ETV Bharat / state

ನಟ, ನಿವೃತ್ತ ಐಎಎಸ್ ಅಧಿಕಾರಿ ಕೆ.ಶಿವರಾಮ್ ವಿಧಿವಶ

author img

By ETV Bharat Karnataka Team

Published : Feb 29, 2024, 6:23 PM IST

Updated : Feb 29, 2024, 7:29 PM IST

ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ನಟ, ರಾಜಕಾರಣಿ, ನಿವೃತ್ತ ಐಎಎಸ್ ಅಧಿಕಾರಿ ಕೆ.ಶಿವರಾಮ್ ಇಂದು ವಿಧಿವಶರಾಗಿದ್ದಾರೆ.

ಕೆ.ಶಿವರಾಮ್
ಕೆ.ಶಿವರಾಮ್

ಬೆಂಗಳೂರು/ರಾಮನಗರ: ರಾಜ್ಯದಲ್ಲೇ ಮೊದಲ ಬಾರಿಗೆ ಕನ್ನಡದಲ್ಲೇ ಕೇಂದ್ರ ನಾಗರಿಕ ಸೇವೆಗಳ ಪರೀಕ್ಷೆ ಬರೆದು ಐಎಎಸ್‌ ಅಧಿಕಾರಿಯಾಗಿದ್ದ ಕೆ.ಶಿವರಾಮ್ (70) ಇಂದು ಮೃತಪಟ್ಟಿದ್ದಾರೆ. ಬುಧವಾರ ಅವರಿಗೆ ಹೃದಯಾಘಾತವಾಗಿತ್ತು. ತಕ್ಷಣ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಿಸದೆ ಸಂಜೆ ಮೃತಪಟ್ಟಿರುವುದಾಗಿ ಅವರ ಅಳಿಯ ಪ್ರದೀಪ್ ತಿಳಿಸಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಕಳೆದ 12 ದಿನಗಳಿಂದ ಐಸಿಯೂನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಇಂದು ಕೊನೆಯುಸಿರೆಳೆದರು. ನಾಳೆ ರವೀಂದ್ರ ಕಲಾಕ್ಷೇತ್ರದಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಶಿವರಾಮ್​ ನಿಧನಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸೇರಿದಂತೆ ಪಕ್ಷದ ಮುಖಂಡರು, ಚಿತ್ರ ನಟ, ನಟಿಯರು ಸಂತಾಪ ಸೂಚಿಸಿದ್ದಾರೆ.

ಆರಂಭಿಕ ಜೀವನ: ರಾಮನಗರ ಜಿಲ್ಲೆಯ ಬಿಡದಿ ಬಳಿಯ ಉರಗಳ್ಳಿಯಲ್ಲಿ ಎಸ್.ಕೆಂಪಯ್ಯ ಮತ್ತು ತಾಯಿ ಚಿಕ್ಕಬೋರಮ್ಮ ದಂಪತಿಯ ಪುತ್ರನಾಗಿ ಏಪ್ರಿಲ್ 6, 1953ರಂದು ಕೆ.ಶಿವರಾಮ್ ಜನಿಸಿದ್ದರು. ಬಡತನದ ಹಿನ್ನೆಲೆಯುಳ್ಳ ಕುಟುಂಬವಾಗಿದ್ದರಿಂದ ಆರಂಭಿಕ ಶಿಕ್ಷಣವನ್ನು ತಮ್ಮ ಹಳ್ಳಿಯಲ್ಲಿಯೇ ಮುಗಿಸಿದ್ದರು. ಬಳಿಕ ಬೆಂಗಳೂರಿಗೆ ತೆರಳಿ ಮಲ್ಲೇಶ್ವರಂ ಸರ್ಕಾರಿ ಶಾಲೆಯಲ್ಲಿ ಪ್ರೌಢ ಶಿಕ್ಷಣ, ವಿ.ವಿ.ಪುರಂ ಸಂಜೆ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಬಿ.ಎ, 1982ರಲ್ಲಿ ಮೈಸೂರಿನ ಮುಕ್ತ ವಿಶ್ವವಿದ್ಯಾನಿಲಯದಿಂದ ಎಂ.ಎ (ಇತಿಹಾಸ) ಪದವಿ ಪಡೆದಿದ್ದರು.

1972ರಲ್ಲಿ, ಇಂಗ್ಲಿಷ್ ಮತ್ತು ಕನ್ನಡ ಎರಡರಲ್ಲೂ ಟೈಪಿಂಗ್ ಮತ್ತು ಶೀಘ್ರ ಲಿಪಿ ಕೋರ್ಸ್ ಪೂರ್ಣಗೊಳಿಸಿದ್ದರು. ಮೇ 1973ರಲ್ಲಿ ಅಪರಾಧ ತನಿಖಾ ಇಲಾಖೆಯಲ್ಲಿ ಸರ್ಕಾರಿ ಉದ್ಯೋಗ ಪಡೆದಿದ್ದ ಅವರು, ಸೇವೆಯಲ್ಲಿದ್ದಾಗಲೇ ತಮ್ಮ ಅಧ್ಯಯನ ಮುಂದುವರೆಸಿ 1985ರಲ್ಲಿ ಕೆ.ಎ.ಎಸ್. ಪರೀಕ್ಷೆ ಬರೆದು ಉಪ ಪೊಲೀಸ್ ವರಿಷ್ಠಾಧಿಕಾರಿಯಾಗಿ ಆಯ್ಕೆಯಾಗಿದ್ದರು. 1986ರಲ್ಲಿ, ಕರ್ನಾಟಕ ಆಡಳಿತ ಸೇವಾ ಪರೀಕ್ಷೆಯಲ್ಲಿ ಪರಿಶಿಷ್ಟ ಜಾತಿ ಸಮುದಾಯದಲ್ಲಿ 1ನೇ ರ‍್ಯಾಂಕ್​ ಪಡೆದು ಸಹಾಯಕ ಪೊಲೀಸ್ ಕಮಿಷನರ್ ಆಗಿದ್ದರು. ಕರ್ನಾಟಕ ಪೊಲೀಸ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾಗಲೇ ನಾಗರಿಕ ಸೇವಾ ಪರೀಕ್ಷೆಯನ್ನು (UPSC) ಕನ್ನಡದಲ್ಲೇ ಪರೀಕ್ಷೆ ಬರೆದು ತೇರ್ಗಡೆ ಹೊಂದಿದ್ದರು. ಕನ್ನಡ ಭಾಷೆಯಲ್ಲಿ ಐಎಎಸ್​ ಪರೀಕ್ಷೆ ಬರೆದು ತೇರ್ಗಡೆಯಾದ ರಾಜ್ಯದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು.

ರಾಜಕೀಯ ಪ್ರವೇಶ: ತದನಂತರ ರಾಜ್ಯದ ವಿವಿಧೆಡೆ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. 2013ರಲ್ಲಿ ಐಎಎಸ್​ ಹುದ್ದೆಯಿಂದ ಸ್ವಯಂ ನಿವೃತ್ತಿ ಪಡೆದ​ ಅವರು ಕಾಂಗ್ರೆಸ್​ ಮೂಲಕ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದರು. ಆದರೆ, ಕೆಲವು ತಿಂಗಳಲ್ಲೇ ಪಕ್ಷ ತೊರೆದು ಜೆಡಿಎಸ್​ ಸೇರಿದ್ದರು. 2014ರಲ್ಲಿ ವಿಜಯಪುರದಿಂದ ಲೋಕಸಭೆಗೆ ಸ್ಪರ್ಧಿಸಿ ಸೋಲು ಕಂಡಿದ್ದರು. ತದನಂತರ, ಮತ್ತೆ ಕಾಂಗ್ರೆಸ್​​ಗೆ ಮರಳಿದ್ದ ಅವರು 2014ರ ಅಕ್ಟೋಬರ್​ನಲ್ಲಿ ಕಾಂಗ್ರೆಸ್​ನಿಂದಲೂ ಹೊರಬಂದು ಬಿಜೆಪಿಗೆ ಸೇರ್ಪಡೆ ಆಗಿದ್ದರು.

10ನೇ ತರಗತಿಯಲ್ಲಿ ಒಂದು ವಿಷಯದಲ್ಲಿ ಫೇಲ್​ ಆಗಿದ್ದ ಕೆ.ಶಿವರಾಮ್​ ಬಳಿಕ ಛಲದಿಂದ ಪೂರಕ ಪರೀಕ್ಷೆಗಳನ್ನು ಬರೆದು ತೇರ್ಗಡೆಯಾಗಿದ್ದರು ಅನ್ನೋದು ಗಮನಾರ್ಹ.

ಸಿನಿಮಾ ಪಯಣ: ದಲಿತ ಪರ ಹೋರಾಟಕ್ಕೆ ಹೆಸರುವಾಸಿಯಾಗಿದ್ದ ಕೆ.ಶಿವರಾಮ್​, ಛಲವಾದಿ ಮಹಸಭಾ ಅಧ್ಯಕ್ಷರೂ ಆಗಿದ್ದರು. ಹುಟ್ಟಿದ್ದು ರೇಷ್ಮೆನಗರಿ ರಾಮನಗರ ಜಿಲ್ಲೆಯಾದರೂ ಕೂಡ ಅವರಿಗೆ ಹೆಚ್ಚಿನ ಒಡನಾಟ ಬೆಂಗಳೂರಿನ ಜೊತೆಗಿತ್ತು. 1993ರಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ 'ಬಾ ನಲ್ಲೆ ಮಧುಚಂದ್ರಕೆ' ಚಿತ್ರದ ಮೂಲಕ ಬಣ್ಣದ ಜಗತ್ತು ಪ್ರವೇಶಿಸಿದ ಶಿವರಾಮ್,​ ಹಲವು ಸಿನಿಮಾಗಳಲ್ಲಿ ನಟಿಸಿದರು. 'ವಸಂತ ಕಾವ್ಯ', 'ಸಾಂಗ್ಲಿಯಾನ-3', 'ಪ್ರತಿಭಟನೆ', 'ಖಳನಾಯಕ', 'ಯಾರಿಗೆ ಬೇಡ ದುಡ್ಡು', 'ಗೇಮ್​ ಫಾರ್​ ಲವ್'​, 'ನಾಗಾ', 'ಓ ಪ್ರೇಮ ದೇವತೆ' ಹಾಗೂ 'ಟೈಗರ್'​ ಇವರು ನಟಿಸಿರುವ ಕನ್ನಡ ಚಿತ್ರಗಳಾಗಿವೆ.

ಇದನ್ನೂ ಓದಿ: ಕೆ.ಶಿವರಾಮ್ ಆರೋಗ್ಯ ಸ್ಥಿತಿ ಚಿಂತಾಜನಕ, ಐಸಿಯುನಲ್ಲಿ ಚಿಕಿತ್ಸೆ: ಅಳಿಯ ಪ್ರದೀಪ್ ಸ್ಪಷ್ಟನೆ

Last Updated :Feb 29, 2024, 7:29 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.