ETV Bharat / state

ಮಹಿಳೆ ಅಪಹರಣ ಪ್ರಕರಣ: ಹೆಚ್.ಡಿ. ರೇವಣ್ಣ ಜಾಮೀನು ಅರ್ಜಿ ವಿಚಾರಣೆ ಸೋಮವಾರಕ್ಕೆ ಮುಂದೂಡಿಕೆ - H D Revanna Case

author img

By ETV Bharat Karnataka Team

Published : May 9, 2024, 6:01 PM IST

Updated : May 9, 2024, 6:09 PM IST

ಸಂತ್ರಸ್ತ ಮಹಿಳೆ ಅಪಹರಣ ಆರೋಪ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರ ಮಧ್ಯಂತರ ಜಾಮೀನು ಅರ್ಜಿ ವಿಚಾರಣೆಯು ಸೋಮವಾರಕ್ಕೆ ಮುಂದೂಡಿಕೆಯಾಗಿದೆ.

H D revanna
ಹೆಚ್.ಡಿ.ರೇವಣ್ಣ (ETV Bharat)

ಬೆಂಗಳೂರು: ಸಂತ್ರಸ್ತ ಮಹಿಳೆಯನ್ನು ಅಪಹರಿಸಿದ ಆರೋಪದಡಿ ನ್ಯಾಯಾಂಗ ಬಂಧನದಲ್ಲಿರುವ ಜೆಡಿಎಸ್ ಶಾಸಕ ಹಾಗೂ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವರ ಮಧ್ಯಂತರ ಜಾಮೀನು ಅರ್ಜಿ ವಿಚಾರಣೆಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಸೋಮವಾರಕ್ಕೆ ಮುಂದೂಡಿದೆ.

ಜಾಮೀನು ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದ ಹೆಚ್‌. ಡಿ. ರೇವಣ್ಣ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲೇ ಉಳಿಯುವುದು ಅನಿವಾರ್ಯವಾಗಿದೆ. ಇಂದು ಅರ್ಜಿ ವಿಚಾರಣೆ ಆರಂಭವಾಗುತ್ತಿದ್ದಂತೆ ಎಸ್ಐಟಿ ಪರ ವಕೀಲೆ ಜಾಯ್ನಾ ಕೊಠಾರಿ ವಾದ ಮಂಡಿಸಿ, ''ರೇವಣ್ಣ ಅವರ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಿದರು. ವಿಳಂಬದ ಉದ್ದೇಶವಿಲ್ಲ, ನಮ್ಮ ವಾದ ಮಂಡನೆಗೆ ಕಾಲಾವಕಾಶ ನೀಡಬೇಕು'' ಎಂದು ಮನವಿ ಮಾಡಿದರು. ಇದನ್ನು ತಿರಸ್ಕರಿಸಿದ ವಿಶೇಷ ನ್ಯಾಯಾಲಯ, ''ನೀವೂ ಹಿರಿಯ ವಕೀಲರಿದ್ದೀರಿ.‌ ಬೇರೆ-ಬೇರೆ ಪ್ರಕರಣಗಳಲ್ಲಿ ವಾದ ಮಂಡನೆಗೆ ಕಾಲಾವಕಾಶ ನೀಡಲಾಗಿಲ್ಲ'' ಎಂದಿತು.

ರೇವಣ್ಣ ಪರ ವಕೀಲರ ವಾದ: ರೇವಣ್ಣ ಪರ ಹಿರಿಯ ವಕೀಲ ಸಿ.ವಿ. ನಾಗೇಶ್ ವಾದ ಮಂಡಿಸಿ, ''ಜಾಮೀನು ಅರ್ಜಿ ಊರ್ಜಿತ ಎಂಬ ನನ್ನ ವಾದಕ್ಕೆ ತಕರಾರು ತೆಗೆದಿದ್ದಾರೆ. 56 ವರ್ಷಗಳ ವಕೀಲ ವೃತ್ತಿಯಲ್ಲಿ ಎಂದಿಗೂ ನಾನು ತಪ್ಪು ಮಾಹಿತಿ ನೀಡಿಲ್ಲ. ತೀಸ್ತಾ ಸೆಟಲ್ ವಾಡ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್​​ ತೀರ್ಪು ನೀಡಿದೆ‌‌. ಅಲ್ಲದೆ, 23 ಪ್ರಕರಣಗಳಲ್ಲಿ ನಿರಂಜನ್ ಸಿಂಗ್ ಕೇಸ್​​ನಂತೆ ಅನುಸರಿಸಲಾಗಿದ್ದು, ಜಾಮೀನು ಅರ್ಜಿ ಸಲ್ಲಿಸಬಹುದು ಎಂದು ತೀರ್ಪಿನಲ್ಲಿ ಹೇಳಲಾಗಿದೆ'' ಎಂದರು.

ಸು‌ಶೀಲ್ ಅಗರವಾಲ್ ಪ್ರಕರಣ ತೀರ್ಪು ಓದಿ, ಕಸ್ಟಡಿ ಅವಧಿಯಲ್ಲಿ ಜಾಮೀನು ಅರ್ಜಿ ಕುರಿತಂತೆ ಸಿ.ವಿ. ನಾಗೇಶ್ ಪ್ರತಿಪಾದಿಸಿದರು. ''ಎಷ್ಟೇ ಜನ ಸರ್ಕಾರಿ ವಿಶೇಷ ಅಭಿಯೋಜಕರು ವಾದಿಸಿದರೂ ನನ್ನ ಆಕ್ಷೇಪವಿಲ್ಲ. ಕೋರ್ಟ್​ನ ಗಾಂಭೀರ್ಯವನ್ನು ಅರ್ಥ ಮಾಡಿಕೊಳ್ಳಬೇಕು. ಸಿಆರ್​​ಪಿಸಿ 24 (8)ರಡಿ ಸರ್ಕಾರ ಎಸ್ ಪಿಸಿಯಾಗಿ ಓರ್ವ ವಕೀಲನನ್ನು ನೇಮಿಸಬಹುದಾಗಿದೆ. ಮೂವರನ್ನು ಎಸ್​​​ಪಿಪಿಗಳನ್ನು ನೇಮಿಸಿದೆ, ಇದರ ಬಗ್ಗೆ ನನ್ನ ತಕರಾರಿಲ್ಲ. ಆದರೆ, ಒಮ್ಮೆಲೇ ಇಬ್ಬರು ವಾದ ಮಂಡಿಸುವುದು ಬೇಡ‌. ಒಬ್ಬರಾದ ಮೇಲೆ ಒಬ್ಬರು ವಾದ ಮಂಡಿಸಲಿ'' ಎಂದು ಪರೋಕ್ಷವಾಗಿ‌ ಮೂವರು ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕರ ನೇಮಕಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.

''ಅಪಹರಣವಾದ ಮಹಿಳೆ ಪತ್ತೆಯಾಗದ ಹಿನ್ನೆಲೆಯಲ್ಲಿ ನಿರೀಕ್ಷಣಾ ಜಾಮೀನು ನಿರಾಕರಣೆಯಾಗಿತ್ತು. ಮಹಿಳೆಯ ಸುರಕ್ಷತೆ ಪ್ರಸ್ತಾಪಿಸಿ ಬೇಲ್ ರಿಜೆಕ್ಟ್ ಮಾಡಲಾಗಿತ್ತು.‌ ಆದರೆ ಅಂದೇ ಆ ಮಹಿಳೆ ಪತ್ತೆಯಾಗಿದ್ದಳು.‌ 364ಎ ಹಾಗೂ 365 ಐಪಿಸಿ ಸೆಕ್ಷನ್ ಅಡಿ ಪ್ರಕರಣ ದಾಖಲಿಸುವ ಪ್ರಮೇಯವೇ ಇರಲಿಲ್ಲ. ಸೆಕ್ಷನ್ 364ಎ ಅಂದರೆ ಯಾರನ್ನಾದರೂ ಅಪಹರಣ ಮಾಡಿ, ಒತ್ತೆಯಾಳಾಗಿಟ್ಟುಕೊಂಡಿದ್ದಕ್ಕೆ ಸಂಬಂಧಿಸಿದ್ದಾಗಿದೆ. ಆದರೆ, ಅಂತಹ ಘಟನೆ ಇಲ್ಲಿ ನಡೆದಿಲ್ಲ. ಆದರೂ 364ಎ ಸೆಕ್ಷನ್ ಅಡಿ ಪ್ರಕರಣ ದಾಖಲಾಗಿದೆ. 21 ವರ್ಷದ ಯುವಕ ನೀಡಿದ ದೂರಿನಲ್ಲಿ ಮಹಿಳೆ ಅಪ್ರಾಪ್ತೆ ಅಲ್ಲ ಎಂಬುದು ಸ್ಪಷ್ಟವಾಗಿದೆ. ಅಪ್ರಾಪ್ತೆ ಆಗಿದ್ದರೆ ಈ ಸೆಕ್ಷನ್ ಅನ್ವಯವಾಗುತ್ತಿತ್ತು‌. ತನಗೆ ಸುಳ್ಳು ಹೇಳಿ ತನ್ನ ತಾಯಿಯನ್ನು ಕರೆದೊಯ್ಯಲಾಗಿದೆ ಎಂದು ದೂರಿನಲ್ಲಿದೆ. ಅದರೆ, ಸುಳ್ಳು ಹೇಳಿ ವಂಚಿಸಿ ಕರೆದೊಯ್ದಿದ್ದಾರೆ ಎಂಬ ಆರೋಪವಿಲ್ಲ. ಮಗನಿಗೆ ಸುಳ್ಳು ಹೇಳಿ ಕರೆದೊಯ್ದರೆ ಅಪಹರಣವಾಗುವುದಿಲ್ಲ. ಸಿಎಂ ಹೇಳಿದ್ದಾರೆ ಎಂದು ಕರೆದೊಯ್ದರೆ ಸಿಎಂರನ್ನು ಬಂಧಿಸಬೇಕಾ ಇಲ್ಲ, ಹೆಚ್.ಡಿ. ರೇವಣ್ಣ ಹೇಳಿದ್ದಾರೆಂದು ಹೇಳಿದರೆ ಅದು ಅಪಹರಣವಾಗಬೇಕೆ? ಇದರಲ್ಲಿ ಮೋಸವಿದೆಯೇ? ಬಲಪ್ರಯೋಗ ಆಗಿದೆಯಾ?'' ಎಂದು ಪ್ರಶ್ನಿಸಿದರು.

''ಅವರೇ ಹೇಳಿದಂತೆ ರೇವಣ್ಣ ಮನೆಯಲ್ಲಿ ಮಹಿಳೆ ಕೆಲಸ ಮಾಡುತ್ತಿದ್ದರು. ಹೀಗಾಗಿ, ಅಪಹರಣದ ಯಾವುದೇ ಅಂಶಗಳು ಅನ್ವಯವಾಗುವುದಿಲ್ಲ. ಮೋಸ ಮಾಡಿ ಅಪಹರಣ ಮಾಡಿದ ಆರೋಪವಿಲ್ಲ.‌ ಆದರೂ ರೇವಣ್ಣರನ್ನು ಎ1 ಆರೋಪಿ ಮಾಡಲಾಗಿದೆ. ಸೆಕ್ಷನ್ 365ರಡಿ ಅಕ್ರಮ ಬಂಧನ ಕೂಡ ಅನ್ವಯವಾಗುವುದಿಲ್ಲ. ಅಪಹರಣವಿಲ್ಲ.. ಅಕ್ರಮ ಬಂಧನವೂ ಇಲ್ಲ. ಕೇಸ್​​ ದಾಖಲಿಸಬಹುದು. ಪೊಲೀಸರ ಬಳಿ ಸಿಆರ್​​ಪಿಸಿ ಸೆಕ್ಷನ್ 161 ಅಸ್ತ್ರವಿದೆ. ಏನೂ ಬೇಕಾದರೂ ಹೇಳಿಕೆ ದಾಖಲಿಸಬಹುದು. ನಾಳೆ ಯಾರಿಂದಲಾದರೂ ಸಾಕ್ಷ್ಯ ಸೃಷ್ಟಿಸಿ ಹೇಳಿಕೆ ದಾಖಲಿಸಬಹುದು. ಎವಿಡೆನ್ಸ್ ಆ್ಯಕ್ಟ್ 27ರಡಿ ಸಾಕ್ಷ್ಯ ಸೃಷ್ಟಿಸಿಬಹುದು. ಚುನಾವಣೆ ವೇಳೆ ಎಫ್ಐಆರ್ ದಾಖಲಿಸಲಾಗಿದೆ'' ಎಂದು ಆರೋಪಿಸಿದರು.

''ಏಪ್ರಿಲ್​ 28ರಂದು ಘಟನೆ ನಡೆದಿದೆ ಎಂದು ತೋರಿಸಿ ಮೇ 2ರಂದು ಹೊಳೆನರಸೀಪುರ ಪೊಲೀಸ್​ ಠಾಣೆಯಲ್ಲಿ ಮೊದಲ ಎಫ್ಐಆರ್ ದಾಖಲಿಸಿ ಅಂದೇ ನೋಟಿಸ್​ ಜಾರಿ ಮಾಡಲಾಗಿತ್ತು‌. ಮೇ 3 ರಂದು ನೋಟಿಸ್​ ನೀಡಿ 4 ರಂದು ಹಾಜರಾಗುವಂತೆ ಎಸ್ಐಟಿ ಸೂಚಿಸಿತ್ತು. ಜಾಮೀನು ನೀಡುವ ಕೇಸ್​ನಲ್ಲಿ ಹಾಜರಾದರೆ ಅಪಹರಣ ಪ್ರಕರಣದಲ್ಲಿ ಬಂಧಿಸುವ ಉದ್ದೇಶವಿತ್ತು. ಹೀಗಾಗಿ ಜಾಮೀನಿನ ಮೇಲೆ ರೇವಣ್ಣ ಅವರನ್ನು ಬಿಡುಗಡೆ ಮಾಡಬೇಕು'' ಎಂದು ಮನವಿ ಮಾಡಿದರು.

''ಈ ಸೆಕ್ಷನ್​ಗಳು ರೇವಣ್ಣ ಅವರಿಗೆ ಅನ್ವಯವಾಗುವುದಿಲ್ಲ. ಈ‌ ಕೇಸ್ ದಾಖಲಿಸಿರುವುದೇ ಕಾನೂನುಬಾಹಿರ. ರಿಮ್ಯಾಂಡ್ ಅರ್ಜಿಯಲ್ಲಿ ಕಿಂಚಿತ್ತೂ ಸಾಕ್ಷ್ಯ ಸಂಗ್ರಹದ ಮಾಹಿತಿಯಿಲ್ಲ. ತನಿಖೆಗೆ ಸಹಕಾರ ನೀಡಿಲ್ಲ ಎಂದಷ್ಟೇ ಹೇಳಿದ್ದಾರೆ. ಆರೋಪ ಸಾಬೀತಾಗುವವರೆಗೂ ಆರೋಪಿ ಮುಗ್ಧ ಎಂದು ಭಾವಿಸಬೇಕು. ಏಪ್ರಿಲ್​ 29ರಿಂದ ಮೇ 5ರ ವರೆಗೆ ಅಪಹರಣಕ್ಕೆ ಒಳಗಾದ ಮಹಿಳೆಗೆ ಏನೂ ತೊಂದರೆಯಾಗದೆ ಆಕೆಯ ಆರೋಗ್ಯ ಸ್ಥಿರವಾಗಿದೆ‌. ನಿನ್ನೆಯಿಂದ ರೇವಣ್ಣ ನ್ಯಾಯಾಂಗ ಬಂಧನದಲ್ಲಿರುವುದು ಅನಗತ್ಯ. ಐದು ದಿನವಾದರೂ ಮಹಿಳೆಯ ಸೆಕ್ಷನ್ 164 ಅಡಿ ಹೇಳಿಕೆ ಯಾಕೆ ಪಡೆದಿಲ್ಲ. ಮಹಿಳೆಯನ್ನು ಕರೆದೊಯ್ದು ವಾಹನ ಪತ್ತೆ ಹಚ್ಚಬೇಕು. ಜಾಗದ ಪರಿಶೀಲನೆ ನಡೆಸಿ ಸಾಕ್ಷ್ಯ ಸಂಗ್ರಹಿಸಬೇಕು. ಹೀಗಾಗಿ, ರೇವಣ್ಣ ಅವರ ಬಂಧನದ ಅಗತ್ಯ ಏನಿದೆ'' ಎಂದು ವಾದ ಮಂಡಿಸಿದರು.

ಎಸ್ಐಟಿ ಪರ ವಕೀಲರ ಪ್ರತಿವಾದ: ಇದಕ್ಕೆ ಎಸ್ಐಟಿ ಪರ ವಕೀಲೆ ಜಾಯ್ನಾ ಕೊಠಾರಿ ಪ್ರತಿವಾದ ಮಂಡಿಸಿ, ''ರೇವಣ್ಣ ಪರ ವಕೀಲರು ಒಂದೂವರೆ ಗಂಟೆಗಳ ಕಾಲ ವಾದ ಮಂಡಿಸಿದ್ದಾರೆ.‌ ನಮಗೆ ವಾದ ಮಂಡಿಸಲು ಕಾಲಾವಕಾಶ ನೀಡಿ'' ಎಂದು ಮನವಿ ಮಾಡಿದರು. ಅದಕ್ಕೆ ಸೊಪ್ಪುಹಾಕದ ನ್ಯಾಯಾಲಯ, ಮನವಿ ಮಾಡುವುದನ್ನು ಬಿಟ್ಟು ವಾದ ಮಂಡಿಸಿ ಎಂದು ಸೂಚಿಸಿತು.

ವಾದ ಆರಂಭಿಸಿದ ಜಾಯ್ನಾ ಕೊಠಾರಿ, ''ಸೆಕ್ಷನ್ 161 ಅಡಿ ಮಹಿಳೆಯ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಹೇಳಿಕೆಯಲ್ಲಿ ರೇವಣ್ಣ ಅವರ ಹೆಸರು ಪ್ರಸ್ತಾಪಿಸಲಾಗಿದೆ‌. ಮಹಿಳೆಯನ್ನು ಒತ್ತಾಯಪೂರ್ವಕವಾಗಿ ಕರೆದುಕೊಂಡು ಹೋಗಲಾಗಿದೆ‌. ತೋಟದ ಮನೆಯೊಂದರಲ್ಲಿ ಕೂಡಿ ಹಾಕಿದ್ದರು ಎಂದು ಮಹಿಳೆ ಹೇಳಿಕೆ ನೀಡಿದ್ದು,‌ ಇದು ಇಚ್ಛೆಗೆ ವಿರುದ್ಧದ ಅಂಶವಾಗಿ ಕಂಡುಬಂದಿದ್ದರಿಂದ ಸೆಕ್ಷನ್ 364ಎ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸಾಕ್ಷಿಗಳ ಹೇಳಿಕೆಯಲ್ಲಿ ರೇವಣ್ಣ ಹೆಸರು ಉಲ್ಲೇಖವಾಗಿದೆ‌. ಹಲವು ಆಶ್ಲೀಲ ವಿಡಿಯೋಗಳನ್ನು ಹಂಚಿಕೆ ಮಾಡಲಾಗಿದೆ. ಈ ವೇಳೆ ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ ಹೆಸರು ಕೇಳಿಬಂದಿದೆ. ಪ್ರಜ್ವಲ್ ಅವರು ದೇಶ ತೊರೆದಿದ್ದಾರೆ. ಅವರ ವಿರುದ್ಧ ಬ್ಲ್ಯೂಕಾರ್ನರ್ ನೋಟಿಸ್ ಹೊರಡಿಸಲಾಗಿದೆ‌. ಆದರೆ, ಪ್ರಜ್ವಲ್ ಇದುವರೆಗೂ ಪತ್ತೆಯಾಗಿಲ್ಲ'' ಎಂದು ಪ್ರತಿವಾದ ಮಂಡಿಸಿದರು.

''ಪ್ರಕರಣದಲ್ಲಿ ಇನ್ನೂ ಎಷ್ಟೋ ಜನ ಸಂತ್ರಸ್ತೆಯರಿದ್ದಾರೆ‌. ಜಾಮೀನು ನೀಡಿದರೆ ಪ್ರಭಾವ ಬೀರುವ ಸಾಧ್ಯತೆಯಿದೆ. ಬಿಡುಗಡೆಯಾದರೆ ಇನ್ನಿತರ ಸಂತ್ರಸ್ತೆಯರಿಗೆ ದೂರು ನೀಡದಂತೆ ಬೆದರಿಕೆ ಹಾಕಬಹುದು. ಅವರ ಮೇಲೆ ಒತ್ತಡ ಹೇರಬಹುದು.‌ ಇಂತಹ ಸೂಕ್ಷ್ಮ ಪ್ರಕರಣದಲ್ಲಿ ಜಾಮೀನು ನೀಡಬಾರದು'' ಎಂದು ಮನವಿ ಮಾಡಿದರು.

ಈ ವಾದ - ಪ್ರತಿವಾದ ಆಲಿಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು, ವಿಚಾರಣೆಯನ್ನು ಸೋಮವಾರಕ್ಕೆ ಮೂಂದೂಡಿತು.

ಇದನ್ನೂ ಓದಿ: ಪೆನ್ ಡ್ರೈವ್ ಹಂಚಿಕೆ ಆರೋಪ: ಸಂಪುಟದಿಂದ ಡಿಸಿಎಂ ಡಿ.ಕೆ. ಶಿವಕುಮಾರ್ ಕೈಬಿಡಲು ರಾಜ್ಯಪಾಲರಿಗೆ ಜೆಡಿಎಸ್ ದೂರು - JDS complains to Governor

Last Updated : May 9, 2024, 6:09 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.