ETV Bharat / state

ಜಿಯೋಸ್ಪೇಷಿಯಲ್‌ ತಂತ್ರಜ್ಞಾನದ ಬಳಕೆ ಎಲ್ಲ ಕ್ಷೇತ್ರಗಳಲ್ಲಿಯೂ ತ್ವರಿತವಾಗಿ ಹೆಚ್ಚುತ್ತಿದೆ: ಇಸ್ರೋ ಮಾಜಿ ಅಧ್ಯಕ್ಷ ಕಿರಣ್‌ ಕುಮಾರ್‌

author img

By ETV Bharat Karnataka Team

Published : Feb 23, 2024, 6:18 PM IST

ಭಾರತದ ಯುವಮನಸ್ಸುಗಳಿಗೆ ಜಿಯೋಸ್ಪೇಷಿಯಲ್ ತಂತ್ರಜ್ಞಾನದ ಟೂಲ್​ಗಳನ್ನು ಒದಗಿಸಿ, ಅವರನ್ನು ಸಬಲೀಕರಣಗೊಳಿಸುವ ಅಗತ್ಯವಿದೆ ಎಂದು ಇಸ್ರೋ ಮಾಜಿ ಅಧ್ಯಕ್ಷ ಎ ಎಸ್ ಕಿರಣ್​ಕುಮಾರ್​ ಹೇಳಿದರು.

ಜಿಯೋ ಎನೇಬ್ಲಿಂಗ್‌ ಇಂಡಿಯನ್‌ ಸ್ಕಾಲರ್ಸ್ ಪೈಲಟ್‌ ಕಾರ್ಯಕ್ರಮ
ಜಿಯೋ ಎನೇಬ್ಲಿಂಗ್‌ ಇಂಡಿಯನ್‌ ಸ್ಕಾಲರ್ಸ್ ಪೈಲಟ್‌ ಕಾರ್ಯಕ್ರಮ

ಇಸ್ರೋದ ಮಾಜಿ ಅಧ್ಯಕ್ಷ ಎ ಎಸ್ ಕಿರಣ್​ಕುಮಾರ್

ಬೆಂಗಳೂರು: ಜಿಯೋಸ್ಪೇಷಿಯಲ್‌ ತಂತ್ರಜ್ಞಾನದ ಬಳಕೆ ಮನುಷ್ಯನಿಗೆ ಸಂಬಂಧಿಸಿದ ಎಲ್ಲ ಕ್ಷೇತ್ರಗಳಲ್ಲಿಯೂ ತ್ವರಿತವಾಗಿ ಹೆಚ್ಚುತ್ತಿದೆ. ಭಾರತದ ಯುವಮನಸ್ಸುಗಳಿಗೆ ಈ ತಂತ್ರಜ್ಞಾನದ ಟೂಲ್‌ಗಳನ್ನು ಒದಗಿಸಿ, ಅವರನ್ನು ಸಬಲೀಕರಣಗೊಳಿಸುವ ಅಗತ್ಯವಿದೆ ಎಂದು ಬಾಹ್ಯಾಕಾಶ ಆಯೋಗದ ಸದಸ್ಯ ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಮಾಜಿ ಅಧ್ಯಕ್ಷ ಎ.ಎಸ್‌ ಕಿರಣ್‌ ಕುಮಾರ್‌ ಹೇಳಿದರು.

ಶುಕ್ರವಾರ ನಗರದ ಟ್ರಿನಿಟಿ ಸರ್ಕಲ್ ಬಳಿಯ ಖಾಸಗಿ ಹೋಟೆಲ್​ನಲ್ಲಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಭವಿಷ್ಯದ ತಂತ್ರಜ್ಞಾನ ಎಂದೇ ಪರಿಗಣಿಸಲಾಗಿರುವ ಜಿಯೋಸ್ಪೇಷಿಯಲ್‌ ತಂತ್ರಜ್ಞಾನದ ಮಾಸ್ಟರ್‌ ಮೆಂಟರ್ಸ್‌ 'ಜಿಯೋ ಎನೇಬ್ಲಿಂಗ್‌ ಇಂಡಿಯನ್‌ ಸ್ಕಾಲರ್ಸ್ ಪೈಲಟ್‌' ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಜಿಯೋಸ್ಪೇಷಿಯಲ್‌ ತಂತ್ರಜ್ಞಾನದಲ್ಲಿ ಎಂಎಂಜಿಇಐಎಸ್‌ ಪರಿಣಾಮಕಾರಿ ಮಾಧ್ಯಮವಾಗಿದೆ. ಇದರಡಿ ಮಕ್ಕಳಿಗೆ ಸೂಕ್ತವಾದ ಮಾರ್ಗದರ್ಶನ ಮತ್ತು ಕೌಶಲ್ಯ ದೊರೆಯಲಿದೆ. ಜಿಯೋಸ್ಪೇಷಿಯಲ್‌ ತಂತ್ರಜ್ಞಾನದ ಬಳಕೆಯಲ್ಲಿ ಹೊಸ ಯುಗವನ್ನು ಇದು ಸೃಷ್ಟಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಏಸ್ರಿ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಅಗೇಂದ್ರ ಕುಮಾರ್‌ ಮಾತನಾಡಿ, ಅಗತ್ಯವಿರುವ ಎಲ್ಲ ಪೂರ್ವಭಾವಿ ತಯಾರಿಯ ಬಳಿಕ ಎಂಎಂಜಿಇಐಎಸ್‌ ಕಾರ್ಯಕ್ರಮವನ್ನು ಪೈಲಟ್‌ ಆಧಾರದಲ್ಲಿ ಜಾರಿಗೊಳಿಸುತ್ತಿದ್ದೇವೆ. ಮುಂದಿನ ಪೀಳಿಗೆಯ ಜಿಯೋಸ್ಪೇಷಿಯಲ್‌ ತಂತ್ರಜ್ಞರನ್ನು ಪೋಷಿಸಿ ಬೆಳೆಸುವುದು ಇದರ ಉದ್ದೇಶವಾಗಿದೆ. ಇದರಿಂದ ಜಿಯೋಸ್ಪೇಷಿಯಲ್‌ ತಂತ್ರಜ್ಞಾನದ ಕುರಿತು ಅರಿವು ಮತ್ತು ಅಗತ್ಯ ಕೌಶಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಲಾಗುವುದು. ಈ ಕಾರ್ಯಕ್ರಮದಿಂದ ಭವಿಷ್ಯದ ಸವಾಲುಗಳನ್ನು ಅವರು ನಿಭಾಯಿಸಬಲ್ಲರು ಎಂದು ಅಭಿಪ್ರಾಯಪಟ್ಟರು.

ಭಾರತ ವಿಶ್ವನಾಯಕನಾಗುವ ದಿನಗಳು ದೂರವಿಲ್ಲ: ಸಿಕೆಎಸ್‌ ಕಾರ್ಯದರ್ಶಿ ವಿನೀತ್‌ ಗೋಯೆಂಕಾ ಮಾತನಾಡಿ, ಅತ್ಯಲ್ಪ ಅವಧಿಯಲ್ಲಿ ಎಂಎಂಜಿಇಐಎಸ್‌ ಕಾರ್ಯಕ್ರಮವನ್ನು ಭಾರತದಾದ್ಯಂತ ವಿದ್ಯಾರ್ಥಿಗಳಿಗೆ ತಲುಪಿಸುತ್ತಿದ್ದೇವೆ. ದೇಶದಲ್ಲಿ ಇದು ಖಂಡಿತವಾಗಿಯೂ ಕ್ರಾಂತಿಕಾರಿ ಬದಲಾವಣೆ ತರಲಿದೆ. ಶಿಕ್ಷಣದ ಕುರಿತು ವಿದ್ಯಾರ್ಥಿಗಳ ದೃಷ್ಟಿಕೋನವನ್ನು ಬದಲಿಸಲಿದೆ. ಜಿಯೋಸ್ಪೇಷಿಯಲ್‌ ನಾವೀನ್ಯತೆಯ ಕ್ಷೇತ್ರದಲ್ಲಿ ಭಾರತ ವಿಶ್ವನಾಯಕನಾಗುವ ದಿನಗಳು ದೂರವಿಲ್ಲ ಎಂದು ನುಡಿದರು.

ಹರಿಯಾಣ ರಾಜ್ಯಪಾಲರ ಸಲಹೆಗಾರ ಮತ್ತು ಮಾಜಿ ಸರ್ವೇಯರ್‌ ಜನರಲ್‌ ಆಫ್‌ ಇಂಡಿಯಾ ಲೆ. ಜ (ನಿವೃತ್ತ) ಗಿರೀಶ್‌ ಕುಮಾರ್‌ ಮಾತನಾಡಿ, ಎಂಎಂಜಿಇಐಎಸ್‌ ಕಾರ್ಯಕ್ರಮ ಮುಂದಿನ ಹಂತದ ಜಿಯೋಸ್ಪೇಷಿಯಲ್‌ ಅನ್ವೇಷಣೆ ಮತ್ತು ಅಧ್ಯಯನಕ್ಕೆ ವೇದಿಕೆ ಕಲ್ಪಿಸಲಿದೆ. ಆಯ್ದ ವಿದ್ಯಾರ್ಥಿಗಳಿಗೆ ಪ್ರಮುಖ ವಿಜ್ಞಾನಿಗಳು ಮತ್ತು ಸಂಶೋಧಕರು ಮಾರ್ಗದರ್ಶನ ನೀಡಲಿದ್ದಾರೆ. ಮಕ್ಕಳಲ್ಲಿ ಯೋಚನಾಸರಣಿಯನ್ನು, ಅನ್ವೇಷಕ ಪ್ರವೃತ್ತಿಯನ್ನು ಇದು ಹೆಚ್ಚಿಸಲಿದೆ ಎಂದು ತಿಳಿಸಿದರು.

ಮಾನವ ಸಂಪನ್ಮೂಲವನ್ನು ಅಮೂಲ್ಯ ಆಸ್ತಿಯಾಗಿ ಬೆಳೆಸಬಹುದು: ಭಾರತ ಹವಾಮಾನ ಇಲಾಖೆಯ ಮಾಜಿ ಮಹಾನಿರ್ದೇಶಕ ಮತ್ತು ಪ್ರಸ್ತುತ ರೀಜನಲ್‌ ಇಂಟೆಗ್ರೇಟೆಡ್‌ ಮಲ್ಟಿ ಹಜಾರ್ಡ್‌ ಅರ್ಲಿ ವಾರ್ನಿಂಗ್‌ ಸಿಸ್ಟಮ್‌ (ಆರ್‌ಐಎಂಇಎಸ್‌) ಸಲಹೆಗಾರ ಡಾ. ಕೆ. ಜೆ ರಮೇಶ್‌ ಮಾತನಾಡಿ, ಜ್ಞಾನ ಆಧಾರಿತ ಅರ್ಥವ್ಯವಸ್ಥೆಯನ್ನು ಬೆಳೆಸುವ ಭಾರತದ ಗುರಿಗೆ ಎಂಎಂಜಿಇಐಎಸ್‌ ಪೂರಕವಾಗಿದೆ. ದೇಶದ ಅಭಿವೃದ್ಧಿಯೆಂದರೆ ಕೇವಲ ಆರ್ಥಿಕ ಅಭಿವೃದ್ಧಿ ಮಾತ್ರವಲ್ಲ. ಮಾನವ ಸಂಪನ್ಮೂಲವನ್ನು ನಾವೀನ್ಯತೆಯತ್ತ ಸಾಗಿಸುವುದೂ ಇದರಲ್ಲಿ ಸೇರಿದೆ. ದೇಶದ ಯುವಸಮೂಹಕ್ಕೆ ಅಗತ್ಯವಿರುವ ಹೊಸ ಜ್ಞಾನ, ಕೌಶಲ್ಯಗಳನ್ನು ಒದಗಿಸುವ ಮೂಲಕ ಮಾನವ ಸಂಪನ್ಮೂಲವನ್ನು ಅಮೂಲ್ಯ ಆಸ್ತಿಯಾಗಿ ಬೆಳೆಸಬಹುದು ಎಂದು ಹೇಳಿದರು.

ಇದನ್ನೂ ಓದಿ : ನೂತನ ಕಾಲಘಟ್ಟದ ವಿಚಾರ ತಿಳಿದುಕೊಳ್ಳುವ ಹುಮ್ಮಸ್ಸು ಪ್ರತಿಯೊಬ್ಬರಲ್ಲೂ ಹೆಚ್ಚಾಗಿದೆ: ಇಸ್ರೋ ಮಾಜಿ ಅಧ್ಯಕ್ಷ ಕಿರಣ್‌ ಕುಮಾರ್‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.