ETV Bharat / state

ಯಾರು ಸ್ಟ್ರಾಂಗ್ ಎಂದು ಹೇಳಿಕೊಳ್ಳುತ್ತಾರೋ ಅವರು ವೀಕ್ ಆಗಿರುತ್ತಾರೆ: ಸಿದ್ದರಾಮಯ್ಯಗೆ ಸಿ ಟಿ ರವಿ ತಿರುಗೇಟು

author img

By ETV Bharat Karnataka Team

Published : Mar 20, 2024, 3:22 PM IST

ನರೇಂದ್ರ ಮೋದಿಯನ್ನು ವೀಕ್ ಪಿಎಂ ಎನ್ನುವ ಸಿಎಂ ಸಿದ್ದರಾಮಯ್ಯ ಹೇಳಿಕೆ ಹಾಸ್ಯಾಸ್ಪದವಾಗಿದೆ ಎಂದು ಮಾಜಿ ಸಚಿವ ಸಿ ಟಿ ರವಿ ಹೇಳಿದ್ದಾರೆ.

former-minister-c-t-ravi-reaction-on-cm-siddaramaiah-statement
ಯಾರು ಸ್ಟ್ರಾಂಗ್ ಎಂದು ಹೇಳಿಕೊಳ್ಳುತ್ತಾರೋ ಅವರು ವೀಕ್ ಆಗಿರುತ್ತಾರೆ: ಸಿದ್ದರಾಮಯ್ಯಗೆ ಸಿ ಟಿ ರವಿ ಟಾಂಗ್​

ಬೆಂಗಳೂರು: ಯಾರು ಸ್ಟ್ರಾಂಗ್ ಅಂತ ಹೇಳಿಕೊಳ್ಳುತ್ತಾರೋ ಅವರು ವೀಕ್ ಇರುತ್ತಾರೆ. ಮೋದಿ ಒನ್ ಆಫ್ ದಿ ಸ್ಟ್ರಾಂಗ್ ಲೀಡರ್. ಇಡೀ ವಿಶ್ವವೇ ಮೆಚ್ಚುವ ಪ್ರಭಾವಿ ಪ್ರಧಾನಿ ಎನ್ನುವ ನರೇಂದ್ರ ಮೋದಿಯನ್ನು ವೀಕ್ ಪಿಎಂ ಎನ್ನುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ಹಾಸ್ಯಾಸ್ಪದವಾಗಿದೆ. ಮೋದಿಗೆ ಸಿಗುತ್ತಿರುವ ಜನ ಬೆಂಬಲ ಕಂಡು ಭಯದಿಂದಾಗಿ ಇಂತಹ ಹೇಳಿಕೆ ನೀಡುತ್ತಿದ್ದಾರೆ ಎಂದು ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ತಿರುಗೇಟು ನೀಡಿದ್ದಾರೆ.

ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಒಂದು ಟ್ವೀಟ್ ಮಾಡಿದ್ದಾರೆ. ಟ್ವೀಟ್​ ನಲ್ಲಿ 'ನಾನು ಸ್ಟ್ರಾಂಗ್ ಸಿಎಂ, ಮೋದಿ ವೀಕ್ ಪಿಎಂ' ಅಂತ ಹೇಳಿದ್ದಾರೆ. ಯಾರು ಸ್ಟ್ರಾಂಗ್ ಅಂತ ಹೇಳಿಕೊಳ್ಳುತ್ತಾರೋ ಅವರು ವೀಕ್ ಇರುತ್ತಾರೆ. ಮೋದಿ ಸ್ಟ್ರಾಂಗ್ ಲೀಡರ್ ಅಂತ ಅನೇಕರು ಹೇಳಿದ್ದಾರೆ. ಮೋದಿ ಈಸ್ ಅವರ್ ಲೀಡರ್ ಅಂದಿದ್ದಾರೆ. ಮೋಸ್ಟ್ ಪಾಪ್ಯುಲರ್ ಪರ್ಸನ್ ಅಂತ ಅಮೆರಿಕ ಅಧ್ಯಕ್ಷರು ಹೇಳಿದ್ದಾರೆ ಎಂದರು.

ಇಸ್ರೇಲ್ ಪ್ರಧಾನಿ ನೀವು ಇಲ್ಲಿ ಚುನಾವಣೆ ನಿಂತು ಗೆಲ್ಲಬಹುದು ಅಷ್ಟು ಪಾಪ್ಯುಲರ್ ಅಂದರು. ಜಗತ್ತಿನ 11 ರಾಷ್ಟ್ರಗಳು ತಮ್ಮ ದೇಶದ ಅತ್ಯುನ್ನತ ನಾಗರೀಕ ಪ್ರಶಸ್ತಿಯನ್ನು ಮೋದಿ ಅವರಿಗೆ ನೀಡಿವೆ. ಪ್ರಪಂಚದ ಅತಿ ಹೆಚ್ಚು ನಾಗರೀಕ ಪ್ರಶಸ್ತಿ ಪಡೆದ ಏಕೈಕ ಪ್ರಧಾನಿ ಅಂದರೆ ಅದು ಮೋದಿ. ಉಕ್ರೇನ್-ರಷ್ಯಾ ನಡುವೆ ಪರಮಾಣು ಯುದ್ಧ ಮೋದಿ ಅವರಿಂದ ತಡೆಯಲಾಯಿತು ಅಂತ ಅಮೆರಿಕ ಹೇಳಿದೆ. ಉಕ್ರೇನ್-ರಷ್ಯಾ ಯುದ್ಧವನ್ನ 48 ಗಂಟೆ ನಿಲ್ಲಿಸಿ ಆಪರೇಷನ್ ಗಂಗಾ ಮೂಲಕ ಭಾರತದ ವಿದ್ಯಾರ್ಥಿಗಳನ್ನು ಕರೆತಂದಿದ್ದು ಮೋದಿ ಅವರ ಸಾಮರ್ಥ್ಯಕ್ಕೆ ಸಾಕ್ಷಿ ಎಂದು ಸಿ ಟಿ ರವಿ ಹೇಳಿದರು.

ನಿಮ್ಮ ಸರ್ಕಾರದ ಪರಿಣಾಮ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ: ಸಿದ್ದರಾಮಯ್ಯ ಅವರೇ ನಿಮ್ಮ ಪರಿಸ್ಥಿತಿ ಏನು? ನಾನೇ ಐದು ವರ್ಷ ಸಿಎಂ ಅಂತ ಹೇಳುವ, ಹೇಳಿಸಿಕೊಳ್ಳುವ ಪರಿಸ್ಥಿತಿ ನಿಮ್ಮದಾಗಿದೆ. 10 ತಿಂಗಳ ಸರ್ಕಾರ ಇನ್ನೂ ಟೇಕಾಫ್ ಆಗಿಲ್ಲ. ನಿಮ್ಮ ಆರ್ಥಿಕ ಸಲಹೆಗಾರರಾಗಿರೋರೇ ಅಭಿವೃದ್ಧಿಗೆ ಒಂದು ಬಿಡುಗಾಸು ಇಲ್ಲ ಅಂತ ನಿಮಗೆ ಸರ್ಟಿಫಿಕೆಟ್ ನೀಡಿದ್ದಾರೆ. ನಿಮ್ಮ ಸರ್ಕಾರದ ಪರಿಣಾಮ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ, ಮಹಿಳೆಯರ ನಗ್ನ ಮೆರವಣಿಗೆ ಆಗಿದೆ, ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಆಗಿದೆ. ಹನುಮಾನ್ ಚಾಲೀಸಾ ಹಾಕಿದ್ದರಿಂದ ಗಲಾಟೆ ಆಗಿದೆ. ಆಡಳಿತ, ಕಾನೂನು ಸುವ್ಯವಸ್ಥೆ ಹಾಳಾಗಿದೆ ಅನ್ನೋದಕ್ಕೆ ಇದಕ್ಕಿಂತ ಮತ್ತೇನು ಬೇಕಿದೆ?. ಸಿಎಂ ಬದಲು, ಸೂಪರ್ ಸಿಎಂ ಆಕ್ಟಿವ್ ಆಗಿದ್ದಾರೆ‌. ಮುಖ್ಯಮಂತ್ರಿ ದುರ್ಬಲ ಆದಾಗ, ಶಾಡೋ ಸಿಎಂ, ಸೂಪರ್ ಸಿಎಂ ಹುಟ್ಟಿಕೊಳ್ತಾರೆ. ಸಿಎಂ ಮುಂದೆಯೇ ದಲಿತ ಸಿಎಂ ಕೂಗು ಕೇಳಿಬರುತ್ತದೆ ಅಂದರೆ ನಿಮ್ಮ 'ನಾನೇ ಮುಖ್ಯಮಂತ್ರಿ' ಅನ್ನೋ ಕೂಗು ಎಷ್ಟರ ಮಟ್ಟಿಗೆ ಇದೆ ನೋಡಿ ಎಂದು ಸಿ ಟಿ ರವಿ ‘ ಟೀಕಿಸಿದರು.

ಇದನ್ನೂ ಓದಿ: ''ನಾನೊಬ್ಬ ಸ್ಟ್ರಾಂಗ್ ಸಿಎಂ, ನಿಮ್ಮ ಹಾಗೆ ವೀಕ್ ಪಿಎಂ ಅಲ್ಲ'' : ಸಿಎಂ ಸಿದ್ದರಾಮಯ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.