ETV Bharat / state

ಪ್ರಧಾನಿಗೆ ದೇವೇಗೌಡರ ಪತ್ರ ; ಮೇಕೆದಾಟನ್ನು ಮಾನವೀಯತೆ ದೃಷ್ಟಿಯಿಂದ ನೋಡುವಂತೆ ಒತ್ತಾಯ - Former Prime Minister Deve Gowda

author img

By ETV Bharat Karnataka Team

Published : Mar 24, 2024, 3:19 PM IST

ಮೇಕೆದಾಟು ಯೋಜನೆ ಸಂಬಂಧ ಮಾಜಿ ಪ್ರಧಾನಿ ಹೆಚ್. ಡಿ ದೇವೇಗೌಡರು ವಿವರವಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ.

Former Prime Minister H D Devegowda
ಮಾಜಿ ಪ್ರಧಾನಿ ಹೆಚ್. ಡಿ ದೇವೇಗೌಡರು

ಬೆಂಗಳೂರು : ಚುನಾವಣೆ ಮುಗಿದ ಮೇಲೆ ಮೇಕೆದಾಟು ಕಟ್ಟಲು ಬದ್ಧ ಎಂದು ನಾವು ಪ್ರಣಾಳಿಕೆಯಲ್ಲಿ ಹಾಕುತ್ತೇವೆ ಎಂದು ಮಾಜಿ ಪ್ರಧಾನಿ ಹೆಚ್​ ಡಿ ದೇವೇಗೌಡ ತಿಳಿಸಿದರು.

ಜೆ.ಪಿ ಭವನದಲ್ಲಿಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕಾವೇರಿ ಕಣಿವೆಗೆ ಸಂಬಂಧಿಸಿದಂತೆ 9 ಜಿಲ್ಲೆಗಳ 22 ತಾಲೂಕು, ಬೆಂಗಳೂರು ನಗರ ಸೇರಿದಂತೆ ಕುಡಿಯುವ ನೀರಿನ ಸಮಸ್ಯೆ ಭೀಕರವಾಗಿದೆ. 5 ತಿಂಗಳಿಂದ ಬೆಂಗಳೂರು ಜನ ಮನೆಗೆ ಬೀಗ ಹಾಕಿಕೊಂಡು ಊರಿಗೆ ವಲಸೆ ಹೋಗಿದ್ದಾರೆ.

ಕುಡಿಯಲು ನೀರಿಲ್ಲದ ಕಾರಣ ಈ ಸಮಸ್ಯೆಗೆ ಪರಿಹಾರ ಒದಗಿಸಲು ಸರ್ಕಾರದಿಂದ ಆಗಿಲ್ಲ. ಹೀಗಾಗಿ ಜನ ಗುಳೆ ಹೋಗಿದ್ದಾರೆ. ತಮಿಳುನಾಡಿನ ಸಿಎಂ ಕಠೋರವಾದ ನಿಲುವು ತಾಳಿದ್ದಾರೆ. ಅವರ ಪ್ರಣಾಳಿಕೆಯಲ್ಲಿ ಮೇಕೆದಾಟು ಯೋಜನೆ ಮಾಡಲು ಬಿಡಲ್ಲ ಎಂದಿದ್ದಾರೆ.

1964ರಲ್ಲಿ ವಿಧಾನಸಭೆಯಲ್ಲಿ ಖಾಸಗಿ ನಿರ್ಣಯ ಮಂಡಿಸಿದ್ದೆ. ನಮ್ಮ ರಾಜ್ಯದ ಸಂಪನ್ಮೂಲಗಳಿಂದ ಹೇಮಾವತಿ, ಕಬಿನಿ ಜಲಾಶಯ ಮಾಡಲು ನಿರ್ಣಯಿಸಿದ್ದೆ. ಅಂದಿನ ಸಿಎಂ ನಿಜಲಿಂಗಪ್ಪನವರು, ಒಳ್ಳೆಯ ನಿರ್ಣಯ ಎಂದಿದ್ದರು. ಆದರೆ ಷರತ್ತು ಹಾಕಿರುವ ಕಾರಣ ಆಗಲ್ಲ ಎಂದರು.‌ ನಿರ್ಣಯ ವಾಪಸ್ ಪಡೆಯಲು ಮನವಿ ಮಾಡಿದ್ರು. ಎಲ್ಲರ ಮನವಿಗೆ ಮಣಿದು ವಾಪಸ್ ತಗೊಂಡೆ ಎಂದು ದೇವೇಗೌಡರು ವಿವರಿಸಿದರು.

1966ರಲ್ಲಿ ಮತ್ತೆ ನಿರ್ಣಯ ಮಂಡಿಸಿದೆ. ಕೆಲಸ‌ ಆರಂಭಿಸಿದ್ರು, ಸೂಕ್ತ ಹಣ ಒದಗಿಸಿರಲಿಲ್ಲ. ಮುಂದೆ ನಾನೇ ಅಧಿಕಾರಕ್ಕೆ ಬಂದೆ. ಪ್ರಧಾನಿಗೆ ವಿವರವಾಗಿ ಪತ್ರ ಬರೆದಿದ್ದೇನೆ. ಮೇಕೆದಾಟು ಯೋಜನೆ ಮಾಡೇ ಮಾಡುತ್ತೇವೆ. ಜೆಡಿಎಸ್ ಪ್ರಣಾಳಿಕೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸುತ್ತೇವೆ. ಎಲ್ಲರೂ ಸೇರಿ ಐಕ್ಯತೆಯಿಂದ ಈ ಯೋಜನೆ ಮಾಡೋಣ ಎಂದು ರಾಜ್ಯದ ಮೂರು ಪಕ್ಷಗಳು ಪ್ರಣಾಳಿಕೆಯಲ್ಲಿ ಹಾಕಬೇಕು. ಎಲ್ಲರೂ ಒಟ್ಟಾಗಿ ಈ ಯೋಜನೆ ಮಾಡಬೇಕು. ಬಿಜೆಪಿಯವರು ಅವರ ಪ್ರಣಾಳಿಕೆಯಲ್ಲಿ ಹಾಕಲಿ ಎಂದು ಹೆಚ್​ಡಿಡಿ ಒತ್ತಾಯಿಸಿದರು.

ಪ್ರಧಾನಿಗೆ ಪತ್ರ : ಮೇಕೆದಾಟು ಯೋಜನೆ ಸಂಬಂಧ ಮಾಜಿ ಪ್ರಧಾನಿ ಹೆಚ್. ಡಿ ದೇವೇಗೌಡ ಅವರು ವಿವರವಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಸೆ. 23, 2023ರಲ್ಲಿ ನಾನು‌ ಮೇಕೆದಾಟು ಸಂಬಂಧ ನಿಮಗೆ ಈಗಾಗಲೇ ಪತ್ರ ಬರೆದು ಜಲಶಕ್ತಿ ಸಚಿವಾಲಯಕ್ಕೆ ಸೂಕ್ತ ನಿರ್ದೇಶನ ನೀಡುವಂತೆ ಕೋರಿದ್ದೆ. ತಟಸ್ಥವಾದ ಒಂದು ಸಮಿತಿಯನ್ನು ಉಭಯ ರಾಜ್ಯಗಳಿಗೆ ಕಳುಹಿಸಿ, ವಸ್ತುನಿಷ್ಠ ಮಾಹಿತಿ ಪಡೆದುಕೊಳ್ಳಬೇಕು. ಕಾವೇರಿ ಜಲಸಂಕಷ್ಟದ ಈಗಿನ ವಾಸ್ತವಾಂಶದ ಆಧಾರದ ಮೇಲೆ ಕೇಂದ್ರ ಜಲಶಕ್ತಿ ಇಲಾಖೆಯಿಂದ ಸುಪ್ರೀಂಕೋರ್ಟ್‌ಗೆ ತಾವು ಅರ್ಜಿ ಹಾಕಬೇಕು. ಮಳೆ ಇಲ್ಲದೆ ಕಂಗಾಲಾಗಿರುವ ರಾಜ್ಯದ ರೈತರ ನೆರವಿಗೆ ಧಾವಿಸಬೇಕು ಎಂದು ಉಲ್ಲೇಖಿಸಿದ್ದೆ ಎಂದು ತಿಳಿಸಿದ್ದಾರೆ.

ಮಳೆ ಕೊರತೆ ಕಾರಣದಿಂದ ರೈತರು ಪರದಾಡುತ್ತಿದ್ಧಾರೆ. ಕಾವೇರಿ ಕೊಳ್ಳದ ಜಲಾಶಯಗಳಿಗೆ ನೀರು ಹರಿದು ಬಂದಿಲ್ಲ. ವಸ್ತುಸ್ಥಿತಿ ಹೀಗಿದ್ದರೂ ಕಾವೇರಿ ನದಿ ನೀರು ಪ್ರಾಧಿಕಾರ ಹಾಗೂ ಸುಪ್ರೀಂ ಕೋರ್ಟ್‌ ತಮಿಳುನಾಡಿಗೆ ನೀರು ಹರಿಸುವಂತೆ ಆದೇಶಿಸಿವೆ. ಇದು ರಾಜ್ಯದ ಸಂಕಷ್ಟಕ್ಕೆ ಕಾರಣವಾಗಿದೆ ಎಂದು ಪ್ರಧಾನಿಗಳ ಗಮನ ಸೆಳೆದಿದ್ಧಾರೆ.

ಮೇಕೆದಾಟು ಯೋಜನೆಯನ್ನು ರಾಜಕೀಯ ದೃಷ್ಟಿಕೋನದಿಂದ ನೋಡಬಾರದು. ಮಾನವೀಯತೆಯ ದೃಷ್ಟಿಕೋನದಿಂದ ನೋಡಬೇಕು. ಜನರ ಸಮಸ್ಯೆಯನ್ನು ಅರ್ಥಮಾಡಿಕೊಳ್ಳಬೇಕು. ಕುಡಿಯುವ ನೀರಿಗಾಗಿ ಈ ಯೋಜನೆ ಅವಶ್ಯಕತೆ ಇದೆ. ಜನ 5 ತಿಂಗಳಿಂದ ತೊಂದರೆ ಅನುಭವಿಸುತ್ತಿದ್ದಾರೆ. ಇದು ಕಾಂಗ್ರೆಸ್‌, ಬಿಜೆಪಿ, ಡಿಎಂಕೆ, ಅಣ್ಣಾ ಡಿಎಂಕೆ ಪ್ರಶ್ನೆ ಅಲ್ಲ, ಇದು ಜನರ ಸಮಸ್ಯೆಯ ಪ್ರಶ್ನೆ. ಕುಡಿಯುವ ನೀರಿನ ಸಮಸ್ಯೆ, ಜನ ಕುಡಿಯುವ ನೀರಿಗೆ ತೊಂದರೆಪಡ್ತಿದ್ದಾರೆ ಎಂದರು.

ಕಾವೇರಿ ಜಲಾನಯನ ಪ್ರದೇಶದಲ್ಲಿ ಜನ ತೊಂದರೆ ಅನುಭವಿಸುತ್ತಿದ್ದಾರೆ. ನಾನು ಅವರಲ್ಲಿ ಕೈ ಮುಗಿದು ಪ್ರಾರ್ಥನೆ ಮಾಡ್ತೀನಿ. ಮೇಕೆದಾಟು ಯೋಜನೆಯಲ್ಲಿ 5000 ಎಕರೆ ಮುಳುಗಡೆ ಆಗುವುದಿಲ್ಲ. ನೀರು ಸಂಗ್ರಹಕ್ಕೆ ಹೆಚ್ಚಿನ ಜಾಗ ಬಳಸುವುದಿಲ್ಲ. ನಾನು ಪರಿಸರವಾದಿಗಳಿಗೆ ಮನವಿ ಮಾಡ್ತೀನಿ, ಕುಡಿಯುವ ನೀರಿಗಾಗಿ ಮೇಕೆದಾಟು ಅವಶ್ಯಕತೆ ಇದೆ. ಪ್ರಧಾನಿಯವರು ಈ ವಿಚಾರದಲ್ಲಿ ಅಧಿಕಾರಿಗಳು ಹೇಳಿರುವ 30 ಟಿಎಂಸಿ ನೀರಿನ ಬಳಕೆಗೆ ಅವಕಾಶ ನೀಡಬೇಕು ಎಂದು ತಿಳಿಸಿದ್ದಾರೆ.

ಮೈತ್ರಿಯಲ್ಲಿ ಸಮಸ್ಯೆ ಇಲ್ಲ : ಬಿಜೆಪಿ ಜೊತೆ ಮೈತ್ರಿಯಲ್ಲಿ ನಮ್ಮದೇನು ಸಮಸ್ಯೆ ಇಲ್ಲ. ನಮಗೆ 3 ಸೀಟು ಕೊಟ್ಟಿದ್ದಾರೆ. ನನ್ನನ್ನು, ಕುಮಾರಸ್ವಾಮಿಯವರನ್ನು, ಜಿ. ಟಿ ದೇವೆಗೌಡರನ್ನು ಸ್ಟಾರ್ ಕ್ಯಾಂಪೇನರ್ ಅಂತ ಮಾಡಿದ್ದಾರೆ. ಮಂಡ್ಯ ಅಭ್ಯರ್ಥಿ ವಿಚಾರ ಕೂತು ಚರ್ಚೆ ಮಾಡುತ್ತೇವೆ. ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಬಗ್ಗೆ ಒತ್ತಡ ಮಾಡ್ತಿದ್ದಾರೆ. ಕುಮಾರಸ್ವಾಮಿಯವರು ಇಂದು ಬಂದಿದ್ದಾರೆ. ಚರ್ಚೆ ಮಾಡಿ ತೀರ್ಮಾನ ಮಾಡ್ತೀವಿ ಎಂದರು.

ರಿಟ್ ಅರ್ಜಿ ರಾಜಕೀಯ ಪ್ರೇರಿತ : ಬರಪರಿಹಾರಕ್ಕಾಗಿ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ರಿಟ್ ಪಿಟಿಷನ್ ಹಾಕಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ಕೇಂದ್ರದಿಂದ ಹಣ ಬಂದಿಲ್ಲ ಎಂದು ರಿಟ್ ಪಿಟಿಷನ್ ಹಾಕಿರುವುದು ಮೊದಲ ಬಾರಿ. ಹೆಗಡೆಯವರ ಕಾಲದಲ್ಲಿ ಸಿದ್ದರಾಮಯ್ಯನವರು ಇದ್ರು. ನಾವು ಊರೂರಿಗೆ ಗೋಶಾಲೆ ಮಾಡಿದ್ವಿ. ಕೇಂದ್ರ ಸರ್ಕಾರವನ್ನು ಬೇಡ್ತಾ ಕೂರಲಿಲ್ಲ. ರಿಟ್ ಹಾಕಿರುವುದು ರಾಜಕೀಯ ಪ್ರೇರಿತ. ಅದಕ್ಕಿಂತ ಬೇರೇನೂ ಹೇಳೊದಿಲ್ಲ ಎಂದು ತಿಳಿಸಿದರು.

ಇದನ್ನೂ ಓದಿ: ದೇವರ ಅನುಗ್ರಹ, ಜನರ ಪ್ರಾರ್ಥನೆ ಫಲ ಕೊಟ್ಟಿದೆ: ಹೆಚ್​ಡಿಕೆ - H D Kumaraswamy Heart Surgery

ETV Bharat Logo

Copyright © 2024 Ushodaya Enterprises Pvt. Ltd., All Rights Reserved.