ETV Bharat / state

ಕೆಪಿಎಸ್​ಸಿ ಸದಸ್ಯತ್ವದ ಆಮಿಷ: ಸಿಎಂ, ರಾಜ್ಯಪಾಲರ ಹೆಸರಲ್ಲಿ ನಕಲಿ ಆದೇಶ ಸೃಷ್ಟಿಸಿ ₹4 ಕೋಟಿ ವಂಚನೆ - Fraud Case

author img

By ETV Bharat Karnataka Team

Published : Apr 2, 2024, 4:13 PM IST

Updated : Apr 2, 2024, 4:25 PM IST

ವಂಚನೆಗೊಳಗಾದ ಚಿತ್ರಕಲಾ ಶಿಕ್ಷಕಿ ನೀಡಿದ ದೂರಿನಡಿ ನಾಲ್ವರು ಆರೋಪಿಗಳನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

Arrested accused
ಬಂಧಿತ ಆರೋಪಿಗಳು

ಬೆಂಗಳೂರು: ಮುಖ್ಯಮಂತ್ರಿ ಹಾಗೂ ರಾಜ್ಯಪಾಲರ ಹೆಸರಿನಲ್ಲಿ ನಕಲಿ ನೇಮಕಾತಿ ಆದೇಶ ಪತ್ರ ಸೃಷ್ಟಿಸಿ ಕರ್ನಾಟಕ ಲೋಕಸೇವಾ ಆಯೋಗದಲ್ಲಿ (ಕೆಪಿಎಸ್‌ಸಿ) ಸದಸ್ಯತ್ವ ಕೊಡಿಸುವುದಾಗಿ ಮಹಿಳೆಯನ್ನು ನಂಬಿಸಿ 4.10 ಕೋಟಿ ರೂಪಾಯಿ ವಂಚಿಸಿದ್ದ ಆರೋಪದ ಮೇರೆಗೆ ನಾಲ್ವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ವಂಚನೆಗೊಳಗಾದ ಕಲಬುರಗಿ ಮೂಲದ ಚಿತ್ರಕಲಾ ಶಿಕ್ಷಕಿ ನೀಲಮ್ಮ ಎಂ.ಬೆಳಮಗಿ ಎಂಬವರು ನೀಡಿದ‌ ದೂರಿನ ಮೇರೆಗೆ ತಾವರೆಕೆರೆ ರಿಯಾಜ್ ಅಹಮ್ಮದ್, ಚಿಕ್ಕಮಗಳೂರಿನ ಮೂಡಿಗೆರೆಯ ನಿರ್ದೇಶಕರ ಕಚೇರಿಯಲ್ಲಿನ ತೋಟಗಾರಿಕಾ ಸಹಾಯಕ ಅಧಿಕಾರಿ ಚಂದ್ರಪ್ಪ, ಕನಕಪುರ ವಿಧಾನಸಭಾ ಕ್ಷೇತ್ರದಿಂದ ಕಳೆದ ಚುನಾವಣೆಯಲ್ಲಿ ಪಕ್ಷೇತರನಾಗಿ ಸ್ಪರ್ಧಿಸಿ ಪರಾಭವಗೊಂಡಿದ್ದ ರುದ್ರೇಶ್ ಹಾಗೂ ಯೂಸೂಫ್ ಎಂಬವರನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಇನ್ನೂ ಮೂವರು ಭಾಗಿಯಾಗಿದ್ದು, ತಲೆಮರೆಸಿಕೊಂಡಿದ್ದಾರೆ. ಅವರ ಪತ್ತೆಗಾಗಿ ಶೋಧ ಕಾರ್ಯ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಸಂತ್ರಸ್ತೆ ಕಲಬುರಗಿಯ ಶಾಲೆಯೊಂದರಲ್ಲಿ ಚಿತ್ರಕಲಾ ಶಿಕ್ಷಕಿಯಾಗಿದ್ದಾರೆ. ತನಗೆ ಪರಿಚಿತನಾಗಿದ್ದ ರಿಯಾಜ್, ನನಗೆ ಪ್ರಧಾನಿ ನರೇಂದ್ರ ಮೋದಿ ಸಹೋದರರ ಪರಿಚಯವಿದೆ. ಕೆಪಿಎಸ್​ಸಿಯಲ್ಲಿ ಸದಸ್ಯತ್ವ ನೀಡುವುದಾಗಿ ಭರವಸೆ ನೀಡಿದ್ದ. ಇದಕ್ಕೆ 15-20 ಕೋಟಿ ರೂ ನೀಡಬೇಕು ಎಂದು ಹೇಳಿದ್ದ. ಇದರಂತೆ ಕಳೆದ ವರ್ಷದ ವಿವಿಧ ದಿನಾಂಕಗಳಲ್ಲಿ ಹಂತ ಹಂತವಾಗಿ 4.10 ಕೋಟಿ ಹಣವನ್ನು ಶಿಕ್ಷಕಿ ನಗರದ ಮಲ್ಲೇಶ್ವರದಲ್ಲಿರುವ ಆರೋಪಿ ಯೂಸೂಫ್​ನ ಕಚೇರಿಗೆ ಹೋಗಿ ಬ್ಯಾಂಕ್ ಮೂಲಕ ಹಣ ವರ್ಗಾಯಿಸಿದ್ದರು.

ಮುಖ್ಯಮಂತ್ರಿ, ರಾಜ್ಯಪಾಲರ ಹೆಸರಿನಲ್ಲಿ ನಕಲಿ ಆದೇಶ ಪತ್ರ: ಮಲ್ಲೇಶ್ವರದಲ್ಲಿ ಆಕ್ಯೂರೇಟ್ ಟೈಂ ಇಂಡಿಯಾ ಪ್ರವೇಟ್ ಲಿಮಿಟೆಡ್ ಹೆಸರಿನಲ್ಲಿ‌ ಯೂಸೂಫ್ ಕಚೇರಿ ತೆರೆದಿದ್ದ. ಜಿಎಸ್​ಟಿ ಶುಲ್ಕ ಪಾವತಿ ಸೇರಿ ಇತರೆ ಸರ್ಕಾರಿ ಶುಲ್ಕ ಪಾವತಿ ಮಾಡಿಸುವ ಕೆಲಸ ಮಾಡಿಸುತ್ತಿದ್ದ‌.‌ ಕೆಲವರಿಂದ ಹಣ ಪಡೆದು ವಂಚಿಸಿರುವ ಬಗ್ಗೆ ತಿಳಿದುಬಂದಿದೆ. ಪರಿಚಿತರಾಗಿದ್ದ ರಿಯಾಜ್ ಹಾಗೂ ರುದ್ರೇಶ್ ಮೂಲಕ ಮಹಿಳೆಯನ್ನು ಕಚೇರಿಗೆ ಕರೆಯಿಸಿಕೊಂಡು ಯೂಸೂಫ್​ ಹಣ ಪಾವತಿಸಿಕೊಂಡಿದ್ದ. ಮಹಿಳೆಯನ್ನು ನಂಬಿಸಲು ಮುಖ್ಯಮಂತ್ರಿಗಳ ಟಿಪ್ಪಣಿ, ನಡಾವಳಿ ಹಾಗೂ ನಕಲಿ ಸಹಿ ಮಾಡಿರುವ ಪತ್ರ ಹಾಗೂ ರಾಜ್ಯಪಾಲರ ಹೆಸರಿನಲ್ಲಿ ಸುಳ್ಳು ರಾಜ್ಯಪತ್ರ ಸೃಷ್ಟಿಸಿ ಮೋಸ ಮಾಡಿದ್ದ. ಸದ್ಯ ಬಂಧಿತರಿಂದ 40 ಲಕ್ಷ ರೂಪಾಯಿ ನಗದು ನಾಲ್ಕು ಮೊಬೈಲ್ ಪೋನ್ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಚಿಕ್ಕಮಗಳೂರು: ಮಗಳ ಚಿಕಿತ್ಸೆಗೆ ಹಣ ಕೇಳಿದ ವ್ಯಕ್ತಿಯಿಂದಲೇ ಹಣ ಪಡೆದು ವಂಚನೆ! - Fraud Case

Last Updated : Apr 2, 2024, 4:25 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.