ETV Bharat / state

ಬಾಂಬ್​ ಸ್ಫೋಟದ ಆರೋಪಿ ಬಸ್​ನಿಂದಿಳಿದು ಕೆಫೆಗೆ ಬಂದು ರವೆ ಇಡ್ಲಿ ತಿಂದಿದ್ದ: ಡಿಸಿಎಂ ಡಿ.ಕೆ.ಶಿವಕುಮಾರ್

author img

By ETV Bharat Karnataka Team

Published : Mar 1, 2024, 10:11 PM IST

Updated : Mar 1, 2024, 10:36 PM IST

ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಇಂದು ಬಾಂಬ್ ಸ್ಫೋಟ ಸಂಭವಿಸಿದ್ದು, ಘಟನಾ ಸ್ಥಳಕ್ಕೆ ಗೃಹ ಸಚಿವ ಜಿ.ಪರಮೇಶ್ವರ್ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭೇಟಿ ನೀಡಿದರು.

home-minister-gparameshwar-and-dcm-dkshivakumar-visits-bomb-blast-site-in-bengluru
ಬಾಂಬ್​ ಸ್ಫೋಟ: 'ಬಸ್​ನಲ್ಲಿ ಕೆಫೆಗೆ ಬಂದಿದ್ದ ಆರೋಪಿ' - ಡಿಸಿಎಂ ಡಿಕೆಶಿ

ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ

ಬೆಂಗಳೂರು: ಗೃಹ ಸಚಿವ ಜಿ.ಪರಮೇಶ್ವರ್ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬಾಂಬ್‌ ಸ್ಫೋಟ ನಡೆದ ನಗರದ ಕುಂದಲಹಳ್ಳಿಯಲ್ಲಿರುವ ರಾಮೇಶ್ವರಂ ಕೆಫೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಪಡೆದರು.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆಶಿ, ''25ರಿಂದ 35 ವರ್ಷದ ವಯಸ್ಸಿನ ಯುವಕನೊಬ್ಬ ಒಂದು ಮರದ ಪಕ್ಕದಲ್ಲಿ ಬ್ಯಾಗ್​ ಇಟ್ಟಿದ್ದಾನೆ. ಕೌಂಟರ್​ನಲ್ಲಿ ರವೆ ಇಡ್ಲಿ ಆರ್ಡರ್ ಮಾಡಿ, ತಿಂದು ಹೋಗಿದ್ದಾನೆ. ಸುಮಾರು 1 ಗಂಟೆಯ ಬಳಿಕ ಅದು ಸ್ಪೋಟಿಸಿದೆ. ಇದು ಬಾಂಬ್​ ಸ್ಪೋಟ. ತೀವ್ರತರವಲ್ಲದ, ಕಡಿಮೆ ಪ್ರಮಾಣದ ಬಾಂಬ್ ಆಗಿದೆ. ಅದಕ್ಕೆ ಟೈಮರ್ ಸಹ ಅಳವಡಿಸಲಾಗಿತ್ತು. ಈ ಘಟನೆಯಲ್ಲಿ 10 ಜನರಿಗೆ ಗಾಯಗಳಾಗಿವೆ. ಸ್ಫೋಟದ ಶಬ್ಧ ಜೋರಾಗಿ ಕೇಳಿಬಂದಿದೆ. ಇದರಿಂದ ಕೆಲವರ ಕಿವಿಗೂ ಹಾನಿಯಾಗಿದೆ'' ಎಂದು ತಿಳಿಸಿದರು.

''ಸಿಸಿಟಿವಿಯಲ್ಲಿ ಸಂಪೂರ್ಣ ಘಟನೆ ದಾಖಲಾಗಿದೆ. ಆತ ಬಸ್​ ಮೂಲಕ ಬಂದಿದ್ದಾನೆ. ಹೋಟೆಲ್​ಗೆ ಬಂದು ರವೆ ಇಡ್ಲಿ ತೆಗೆದುಕೊಂಡಿದ್ದಾನೆ. ಆತನ ಪ್ರತಿಯೊಂದು ಚಲನವಲನ ಕೂಡ ಸೆರೆಯಾಗಿದೆ. ತನಿಖೆಗೆ ಪ್ರತ್ಯೇಕ ತಂಡವನ್ನು ರಚಿಸಲಾಗಿದೆ. ಸಿಸಿಬಿ ತನಿಖೆ ಮಾಡುತ್ತಿದೆ. ಎಫ್​ಎಸ್​ಎಲ್​, ಬಾಂಬ್​ ನಿಷ್ಕ್ರಿಯ ದಳ ಕೂಡಾ ಪರಿಶೀಲನೆ ನಡೆಸಿದೆ'' ಎಂದು ಮಾಹಿತಿ ನೀಡಿದರು.

''ಘಟನೆ ಬಳಿಕ ತಕ್ಷಣವೇ ಹಿರಿಯ ಪೊಲೀಸ್​ ಅಧಿಕಾರಿಗಳು ಸಹ ಸ್ಥಳಕ್ಕೆ ದೌಡಾಯಿಸಿದ್ದಾರೆ. ಏಳೆಂಟು ತಂಡಗಳನ್ನು ರಚಿಸಿದ್ದಾರೆ. ಅಚ್ಚುಕಟ್ಟಾಗಿ ತನಿಖೆ ನಡೆಯುತ್ತಿದೆ. ಬೆಂಗಳೂರು ನಗರದಲ್ಲಿ ಯಾರೂ ಗಾಬರಿಪಡುವ ಅಗತ್ಯವಿಲ್ಲ. ಆರೋಪಿ ಯಾರು?, ಏನು?, ಎತ್ತ? ಎಂಬುವುದನ್ನು ಪೊಲೀಸರು ಪತ್ತೆ ಹಚ್ಚುತ್ತಾರೆ. ಯಾವುದೇ ರೀತಿಯ ತನಿಖೆ ನಡೆಸಲು ಪೊಲೀಸರು ಸ್ವತಂತ್ರರಾಗಿದ್ದಾರೆ. ಕೆಲವೇ ಗಂಟೆಗಳಲ್ಲಿ ಎಲ್ಲವನ್ನೂ ಪತ್ತೆ ಹಚ್ಚುವ ವಿಶ್ವಾಸವಿದೆ'' ಎಂದರು. ಇದೇ ವೇಳೆ, ''ಪ್ರತಿಪಕ್ಷದವರು ನಮ್ಮ ಜೊತೆ ಸಹಕರಿಸಬೇಕು. ಅನಗತ್ಯ ರಾಜಕೀಯ ಮಾಡುವುದಿದ್ದರೆ, ಅವರು ಮಾಡಲಿ. ಆದರೆ, ಇಂತಹ ಸಂದರ್ಭದಲ್ಲಿ ನಮಗೆ ಸಹಕರಿಸಿದರೆ ಒಳ್ಳೆಯದು'' ಎಂದು ಹೇಳಿದರು.

ಗೃಹ ಸಚಿವ ಪರಮೇಶ್ವರ್ ಮಾತನಾಡಿ, ''ಈಗಾಗಲೇ ಓರ್ವ ವ್ಯಕ್ತಿಯ ಬಗ್ಗೆ ಸುಳಿವು ಸಿಕ್ಕಿದೆ. ಆತ ಬಸ್‌ನಲ್ಲಿ ಬಂದಿದ್ದ ಅಂತನೂ ಗೊತ್ತಾಗಿದೆ. ಈಗಿನ ಬಸ್​ಗಳಲ್ಲೂ ಸಿಸಿಟಿವಿ ಇದೆ. ಆದ್ದರಿಂದ ಶೀಘ್ರವೇ ಪೊಲೀಸರು ಆತನನ್ನು ಪತ್ತೆ ಹಚ್ಚುವರು. ಘಟನೆಯಲ್ಲಿ ಮೂವರಿಗೆ ಗಾಯವಾಗಿದೆ. ಎಲ್ಲರಿಗೂ ಕಿವಿಗೆ ಗಾಯವಾಗಿದೆ.‌ ಇದರಲ್ಲಿ ಒಬ್ಬರಿಗೆ ಹೆಚ್ಚಿನ ಗಾಯವಾಗಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ'' ಎಂದು ತಿಳಿಸಿದರು.

ಇದನ್ನೂ ಓದಿ: ಬೆಂಗಳೂರಿನ ಕೆಫೆಯಲ್ಲಿ ನಡೆದ ಬಾಂಬ್‌ ಸ್ಫೋಟದ ಸಿಸಿಟಿವಿ ವಿಡಿಯೋ: ಡಿಜಿ ಅಲೋಕ್ ಮೋಹನ್ ಹೇಳಿದ್ದೇನು?

Last Updated :Mar 1, 2024, 10:36 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.