ETV Bharat / state

ರಾಜ್ಯಸಭಾ ಚುನಾವಣೆ ಮುನ್ನ ಸಿಎಂ, ಡಿಸಿಎಂ ಭೇಟಿಯಾದ ಜನಾರ್ದನ ರೆಡ್ಡಿ

author img

By ETV Bharat Karnataka Team

Published : Feb 26, 2024, 12:17 PM IST

ರಾಜ್ಯಸಭಾ ಚುನಾವಣೆಯಲ್ಲಿ ಎಲ್ಲಾ ಪಕ್ಷದವರು ತಮ್ಮನ್ನು ಸಂಪರ್ಕಿಸಿದ್ದು, ಇನ್ನೂ ಯಾವುದೇ ತೀರ್ಮಾನ ನಡೆಸಿಲ್ಲ ಎಂದು ಜನಾರ್ದನ ರೆಡ್ಡಿ ತಿಳಿಸಿದ್ದಾರೆ.

janardhan-reddy-meets-cm-and-dcm-ahead-of-rajya-sabha-polls
janardhan-reddy-meets-cm-and-dcm-ahead-of-rajya-sabha-polls

ಬೆಂಗಳೂರು: ರಾಜ್ಯಸಭಾ ಚುನಾವಣೆಯ ಮತದಾನ ನಾಳೆ ನಡೆಯಲಿದ್ದು, ಇದಕ್ಕಾಗಿ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ನಡುವೆ ಗಂಗಾವತಿ ಕ್ಷೇತ್ರದ ಪಕ್ಷೇತರ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್​ ಅವರನ್ನು ಭೇಟಿಯಾಗಿರುವುದು ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಶಾಸಕ, ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ಇಂದು ಸಿಎಂ ಸಿದ್ದರಾಮಯ್ಯ ಅವರ ನಿವಾಸ ಕಾವೇರಿಯಲ್ಲಿ ಸಿಎಂ ಮತ್ತು ಡಿಸಿಎಂ ಅವರನ್ನು ಭೇಟಿ ಮಾಡಿ, ಕೆಲ ಹೊತ್ತು ಸಮಾಲೋಚನೆ ನಡೆಸಿದರು. ಈ ವೇಳೆ ಸಚಿವ ಶಿವರಾಜ್ ತಂಗಡಗಿ ಸಹ ಉಪಸ್ಥಿತರಿದ್ದರು.

ಕರ್ನಾಟಕದಿಂದ ನಾಲ್ಕು ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಆದ್ರೆ ಜೆಡಿಎಸ್​ - ಬಿಜೆಪಿ (ಎನ್​ಡಿಎ ಮೈತ್ರಿಕೂಟ)ಯಿಂದ ಕುಪೇಂದ್ರ ರೆಡ್ಡಿ ಅವರನ್ನು ಐದನೇ ಅಭ್ಯರ್ಥಿಯಾಗಿ​ ಕಣಕ್ಕೆ ಇಳಿಸಲಾಗಿದೆ. ಕುಪೇಂದ್ರ ರೆಡ್ಡಿ ಗೆಲುವಿಗೆ 45 ಮತಗಳು ಬೇಕಿವೆ. ಜೆಡಿಎಸ್​​ನ 19 ಮತಗಳಿದ್ದು, ಬಿಜೆಪಿಯ 21 ಮತಗಳನ್ನು ಪಡೆಯಬಹುದು. ಆದರೆ, ಗೆಲುವಿಗೆ 45 ಮತಗಳು ಬೇಕಿದೆ. ಹೀಗಾಗಿ ಇನ್ನುಳಿದ ಮತಗಳಿಗಾಗಿ ಜೆಡಿಎಸ್​​ ಪಕ್ಷೇತರ ಶಾಸಕರ ಮೊರೆ ಹೋಗುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಪಕ್ಷೇತರ ಮತಗಳು ಅತ್ತ ಹೋಗದಂತೆ ತಡೆಯಲು ಕಾಂಗ್ರೆಸ್​​ ಕೂಡ ಎಚ್ಚರಿಕೆ ವಹಿಸಿದೆ. ಈ ಬೆನ್ನಲ್ಲೇ ಜನಾರ್ದನ ರೆಡ್ಡಿ ಮತ್ತು ಸಿಎಂ, ಡಿಸಿಎಂ ಭೇಟಿ ಸಾಕಷ್ಟು ಮಹತ್ವ ಪಡೆದುಕೊಂಡಿದೆ.

ಇನ್ನೂ ತೀರ್ಮಾನ ಮಾಡಿಲ್ಲ ಎಂದ ರೆಡ್ಡಿ: ಸಿಎಂ, ಡಿಸಿಎಂ ಭೇಟಿ ಕುರಿತು ವಿಧಾನಸೌಧದಲ್ಲಿ ಮಾತನಾಡಿದ ಗಾಲಿ ಜನಾರ್ದನ ರೆಡ್ಡಿ, ಐತಿಹಾಸಿಕ ಆನೆಗೊಂದಿ ಉತ್ಸವವನ್ನು ವೈಭವದಿಂದ ಆಚರಿಸಲು ಜಿಲ್ಲಾಡಳಿತ ನಿರ್ಧಾರ ಮಾಡಿದೆ. ಮುಂದಿನ ತಿಂಗಳು ಮಾರ್ಚ್​​ನಲ್ಲಿ ಈ ಉತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಈ ಉತ್ಸವಕ್ಕೆ ಆಹ್ವಾನ ನೀಡುವ ಉದ್ದೇಶದಿಂದ ಸಿಎಂ, ಡಿಸಿಎಂ ಅವರನ್ನು ಭೇಟಿಯಾಗಿ, ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದಾಗಿ ಅವರು ತಿಳಿಸಿದ್ದಾರೆ.

ಇದೇ ವೇಳೆ ರಾಜ್ಯಸಭಾ ಚುನಾವಣೆಗೆ ಬೆಂಬಲ ಕೋರಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಎಲ್ಲಾ ಪಕ್ಷದವರು ತಮಗೆ ಮನವಿ ಮಾಡಿದ್ದಾರೆ. ಸಿಎಂ, ಡಿಸಿಎಂ ಆದಿಯಾಗಿ ಎಲ್ಲ ಪಕ್ಷದವರು ತಮಗೆ ಬೆಂಬಲಿಸುವಂತೆ ಕೋರಿದ್ದಾರೆ. ಆದರೆ, ಯಾರನ್ನು ಬೆಂಬಲಿಸಬೇಕು ಎಂಬ ಕುರಿತು ನಾನು ಇನ್ನೂ ಏನೂ ತೀರ್ಮಾನ ಮಾಡಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ರಾಜ್ಯಸಭಾ ಚುನಾವಣೆ: ಮತದಾನದ ಲೆಕ್ಕಾಚಾರ ಹೇಗೆ? ಇಲ್ಲಿದೆ ಮಾಹಿತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.