ETV Bharat / state

ಬಿಜೆಪಿ ಸೇರಿದ ಮಾಜಿ ಶಾಸಕ ಅಖಂಡ: ಕರಡಿ ಸಂಗಣ್ಣ ಕಾಂಗ್ರೆಸ್​ ಸೇರ್ಪಡೆಗೆ ಬಿಎಸ್​ವೈ ಅಸಮಾಧಾನ - Akhanda Srinivas Murthy

author img

By ETV Bharat Karnataka Team

Published : Apr 17, 2024, 11:01 AM IST

Updated : Apr 17, 2024, 12:56 PM IST

ಮಾಜಿ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಅವರು ಬಿಜೆಪಿ ಸೇರಿದ್ದಾರೆ. ಇದೇ ವೇಳೆ ಸಂಸದ ಕರಡಿ ಸಂಗಣ್ಣ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಬಿ.ಎಸ್​.ಯಡಿಯೂರಪ್ಪ ಅಸಮಾಧಾನ ವ್ಯಕ್ತಪಡಿಸಿದರು.

former-mla-akhanda-srinivas-murthy-joins-bjp
ಬಿಜೆಪಿ ಸೇರಿಸ ಮಾಜಿ ಶಾಸಕ ಅಖಂಡ : ಕರಡಿ ಸಂಗಣ್ಣ ಕಾಂಗ್ರೆಸ್​ ಸೇರ್ಪಡೆಗೆ ಬಿಎಸ್​ವೈ ಅಸಮಾಧಾನ

ಬೆಂಗಳೂರು: ಪುಲಿಕೇಶಿನಗರದ ಮಾಜಿ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಬೆಂಬಲಿಗರೊಂದಿಗೆ ಇಂದು ಬಿಜೆಪಿ ಸೇರ್ಪಡೆಯಾದರು. ಕಾಂಗ್ರೆಸ್ ತೊರೆದು ಬಿಎಸ್​​ಪಿ ಸೇರಿದ್ದ ಅಖಂಡ, ಆ ಪಕ್ಷಕ್ಕೂ ಗುಡ್ ಬೈ ಹೇಳಿ ಭಾರತೀಯ ಜನತಾ ಪಕ್ಷಕ್ಕೆ ಸೇರಿದರು.

ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಪಕ್ಷದ ಧ್ವಜ ನೀಡುವ ಮೂಲಕ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ಶ್ರೀನಿವಾಸ್ ಮೂರ್ತಿಯನ್ನು ಪಕ್ಷಕ್ಕೆ ಬರಮಾಡಿಕೊಂಡರು. ಈ ವೇಳೆ ಮಾತನಾಡಿದ ಯಡಿಯೂರಪ್ಪ, ''ಅಖಂಡ ಶ್ರೀನಿವಾಸ್​ ಮೂರ್ತಿ ತಮ್ಮ ಬೆಂಬಲಿಗರೊಂದಿಗೆ ಪಕ್ಷಕ್ಕೆ ಬಂದಿದ್ದು ನಮಗೆ ದೊಡ್ಡ ಶಕ್ತಿ ತಂದಿದೆ. ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಶೋಭಾ ಕರಂದ್ಲಾಜೆ ಅವರಿಗೆ 2.5ರಿಂದ 3 ಲಕ್ಷ ಮತಗಳ ಅಂತರದ ಗೆಲುವು ಖಚಿತ'' ಎಂದರು.

''ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆಯಾದಾಗ ಅಖಂಡ ಶ್ರೀನಿವಾಸ್​​ ಮೂರ್ತಿ ಅವರ ಮನೆಯನ್ನು ಸುಟ್ಟು ಹಾಕಲಾಗಿತ್ತು. ಆಗ ಕಾಂಗ್ರೆಸ್ ಅವರಿಗೆ ಬೆಂಬಲ ಕೊಡಲಿಲ್ಲ. ಆದರೆ, ನಾವು ಅವರ ಜೊತೆ ಗಟ್ಟಿಯಾಗಿ ನಿಂತಿದ್ದೇವೆ. ಈಗ ಅವರ ಸೇರ್ಪಡೆ ಪಕ್ಷಕ್ಕೆ ಆನೆ ಬಲ ಬಂದಂತಾಗಿದೆ, ಚುನಾವಣೆ ವೇಳೆಯಲ್ಲೇ ಬಂದಿರುವುದು ಶೋಭಾ ಗೆಲುವಿಗೆ ಸಹಕಾರಿಯಾಗಲಿದೆ'' ಎಂದು ಹೇಳಿದರು.

ಕರಡಿ ಸಂಗಣ್ಣ ನಿಲುವಿಗೆ ಬಿಎಸ್​ವೈ ಅಸಮಾಧಾನ: ಇದೇ ವೇಳೆ ಸಂಸದ ಕರಡಿ ಸಂಗಣ್ಣ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ ವಿಚಾರಕ್ಕೆ ಯಡಿಯೂರಪ್ಪ ಬೇಸರಗೊಂಡರು. ಸಂಗಣ್ಣ ಬಗ್ಗೆ ಹೆಚ್ಚು ಮಾತನಾಡದ ಯಡಿಯೂರಪ್ಪ, ಹೂಂ ಗೊತ್ತಿದೆ. ಅವರು ಕಾಂಗ್ರೆಸ್ ಸೇರುತ್ತಿರುವುದು ಎಂದಷ್ಟೇ ಹೇಳಿದರು.

ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಮಾತನಾಡಿ, ''ಅಖಂಡ ಶ್ರೀನಿವಾಸ ಮೂರ್ತಿ ಅವರು ಬಹಳ ಹಿಂದೆಯೇ ಬಿಜೆಪಿ ಸೇರಬೇಕಿತ್ತು. ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ವೇಳೆ ಅವರ ಮನೆ ಸುಡಲಾಗಿತ್ತು. ಆಗ ಅವರ ಜೊತೆ ಇಡೀ ಕಾಂಗ್ರೆಸ್ ನಿಲ್ಲಬೇಕಿತ್ತು, ಆದರೆ ನಿಲ್ಲಲಿಲ್ಲ. ಯಾವ ನಾಯಕರೂ ಅಲ್ಲಿಗೆ ಹೋಗುವ ಧೈರ್ಯ ಮಾಡಲಿಲ್ಲ. ನಮ್ಮ ಯುವಕರು ಬಹಳ ಧೈರ್ಯದಿಂದ ಅಂದು ನನ್ನ ಜೊತೆ ಅಲ್ಲಿಗೆ ಭೇಟಿ ನೀಡಿದ್ದರು'' ಎಂದರು.

''ಪುಲಿಕೇಶಿನಗರದಲ್ಲಿ ಬಹುಸಂಖ್ಯಾತರು ಅಲ್ಪಸಂಖ್ಯಾತರಾಗಿದ್ದಾರೆ. ಆದರೂ ಅವರು ಅಲ್ಲಿಯೇ ಬದುಕಬೇಕಿದೆ. ಅಲ್ಲಿ ನಮ್ಮ ರೋಡ್ ಶೋ ನಡೆಸಿದಾಗ ಜೀವದ ಹಂಗು ತೊರೆದು ಭಾಗವಹಿಸಿದ್ದು ಖುಷಿಯಾಯಿತು. ಪುಲಿಕೇಶಿನಗರದಲ್ಲಿ ಪಕ್ಷವನ್ನು ಗಟ್ಟಿ ಮಾಡಬೇಕು. ಪುಲಿಕೇಶಿನಗರ ಕಷ್ಟದ ಕ್ಷೇತ್ರ, ಅಲ್ಲಿ ಹೋರಾಟ ಸುಲಭವಲ್ಲ. ನಮ್ಮ ಪಕ್ಷಕ್ಕೆ ಬರುವುದಕ್ಕಿಂತ ಬೇರೆ ಪಕ್ಷದಲ್ಲಿದ್ದರೆ ಅಖಂಡ ಅವರಿಗೆ ಲಾಭವಿತ್ತು. ಬಿಜೆಪಿಗೆ ಬಂದರೆ ಲಾಭವಿಲ್ಲ, ಆದರೂ ಮೋದಿಗೆ ಬೆಂಬಲ ನೀಡಲು ಅವರು ನಮ್ಮ ಜೊತೆ ಬಂದಿದ್ದಾರೆ. ಅವರ ಹೋರಾಟ, ಓಡಾಟದಲ್ಲಿ ನಾವು ಜೊತೆ ಇರಲಿದ್ದೇವೆ'' ಎಂದು ಭರವಸೆ ನೀಡಿದರು.

''ನಿಮ್ಮ ಜೊತೆ ಇರಲಿದ್ದೇವೆ, ಮುಂದೆ ಯಾವ ಡಿಕೆ ಹಳ್ಳಿ, ಕೆಜಿ ಹಳ್ಳಿಯಾಗಲಿ, ಒಗ್ಗಟ್ಟಿದ್ದಲ್ಲಿ ಎಲ್ಲವನ್ನೂ ಎದುರಿಸಬಹುದು. ಒಟ್ಟಾಗಿ ಹೋಗೋಣ, ಜೆಡಿಎಸ್ ನಮ್ಮ ಜೊತೆ ಬರಲಿದೆ ಎನ್ನುವ ನಿರೀಕ್ಷೆ ಇರಲಿಲ್ಲ. ನಿರಂತರ ವಿರೋಧ ಮಾಡಿದ್ದ ದೇವೇಗೌಡರು ಕೂಡ ಮೋದಿ ಬೆಂಬಲಿಸಿದ್ದಾರೆ. ಜೆಡಿಎಸ್, ಅಖಂಡ ಹಾಗೂ ಬಿಜೆಪಿ ಮೂರೂ ಶಕ್ತಿ ಸೇರಿದರೆ ನಮ್ಮ ಗೆಲುವು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಹಳಬರು, ಹೊಸಬರು ಅಂತಾ ಇಲ್ಲ. ಎಲ್ಲರೂ ಒಟ್ಟಾಗಿ ಹೋಗೋಣ'' ಎಂದರು.

ಕಾರ್ಯಕರ್ತನಾಗಿ ಕೆಲಸ : ಅಖಂಡ ಶ್ರೀನಿವಾಸ ಮೂರ್ತಿ ಮಾತನಾಡಿ, ''ರಾಮನವಮಿ ಹಬ್ಬದ ಸಂದರ್ಭದಲ್ಲಿ ಪಕ್ಷ ಸೇರುವ ಅವಕಾಶ ನೀಡಲಾಗಿದೆ. ಶ್ರೀರಾಮನ ಆಶೀರ್ವಾದದಿಂದಾಗಿ ನನಗೆ ಈ ಅವಕಾಶ ಸಿಕ್ಕಿದೆ. ಇನ್ನು ಮುಂದೆ ನಾನು ಮಾಜಿ ಶಾಸಕ ಎಂದುಕೊಳ್ಳದೆ, ಕಾರ್ಯಕರ್ತನಾಗಿ ಕೆಲಸ ಮಾಡಲಿದ್ದೇನೆ. ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ತರುವುದೇ ನಮ್ಮ ಗುರಿ. ಮನೆ, ಮನೆಗೆ ಹೋಗಿ ಮತ ಕೇಳೋಣ. ಅತಿ ನಮ್ಮ ಕ್ಷೇತ್ರದಿಂದ ಹೆಚ್ಚು ಲೀಡ್ ತರಲಿದ್ದೇವೆ. ನಮ್ಮ ಕ್ಷೇತ್ರ ಹಿಂದುಳಿದಿದೆ. ಗಲ್ಲಿ ಗಲ್ಲಿಗೂ ಶೋಭಾ ಕರಂದ್ಲಾಜೆ ಅವರನ್ನು ಕರೆದುಕೊಂಡು ಹೋಗೋಣ. ಎಲ್ಲಾ ಒಟ್ಟಾಗಿ ಕೆಲಸ ಮಾಡೋಣ, ಕಾರ್ಯಕರ್ತನಾಗಿ ಕೆಲಸ ಮಾಡೋಣ'' ಎಂದರು.

ವಿದೇಶದಿಂದ ಪುತ್ರ ರೇವಂತ್ ಅವರನ್ನು ಕರೆಸಿಕೊಂಡಿದ್ದ ಅಖಂಡ ಶ್ರೀನಿವಾಸ ಮೂರ್ತಿ ಅವರನ್ನೂ ಪಕ್ಷ ಸೇರ್ಪಡೆಗೊಳಿಸಿದರು. ಈಗಾಗಲೇ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದ ಸಹೋದರನನ್ನು ಪರಿಚಯಿಸಿ ಒಟ್ಟಾಗಿ ಕೆಲಸ ಮಾಡುವ ಅಭಯ ನೀಡಿದರು.

ಇದನ್ನೂ ಓದಿ: ಲೋಕಸಭೆ ಚುನಾವಣೆ: ಮನೆಯಲ್ಲೇ ಮತದಾನದ ಹಕ್ಕು ಚಲಾಯಿಸಿದ ಜನಾರ್ದನ ಪೂಜಾರಿ - Home Voting

Last Updated :Apr 17, 2024, 12:56 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.