ETV Bharat / state

ಎಫ್​ಎಸ್​ಎಲ್ ವರದಿ ಬಗ್ಗೆ ಕಾಂಗ್ರೆಸ್ ನಾಯಕರು ಏನ್ ಹೇಳ್ತಾರೆ: ಕೆ ಎಸ್ ಈಶ್ವರಪ್ಪ ಪ್ರಶ್ನೆ

author img

By ETV Bharat Karnataka Team

Published : Mar 6, 2024, 9:01 PM IST

ಪಾಕ್ ಪರ ಘೋಷಣೆ ಕೂಗಿದ್ದರ ವಿರುದ್ಧ ಒಬ್ಬ ಕಾಂಗ್ರೆಸ್ ನಾಯಕ ಸಹ ಖಂಡನೆ ಮಾಡಲಿಲ್ಲ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಅವರು ಆರೋಪಿಸಿದರು.

ಮಾಜಿ ಸಚಿವ ಕೆ ಎಸ್ ಈಶ್ವರಪ್ಪ
ಮಾಜಿ ಸಚಿವ ಕೆ ಎಸ್ ಈಶ್ವರಪ್ಪ

ಮಾಜಿ ಸಚಿವ ಕೆ ಎಸ್ ಈಶ್ವರಪ್ಪ

ಶಿವಮೊಗ್ಗ : ಪಾಕ್ ಪರ ಘೋಷಣೆ ಕೂಗಿರುವುದು ಎಫ್​ಎಸ್​ಎಲ್ ವರದಿಯಲ್ಲಿ ಸಾಬೀತಾಗಋಜುವಾಗಿದೆ. ಇದರ ಬಗ್ಗೆ ಡಿ. ಕೆ ಶಿವಕುಮಾರ್. ಪ್ರಿಯಾಂಕ್​ ಖರ್ಗೆ, ಲಕ್ಷ್ಮಿ ಹೆಬ್ಬಾಳ್ಕರ್ ಏನ್ ಹೇಳ್ತಾರೆ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಅವರು ಪ್ರಶ್ನೆ ಮಾಡಿದ್ದಾರೆ.

ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಪಾಕಿಸ್ತಾನ ಪರ ಘೋಷಣೆ ಕೂಗಿದವರ ಪರವಾಗಿ ಕಾಂಗ್ರೆಸ್​ನವರು ಇದ್ದರು. ಯಾರೂ ಸಹ ಪಾಕ್ ಪರ ಘೋಷಣೆ ಕೂಗಿಲ್ಲ ಅಂತ ಡಿ. ಕೆ ಶಿವಕುಮಾರ್, ಪ್ರಿಯಾಂಕ್​ ಖರ್ಗೆ ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು. ಪಾಕ್ ಪರ ಘೋಷಣೆ ಕೂಗಿದ್ದರ ವಿರುದ್ಧ ಒಬ್ಬ ಕಾಂಗ್ರೆಸ್ ನಾಯಕ ಸಹ ಖಂಡನೆ ಮಾಡಲಿಲ್ಲ. ಪಾಕ್‌ ಪರ ಘೋಷಣೆ ಕೂಗಿಲ್ಲ ಎಂದು ಹತ್ತು ಬಾರಿ ಕಾಂಗ್ರೆಸ್ ನಾಯಕರು ಹೇಳಿದ್ರು. ಇದು ಕಾಂಗ್ರೆಸ್ ನಾಯಕರ ಮನಸ್ಥಿತಿಯಾಗಿದೆ. ಕೇವಲ ಮುಸ್ಲಿಂ ವೋಟು ಬೇಕು ಎಂದು ಪಾಕ್ ಪರ ಇರುವಂತಹ ಮಂತ್ರಿಗಳಿರುವುದು ನಮ್ಮ ಕರ್ನಾಟಕ ಜನರ ದೌರ್ಬಾಗ್ಯ ಎಂದರು.

ಎಫ್​ಎಸ್​ಎಲ್ ವರದಿ ಬರಲಿ ಎನ್ನುತ್ತಿದ್ದ ಕಾಂಗ್ರೆಸ್ ಮುಖಂಡರು ಈಗ ಏನ್ ಹೇಳ್ತಾರೆ? ಎಂದು ಪ್ರಶ್ನಿಸಿದರು. ಗೃಹ ಸಚಿವ ಪರಮೇಶ್ವರ್ ಸ್ಪಷ್ಟವಾಗಿ ಹೇಳಿದ್ದಾರೆ. ಎಫ್​ಎಸ್​ಎಲ್ ವರದಿಯಲ್ಲಿ ಪಾಕ್ ಪರ ಘೋಷಣೆ ಕೂಗಿದ್ದಾರೆ ಎಂದು ಹೇಳಿ ಅವರನ್ನು ಅರೆಸ್ಟ್ ಮಾಡುವುದಾಗಿ ಹೇಳಿದ್ದರು. ಅದೇ ರೀತಿ ಸಿಎಂ ಸಹ ಅಂತಹ ವ್ಯಕ್ತಿಗಳನ್ನು ನಾವು ಬಿಡಲ್ಲ ಎಂದು ಹೇಳಿದ್ದಾರೆ. ಇಬ್ಬರಿಗೂ ಅಭಿನಂದನೆಗಳು ಎಂದರು.

ಮಲ್ಲಿಕಾರ್ಜುನ ಖರ್ಗೆಯಂತಹ ತಂದೆಗೆ ಪ್ರಿಯಾಂಕ್​ ಖರ್ಗೆಯಂತಹ ಮಗ ಹುಟ್ಟಿರುವುದೇ ತೊಂದ್ರೆ, ಅನ್ಯಾಯ ಎಂದರು. ಈಗ ವರದಿಯಲ್ಲಿ ಘೋಷಣೆ ಕೂಗಿರುವುದು ರುಜುವಾತಾಗಿದೆ. ಇದರ ಬಗ್ಗೆ ಪ್ರಿಯಾಂಕ್​ ಖರ್ಗೆ ಈಗ ಏನ್ ಹೇಳುತ್ತಾರೆ ಎಂದು ಪ್ರಶ್ನಿಸಿದರು.

ಮುನಾವರ್ ಪರಾರಿಗೆ ಯಾರು ಸಹಾಯ ಮಾಡಿದ್ದಾರೆ: ಪ್ರಕರಣದಲ್ಲಿ ಇರುವ ಮೂವರಲ್ಲಿ ಎ-2 ಮುನಾವರ್ ಒಬ್ಬ ರಾಷ್ಟ್ರದ್ರೋಹಿ, ಆತನ ವಿರುದ್ಧ ಎಫ್​ಐಆರ್ ಹಾಕಿ ಹುಡುಕಾಡುತ್ತಿದ್ದಾರೆ. ಈಗ ಆತ ಕುಟುಂಬ ಸಮೇತ ಕಾಣೆಯಾಗಿದ್ದಾನೆ.‌ ರಾಷ್ಟ್ರದ್ರೋಹಿ‌ ಓಡಿ ಹೋಗಲು ಕಾರಣ ಯಾರು?. ಪೊಲೀಸ್ ಇಲಾಖೆ ಹಾಗೂ ಗುಪ್ತಚರ ಇಲಾಖೆ ವೈಫಲ್ಯನಾ?. ಆತ ಓಡಿ ಹೋಗಲು ರಾಜ್ಯ ಸರ್ಕಾರ ಸಹಕಾರ ಕೊಟ್ಟಿದಿಯೇ?. ಪಾಕ್ ಪರ ಇರುವವರು ಏನಾದ್ರೂ ಸಹಕಾರ ನೀಡಿದ್ದಾರಾ? ಎಂದು ಪ್ರಶ್ನಿಸಿದರು.

ರಾಮೇಶ್ವರಂ ಕೆಫೆ ಸ್ಫೋಟಗೊಂಡ ದಿನದಿಂದ ಇಂದಿನವರೆಗೂ ಸಹ ಎನ್​ಐಎಯಿಂದ‌ ತನಿಖೆ‌ ನಡೆಸಲಾಗುತ್ತಿದೆ. ಪಾಕ್ ಪರ ಘೋಷಣೆ, ಬಾಂಬ್ ಹಾಕುವುದು ಎಲ್ಲ ಕರ್ನಾಟಕದಲ್ಲಿ ಮಾಮೂಲಿ ಆಗುವಂತಹ ಪರಿಸ್ಥಿತಿ ಬಂದಿರುವುದು ರಾಜ್ಯದ ಜನತೆಗೆ ಅಪಮಾನ. ತಕ್ಷಣ ಸಿಎಂ ಅವರು ಪಾಕ್ ಪರ ಘೋಷಣೆ ಹಾಗೂ ಬಾಂಬ್ ಇಟ್ಟವರ ಪರ ಮಾತನಾಡುವವರು ಸಚಿವ ಸಂಪುಟದಲ್ಲಿ ಇದ್ದರೆ, ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದರು.

ಕಾಂಗ್ರೆಸ್ ದ್ವೇಷದ ರಾಜಕಾರಣ ಮಾಡುತ್ತಿದೆ : ಮಂಡ್ಯದಲ್ಲಿ ಹಿಂದೆ ಬಿಜೆಪಿ ಕಾರ್ಯಕರ್ತರು ಪಾಕ್ ಪರ ಘೋಷಣೆ ಕೂಗಿದಾಗ ಬಾಯಿ ತಪ್ಪಿನಿಂದ ಎಂದು ಹೇಳಿದ್ರು. ಅವರಿಗೆ ಇಷ್ಟು ದಿನ ಸಮಸ್ಯೆ ಇರಲಿಲ್ಲ. ಯಾವಾಗ ಕಾಂಗ್ರೆಸ್​ನವರು ಘೋಷಣೆ ಕೂಗಿದವರಿಗೆ ಬೆಂಬಲ‌ ಕೊಟ್ಟರು ಎಂದು ಬಹಿರಂಗವಾದ ತಕ್ಷಣ, ತಮ್ಮ ಮುಖ ಮುಚ್ಚಿಕೊಳ್ಳಲು ಬಿಜೆಪಿ ಕಾರ್ಯಕರ್ತರನ್ನು ಮಧ್ಯೆ ತರುತ್ತಿದ್ದಾರೆ. ಬಿಜೆಪಿಯ ಯಾವ ಕಾರ್ಯಕರ್ತರು ಸಹ ಭಾರತದ ವಿರುದ್ದ ಘೋಷಣೆ ಕೂಗುವ ಪ್ರಮೇಯವೇ ಇಲ್ಲ. ಬಿಜೆಪಿ‌ ಕಾರ್ಯಕರ್ತರು ಭಾರತ್ ಮಾತಾಕಿ ಜೈ ಎನ್ನುವವರೇ ಹೊರತು, ಪಾಕ್ ಪರ ಘೋಷಣೆ ಕೂಗುವವರು ಅಲ್ಲ ಎಂದರು.

ಕಾಂಗ್ರೆಸ್ ಮುಳುಗುವ ಹಡಗು : ಡಿ ಕೆ ಶಿವಕುಮಾರ್ ಈಗಲ್ಲ ಹಿಂದೆನೂ ಸಹ ಬಿಜೆಪಿಯ ಬಹಳ ನಾಯಕರು ಕಾಂಗ್ರೆಸ್​ಗೆ ಬರುತ್ತಾರೆ ಎಂದು ಹೇಳಿದ್ದರು.‌ ಅವರು ಮದಗಜದ ರೀತಿ ಅರ್ಧದಷ್ಟು ಬಿಜೆಪಿ ನಾಯಕರು ಕಾಂಗ್ರೆಸ್​ಗೆ ಬರ್ತಾರೆ ಎಂದು ಹೇಳುತ್ತಿದ್ದರು. ಇತ್ತೀಚಿನ ತನಕ ಆ ವಾಯ್ಸ್ ಇರಲಿಲ್ಲ. ಆದರೆ ರಾಜ್ಯಸಭೆ ಚುನಾವಣೆಯಲ್ಲಿ ಎಸ್. ಟಿ ಸೋಮಶೇಖರ್ ಅಡ್ಡ ಮತದಾನ ಮಾಡಿರುವುದು ಹಾಗೂ ಹೆಬ್ಬಾರ್ ಅವರು ಮತದಾನಕ್ಕೆ ಗೈರು ಹಾಜರಿದ್ದರಿಂದ ಮತ್ತೆ ಡಿ ಕೆ ಶಿವಕುಮಾರ್ ಹಾಗೆ ಹೇಳುತ್ತಿದ್ದಾರೆ ಎಂದು ಹೇಳಿದರು.

ಆದರೆ ಬಿಜೆಪಿಯ ನಾಯಕರುಗಳು ಕಾಂಗ್ರೆಸ್​ಗೆ ಹೋಗಲ್ಲ. ಕಾಂಗ್ರೆಸ್ ದೇಶದಲ್ಲಿ ಮುಳುಗುತ್ತಿರುವ ಹಡಗು. ಅದಕ್ಕೆ ಯಾರು ಹೋಗ್ತಾರೆ, ದೇಶದ ಆಶಾ ಕಿರಣ ನರೇಂದ್ರ ಮೋದಿ ಅವರು. ಮೋದಿ ಜೊತೆ ಹೋದರೆ, ದೇಶಕ್ಕೆ, ರಾಜ್ಯಕ್ಕೆ ಅವರಿಗೂ ಒಳ್ಳೆಯದಾಗುತ್ತದೆ ಎಂದು ಹೋಗಲ್ಲ. ಅವರಲ್ಲಿಯೇ ಬಿಜೆಪಿಗೆ ಬರುವವರಿದ್ದಾರೆ. ಅವರನ್ನೇ ಡಿ ಕೆ ಶಿವಕುಮಾರ್ ಉಳಿಸಿಕೊಳ್ಳಲಿ ಎಂದು ತಿಳಿಸಿದರು.

ನೂರು‌ ಕೋಟಿ ಹಣ ಎಲ್ಲಿಗೆ ಹೋಗುತ್ತಿದೆ : ಬಿಜೆಪಿ ವಿರುದ್ಧ ಆರೋಪ ಮಾಡುತ್ತಿದ್ದ ಕಾಂಗ್ರೆಸ್ ನಾಯಕರುಗಳೇ ಈಗ ಎಂಪಿ ಚುನಾವಣೆ ಟಿಕೆಟ್​ಗಾಗಿ ನೂರು ಕೋಟಿ ರೂ‌. ಕೊಡಬೇಕೆಂದು ಕಾಂಗ್ರೆಸ್​ನ ಕಾರ್ಯದರ್ಶಿ ರವೀಂದ್ರ ಅವರೇ ಆರೋಪ ಮಾಡಿದ್ದಾರೆ. ಈಗ ಅವರು ರಾಜೀನಾಮೆ ನೀಡಿದ್ದಾರೆ. ಇದರ ಬಗ್ಗೆ ಸಿಎಂ ಹಾಗೂ ಡಿಸಿಎಂ ಬಾಯಿ ಬಿಟ್ಟಿಲ್ಲ. ಈ ನೂರು ಕೋಟಿ ಯಾರಿಗೆ ತಲುಪುತ್ತಿದೆ ಎಂದು ಈಶ್ವರಪ್ಪ ಪ್ರಶ್ನಿಸಿದರು.

ನೂರು ಕೋಟಿ ರೂ. ಯಾರು ಯಾರು ತೆಗೆದುಕೊಳ್ಳುತ್ತಿದ್ದಾರೆ ಎಂದು ತನಿಖೆ ನಡೆಸಲಿ. ಇದರ ಬಗ್ಗೆ ಅವರು ಮಾತನಾಡಲ್ಲ. ಕೇವಲ ಬಿಜೆಪಿ ವಿರುದ್ಧ ಆರೋಪ ಮಾಡುತ್ತಾರೆ. ಲೋಕಸಭೆ ಚುನಾವಣೆಯಲ್ಲಿ 28ಕ್ಕೆ 28 ಸ್ಥಾನಗಳನ್ನು ಬಿಜೆಪಿ ಗೆಲ್ಲುತ್ತದೆ ಎಂದರು. ಇನ್ನು ಡಿ ಕೆ ಶಿವಕುಮಾರ್ ಅವರಿಗೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಬಗ್ಗೆ ಯಾವ ಕಾರಣಕ್ಕೂ ಪ್ರಶ್ನೆ ಮಾಡಲ್ಲ. ಕ್ಲೀನ್ ಚಿಟ್ ನೀಡಿರುವುದಕ್ಕೆ ನಾವು ಬೆಲೆ ಕೊಡುತ್ತೇವೆ ಎಂದರು.

ಇದನ್ನೂ ಓದಿ: ರಾಹುಲ್ ಗಾಂಧಿ, ಸಿಎಂ ಸಿದ್ದರಾಮಯ್ಯಗೆ ಸುಳ್ಳು ಹೇಳುವುದರಲ್ಲಿ ನೊಬೆಲ್ ಪ್ರಶಸ್ತಿ ಕೊಡಬೇಕು: ಕೆ ಎಸ್ ಈಶ್ವರಪ್ಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.