ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಅಲ್ಲದೆ ಮಕ್ಕಳನ್ನು ಪ್ರಚೋದಿಸಿ ಜೈ ಶ್ರೀರಾಮ್ ಘೋಷಣೆ ಮಾಡಿಸಿದ್ದಾರೆ. ಆದ್ದರಿಂದ ಅವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲು ಮಾಡುತ್ತೇವೆ. ಜೊತೆಗೆ ವೇದವ್ಯಾಸ ಕಾಮತ್ ಅವರ ಶಾಸಕತ್ವ ರದ್ದಾಗುವವರೆಗೂ ಹೋರಾಟ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

ಶಾಸಕರು ಪ್ರಿನ್ಸಿಪಾಲ್ ಚೇಂಬರ್​ಗೆ ಹೋಗಿ ಚರ್ಚಿಸುವುದು ಬಿಟ್ಟು ಗೇಟ್​ನಲ್ಲಿ ನಿಲ್ಲಿಸಿ ಬಾಯಿಗೆ ಬಂದಂತೆ ಮಾತಾಡಿದ್ದಾರೆ. ಇವರೂ ಚುನಾಯಿತ ಪ್ರತಿನಿಧಿಯೇ? ಘಟನೆಯನ್ನು ನಾಲ್ಕು ಗೋಡೆಯೊಳಗೆ ಇತ್ಯರ್ಥ ಮಾಡಬೇಕಾದ ಇವರು, ಬೀದಿಯಲ್ಲಿ ನಿಂತು ಗಲಾಟೆ ಮಾಡಿಸಿ, ವಿದ್ಯಾದೇಗುಲಕ್ಕೆ ಅವಮಾನ ಮಾಡಿದ್ದಾರೆ ಎಂದು ಕಿಡಿಕಾರಿದರು.

ಶಾಸಕರು ಬೆದರಿಕೆ ಹಾಕಿ ವಿದ್ಯಾರ್ಥಿಗಳನ್ನು ಕರೆಸಿ ಜೈಕಾರ ಹಾಕಿಸಿದ್ದಾರೆ. ಇದರಿಂದ ನಾಗರಿಕರ ಘನತೆಗೆ ಕುಂದಾಗಿದೆ. ಇದು ನಾಚಿಕೆಗೇಡು. ಇವರು ಕ್ಷೇತ್ರವನ್ನು 10 ವರ್ಷ ಹಿಂದಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಮತ್ತೊಬ್ಬ ಶಾಸಕ ಭರತ್ ಶೆಟ್ಟಿ ಕ್ರಿಶ್ಚಿಯನ್ ಶಾಲೆಗೆ ಬಹಿಷ್ಕಾರ ಹಾಕಿ ಅಂತಾರೆ. ಕಳಕಳಿ ಇದ್ದಿದ್ದರೆ ನಾಲ್ಕು ಗೋಡೆಯೊಳಗೆ ತನಿಖೆ ಮಾಡಿಸ್ತಿದ್ರಿ. ನಿಮ್ಮಲ್ಲಿ ಪ್ರಾಮಾಣಿಕತೆ ಇಲ್ಲ. ಜನರೆದುರು ಹೀರೋ ಆಗಬೇಕು ಅಂತ ಈ ರೀತಿ ಮಾಡಿದ್ದೀರಿ ಎಂದು ಆರೋಪಿಸಿದರು.

ಇದನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆ. ಶಾಸಕ ಎಂದೂ ಈ ರೀತಿ ಕೆಳಮಟ್ಟಕ್ಕೆ ಹೋದದ್ದು ಇಲ್ಲ. ಈ ಬಗ್ಗೆ ಸ್ಪೀಕರ್​ಗೆ ದೂರು ನೀಡಲಿದ್ದೇನೆ. ಸದಸ್ಯರ ನಡವಳಿಕೆ ತನಿಖೆ ಮಾಡುವ ಅಧಿಕಾರ ಸ್ಪೀಕರ್​ಗಿದೆ ಎಂದರು. ಸ್ಪೀಕರ್ ಮತ್ತು ಸಿಎಂಗೆ ದೂರು ಕೊಡುತ್ತೇವೆ. ಅದನ್ನು ಎಲ್ಲ ಪಕ್ಷಗಳ ಹಕ್ಕು ಬಾಧ್ಯತಾ ಸಮಿತಿಗೆ ಕೊಡಬೇಕು ಎಂದು ತಿಳಿಸುತ್ತೇನೆ. ಅವರು ಸ್ಥಳಕ್ಕೆ ಭೇಟಿ ನೀಡಿ, ತನಿಖೆ ಮಾಡಿ ಸದಸ್ಯತ್ವ ವಜಾಗೊಳಿಸಲು ಅಧಿಕಾರವಿದೆ ಎಂದು ಹೇಳಿದರು.

ಇನ್ನು ಶಾಲಾ ಪೋಷಕರಿಂದ ಕ್ರಿಮಿನಲ್ ಕೇಸ್ 295 ಎ ಐಪಿಸಿ ಪ್ರಕಾರ ದಾಖಲು ಮಾಡಲಿದ್ದೇವೆ. ಮಕ್ಕಳನ್ನು ಬೀದಿಗೆ ತಂದು ಘೋಷಣೆ ಕೂಗಿಸಿದ್ದು ಮಾನವ ಹಕ್ಕು ಉಲ್ಲಂಘನೆ. ಮಕ್ಕಳ ಹಕ್ಕು ಉಲ್ಲಂಘನೆ. ಈ ಬಗ್ಗೆಯೂ ದೂರು ಸಲ್ಲಿಸುತ್ತೇವೆ ಎಂದರು.

ಇದನ್ನೂ ಓದಿ: ಮಂಗಳೂರು: ಧಾರ್ಮಿಕ ನಿಂದನೆ ಆರೋಪ; ಸಂತ ಜೆರೋಸಾ ಶಾಲಾ ಶಿಕ್ಷಕಿ ವಜಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.