ETV Bharat / state

ಬಿಜೆಪಿ ಶಾಸಕರ ವಿರುದ್ಧ ಎಫ್ ಐಆರ್ ದಾಖಲು ವಿಚಾರ: ವಿಧಾನಸಭೆಯಲ್ಲಿ ಜಟಾಪಟಿ

author img

By ETV Bharat Karnataka Team

Published : Feb 15, 2024, 4:10 PM IST

ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ನನ್ನ ವಿರುದ್ಧ ಮತ್ತು ಶಾಸಕ ವೇದವ್ಯಾಸ್ ಕಾಮತ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ವಿಧಾನಸಭೆಯ ಶೂನ್ಯವೇಳೆಯಲ್ಲಿ ಬಿಜೆಪಿ ಶಾಸಕ ಡಾ ಭರತ್ ಶೆಟ್ಟಿ ವಿಷಯ ಪ್ರಸ್ತಾಪಿಸಿದರು.

Assembly
ವಿಧಾನಸಭೆ

ಬೆಂಗಳೂರು: ಮಂಗಳೂರಿನ ಪಾಂಡೇಶ್ವರ್ ಪೊಲೀಸ್ ಠಾಣೆಯಲ್ಲಿ ಬಿಜೆಪಿ ಶಾಸಕರ ವಿರುದ್ಧ ಎಫ್ ಐಆರ್ ದಾಖಲಾದ ಪ್ರಕರಣ ವಿಧಾನಸಭೆಯಲ್ಲಿ ಇಂದು ಪ್ರತಿಧ್ವನಿಸಿ ಮಾತಿನ ಜಟಾಪಟಿಗೆ ಕಾರಣವಾಯಿತು.

ಶೂನ್ಯವೇಳೆ ವಿಷಯ ಪ್ರಸ್ತಾಪಿಸಿದ ಮಂಗಳೂರು ನಗರ ಉತ್ತರ ಕ್ಷೇತ್ರದ ಬಿಜೆಪಿ ಶಾಸಕ ಡಾ ಭರತ್ ಶೆಟ್ಟಿ ಅವರು, ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ನನ್ನ ಮತ್ತು ಶಾಸಕ ವೇದವ್ಯಾಸ್ ಕಾಮತ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಶಾಲೆಯಲ್ಲಿ 7ನೇ ತರಗತಿ ವಿದ್ಯಾರ್ಥಿಗೆ ಧರ್ಮದ ಬಗ್ಗೆ ಅಪನಂಬಿಕೆ ಬರುವಂತೆ ಮಾತುಗಳನ್ನು ಹೇಳಲಾಗಿದ್ದು, ಇದರ ಬಗ್ಗೆ ಪೋಷಕರು ಜಿ.ಪಂ ಅಧಿಕಾರಿಗಳಿಗೆ ದೂರು ನೀಡಲು ಬಂದಿದ್ದರು.

ಆ ವೇಳೆ ಶರಣ ಪಂಪವೇಲ್, ನಾನು, ಶಾಸಕ ವೇದವ್ಯಾಸ್ ಕಾಮತ್ ಸ್ಥಳದಲ್ಲಿದ್ದೆವು. ಅಲ್ಲಿ ಡಿಡಿಪಿಐ ಕೂಡ ಇದ್ದರು. ಪೋಷಕರ ಬೇಡಿಕೆ ಆಧರಿಸಿ ಶಿಕ್ಷಕರ ವಿರುದ್ಧ ತನಿಖೆಗೆ ಆದೇಶಿಸಲಾಯಿತು. ನಾನು ಅಲ್ಲಿಂದ ವಿಧಾನಸಭೆ ಅಧಿವೇಶನದಲ್ಲಿ ಭಾಗವಹಿಸಲು ಬೆಂಗಳೂರಿಗೆ ಪ್ರಯಾಣ ಮಾಡಿದ್ದೇನೆ. ನಂತರದ ಘಟನೆಗೆ ಸಂಬಂಧಪಟ್ಟಂತೆ ದೂರು ನೀಡಲಾಗಿದೆ. ಸ್ಥಳದಲ್ಲಿ ಇಲ್ಲದ ನನ್ನ ವಿರುದ್ಧ ಎಫ್ಐಆರ್ ದಾಖಲಾಗಿದೆ. ಅದೇ ಕೋಮುವಾದಿ ಮಾತುಗಳನ್ನಾಡಿರುವ ಶಿಕ್ಷಕರ ವಿರುದ್ಧ ಪ್ರಕರಣ ದಾಖಲಿಸಿಲ್ಲ. ಶಿಕ್ಷಕರ ಲೋಪವಿಲ್ಲ ಎಂದಾದರೆ, ಶಾಲಾ ಆಡಳಿತ ಮಂಡಳಿ ಶಿಕ್ಷಕರನ್ನು ಅಮಾನತುಗೊಳಿಸಿದ್ದು ಏಕೆ ಎಂದು ಪ್ರಶ್ನಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಎಫ್ಐಆರ್ ಹಾಕಿದ ತಕ್ಷಣ ಯಾರೂ ಅಪರಾಧಿಯಾಗುವುದಿಲ್ಲ. ದೂರು ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇದಕ್ಕೆ ಸರ್ಕಾರದಿಂದ ಸೂಚನೆಗಳನ್ನು ನೀಡಲಾಗಿಲ್ಲ. ಮಂಗಳೂರಿನಲ್ಲಿ ಬಹಳ ಕೆಟ್ಟ ಪರಿಸ್ಥಿತಿಯನ್ನು ಸೃಷ್ಟಿಸಿದ್ದಾರೆ. ಲೋಕಸಭೆ ಚುನಾವಣೆ ಹಿನ್ನೆಲೆ ಕೋಮುವಾದ ಕೆರಳಿಸುವುದಷ್ಟೇ ಇವರ ಉದ್ದೇಶ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಈ ಹಂತದಲ್ಲಿ ಬಿಜೆಪಿ ಸದಸ್ಯರು ವಿರೋಧ ವ್ಯಕ್ತಪಡಿಸಿ ಗದ್ದಲ ಎಬ್ಬಿಸಿದರು. ಸಚಿವ ಕೃಷ್ಣ ಬೈರೇಗೌಡ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪವಾಗಿದೆ. ಗೃಹಸಚಿವರಿಂದ ಉತ್ತರ ಕೊಡಿಸುತ್ತೇವೆ. ಇಲ್ಲಿ ಚರ್ಚೆ ಬೇಡ ಎಂದರು. ಪ್ರತಿಪಕ್ಷದ ಉಪನಾಯಕ ಅರವಿಂದ್ ಬೆಲ್ಲದ್, ಬರೀ ಉತ್ತರ ಸಾಲುವುದಿಲ್ಲ. ಈ ವಿಚಾರ ಚರ್ಚೆಯಾಗಬೇಕು ಎಂದು ಒತ್ತಾಯಿಸಿದರು.

ಪ್ರತಿಪಕ್ಷದ ನಾಯಕ ಆರ್.ಅಶೋಕ್ ಮತ್ತು ಶಾಸಕ ಸುನಿಲ್​ಕುಮಾರ್ ಅವರು ದೂರು ಕೊಟ್ಟ ಕ್ಷಣಕ್ಕೆ ಯಾರು ಯಾರ ವಿರುದ್ಧವಾದರೂ ಎಫ್ಐಆರ್ ದಾಖಲಿಸಬಹುದೇ ಎಂದು ಆಕ್ಷೇಪಿಸಿದರು. ಸರ್ಕಾರ ಪೊಲೀಸರ ಮೇಲೆ ಒತ್ತಡ ಹೇರಿ ಶಾಸಕರ ವಿರುದ್ಧ ಎಫ್ಐಆರ್ ದಾಖಲಿಸಿದೆ ಎಂದು ಆರೋಪಿಸಿದರು. ಗೃಹಸಚಿವರ ಉತ್ತರದ ಬಳಿಕ ಉಳಿದ ವಿಚಾರ ಪ್ರಸ್ತಾಪ ಮಾಡುವುದು ಸೂಕ್ತ ಎಂದು ಸ್ಪೀಕರ್ ಯು.ಟಿ. ಖಾದರ್ ಚರ್ಚೆಗೆ ತೆರೆ ಎಳೆದರು.

ಇದನ್ನೂಓದಿ:ಹಿಂದೂ ಧ್ವನಿಯನ್ನು ಹತ್ತಿಕ್ಕಲು ನಮ್ಮ ಮೇಲೆ ಎಫ್ಐಆರ್ ದಾಖಲು: ಶಾಸಕ ಭರತ್ ಶೆಟ್ಟಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.