ETV Bharat / state

ಗರ್ಭಗುಡಿ ಪ್ರಾಂಗಣಕ್ಕೆ ಪ್ರವೇಶ ನಿರಾಕರಣೆ: ಈಶ್ವರಾನಂದಪುರಿ ಶ್ರೀ ಸ್ಪಷ್ಟನೆ, ವರದಿ ಕೇಳಿದ್ದೇನೆಂದ ಸಚಿವರು

author img

By ETV Bharat Karnataka Team

Published : Feb 3, 2024, 6:40 PM IST

Updated : Feb 3, 2024, 7:38 PM IST

ಗರ್ಭಗುಡಿ ಪ್ರಾಂಗಣದೊಳಗೆ ಮಠಾಧೀಶರ ಪ್ರವೇಶ ನಿರಾಕರಣೆ ಹೇಳಿಕೆ ಬಗ್ಗೆ ಹೊಸದುರ್ಗ‌ ಶಾಖಾಮಠದ ಈಶ್ವರಾನಂದಪುರಿ ಶ್ರೀಗಳು ಸುದ್ದಿಗೋಷ್ಟಿ ನಡೆಸಿ, ಸ್ಪಷ್ಟನೆ ನೀಡಿದ್ದಾರೆ.

eshwaranandpuri-shri-clarifies-on-temple-sanctum-sanctorum-entry-denied-statement
ಗರ್ಭಗುಡಿ ಪ್ರಾಂಗಣಕ್ಕೆ ಪ್ರವೇಶ ನಿರಾಕರಣೆ: ಈಶ್ವರಾನಂದಪುರಿ ಶ್ರೀ ಸ್ಪಷ್ಟನೆ, ವರದಿ ಕೇಳಿದ್ದೇನೆಂದ ಸಚಿವರು

ಕನಕ ಗುರುಪೀಠದ ಹೊಸದುರ್ಗ‌ ಶಾಖಾಮಠದ ಈಶ್ವರಾನಂದಪುರಿ ಶ್ರೀ ಸ್ಪಷ್ಟನೆ

ಚಿತ್ರದುರ್ಗ: ದೇವಾಲಯದ ಗರ್ಭಗುಡಿ ಪ್ರಾಂಗಣದೊಳಗೆ ಮಠಾಧೀಶರ ಪ್ರವೇಶ ನಿರಾಕರಣೆ ವಿಚಾರವಾಗಿ ಕನಕ ಗುರುಪೀಠದ ಹೊಸದುರ್ಗ‌ ಶಾಖಾಮಠದ ಈಶ್ವರಾನಂದಪುರಿ ಶ್ರೀಗಳು ಸ್ಪಷ್ಟನೆ ನೀಡಿದ್ದಾರೆ. ಹೊಸದುರ್ಗದ ಸಾಣೇಹಳ್ಳಿಯಲ್ಲಿ ನಡೆದ ಅಂತರ್​ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ''ಪರಿವರ್ತನೆ ಹಾದಿಯಲ್ಲಿ ಮಠಗಳ ಪಾತ್ರ'' ವಿಚಾರಗೋಷ್ಠಿಯಲ್ಲಿ ಶುಕ್ರವಾರ ಸ್ವಾಮೀಜಿ ಈ ಬಗ್ಗೆ ಹೇಳಿಕೆ ನೀಡಿದ್ದರು.

ಈ ಬಗ್ಗೆ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಭಗಿರಥ ಗುರುಪೀಠದಲ್ಲಿ ಕನಕ ಗುರುಪೀಠದ ಹೊಸದುರ್ಗ‌ ಶಾಖಾಮಠದ ಈಶ್ವರಾನಂದಪುರಿ ಶ್ರೀ, ಭಗೀರಥ ಗುರುಪೀಠದ ಪುರುಷೋತ್ತಮಾನಂದ ಶ್ರೀ ಹಾಗೂ ಕುಂಚಟಿಗ‌ ಗುರುಪೀಠದ ಶಾಂತವೀರ ಸ್ವಾಮೀಜಿ ಜಂಟಿ‌ ಸುದ್ದಿಗೋಷ್ಟಿ ನಡೆಸಿ ವಿವರಿಸಿದರು.

''ಕಾರ್ಯಕ್ರಮದಲ್ಲಿ ನಾನು ಮಾತನಾಡುತ್ತ, ವರ್ಗರಹಿತ ಸಮಾಜ ಕಟ್ಟುವುದು ಬಸವಾದಿ ಶಿವಶರಣರು, ದಾಸರ ಕನಸಾಗಿತ್ತು. ಆದರೆ ಇನ್ನೂ ಕೂಡ ಕೆಲ ಮಠಗಳು, ಮಂದಿರಗಳಲ್ಲಿ ಜಾತಿ ತಾರತಮ್ಯ ನಡೆಯುತ್ತಿದೆ. ದೇವಾಲಯದ ಉದ್ಘಾಟನೆ ವೇಳೆ ದಲಿತ ಮಹಿಳೆಯನ್ನು ಅಲ್ಲಿಂದ ಹೊರಹಾಕಿದ ಘಟನೆಗಳು ನಡೆದಿವೆ. ಅಲ್ಲದೆ, ಇತ್ತೀಚೆಗೆ ವೈಕುಂಠ ಏಕಾದಶಿ ಸಂದರ್ಭದಲ್ಲಿ ಇತರ ಸ್ವಾಮೀಜಿಗಳೊಂದಿಗೆ ನಾವು ಹೋಗಿದ್ದಾಗ, ಗರ್ಭಗುಡಿಯ ಮುಂದಿನ ಪ್ರಾಂಗಣದಲ್ಲಿ ಪೂಜಾರಿ ಕುಟುಂಬದ ಹೆಣ್ಣುಮಕ್ಕಳು ಭಾಗವಹಿಸಿದ್ದರು. ಆದರೆ ಅಲ್ಲಿದ್ದ ನಾವು ಸೇರಿ ಇತರ ಸಮುದಾಯದ ಸ್ವಾಮೀಜಿಗಳು ಹಾಗೂ ಮಹಿಳೆಯರಿಗೆ ಅವಕಾಶ ನೀಡಲಿಲ್ಲ. ಈ ಬಗ್ಗೆ ನಾನು ಸಾರ್ವಜನಿಕ ಚರ್ಚೆಗೆ ಅವಕಾಶ ಮಾಡಿಕೊಟ್ಟಿದ್ದೇನೆ'' ಎಂದರು.

ಇದೇ ವೇಳೆ, ''ನಾನು ದೇವಾಲಯದ ಗರ್ಭಗುಡಿಗೆ ತೆರಳಿದ್ದಕ್ಕೆ ಬಳಿಕ ದೇಗುಲವನ್ನು ತೊಳೆದಿದ್ದಾರೆ ಎಂಬುದು ಈಗ ನಡೆದಿರುವುದಲ್ಲ. ಅದು ಸುಮಾರು ವರ್ಷಗಳ ಹಿಂದೆಯೇ ಆಗಿತ್ತು. ಬಳಿಕ ಈ ವಿಚಾರನ್ನು ಯಾರೋ ನನಗೆ ಹೇಳಿದ್ದರು. ಇದೇ ವಿಚಾರವನ್ನು ನಾನು ನಿನ್ನೆ ಪ್ರಸ್ತುಪಡಿಸಿದ್ದೇನಷ್ಟೇ. ಇದು ಈಗ ನಡೆದ ಘಟನೆ ಅಲ್ಲ'' ಎಂದು ಶ್ರೀಗಳು ತಿಳಿಸಿದರು.

''ಗ್ರಾಮದ ವಿವಿಧ ಸಮುದಾಯದವರು ಸಹಬಾಳ್ವೆ, ಸಾಮರಸ್ಯದಿಂದ ಬದುಕುತ್ತಿದ್ದಾರೆ. ನಮ್ಮನ್ನು ಜನರು ಭಕ್ತಿ ಪೂರ್ವಕವಾಗಿ ಸ್ವಾಗತಿಸಿದ್ದಾರೆ. ಗ್ರಾಮಸ್ಥರಿಗೂ ಈ ಘಟನೆಗೂ ಸಂಬಂಧವಿಲ್ಲ. ಯಾವುದೇ ವಿವಾದ ಸೃಷ್ಟಿಸಬೇಕೆನ್ನುವುದು ನನ್ನ ಉದ್ದೇಶವಲ್ಲ'' ಎಂದು ಈಶ್ವರಾನಂದಪುರಿ ಶ್ರೀಗಳು ಸ್ಪಷ್ಟನೆ ನೀಡಿದರು.

''ದೇಶದಲ್ಲಿ ಜನರು ಸಂವಿಧಾನದ ಅಡಿಯಲ್ಲಿ ಸಮಾನವಾಗಿ ಬದುಕು ನಡೆಸಬೇಕಿದೆ. ಎಲ್ಲರೂ ಸಹೋದರತೆ, ಅನ್ಯೋನ್ಯತೆಯಿಂದ ಬದುಕಬೇಕಿದೆ. ಹೀಗಾಗಿ, ಯಾವುದೇ ದೇವಾಲಯ, ಮಠಗಳಲ್ಲಿ ಎಲ್ಲರಿಗೂ ಬೇಧ, ಭಾವವಿಲ್ಲದೆ ಸ್ಥಾನಮಾನ ಸಿಗಬೇಕು. ಅಲ್ಲದೆ, ತಾಲ್ಲೂಕು‌ ಆಡಳಿತ, ಜನಪ್ರತಿನಿಧಿಗಳು ಮತ್ತು‌ ಗ್ರಾಮಸ್ಥರ ಜೊತೆ ಈ ಬಗ್ಗೆ‌ ಚರ್ಚಿಸಿ ಸೌಹಾರ್ದತೆಯಿಂದ‌ ವಿವಾದಕ್ಕೆ‌ ತೆರೆ‌ ಎಳೆಯುತ್ತೇವೆ'' ಈಶ್ವರಾನಂದಪುರಿ ಸ್ವಾಮೀಜಿ ತಿಳಿಸಿದರು.

ಕುಂಚಟಿಗ‌ ಗುರುಪೀಠದ ಶಾಂತವೀರ ಸ್ವಾಮೀಜಿ ಹೇಳಿಕೆ: ''ಗೋಷ್ಠಿಯಲ್ಲಿ ಅದೇ ವಿಚಾರವಿದ್ದ ಹಿನ್ನೆಲೆಯಲ್ಲಿ ಸಮಾಜದಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಈಶ್ವರಾನಂದಪುರಿ ಶ್ರೀಗಳು ಈ ವಿಷಯ ಪ್ರಸ್ತಾಪಿಸಿದ್ದಾರೆ'' ಎಂದು ಕುಂಚಟಿಗ‌ ಗುರುಪೀಠದ ಶಾಂತವೀರ ಸ್ವಾಮೀಜಿ ಹೇಳಿದರು.

ಮತ್ತೊಂದೆಡೆ, ದೇವಾಲಯ ತೊಳೆಯಲಾಗಿತ್ತು ಎಂಬ ವಿಚಾರವಾಗಿ ಪ್ರತಿಕ್ರಿಯಿಸಿರುವ ದೇಗುಲದ ಅರ್ಚಕರಾದ ಶ್ರೀನಿವಾಸ್​ ಅವರು, ಇದನ್ನು ತಳ್ಳಿಹಾಕಿದ್ದಾರೆ. ''ಶ್ರೀಗಳು ಪ್ರತಿವರ್ಷ ದೇವಾಲಯಕ್ಕೆ ಭೇಟಿ ನೀಡುತ್ತಿದ್ದಾರೆ. ಅಂತಹ ಯಾವುದೇ ಘಟನೆ ನಡೆದಿಲ್ಲ'' ಎಂದು ಮಾಧ್ಯಮದವರಿಗೆ ತಿಳಿಸಿದ್ದಾರೆ.

ವರದಿ ಕೇಳಿದ್ದೇನೆಂದ ಸಚಿವರು: ಇದೇ ವಿಚಾರವಾಗಿ ದಾವಣಗೆರೆಯಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಸಚಿವ ರಾಮಲಿಂಗಾರೆಡ್ಡಿ, ''ಈ ಕುರಿತಂತೆ ಮುಜರಾಯಿ ಇಲಾಖೆ ಆಯಕ್ತರ ಬಳಿ ವರದಿ ಕೇಳಿದ್ದೇನೆ. ಎಲ್ಲ ದೇವಸ್ಥಾನಗಳ ಒಳಗಡೆಯೂ ಬಿಡಬೇಕು ಅನ್ನೋದು ಮೊದಲಿಂದಲೇ ಇದೆ. ಸ್ವಾಮೀಜಿಗೆ ಗರ್ಭಗುಡಿ ಪ್ರಾಂಗಣದಲ್ಲಿ ಪೂಜೆ ಮಾಡಲು ಅವಕಾಶ ಕೊಟ್ಟಿಲ್ಲ, ಈ ಬಗ್ಗೆ ಆಯುಕ್ತರಿಗೆ ಕೇಳಿದೆ. ಕೆಲವು ದೇವಸ್ಥಾನಗಳಲ್ಲಿ ಗರ್ಭಗುಡಿಯಲ್ಲಿ ಅವಕಾಶ ಇಲ್ಲ, ಕೆಲ ದೇವಸ್ಥಾನಗಳಲ್ಲಿ ಗರ್ಭಗುಡಿ ಒಳಗೆ ನಮ್ಮಿಂದ ಪೂಜೆ ಮಾಡಿಸುತ್ತಾರೆ. ಆದರೆ ಸ್ವಾಮೀಜಿಗಳು ಬಂದ ನಂತರ ಗರ್ಭಗುಡಿ ಶುಚಿಗೊಳಿಸಿದ್ದರೆ ಅದು ತಪ್ಪು'' ಎಂದು ತಿಳಿಸಿದರು.

Last Updated : Feb 3, 2024, 7:38 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.