ETV Bharat / state

ಚಿಕ್ಕೋಡಿ: ಕೃಷಿ ಹೊಂಡದಲ್ಲಿ ಈಜಲು ಹೋಗಿ ತಂದೆ, ಇಬ್ಬರು ಮಕ್ಕಳು ಸಾವು

author img

By ETV Bharat Karnataka Team

Published : Mar 10, 2024, 10:31 PM IST

ಕೃಷಿ ಹೊಂಡದಲ್ಲಿ ಈಜಲು ಹೋಗಿ ತಂದೆ ಹಾಗು ಇಬ್ಬರು ಮಕ್ಕಳು ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.

Raibag Police Station
ರಾಯಬಾಗ ಪೊಲೀಸ್​ ಠಾಣೆ

ಚಿಕ್ಕೋಡಿ: ಕೃಷಿ ಹೊಂಡದಲ್ಲಿ ಈಜಲು ತೆರಳಿ ತಂದೆ ಹಾಗು ಇಬ್ಬರು ಮಕ್ಕಳು ಮುಳುಗಿ ಸಾವಿಗೀಡಾಗಿರುವ ಹೃದಯ ವಿದ್ರಾವಕ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ನಿಡಗುಂದಿ ಗ್ರಾಮದ ಮೇತ್ರಿ ತೋಟದ ಕೃಷಿ ಹೊಂಡದಲ್ಲಿ ಇಂದು ಸಂಭವಿಸಿತು. ಕಲ್ಲಪ್ಪ ಬಸಪ್ಪ ಗಾಣಿಗೇರ (39), ಮನೋಜ್ ಕಲ್ಲಪ್ಪ ಗಾಣಿಗೇರ (11), ಮದನ ಕಲ್ಲಪ್ಪ ಗಾಣಿಗೇರ (9) ಮೃತರು ಎಂದು ಗುರುತಿಸಲಾಗಿದೆ.

ಕಲ್ಲಪ್ಪ ಬಸಪ್ಪ ಗಾಣಿಗೇರ ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು. ಇಂದು ಭಾನುವಾರವಾದ ಕಾರಣ ಶಾಲೆಗೆ ರಜೆ ಇತ್ತು. ಹೀಗಾಗಿ, ಅಪ್ಪ ಹಾಗು ಮಕ್ಕಳು ಮನೆಯಲ್ಲಿದ್ದರು. ಕಲ್ಲಪ್ಪ ತನ್ನ ಮಕ್ಕಳಿಗೆ ಈಜು ಕಲಿಸಬೇಕೆಂದು ತೀರ್ಮಾನಿಸಿ ಮಧ್ಯಾಹ್ನ ತೋಟಕ್ಕೆ ಕರೆದುಕೊಂಡು ಹೋಗಿದ್ದಾರೆ.

ಸಂಜೆಯಾದರೂ ಮನೆಗೆ ಬಾರದೇ ಇದ್ದಾಗ ಕುಟುಂಬಸ್ಥರು ಹುಡುಕಾಟ ನಡೆಸಿದ್ದಾರೆ. ಕೊನೆಗೆ ಕೃಷಿ ಹೊಂಡದಲ್ಲಿ ಮುಳುಗಿ ಮೃತಪಟ್ಟಿರುವ ಮಾಹಿತಿ ಸಿಕ್ಕಿದೆ. ಮೂವರನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಸ್ಥಳಕ್ಕೆ ರಾಯಭಾಗ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ರಾಯಬಾಗ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂಓದಿ: ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಯತ್ನ: ತಂದೆ-ತಾಯಿ ಸಾವು, ಮಗಳು ಪಾರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.