ETV Bharat / state

ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಕಡ್ಡಾಯ: ಪರಿಷತ್​ನಲ್ಲಿ ಭಾಷಾ ಅಭಿವೃದ್ಧಿ ತಿದ್ದುಪಡಿ ವಿಧೇಯಕ ಅಂಗೀಕಾರ

author img

By ETV Bharat Karnataka Team

Published : Feb 20, 2024, 1:27 PM IST

ವಿಧಾನ ಪರಿಷತ್​ನಲ್ಲಿ ಇಂದು ವಾಣಿಜ್ಯ ಸೇರಿದಂತೆ ಎಲ್ಲ ನಾಮಫಲಕದಲ್ಲಿ ಶೇ.60 ರಷ್ಟು ಕನ್ನಡ ಕಡ್ಡಾಯಗೊಳಿಸುವ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ತಿದ್ದುಪಡಿ ವಿಧೇಯಕ - 2024 ಅಂಗೀಕಾರಗೊಂಡಿತು.

council
ಪರಿಷತ್​ನಲ್ಲಿ ಭಾಷಾ ಅಭಿವೃದ್ಧಿ ತಿದ್ದುಪಡಿ ವಿಧೇಯಕ ಅಂಗೀಕಾರ

ಬೆಂಗಳೂರು: ವಿಧಾನಸಭೆಯಲ್ಲಿ ಇತ್ತೀಚೆಗೆ ಅಂಗೀಕೃತಗೊಂಡಿದ್ದ ಕರ್ನಾಟಕದಲ್ಲಿ ವಾಣಿಜ್ಯ ಸೇರಿದಂತೆ ಎಲ್ಲ ನಾಮಫಲಕದಲ್ಲಿ ಶೇ.60 ರಷ್ಟು ಕನ್ನಡ ಕಡ್ಡಾಯಗೊಳಿಸುವ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ತಿದ್ದುಪಡಿ ವಿಧೇಯಕ - 2024 ವನ್ನು ಇಂದು ವಿಧಾನ ಪರಿಷತ್ ಅಂಗೀಕರಿಸಿತು.

ವಿಧಾನ ಪರಿಷತ್ ಕಲಾಪದಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ತಿದ್ದುಪಡಿ ವಿಧೇಯಕ - 2024 ಅನ್ನು ಮಂಡಿಸಿದರು. ವಿಧೇಯಕದ ಮೇಲೆ ಮಾತನಾಡಿದ ಸಚಿವರು, ಕೇಂದ್ರ, ರಾಜ್ಯ ಸರ್ಕಾರಿ ಸಂಸ್ಥೆಗಳು, ಖಾಸಗಿ ಸಂಸ್ಥೆ ಸೇರಿ ಕರ್ನಾಟಕ ರಾಜ್ಯದ ಎಲ್ಲೆಡೆ ನಾಮಫಲಕಗಳಲ್ಲಿ ಕನ್ನಡ ಭಾಷೆಯನ್ನು ಶೇ.60 ರಷ್ಟು ಬಳಸುವ ಷರತ್ತು ಅನ್ವಯವಾಗಲಿದೆ. ಕನ್ನಡ ಭಾಷೆಯನ್ನು ಶೇ.60 ರಷ್ಟು ಬಳಸುವ ನಿಯಮ ಉಲ್ಲಂಘಿಸಿದಲ್ಲಿ ದಂಡ ಹಾಕುವ ಜೊತೆಗೆ ಕೇಸ್ ಹಾಕಿ ವಾರ್ಷಿಕವಾಗಿ ನವೀಕರಿಸುವ ಪರವಾನಗಿ ನವೀಕರಿಸದಂತೆ ಕ್ರಮ ವಹಿಸಲಾಗುತ್ತದೆ ಎಂದರು.

ರಾಜ್ಯದಲ್ಲಿ ಕನ್ನಡ ನಾಮಫಲಕ ಕಡ್ಡಾಯ ಜಾರಿ ಪ್ರಾಧಿಕಾರಗಳಾಗಿ ರಾಜ್ಯಮಟ್ಟದ ಜಾಗೃತ ಸಮಿತಿ ರಚಿಸಲಾಗಿದೆ. ಅದರಲ್ಲಿ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನು ಸದಸ್ಯರನ್ನಾಗಿ ಮಾಡಲಾಗುತ್ತದೆ. ಕನ್ನಡ ಸಾಹಿತ್ಯ ಪರಿಷತ್ ಸರ್ಕಾರಿ ಇಲಾಖೆಯಲ್ಲ, ಸರ್ಕಾರದ ಅನುದಾನಿತ ಸಂಸ್ಥೆ ಮಾತ್ರ ಹಾಗಾಗಿ ಅವರನ್ನು ಸಮಿತಿಗೆ ತೆಗೆದುಕೊಳ್ಳಲಾಗಲ್ಲ. ಆದರೆ, ಕಸಾಪದಿಂದ ಓರ್ವರನ್ನು ಪ್ರತಿನಿಧಿಯಾಗಿ ಪರಿಗಣಿಸಲಾಗುತ್ತದೆ ಎಂದು ತಿಳಿಸಿದರು.

ಇದನ್ನೂ ಓದಿ: ಕಮಿಷನ್ ವಿಚಾರ: ಯತ್ನಾಳ್ - ಡಿಕೆಶಿ ಮಧ್ಯೆ ಪರಸ್ಪರ ಏಕವಚನದಲ್ಲೇ ವಾಕ್ ಸಮರ

ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಬಂದಿದೆ. ಆದರೆ, ಅದರ ಅನುದಾನ ಬಂದಿಲ್ಲ, ಅನುದಾನ ತರುವ ಕೆಲಸ ಮಾಡಬೇಕಿದೆ, ತಮಿಳುನಾಡು ನಾಯಕರು ನೂರಾರು ಕೋಟಿ ತರುತ್ತಿದ್ದಾರೆ. ಹಾಗಾಗಿ ಬಿಜೆಪಿ ಸದಸ್ಯರು ಕೈಜೋಡಿಸಬೇಕು, ಕೇಂದ್ರದಿಂದ ಅನುದಾನ ತರಬೇಕು, ಅನುದಾನ ಬಾರದ ವಿಚಾರದಲ್ಲಿ ನಮ್ಮ ಕೊರಗಿದೆ, ಮೂಗಿಗೆ ತುಪ್ಪ ಮಾತ್ರ ಸವರಿದ್ದಾರೆ, ಕನ್ನಡಿಗರಿಗೆ ನಿಜವಾಗಿಯೂ ಅನ್ಯಾಯವಾಗುತ್ತಿದೆ, ತೆರಿಗೆ ವಿಚಾರದಲ್ಲಿಯೂ ಅನ್ಯಾಯ, ಕನ್ನಡ ಭಾಷಾ ಅನುದಾನದಲ್ಲಿಯೂ ಅನ್ಯಾಯವಾಗುತ್ತಿದೆ. ಹಿಂದಿಗೆ ಸಾವಿರ ಕೋಟಿ, ಬೇರೆ ಬೇರೆ ಭಾಷೆಗೆ ನೂರಾರು ಕೋಟಿ ಕನ್ನಡಕ್ಕೆ ಮಾತ್ರ ಮೂರು ಕೋಟಿ ಅನುದಾನ ಕೊಡಲಾಗಿದೆ ಎಂದು ಕೇಂದ್ರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೆ ಆಕ್ಷೇಪಿಸಿದ ಪ್ರತಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ, ಕನ್ನಡ ಮತ್ತು ಸಂಸ್ಕೃತಿ ಸಚಿವರು ಕನ್ನಡ ಬಿಟ್ಟು ತೆರಿಗೆ ವಿಚಾರ ಮಾತನಾಡುತ್ತಿದ್ದಾರೆ ಎಂದು ಕಾಲೆಳೆದರು. ತೆರಿಗೆ ವಿಚಾರದಲ್ಲಿ ಚರ್ಚೆ ಮಾಡೋಣ ಎಂದರು, ಬಿಜೆಪಿ ಸದಸ್ಯರು ಇದಕ್ಕೆ ದನಿಗೂಡಿಸಿದರು. ಈ ವೇಳೆ ಸಚಿವರ ನೆರವಿಗೆ ಆಗಮಿಸಿದ ಕಾಂಗ್ರೆಸ್ ಸದಸ್ಯರು, ಬಿಜೆಪಿ ವಿರುದ್ಧ ನಮ್ಮ ತೆರಿಗೆ ನಮ್ಮ ಹಕ್ಕು ಘೋಷಣೆ ಕೂಗಿದರು. ನಮ್ಮ ತೆರಿಗೆ ಹಣ ಕೇಳುತ್ತಿದ್ದೇವೆ ಇದರಲ್ಲಿ ತಪ್ಪೇನು ಎಂದರು. ನಿಮ್ಮ ಬೇಡಿಕೆ ಸರಿಯಾಗಿದೆ ಇದನ್ನು ಒಪ್ಪುತ್ತೇವೆ. ಆದರೆ, ಪ್ರಧಾನಿಯನ್ನು ಏಕವಚನದಲ್ಲಿ ಬೈಯುತ್ತೀರಿ ಕೇಂದ್ರದ ಅನುದಾನ ಕೇಳುತ್ತೀರಿ ನಿಮ್ಮ ದ್ವಂದ್ವ ಸರಿಪಡಿಸಿಕೊಳ್ಳಿ. ಇನ್ನಾದರೂ ಮೋದಿ ವಿರುದ್ಧ ಏಕವಚನ ಪ್ರಯೋಗ ನಿಲ್ಲಿಸಿ ಎಂದು ಕೋಟಾ ಶ್ರೀನಿವಾಸ ಪೂಜಾರಿ ಮನವಿ ಮಾಡಿದರು.

ನಂತರ ಬಿಲ್ ಮೇಲಿನ ಚರ್ಚೆಗೆ ಉತ್ತರ ಮುಂದುವರೆಸಿದ ಸಚಿವ ತಂಗಡಗಿ, ಕನ್ನಡ ಬೋರ್ಡ್ ಕಡ್ಡಾಯ ಜಾರಿಗೆ ಕಾರ್ಯಪಡೆ ರಚಿಸಲಾಗುತ್ತಿದೆ, ಎಲ್ಲ ಜಿಲ್ಲೆಗೂ ಸಮಿತಿ ಮಾಡಿ ಕನ್ನಡ ಬೋರ್ಡ್ 60 ಪರ್ಸೆಂಟ್ ಜಾರಿಗಾಗಿಯೂ ಪ್ರತ್ಯೇಕ ವಿಂಗ್ ರಚಿಸಲಾಗುತ್ತದೆ. ಜಿಲ್ಲೆಗೊಂದು ಹಾಗೂ ಬೆಂಗಳೂರಿನ ವಲಯಕ್ಕೊಂದು ವಾಹನ ಕೊಡಲಾಗುತ್ತದೆ, ಕನ್ನಡ ಬೋರ್ಡ್ ಕಡ್ಡಾಯ ನಿಯಮ ಉಲ್ಲಂಘಿಸಿದರೆ ದಂಡ ಹಾಕುವ ಜೊತೆಗೆ ಕೇಸ್ ಹಾಕಿ ಪರವಾನಗಿ ನವೀಕರಿಸದಂತೆ ಕ್ರಮವಹಿಸಲಾಗುತ್ತದೆ. ಕಾರ್ಖಾನೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡಿ ಅದರ ಬಗ್ಗೆ ಡ್ಯಾಶ್ ಬೋರ್ಡ್​ನಲ್ಲಿ ಮಾಹಿತಿ ಪ್ರಕಟಿಸಲು ಸೂಚಿಸಲಾಗುತ್ತದೆ. ಕೈಗಾರಿಕೆ, ಸಂಘ ಸಂಸ್ಥೆಗಳ ಕನ್ನಡ ಬೋರ್ಡ್ ಕಡ್ಡಾಯ ಪರಿಶೀಲನೆಗೆ ವಾಹನ ವ್ಯವಸ್ಥೆ ಮಾಡಲಾಗುತ್ತದೆ, ಕನ್ನಡದಲ್ಲೇ ನ್ಯಾಯಾಧೀಶರು ತೀರ್ಪು ನೀಡುವ ಕುರಿತು ನಿಯಮದಲ್ಲಿ ಪ್ರಸ್ತಾಪ ಮಾಡಲಾಗುತ್ತದೆ. ಕನ್ನಡದಲ್ಲಿ ವಾದ ಮಾಡುವ ವಕೀಲರ ಅಭಿನಂದಿಸುವ ಕಾರ್ಯ ಮಾಡಲಾಗುತ್ತದೆ ಎಂದರು.

ಕನ್ನಡ ಬೋರ್ಡ್ ಕಡ್ಡಾಯ ನಿಯಮ ಕೇವಲ ಕಾಯ್ದೆಯಲ್ಲಿರದೇ ಅದರ ಜಾರಿಗೆ ಸರ್ಕಾರ ಬದ್ಧವಾಗಿದೆ. ಹಾಗಾಗಿ ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮವಾಗಿದ್ದು, ಕನ್ನಡ ಬೋರ್ಡ್ ಶೇ.60 ರಷ್ಟು ಕಡ್ಡಾಯ ಪರಿಣಾಮಕಾರಿ ಜಾರಿ ಮಾಡುವ ಭರವಸೆಯೊಂದಿಗೆ ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿದ್ದ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ತಿದ್ದುಪಡಿ ವಿಧೇಯಕ-2024 ರ ಅಂಗೀಕಾರಕ್ಕೆ ಮನವಿ ಮಾಡಿದರು. ನಂತರ ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿದ್ದ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ತಿದ್ದುಪಡಿ ವಿಧೇಯಕ-2024 ಅನ್ನು ಸಭಾಪತಿ ಬಸವರಾಜ ಹೊರಟ್ಟಿ ಮತಕ್ಕೆ ಹಾಕಿದರು.‌ ಧ್ವನಿಮತದ ಮೂಲಕ ವಿಧೇಯಕವನ್ನು ವಿಧಾನ ಪರಿಷತ್ ಅಂಗೀಕಾರ ನೀಡಿತು.

ಇದನ್ನೂ ಓದಿ: ಬಿಜೆಪಿ-ಜೆಡಿಎಸ್‌ ಸದಸ್ಯರ ವಿರೋಧದ ಮಧ್ಯೆ ಸಹಕಾರ ಸಂಘಗಳ ತಿದ್ದುಪಡಿ ವಿಧೇಯಕ ಅಂಗೀಕಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.