ETV Bharat / state

ಯಾರು ಎಷ್ಟೇ ಪ್ರಯತ್ನ ಮಾಡಿದರು ಜಗದೀಶ್ ಶೆಟ್ಟರ್ ಬಿಜೆಪಿಗೆ ಹೋಗಲ್ಲ: ಸಿಎಂ ಸಿದ್ದರಾಮಯ್ಯ

author img

By ETV Bharat Karnataka Team

Published : Jan 25, 2024, 12:56 PM IST

ಕಾಂಗ್ರೆಸ್ ಸೇರಿರುವ ಜಗದೀಶ್ ಶೆಟ್ಟರ್ ಮತ್ತೆ ಬಿಜೆಪಿಗೆ ಹೋಗಲ್ಲ ಎಂದು ಸಿಎಂ ಸಿದ್ದರಾಮಯ್ಯ ಮೈಸೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

cm siddaramaih
cm siddaramaih

ಮೈಸೂರು: ಬಿಜೆಪಿಯಿಂದ ಟಿಕೆಟ್ ಸಿಗದೇ ಜಗದೀಶ್ ಶೆಟ್ಟರ್ ಅವಮಾನ ಅನುಭವಿಸಿ ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದಾರೆ, ಅವರು ಮತ್ತೆ ಬಿಜೆಪಿಗೆ ಹೋಗಲ್ಲ. ಯಾರು ಎಷ್ಟೇ ಪ್ರಯತ್ನ ಮಾಡಿದರು ಜಗದೀಶ್ ಶೆಟ್ಟರ್ ಅವರು ಬಿಜೆಪಿಗೆ ಹೋಗುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಮೈಸೂರಿನ ತಮ್ಮ ನಿವಾಸದಲ್ಲಿ ನಡೆಸಿದ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.

ಇಂದು ಮೈಸೂರಿನ ಟಿ ಕೆ.ಲೇಔಟ್​​ನ ಬಳಿ ಇರುವ ತಮ್ಮ ನಿವಾಸದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಅವಮಾನ ಮಾಡಿರುವ ಪಕ್ಷಕ್ಕೆ ಮತ್ತೆ ಹೋಗುವುದಿಲ್ಲ ಎಂದು ಶೆಟ್ಟರ್ ಈ ಮೊದಲು ಹೇಳಿದ್ದಾರೆ. ಆದ್ದರಿಂದ ಯಾರು ಎಷ್ಟೇ ಪ್ರಯತ್ನ ಮಾಡಿದರು ಅವರು ಮತ್ತೆ ಬಿಜೆಪಿಗೆ ಹೋಗುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಜ.26ರಂದು ಸಂವಿಧಾನ ಜಾಗೃತಿ ದಿನದ ಅಂಗವಾಗಿ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಜಾಗೃತಿ ದಿನ ಆರಂಭವಾಗಲಿದೆ. ಫೆ. 24 ರವರೆಗೆ ಈ ಜಾಗೃತಿ ಅಭಿಯಾನ ನಡೆಯುತ್ತದೆ. ಪಟ್ಟಭದ್ರ ಹಿತಾಸಕ್ತಿಗಳು ಸಂವಿಧಾನದ ವಿರುದ್ಧವಾಗಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಭಾರತದ ಸಂವಿಧಾನ ಫ್ಲೆಕ್ಸಿಬಲ್ ಆಗಿದೆ‌. ಅಗತ್ಯಕ್ಕೆ ತಕ್ಕಂತೆ ಕೆಲವು ತಿದ್ದುಪಡಿಗಳು ಆಗಿವೆ. ಸಂವಿಧಾನದ ಮೇಲೆ ಗೌರವ ಇಲ್ಲದ ನಡವಳಿಕೆಗಳನ್ನು ಇತ್ತೀಚೆಗೆ ಕಾಣುತ್ತಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು.

ರಾಜಕೀಯ ಲಾಭಕ್ಕಾಗಿ ರಾಮ ಮಂದಿರ: ರಾಜಕೀಯವಾಗಿ ಅನುಕೂಲ ಆಗುತ್ತದೆ ಅಂತಲೇ ಆತುರಾತುರವಾಗಿ ರಾಮ ಮಂದಿರದಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಮಾಡಿದ್ದಾರೆ. ರಾಮಮಂದಿರ ಪೂರ್ಣವಾಗಿ ನಿರ್ಮಾಣವಾಗಿಲ್ಲ. ರಾಮ ಮಂದಿರದಿಂದ ರಾಜಕೀಯ ಲಾಭ ಆಗುತ್ತದೆ ಎಂದು ಅವರು ಯೋಚನೆ ಮಾಡಿದ್ದಾರೆ, ಆದರೆ ಅದು ಸಾಧ್ಯವಿಲ್ಲ. ನಮ್ಮ ದೇಶದ ಜನ ಪ್ರಜಾಪ್ರಭುತ್ವವನ್ನ ಒಪ್ಪಿಕೊಂಡಿದ್ದಾರೆ. ಅದೇ ಮುಖ್ಯವಾಗುತ್ತೆ. ಜನ ಎಲ್ಲವನ್ನು ಗಮನಿಸುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ವರದಿ ನೋಡದೆ ಅದರ ಬಗ್ಗೆ ಮಾತನಾಡಲು ಸಾಧ್ಯವಿಲ್ಲ: ಜಾತಿಗಣತಿ ವರದಿ ನನಗೆ ಗೊತ್ತಿಲ್ಲ. ವರದಿ ಕೊಡುವುದಕ್ಕೆ ಅವರು ಸಮಯ ಕೇಳಿಲ್ಲ. ಕೇಳಿದರೆ ಸಮಯ ಕೊಡುತ್ತೇವೆ. ನಂತರ ವರದಿ ಪಡೆಯುತ್ತೇವೆ. ಯಾರು ಆ ವರದಿಯನ್ನ ನೋಡಿಲ್ಲ. ಹೀಗಾಗಿ ಅದರ ಬಗ್ಗೆ ಏನು ಮಾತನಾಡಲಿಕ್ಕೆ ಸಾಧ್ಯವಾಗಿಲ್ಲ. ವರದಿ ಕೊಟ್ಟ ನಂತರ ಪರಿಶೀಲನೆ ಕೂಡ ಇರುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದರು.

ಉದ್ದೇಶ ಪೂರ್ವಕವಾಗಿ ಎಫ್​ಐಆರ್ ದಾಖಲು ಮಾಡಿದ್ದಾರೆ: ಎಫ್ಐಆರ್ ಹಾಕೋದು ತಪ್ಪು ಮಾಡಿದಾಗ ಮಾತ್ರ, ರಾಹುಲ್ ಗಾಂಧಿಯವರ ಪಾದಯಾತ್ರೆಯನ್ನ ನಿಷ್ಕ್ರಿಯ ಮಾಡುವಂತ ಕೆಲಸ ಆಗಿದೆ. ರಾಹುಲ್ ಗಾಂಧಿ ಇದಕ್ಕೆಲ್ಲಾ ಕೇರ್ ಮಾಡಲ್ಲ. ಉದ್ದೇಶಪೂರ್ವಕವಾಗಿ ರಾಹುಲ್ ಗಾಂಧಿ ವಿರುದ್ಧ ಎಫ್ಐಆರ್ ದಾಖಲು ಮಾಡಿದ್ದಾರೆ. ಭಾರತ್ ಜೋಡೋ ನ್ಯಾಯ್ ಯಾತ್ರೆ ತಡೆಯನ್ನ ಖಂಡಿಸುತ್ತೇನೆ ಎಂದು ಮುಖ್ಯಮಂತ್ರಿಗಳು ಆಕ್ರೋಶ ಹೊರಹಾಕಿದರು.

ಇನ್ನೂ ನಿಗಮ ಮಂಡಳಿಗೆ ನೇಮಕಾತಿ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ನಿಗಮ ಮಂಡಳಿಗಳ ಪಟ್ಟಿ ರೆಡಿಯಾಗಿದ್ದು, ಇದಕ್ಕೆ ಹೈ ಕಮಾಂಡ್ ಒಪ್ಪಿಗೆ ನೀಡಿದ ನಂತರ ಬಿಡುಗಡೆ ಮಾಡುತ್ತೇವೆ. ಈ ಮೂಲಕ ನಿಗಮ ಮಂಡಳಿಗಳ ಪಟ್ಟಿ ಹೈಕಮಾಂಡ್ ಬಳಿ ಇದೆ ಎಂಬುದನ್ನ ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಲೋಕಸಭಾ ಚುನಾವಣೆ ಗೆಲ್ಲಲು ಮಾಸ್ಟರ್ ಪ್ಲಾನ್: ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಮೈಸೂರಿನಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದ್ದು, ಇಂದು ಸಿಎಂ ನೇತೃತ್ವದಲ್ಲಿ ಮೈಸೂರಿನ ಸಿದ್ದರಾಮಯ್ಯ ನಿವಾಸದಲ್ಲಿ ಸಭೆ ನಡೆಯುತ್ತಿದೆ. ಮೈಸೂರು ಚಾಮರಾಜನಗರ ಲೋಕಸಭಾ ಕ್ಷೇತ್ರ ಗೆಲ್ಲಲು ಸಿಎಂ ಮಾಸ್ಟರ್ ಪ್ಲಾನ್ ಮಾಡುತ್ತಿದ್ದಾರೆ. ಎರಡು ಕ್ಷೇತ್ರದ ಶಾಸಕರು, ಮಾಜಿ ಶಾಸಕರ ಸಭೆಯನ್ನು ಸಿದ್ದರಾಮಯ್ಯನವರು ನಡೆಸುತ್ತಿದ್ದಾರೆ. ಒಬ್ಬೊಬ್ಬ ಶಾಸಕರನ್ನೇ ಕರೆದು ಸಿಎಂ ಪ್ರತ್ಯೇಕವಾಗಿ ಅಭಿಪ್ರಾಯ ಸಂಗ್ರಹಿಸಿದರು.

ಇದನ್ನೂ ಓದಿ: ಒಂದೇ ಕ್ಷೇತ್ರದಿಂದ 8 ಬಾರಿ ಗೆಲುವು: ಲಿಮ್ಕಾ ದಾಖಲೆ ಬರೆದ ಬಸವರಾಜ ಹೊರಟ್ಟಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.