ETV Bharat / state

ರೋಗಬಾಧೆಯಿಂದ ಕುಮಟಾದ ಸಿಹಿ ಈರುಳ್ಳಿ ಇಳುವರಿ ಕುಸಿತ; ಗಗನಕ್ಕೇರಿದ ಬೆಲೆ - Kumta Sweet Onion

author img

By ETV Bharat Karnataka Team

Published : May 23, 2024, 10:55 AM IST

Updated : May 23, 2024, 11:41 AM IST

ಉತ್ತರ ಕನ್ನಡದಲ್ಲಿ ಕುಮಟಾದ ಸಿಹಿ ಈರುಳ್ಳಿಗೆ ಈ ಭಾರೀ ಬೇಡಿಕೆ ಇದ್ದು, ರೋಗಬಾಧೆಯಿಂದ ಆವಕ ಕುಸಿದಿದೆ.

ಕುಮಟಾದ ಸಿಹಿ ಈರುಳ್ಳಿ
ಕುಮಟಾದ ಸಿಹಿ ಈರುಳ್ಳಿ (ETV Bharat)

ಕುಮಟಾದ ಸಿಹಿ ಈರುಳ್ಳಿ ಇಳುವರಿ ಕುಸಿತ (ETV Bharat)

ಉತ್ತರ ಕನ್ನಡ: ಜಿಲ್ಲೆಯ ಕುಮಟಾ, ಹೊನ್ನಾವರ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಏಪ್ರಿಲ್​-ಮೇ ತಿಂಗಳು ಬಂತೆಂದರೆ ಸಾಕು ದಾರಿಯುದ್ದಕ್ಕೂ ದ್ರಾಕ್ಷಿ ಮಾರಾಟ ಮಾಡಿದಂತೆ ಈರುಳ್ಳಿ ಮಾರಾಟ ನಡೆಯುತ್ತದೆ. ಕುಮಟಾದಲ್ಲಿ ಬೆಳೆಯುವ ಸಿಹಿ ಈರುಳ್ಳಿಗೆ ಬಹುಬೇಡಿಕೆ ಇರುವುದರಿಂದ ಪ್ರತೀ ವರ್ಷ ರಾಜ್ಯ, ಹೊರರಾಜ್ಯದ ಜನರು ಖರೀದಿ ಮಾಡುತ್ತಾರೆ. ಆದರೆ ಈ ಬಾರಿ ರೋಗಬಾಧೆಯಿಂದಾಗಿ ಮಾರುಕಟ್ಟೆಯಲ್ಲಿ ಬೇಡಿಕೆ ಇದ್ದರೂ ಈರುಳ್ಳಿ ಇಲ್ಲ.

ಮಾರುಕಟ್ಟೆಗೆ ಬಂದ ಅಲ್ಪಸ್ವಲ್ಪ ಈರುಳ್ಳಿ ಬೆಲೆ ಗಗನಕ್ಕೇರಿದೆ. ಹೀಗಾಗಿ ಅಪರೂಪದ ಈರುಳ್ಳಿಗೆ ಬಹು ಬೇಡಿಕೆ ಸೃಷ್ಟಿಯಾಗಿದೆ. ಕುಮಟಾ ತಾಲೂಕಿನ ಅಳ್ವೇಕೋಡಿ, ವನ್ನಳ್ಳಿ, ಗೋಕರ್ಣ ಸೇರಿದಂತೆ ಇನ್ನಿತರ ಭಾಗಗಳಲ್ಲಿ ಕಳೆದ ಕೆಲವು ವರ್ಷಗಳ ಹಿಂದೆ ಹೇರಳವಾಗಿ ಬೆಳೆಯುತ್ತಿದ್ದ ಸಿಹಿ ಈರುಳ್ಳಿ ಪ್ರಮಾಣ ಇದೀಗ ಗಣನೀಯ ಇಳಿಕೆಯಾಗಿದೆ. ಹಾವುಸುಳಿ ರೋಗದಿಂದಾಗಿ ಬೆಳೆಯನ್ನು ಆರಂಭದಲ್ಲಿಯೇ ಉಳಿಸಿಕ್ಕೊಳ್ಳಲು ಸಾಧ್ಯವಾಗದೇ ರೈತರು ತತ್ತರಿಸುವಂತಾಗಿದೆ. ಗೋವಾ, ಮಹಾರಾಷ್ಟ್ರ, ಕೇರಳ ಭಾಗಕ್ಕೆ ಲಾರಿಗಟ್ಟಲೆ ಈರುಳ್ಳಿ ರಪ್ತು ಮಾಡುತ್ತಿದ್ದ ರೈತರು ಇದೀಗ ಸ್ಥಳೀಯ ಮಾರುಕಟ್ಟೆಗೆ ಪೂರೈಕೆ ಮಾಡಲು ಸಾಧ್ಯವಾಗದಷ್ಟು ಬೆಳೆ ಕೈಕೊಟ್ಟಿದೆ.

ಸದ್ಯ ಅಳ್ವೇಕೋಡಿ ಭಾಗದಲ್ಲಿ ಮೂರು-ನಾಲ್ಕು ಅಂಗಡಿಗಳ ಮೂಲಕ ಮಾತ್ರ ಈರುಳ್ಳಿ ಮಾರಾಟ ಮಾಡಲಾಗುತ್ತಿದೆ. ಬೇಡಿಕೆಗೆ ತಕ್ಕಷ್ಟು ಈರುಳ್ಳಿ ಮಾರುಕಟ್ಟೆಗೆ ಬಾರದ ಕಾರಣ ಸಾಮಾನ್ಯ ಈರುಳ್ಳಿಗಿಂತಲೂ ಎರಡು ಮೂರು ಪಟ್ಟು ದರ ಹೆಚ್ಚಳವಾಗಿದೆ. ಸಣ್ಣ ಗಾತ್ರದ ಈರುಳ್ಳಿಗಳನ್ನು ಪ್ರತೀ ಕೆ.ಜಿಗೆ 60-70 ರೂ. ಗೆ ಮಾರಾಟ ಮಾಡಲಾಗುತ್ತಿದೆ. ಇನ್ನು ದೊಡ್ಡ ಪ್ರಮಾಣದ ಈರುಳಿ ಪ್ರತೀ ಕೆ.ಜಿಗೆ 80-120 ರೂವರೆಗೂ ಮಾರಾಟ ಮಾಡಲಾಗುತ್ತಿದೆ. ಅಪರೂಪದ ಸಿಹಿ ಈರುಳ್ಳಿ ಎಲ್ಲಿಯೂ ಸಿಗದ ಕಾರಣ ಕೆಲವರು ದರ ಹೆಚ್ಚಾದರೂ ಖರೀದಿಸಿ ಕೊಂಡೊಯ್ಯುತ್ತಿದ್ದಾರೆ. ಈ ಹಿಂದೆ 20-40 ಕ್ವಿಂಟಾಲ್ ಈರುಳ್ಳಿ ಬೆಳೆಯುವವರು ರೋಗದಿಂದಾಗಿ 3-4 ಕ್ವಿಂಟಾಲ್​​ ಬೆಳೆಯುತ್ತಿದ್ದಾರೆ. ಕೆಲವು ರೈತರು ಈರುಳ್ಳಿ ಬೆಳೆಯುವುದನ್ನೇ ನಿಲ್ಲಿಸುತ್ತಿದ್ದಾರೆ ಎನ್ನುತ್ತಾರೆ ವ್ಯಾಪಾರಸ್ಥ ಮಂಜುನಾಥ ಪಟಗಾರ.

ಈರುಳ್ಳಿ ಬೆಳೆಗೆ ತಗುಲಿದ ರೋಗ ನಿವಾರಣೆಗೆ ತೋಟಗಾರಿಕಾ ಇಲಾಖೆ ಅಧಿಕಾರಿಗಳು, ವಿಜ್ಞಾನಿಗಳು ಭೇಟಿ ನೀಡಿ ಪರಿಶೀಲಿಸಿ ಪ್ರಯೋಗ ಮಾಡಿ ಔಷಧಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಸಂಬಂಧಪಟ್ಟ ಇಲಾಖೆ ಈ ಬಗ್ಗೆ ಗಮನಹರಿಸಿ ಅಪರೂಪದ ಈರುಳ್ಳಿಗೆ ಅಂಟಿದ ರೋಗ ನಿವಾರಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಆ ಮೂಲಕ ಅವನತಿಯತ್ತ ಜಾರುತ್ತಿರುವ ಈರುಳ್ಳಿಯನ್ನು ರಕ್ಷಣೆ ಮಾಡಬೇಕು ಎಂದು ಅವರು ಮನವಿ ಮಾಡಿದರು.

ಸೆಗಣಿ ಗೊಬ್ಬರದ ಈರುಳ್ಳಿಗೆ ಬಹು ಬೇಡಿಕೆ: ಇದೇ ಪ್ರದೇಶಗಳಲ್ಲಿ ಸಗಣಿ ಗೊಬ್ಬರ ಬೆಳೆಯುವ ಸಿಹಿ ಈರುಳ್ಳಿಗೂ ಕೂಡ ಇದೀಗ ಬಹುಬೇಡಿಕೆ ಸೃಷ್ಟಿಯಾಗಿದೆ. ಕೆಲವು ವರ್ಷದಿಂದ ರೋಗ ಬಾಧೆಯಿಂದ ತತ್ತರಿಸಿರುವ ರೈತರು ಈಗ ಕೇವಲ ಸಗಣಿ ಗೊಬ್ಬರ ಬಳಸಿ ಸಿಹಿ ಈರುಳ್ಳಿ ಬೆಳೆಯುತ್ತಿದ್ದಾರೆ. ಕೆಲವೆಡೆ ಇದು ಉತ್ತಮ ಇಳುವರಿ ನೀಡಿದ್ದು ದರ ಕೂಡಾ ಮಾರುಕಟ್ಟೆಯಲ್ಲಿ ಹೆಚ್ಚಿದ್ದು ರೈತರಿಗೆ ವರವಾಗಿದೆ. ವನ್ನಳ್ಳಿಯ ಗ್ರಾಮದಲ್ಲಿ ಕೆಲವು ರೈತರು ಈ ಪ್ರಯೋಗ ನಡೆಸಿ ಯಶಸ್ವಿಯಾಗಿದ್ದಾರೆ. ಈ ಈರುಳ್ಳಿ ಮಾರುಕಟ್ಟೆಗಳಲ್ಲಿ 150 ರೂಗೆ ಮಾರಾಟವಾಗುತ್ತಿದೆ ಎಂದು ವ್ಯಾಪಾರಸ್ಥ ಮಂಜುನಾಥ ಪಟಗಾರ ತಿಳಿಸಿದರು.

ಹೇಗಿರುತ್ತೆ ಹಾವುಸುಳಿ ರೋಗ?: ಸಿಹಿ ಈರುಳ್ಳಿ ಬೀಜಗಳನ್ನು ಹಾಕಿ ಬೆಳೆ ಬರುವ ಹೊತ್ತಿಗೆ ಆರಂಭವಾಗುವ ಈ ಹಾವುಸುಳಿ ರೋಗದಿಂದಾಗಿ, ಸಸಿಯಾಗುತ್ತಿದ್ದಂತೆಯೇ ಬೆಳೆಯು ಕೊಳೆಯಲು ಆರಂಭವಾಗುತ್ತದೆ. ಇದರಿಂದ ಈರುಳ್ಳಿ ಬೆಳೆ ಆರಂಭದಲ್ಲಿಯೇ ಕೊಳೆತು ಹಾಳಾಗುತ್ತಿದೆ. ಅಲ್ಲದೆ, ಇದು ಅಕ್ಕಪಕ್ಕದ ಪ್ರದೇಶಕ್ಕೂ ರೋಗ ಹರಡುವ ಕಾರಣ ಬೆಳೆ ಬೆಳೆಯಲು ಸಾಧ್ಯವಾಗದೆ ರೈತರು ಕಂಗಾಲಾಗಿದ್ದಾರೆ. ಈ ಹಿಂದೆ 30-40 ಕ್ವಿಂಟಾಲ್ ಬೆಳೆ ಬೆಳೆಯುತ್ತಿದ್ದೆವು. ಇದೀಗ 3-4 ಕ್ವಿಂಟಾಲ್ ಬೆಳೆ ತೆಗೆಯುವುದು ಕಷ್ಟವಾಗಿದೆ ಎನ್ನುತ್ತಾರೆ ಈ ಭಾಗದ ರೈತರು.

ಇದನ್ನೂ ಓದಿ: ತಿಂಗಳು ಕಾಲ ಈರುಳ್ಳಿ ತಿನ್ನದಿದ್ರೆ ಏನಾಗುತ್ತೆ ಗೊತ್ತಾ? - Onions Health Benefits

Last Updated : May 23, 2024, 11:41 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.