ETV Bharat / state

ಹುಬ್ಬಳ್ಳಿಯಲ್ಲಿ ಮುಂದುವರೆದ ವರುಣನ ಅಬ್ಬರ : ಬಿರುಗಾಳಿ ಸಹಿತ ಭಾರಿ ಮಳೆ - Heavy rainfall

author img

By ETV Bharat Karnataka Team

Published : May 14, 2024, 7:51 PM IST

ಹುಬ್ಬಳ್ಳಿ, ದಾವಣಗೆರೆ ಹಾಗೂ ಚಿಕ್ಕಮಗಳೂರಿನ ಹಲವೆಡೆ ಭಾರಿ ಪ್ರಮಾಣದ ಮಳೆಯಾಗಿದೆ.

heavy-rainfall
ಹುಬ್ಬಳ್ಳಿಯಲ್ಲಿ ಮುಂದುವರೆದ ವರುಣನ ಅಬ್ಬರ (ETV Bharat)

ಹುಬ್ಬಳ್ಳಿಯಲ್ಲಿ ಮುಂದುವರೆದ ವರುಣನ ಅಬ್ಬರ (ETV Bharat)

ಹುಬ್ಬಳ್ಳಿ : ಬಿಸಿಲಿನ ತಾಪಕ್ಕೆ ಬೇಸತ್ತಿದ್ದ ವಾಣಿಜ್ಯ ನಗರಿ ಜನರಿಗೆ ವರುಣ ತಂಪೆರೆದಿದ್ದಾನೆ. ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ವರುಣನ ಅಬ್ಬರ ಜೋರಾಗಿದ್ದು, ಗುಡುಗು ಹಾಗೂ ಭಾರಿ ಗಾಳಿ ಸಹಿತ ಮಳೆಯಾಗಿದೆ.

ಬಿಸಿಲಿನ ತಾಪವನ್ನು ಅನುಭವಿಸಿದ್ದ ಜನರಿಗೆ ಮಳೆರಾಯನ ಆಗಮನ ಖುಷಿ ತಂದಿದೆ. ಆದರೆ ಗಾಳಿ‌ ಸಹಿತ ಮಳೆಯಿಂದ ಹುಬ್ಬಳ್ಳಿಯ ಜನರು ಆತಂಕಗೊಂಡಿದ್ದಾರೆ. ವರುಣನೊಂದಿಗೆ ಬಿರುಗಾಳಿ ಹಾಗೂ ಗುಡುಗಿನ ಅಬ್ಬರಕ್ಕೆ ಹುಬ್ಬಳ್ಳಿಯ ಜನರನ್ನು ತಬ್ಬಿಬ್ಬು ಮಾಡಿದೆ.

ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಬಹುತೇಕ ಕಡೆಯಲ್ಲಿ ಗುಡುಗು ಸಹಿತ ಮಳೆಯಾಗಿದ್ದು, ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಮೊನ್ನೆಯಷ್ಟೇ ಮಳೆಯಾಗಿತ್ತು. ಇಂದು ಕೂಡ ಮಳೆ ಮುಂದುವರೆದಿದ್ದು, ತಗ್ಗು ಪ್ರದೇಶಗಳಿಗೆ ನೀರು ‌ನುಗ್ಗಿದೆ. ಹೀಗಾಗಿ ನಗರದ ಬಹುತೇಕ ಕಡೆ ರಸ್ತೆ ಸಂಚಾರ ಅಸ್ತವ್ಯಸ್ತವಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ.

ಮಾಯಕೊಂಡದಲ್ಲಿ ಮಳೆಯಿಂದ ಅವಾಂತರ : ದಾವಣಗೆರೆ ತಾಲೂಕಿನ ಮಾಯಕೊಂಡ ಹೋಬಳಿಯಲ್ಲಿ ಮಳೆಯಿಂದ ಸಾಕಷ್ಟು ಅವಾಂತರ ಸೃಷ್ಟಿಯಾಗಿದೆ. ಈ ಸ್ಥಳಕ್ಕೆ ಮಾಯಕೊಂಡ ಶಾಸಕ ಕೆ. ಎಸ್. ಬಸವಂತಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮಾಯಕೊಂಡ ಹೋಬಳಿಯ ಅಣಬೇರು, ಸಿದ್ದನೂರು, ಗುಮ್ಮನೂರು ಭಾಗದಲ್ಲಿ ಮಳೆಯಾಗಿದ್ದರಿಂದ ಅಡಿಕೆ, ಭತ್ತ, ತೆಂಗು ಬೆಳೆಗಳು ನೆಲಕಚ್ಚಿವೆ. ನಿನ್ನೆ ಸುರಿದ ಗಾಳಿ ಮಳೆಯಿಂದಾಗಿ ಅಣಬೇರು ಗ್ರಾಮದ ರೈತರಾದ ಕೆ. ಸಿ. ರಾಜಪ್ಪ ಮತ್ತು ಬಿ. ಶಿವಮೂರ್ತಿ ಎಂಬುವರ ಅಡಿಕೆ ಮರಗಳು ನೆಲಕ್ಕುರುಳಿವೆ.

MLA K. S Basavantappa
ಶಾಸಕ ಕೆ. ಎಸ್ ಬಸವಂತಪ್ಪ (ETV Bharat)

ವಿಷಯ ತಿಳಿದ ಶಾಸಕರಾದ ಕೆ. ಎಸ್. ಬಸವಂತಪ್ಪ ಅವರು ಗ್ರಾಮಕ್ಕೆ ಭೇಟಿ ನೀಡಿ ರಾಜಪ್ಪ ಅವರ ತೋಟಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಈ ವೇಳೆ ಸಂಬಂಧಪಟ್ಟ ತೋಟಗಾರಿಕೆ ಇಲಾಖೆಯ ನಿರ್ದೇಶಕರಿಗೆ ಕರೆಮಾಡಿ, ಸೂಕ್ತ ಪರಿಹಾರ ನೀಡುವಂತೆ ಸೂಚಿಸಿದರು.

ದಾವಣಗೆರೆ ತಾಲೂಕಿನ ಹೊನ್ನನಾಯಕನಹಳ್ಳಿ ಗ್ರಾಮದ ಶಾಸ್ತ್ರೀ ಬಸಪ್ಪನವರು ಸುಮಾರು 3 ಎಕರೆ ಜಮೀನಿನಲ್ಲಿ ಬೆಳೆದಿದ್ದ ಅಡಿಕೆ ಬೆಳೆಯನ್ನು ನೀರಿಲ್ಲದಿದ್ದರಿಂದ ನಾಶಮಾಡಿದ್ದಾರೆ. ಜಮೀನಿನಲ್ಲಿ ಹಾಕಿಸಿರುವ ಕೊಳವೆಬಾವಿ ಬತ್ತಿಹೋಗಿದ್ದರಿಂದ ಮತ್ತೆ 9 ಬೋರ್​ವೆಲ್ ಹಾಕಿಸಿದರೂ ನೀರು ಬೀಳದೆ ಇರುವುದರಿಂದ ಫಸಲಿಗೆ ಬಂದಿರುವ ತೋಟ ಒಣಗಿ ಹೋಗಿತ್ತು. ಇದರಿಂದ ಬೇಸತ್ತ ರೈತ ಮರಗಳನ್ನು ಕಡಿದು ಸುಟ್ಟು ಹಾಕಿದ್ದಾರೆ.

ಈ ವಿಚಾರ ತಿಳಿದ ಶಾಸಕರು ರೈತರ ಹೊಲಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಂಬಂಧಪಟ್ಟ ಅಧಿಕಾರಿಗಳಿಗೆ ಕರೆಮಾಡಿ, ಅವರಿಗೆ ಹೊಲಕ್ಕೆ ಬಂದು ಪರಿಶೀಲನೆ ಮಾಡಿ ಪರಿಹಾರ ನೀಡುವಂತೆ ಸೂಚಿಸಿದರು.

ಮಲೆನಾಡು ಭಾಗದಲ್ಲಿ ನಿರಂತರ ಮಳೆ : ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಇಂದೂ ಕೂಡ ಧಾರಾಕಾರ ಮಳೆ ಮುಂದುವರೆದಿದೆ. ಕಳೆದ ನಾಲ್ಕು ದಿನಗಳಿಂದ ಮಲೆನಾಡು ಭಾಗದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು, ರೈತರಲ್ಲಿ ಮಂದಹಾಸ ಮೂಡುವಂತೆ ಮಾಡಿದೆ.

ಮಲೆನಾಡಿನಲ್ಲಿ ಮುಂದುವರೆದ ಮಳೆ (ETV Bharat)

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಕೊಪ್ಪ, ಹೊರನಾಡು, ಕಳಸ ಈ ಭಾಗದಲ್ಲಿ ನಿರಂತರ ಮಳೆ ಸುರಿದಿದೆ. ಇಂದು ಶೃಂಗೇರಿ ಪಟ್ಟಣವನ್ನು ಈ ಮಳೆ ಪ್ರವೇಶ ಮಾಡಿದೆ. ಒಂದು ಗಂಟೆ ಸುರಿದ ಮಳೆಗೆ ಸ್ಥಳೀಯ ಜನತೆ ಹಾಗೂ ರೈತರು ನಿಟ್ಟಿಸಿರು ಬಿಟ್ಟಿದ್ದಾರೆ.

ಮಳೆಯಿಂದ ಪ್ರವಾಸಿಗರು ಹಾಗೂ ಜನಜೀವನ ಅಸ್ತವ್ಯಸ್ತವಾಗಿದೆ. ಈ ಭಾಗದಲ್ಲಿ ಮಳೆ ಚುರುಕುಗೊಂಡ ಹಿನ್ನೆಲೆ ರೈತರು, ಕೃಷಿಕರಲ್ಲಿ ಸಂತಸ ಮನೆ ಮಾಡಿದೆ. ಸತತ ಮಳೆಯಾದರೆ ತುಂಗಾನದಿ ಹರಿವು ಕೊಂಚ ಏರಿಕೆಯಾಗುವ ಸಾಧ್ಯತೆ ಕಂಡು ಬರುತ್ತಿದೆ. ಈ ಭಾಗದಲ್ಲಿ ಮಳೆಯಾಗದೆ ಅಡಿಕೆ ಬೆಳೆ ಸಂಪೂರ್ಣ ನೆಲಕಚ್ಚಿತ್ತು. ಇತರ ಬೆಳೆಗಳು ಸಂಪೂರ್ಣವಾಗಿ ಕೈಕೊಟ್ಟಿದ್ದವು. ಮಳೆಗಾಗಿ ಕಾದು ಕುಳಿತಿದ್ದ ಜನರೀಗ ಸಂತಸಗೊಂಡಿದ್ದಾರೆ.

ಇದನ್ನೂ ಓದಿ : ಮಲೆನಾಡು ಭಾಗದಲ್ಲಿ ಗುಡುಗು ಸಿಡಿಲಿನೊಂದಿಗೆ ಧಾರಾಕಾರ ಮಳೆ - RAIN FALL IN KARNATAKA

ETV Bharat Logo

Copyright © 2024 Ushodaya Enterprises Pvt. Ltd., All Rights Reserved.