ETV Bharat / state

ಏನೂ ತಪ್ಪು ಮಾಡದೇ ಜೈಲಿಗೆ ಹಾಕಿದ್ರಲ್ಲ ಎಂಬ ಕೊರಗು ರೇವಣ್ಣರನ್ನು ಕಾಡುತ್ತಿದೆ: ಜಿ.ಟಿ. ದೇವೇಗೌಡ - REVANNA CASE

author img

By ETV Bharat Karnataka Team

Published : May 13, 2024, 8:02 PM IST

ಏನೂ ತಪ್ಪು ಮಾಡದೇ ಜೈಲಿಗೆ ಹಾಕಿದ್ರಲ್ಲ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಜೈಲಿನಲ್ಲಿ ಕಣ್ಣೀರು ಹಾಕಿದ್ದಾರೆ ಎಂದು ಜಿ.ಟಿ.ದೇವೇಗೌಡ ಹೇಳಿದರು.

G T DEVE GOWDA
ಜಿ.ಟಿ.ದೇವೇಗೌಡ (ETV Bharat)

ಬೆಂಗಳೂರು : ಏನೂ ತಪ್ಪು ಮಾಡದೇ ಜೈಲಿಗೆ ಹಾಕಿದ್ರಲ್ಲಾ ಎಂಬ ಕೊರಗು ಮಾಜಿ ಸಚಿವ ಹೆಚ್. ಡಿ. ರೇವಣ್ಣ ಅವರಿಗೆ ಕಾಡುತ್ತಿದೆ ಎಂದು ಮಾಜಿ ಸಚಿವ, ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ. ದೇವೇಗೌಡ ಹೇಳಿದ್ದಾರೆ.

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ರೇವಣ್ಣ ಅವರನ್ನು ಇಂದು ಭೇಟಿ ಮಾಡಿ ಹೊರ ಬಂದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಜೈಲಿಗೆ ಹಾಕಿಸಿದ್ದನ್ನು ನೆನಪಿಸಿಕೊಂಡಾಗ ಅವರು ದುಃಖ ಪಡುತ್ತಾರೆ. ಐದತ್ತು ನಿಮಿಷಗಳ ಕಾಲ ಕಣ್ಣೀರು ಹಾಕಿದ್ರು ಎಂದರು.

ರೇವಣ್ಣ ಜೈಲಿಗೆ ಹೋದ ದಿನದಿಂದ ಬಂದಿರಲಿಲ್ಲ. ಅವರ ಆರೋಗ್ಯ, ಉಭಯ ಕುಶಲೋಪರಿ ವಿಚಾರಿಸಲು ಹೋಗಬೇಕೆಂದು ಮೂರು ದಿನದಿಂದ ಮನಸ್ಸಲ್ಲಿತ್ತು. ಭಾನುವಾರ ರಜೆ ಇರುವ ಕಾರಣ ಬಿಡುವುದಿಲ್ಲ ಅಂದಿದ್ರು. ಅದಕ್ಕೆ ಇಂದು ಮಾತನಾಡಲು ಬಂದಿದ್ದೆ ಎಂದರು. ಅವ್ರು ಆರಾಮವಾಗಿ ಕುಳಿತಿದ್ದರು. ಜೊತೆಯಲ್ಲೇ ಟೀ ಕುಡಿದ್ವಿ. ಹಳೆ ವಿಚಾರಗಳನ್ನೆಲ್ಲ ಮೆಲುಕು ಹಾಕಿದ್ರು. ಅವರಿಗೆ ಈಗಲೂ ಅಭಿವೃದ್ಧಿ ಕಾರ್ಯಕ್ರಮಗಳದ್ದೇ ಚಿಂತೆ ಎಂದು ಇಬ್ಬರ ನಡುವಿನ ಮಾತುಕತೆ ಬಗ್ಗೆ ಜಿಟಿಡಿ ಹೇಳಿದ್ರು.

ರೇವಣ್ಣ ಅವರಿಗೆ ಒಂದೇ ಯೋಚನೆ, ನಾನೇನೂ ತಪ್ಪು ಮಾಡಿದ್ದೇನೆ. ಸಂತ್ರಸ್ತ ಮಹಿಳೆ ಜೊತೆ ಮಾತನಾಡಿ ಆರು ವರ್ಷವಾಗಿದೆ. ನನ್ನನ್ನು ಈ ಪ್ರಕರಣದಲ್ಲಿ ಸೇರಿಸಿ ಹೀಗೆ ಮಾಡಿದ್ದಾರೆ. ನಾನು ತಪ್ಪು ಮಾಡಿದ್ರೆ ಶಿಕ್ಷೆ ಕೊಡಲಿ, ಅನುಭವಿಸಬಹುದಿತ್ತು ಎಂದು ಬೇಸರ ವ್ಯಕ್ತಪಡಿಸಿದ್ರು ಅಂತಾ ತಿಳಿಸಿದರು.

ಈಗಲೂ ಕ್ಷೇತ್ರದಲ್ಲಿನ ಅಭಿವೃದ್ಧಿ ಕೆಲಸಗಳ ಬಗ್ಗೆ ನೆನೆದರು. ರಾಜಕೀಯ ಹೇಗೆ ನಡೆಯುತ್ತಿದೆ ಎಂಬುದರ ಬಗ್ಗೆ ಮಾತುಕತೆ, ರಾಜಕೀಯವಾಗಿ ಎಲ್ಲೆಲ್ಲಿ ಎಡವಿದ್ದೇವೆ. ನಮ್ಮ ಸರ್ಕಾರದ ಇದ್ದಾಗ ಕಾರ್ಯಕರ್ತರಿಗೆ ಏನೂ ಮಾಡಲು ಸಾಧ್ಯವಾಗಲಿಲ್ಲ. ಶಾರ್ಟ್ ಟೈಮ್ ಅಧಿಕಾರ ಬಂತು. ಅಧಿಕಾರ ಅನುಭವಿಸಿದವರು ಹೊರಟು ಹೋದ್ರು. ಯಾರ್ಯಾರು ಮಂತ್ರಿಗಳನ್ನು ಮಾಡಿದ್ರಿ ಅವರೆಲ್ಲರೂ ಹೋದ್ರು. ನೀವು ಗೌಡರಿಗೋಸ್ಕರ ಪಕ್ಷದಲ್ಲಿ ಉಳಿದು ಗೌಡರಿಗೆ ನೆಮ್ಮದಿ ಕೊಟ್ರಿ ಅಂತಾ ಅಂದ್ರು ಎಂದು ಹೇಳಿದರು.

ಪ್ರಜ್ವಲ್ ರೇವಣ್ಣ ಬಗ್ಗೆ ಚರ್ಚೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಜಿ ಟಿ ದೇವೇಗೌಡ, ಪ್ರಜ್ವಲ್ ರೇವಣ್ಣ ಬಗ್ಗೆ ಯಾವುದೇ ಚರ್ಚೆ ಮಾಡಲಿಲ್ಲ. ರೇವಣ್ಣ ಕೂಡ ಪ್ರಜ್ವಲ್ ಬಗ್ಗೆ ಏನೂ ಹೇಳಲಿಲ್ಲ ಎಂದರು. ನವೀನ್ ಗೌಡ ಮತ್ತು ಕಾರ್ತಿಕ ಗೌಡ ಇನ್ನೂ ಬಂಧನ ಆಗದ ವಿಚಾರಕ್ಕೆ ಎಸ್ಐಟಿ ಅಧಿಕಾರಿಗಳು ತನಿಖೆ ಮಾಡ್ತಾರೆ, ನಮಗೆ ಅವರ ಮೇಲೆ ನಂಬಿಕೆ ಇದೆ. ಸಿಬಿಐಗೆ ಕೊಡುವ ಅಗತ್ಯವಿಲ್ಲ ಅಂತಾ ಸಿಎಂ ಹೇಳಿದ್ದಾರೆ. ನಮ್ಮ ಪೊಲೀಸರ ಬಗ್ಗೆ ನಂಬಿಕೆ ಇದೆ ಅಂತಾರೆ. ನ್ಯಾಯಯುತವಾಗಿ ತನಿಖೆ ಮಾಡ್ತಾರೆ ಅಂತಾ ಪದೇ ಪದೇ ಸಿಎಂ ಹೇಳ್ತಿದ್ದಾರೆ. ಎಸ್ಐಟಿಯವರು ನೋಟಿಸ್ ಕೊಟ್ಟು ತನಿಖೆ ಮಾಡ್ತಿದ್ದಾರೆ. ಪೆನ್ ಡ್ರೈವ್ ಯಾರು ರಿಲೀಸ್ ಮಾಡಿದ್ರು, ಯಾರು ತಪ್ಪು ಮಾಡಿದ್ದಾರೆ. ಎಸ್ಐಟಿ ತನಿಖೆ ಮಾಡಿ ಎಲ್ಲವನ್ನೂ ಕಂಡುಹಿಡಿದು ಸಿಎಂ ಹಿಸ್ಟರಿ ಕ್ರಿಯೇಟ್ ಮಾಡಲಿ ಎಂದು ಒತ್ತಾಯಿಸಿದರು.

ಪೆನ್ ಡ್ರೈವ್ ಪ್ರಕರಣ ಅರಕಲಗೂಡು ಶಾಸಕ ಎ ಮಂಜು ಅವರಿಗೆ ಸುತ್ತಿಕೊಂಡ ಬಗ್ಗೆ ಪ್ರತಿಕ್ರಿಯಿಸಿದ ಜಿಟಿಡಿ, ಎಲ್ಲವೂ ಕೂಡ ತನಿಖೆ ಮೂಲಕ ಎಸ್ಐಟಿ ಪತ್ತೆ ಮಾಡುತ್ತಾರೆಂದು ಸಿಎಂ ಬೆನ್ನು ತಟ್ಟಿಕೊಂಡಿದ್ದಾರೆ. ಸಿಎಂ ಹೇಳಿದ್ದಾರೆ, ನಮಗೂ ಕೂಡ ನಂಬಿಕೆ ಬಂದಿದೆ‌. ಪೆನ್ ಡ್ರೈವ್ ರಿಲೀಸ್ ಮಾಡಿದವರ ಬಗ್ಗೆ ತನಿಖೆ ಪ್ರಾರಂಭ ಮಾಡಿದ್ದಾರೆ. ಎಲ್ಲರದೂ ಹೊರಗಡೆ ಬರುತ್ತದೆ. ಸ್ವಲ್ಪ ದಿನ ಕಾಯಬೇಕು ಎಂದು ಹೇಳಿದರು.

ಓದಿ: ಅಪಹರಣ ಪ್ರಕರಣದಲ್ಲಿ ಹೆಚ್​​​​​ ಡಿ ರೇವಣ್ಣಗೆ ಬಿಗ್​​ ರಿಲೀಫ್​: ಜಾಮೀನು ನೀಡಿದ ನ್ಯಾಯಾಲಯ - H D Revanna Gets Bail

ETV Bharat Logo

Copyright © 2024 Ushodaya Enterprises Pvt. Ltd., All Rights Reserved.